
ಶಿವಮೊಗ್ಗ (ಸೆ.10): (ಸೆ.10) : ಈ ದೇಶದಲ್ಲಿ ಕಾಂಗ್ರೆಸ್ ಬೇಡ ಎಂದು ಜನ ತೀರ್ಮಾನ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿಗಳೆಲ್ಲರೂ ಕೂಡ ಒಟ್ಟಾಗಬೇಕು. ಕಾಂಗ್ರೆಸ್ ನಿರ್ನಾಮ ಮಾಡಬೇಕೆಂಬ ಉದ್ದೇಶದಿಂದ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ(Loksabha election)ಯಲ್ಲಿ ಒಟ್ಟಾಗಿ ಹೋಗುತ್ತೇವೆ. ಲೋಕಸಭಾ ಚುನಾವಣೆ ಎಂದರೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಅಂತಲ್ಲ. ಇದು ದೇಶವನ್ನು ಉಳಿಸುವ ಚುನಾವಣೆಯಾಗಿದೆ. ಹೀಗಾಗಿ, ಬಿಜೆಪಿ-ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸಿ, ಯಶಸ್ಸು ಗಳಿಸುತ್ತೇವೆ ಎಂದರು.
ಕಳೆದ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಒಂದು ಸ್ಥಾನ ಗಳಿಸಿತ್ತು. ಈ ಬಾರಿ ಒಂದು ಸ್ಥಾನವನ್ನು ಕೊಡಬಾರದು ಎಂದು ತೀರ್ಮಾನ ಮಾಡಿದ್ದೇವೆ. ರಾಜ್ಯದಲ್ಲಿ 28ಕ್ಕೆ 28 ಸ್ಥಾನವನ್ನು ಬಿಜೆಪಿ ಗೆಲ್ಲಲಿದೆ ಎಂದರು.
ಬಾಗಲಕೋಟೆ: ಒಳಬೇಗುದಿ ಮಧ್ಯೆ ಒಗ್ಗಟ್ಟಿನ ಮಂತ್ರ;ಕೆಎಸ್ ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಮುಖಂಡರ ಸಭೆ
ಬಿಜೆಪಿ ದೇಶಕ್ಕಾಗಿ ಯೋಚಿಸುತ್ತೆ:
ಈ ಹಿಂದೆ ಸಿಎಂ ಆಗಿದ್ದ ಸಿದ್ದರಾಮಯ್ಯ ಬಿಜೆಪಿ ಎರಡು ಸೀಟು ಕೂಡ ಬರಲ್ಲ ಅಂತ ಹೇಳಿಕೆ ನೀಡಿದ್ದರು. ಕಳೆದ ಬಾರಿಗೆ ಅವರಿಗೇ ಒಂದು ಸೀಟು ಬಂದಿತ್ತು, ಬಿಜೆಪಿ 25 ಸೀಟು ಗೆದ್ದಿತ್ತು. ಕಾಂಗ್ರೆಸ್ ವ್ಯಕ್ತಿಗತ ಯೋಚನೆ ಮಾಡುತ್ತೆ. ನಾವು ದೇಶಕ್ಕಾಗಿ ಯೋಚನೆ ಮಾಡ್ತೇವೆ. ಬಿಜೆಪಿಗೆ ಯಾವುದೇ ಭಯವಿಲ್ಲ. ಚುನಾವಣೆ ನಂತರ ಉತ್ತರ ಸಿಗುತ್ತದೆ ಎಂದು ಹೇಳಿದರು.
ಯಾವ ಬಕೆಟ್ ಹಿಡಿದು ಶೆಟ್ಟರ್ ಸಿಎಂ ಆಗಿದ್ದು?
ಸೀಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಕೆಲವರು ಪಕ್ಷ ಬಿಟ್ಟು ಹೋಗಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಒಂದು ಕೋಟಿ ಸದಸ್ಯರಿದ್ದಾರೆ. ಎಲ್ಲರೂ ನಿಷ್ಠಾವಂತ ಕಾರ್ಯಕರ್ತರೇ. ಹಾಗಂತ ಎಲ್ಲರಿಗೂ ಸೀಟ್ ಕೊಡೋಕೆ ಬರುತ್ತಾ? ಶೆಟ್ಟರ್ ಅವರು ಒಂದು ಸರಿನೂ ಎಂಎಲ್ಎ ಆಗದವರು ಎಷ್ಟು ಜನ ಇದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಎಲ್ಲ ಅಧಿಕಾರನೂ ನನಗೆ ಬೇಕು ಅಂದ್ರೇ ಹೇಗೆ? ಜಗದೀಶ್ ಶೆಟ್ಟರ್ ಅವರಿಗೆ ಇದೇ ಬದುಕು. ಅವರಿಗೆ ಸ್ಥಾನ ಸಿಗಲಿಲ್ಲ. ಹೀಗಾಗಿ ಬಕೆಟ್ ಹಿಡಿಯೋರಿಗೆ ಅವಕಾಶ ಅಂದ್ರು. ಯಾವ ಬಕೆಟ್ ಹಿಡಿದು ನೀವು ಸಿಎಂ ಆಗಿದ್ರೀ. ಯಾವ ಬಕೆಟ್ ಹಿಡಿದು ನಿಮ್ಮ ತಮ್ಮ ಎಂಎಲ್ಸಿ ಆಗಿದ್ದ. ಅವಕಾಶ ಸಿಕ್ಕರೆ ಬಿಜೆಪಿ ಒಳ್ಳೆಯದು, ಸಿಗಲಿಲ್ಲ ಎಂದರೆ ಬಿಜೆಪಿ ಕೆಟ್ಟದ್ದು ಎಂದು ಹರಿಹಾಯ್ದರು.
ಬಿಜೆಪಿ ಸರ್ವಾಧಿಕಾರಿ ಪಕ್ಷ, ನಾಲ್ಕು ಜನ ಇಟ್ಕೊಂಡು ನಡೆಸುತ್ತಾರೆ ಎಂದು ಹೇಳ್ತಾರೆ. ಇದು ಆ ವ್ಯಕ್ತಿಗಳ ಮನೋದೌರ್ಬಲ್ಯವನ್ನು ತೋರಿಸುತ್ತದೆ. ಇವರು ಸಿಎಂ ಆಗಿದ್ದಾಗ ಅವರು ಅವಕಾಶವಾದಿಗಳಲ್ವಾ? ಯಾವಾಗ ಇವರಿಗೆ ಎಂಎಲ್ಎ ಟಿಕೆಟ್ ಸಿಗಲ್ಲ ಅಂತ ದೆಹಲಿಯಿಂದ ಕಾಲ್ ಬಂತೋ, ಆಗ ಅವರಿಗೆ ನಾವೆಲ್ಲ ಅವಕಾಶವಾದಿಗಳ ತರ ಕಾಣಿಸಿದ್ವಿ ಎಂದು ಶೆಟ್ಟರ್ ಗೆ ಟಾಂಗ್ ನೀಡಿದರು.
ಕಾಂಗ್ರೆಸ್ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ
ರಾಜ್ಯದಲ್ಲಿ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. 139 ಜನ ಆತ್ಮಹತ್ಯೆ ಮಾಡಿಕೊಂಡಿರುವ ರೈತರಿಗೆ ಸರ್ಕಾರ ಇನ್ನೂ ಪರಿಹಾರ ಕೊಟ್ಟಿಲ್ಲ. ಬೆಳೆ ಪರಿಹಾರ ಇಲ್ಲ. ಬರಗಾಲ ಘೋಷಣೆ ಮಾಡುತ್ತಿಲ್ಲ. ಈ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಮಳೆ ಇಲ್ಲದೇ ಜನ ಸಾಯುತ್ತಿದ್ದರೂ ಸರ್ಕಾರ ಬರಗಾಲ ಘೋಷಣೆ ಮಾಡದೇ ಕಾಲ ಕಳೆಯುತ್ತಿದ್ದಾರೆ. ಬೆಳೆ ಪರಿಹಾರ ಘೋಷಣೆ ಮಾಡದೇ ನಾಳೆ ಬಾ ಎನ್ನುವಂತೆ ಮಾತನಾಡ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ಜನರ ಸಂಕಷ್ಟ ಕೇಳುತ್ತಿಲ್ಲ. ಸಂಖಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬುತ್ತಿಲ್ಲ. ಮುಂದೆ ಇವರು ಯಾರು ಮಂತ್ರಿ ಆಗಲ್ಲ, ಇವರ ಸರ್ಕಾರ ಬರಲ್ಲ ಎಂದು ಭವಿಷ್ಯ ನುಡಿದರು.
ಕೇಂದ್ರ ಸರ್ಕಾರ ಇಂಡಿಯಾ ಬದಲು ಭಾರತ ಎಂದು ಮರುನಾಮಕರಣ ಮಾಡಲು ಹೊರಟಿದೆ. ಯಾವ ದೇಶಭಕ್ತ ಎದೆಯುಬ್ಬಿಸಿ ಭಾರತ್ ಮಾತಾ ಕೀ ಜೈ ಅಂತಾರೋ ಅವರು ಖುಷಿಪಡ್ತಾರೆ. ಯಾವ ವಿದೇಶಿ ವ್ಯಕ್ತಿಗಳು ಇಂಡಿಯಾ ಅಂತಾ ಹೆಸರು ಇಟ್ಟಾಗ ಸಂತೋಷ ಪಟ್ಟಿದ್ದರೋ ಅವರು ಇಂಡಿಯಾ ಅಂತಾ ಮುಂದುವರಿಯುತ್ತಾರೆ ಎಂದು ಪ್ರತಿಕ್ರಿಯಿಸಿದರು.
ಭಾರತ ಮಾತಾಕಿ ಜೈ ಅಂತೇವೆ, ಆದ್ರೆ ಇಂಡಿಯಾ ಮಾತಾಕಿ ಜೈ ಎನ್ನೊಲ್ಲ: ಕೆ.ಎಸ್. ಈಶ್ವರಪ್ಪ ಆಕ್ರೋಶ
ಭಾರತದಲ್ಲಿ ಹುಟ್ಟಿ ಸನಾತನ ಧರ್ಮದಲ್ಲಿ ಹುಟ್ಟಿದ್ದೇವೆ ಎನ್ನುವುದೇ ನಮಗೆ ಹೆಮ್ಮೆ. ಬ್ರಿಟನ್ ಪ್ರಧಾನಮಂತ್ರಿ ಸಹ ನಾನು ಹಿಂದು ಧರ್ಮೀಯ ಅಂತಾ ಹೇಳಲು ಖುಷಿಯಾಗುತ್ತದೆ ಎಂದಿದ್ದಾರೆ. ಇಂಡಿಯಾದಲ್ಲಿ ಇರುವವರು ಸನಾತನ ಧರ್ಮದ ಬಗ್ಗೆ ಮಾತನ್ನು ಟೀಕಿಸಿದ್ದಾರೆ. ಯಾರು ಯಾರು ಸನಾತನ ಧರ್ಮದ ಬಗ್ಗೆ ಟೀಕೆ ಮಾಡಿದ್ದಾರೆ. ಅವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೊತ್ತಾಗುತ್ತದೆ ಎಂದು ಕುಟುಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ