ರಾಷ್ಟ್ರಗೀತೆಗೆ ಅಪಮಾನ: ಬರಗೂರು ವಿರುದ್ಧ ಬಿಜೆಪಿ ದೂರು

By Govindaraj SFirst Published Aug 30, 2022, 3:00 AM IST
Highlights

ತಮ್ಮ ಕಾದಂಬರಿ ‘ಭರತ ನಗರಿ’ಯಲ್ಲಿ ರಾಷ್ಟ್ರಗೀತೆ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಬರೆದಿದ್ದಾರೆ ಎಂದು ಆರೋಪಿಸಿ ಸಾಹಿತಿ ಬರಗೂರು ರಾಮಚಂದ್ರಪ್ಪ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ರಾಜ್ಯ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ನೇತೃತ್ವದ ನಿಯೋಗ ದೂರು ಸಲ್ಲಿಸಿತು. 

ಬೆಂಗಳೂರು (ಆ.30): ತಮ್ಮ ಕಾದಂಬರಿ ‘ಭರತ ನಗರಿ’ಯಲ್ಲಿ ರಾಷ್ಟ್ರಗೀತೆ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಬರೆದಿದ್ದಾರೆ ಎಂದು ಆರೋಪಿಸಿ ಸಾಹಿತಿ ಬರಗೂರು ರಾಮಚಂದ್ರಪ್ಪ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ನಗರ ಪೊಲೀಸ್‌ ಆಯುಕ್ತರಿಗೆ ರಾಜ್ಯ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ನೇತೃತ್ವದ ನಿಯೋಗ ದೂರು ಸಲ್ಲಿಸಿತು. 

ನಗರದ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಆಯುಕ್ತ ಪ್ರತಾಪ್‌ ರೆಡ್ಡಿ ಅವರನ್ನು ಸೋಮವಾರ ಭೇಟಿಯಾಗಿ ದೂರು ಸಲ್ಲಿಸಿದ ಬಳಿಕ ಮಾತನಾಡಿದ ರವಿಕುಮಾರ್‌ ಅವರು, ಭಾರತ ಮತ್ತು ರಾಷ್ಟ್ರಗೀತೆ ಬಗ್ಗೆ ಅಭಿಮಾನ ಇರುವವರು ಇದನ್ನು ಸಹಿಸಿಕೊಂಡು ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರೂ ಆಗಿದ್ದ ಬರಗೂರು ರಾಮಚಂದ್ರಪ್ಪ ಅವರು ದೊಡ್ಡ ಸಾಹಿತಿಯಾಗಿದ್ದು, ಅಂಥವರು ನಾಡಿಗೆ ಮತ್ತು ದೇಶಕ್ಕೆ ಅವಹೇಳನ ಮಾಡಿದ್ದಾರೆ. 

Bengaluru: ಚಕ್ರತೀರ್ಥ ಸಮಿತಿಯ ಪಠ್ಯಕ್ಕೆ ಬರಗೂರು ರಾಮಚಂದ್ರಪ್ಪ ಕಿಡಿ

ಇದೊಂದು ತಲೆ ತಗ್ಗಿಸಬೇಕಾದ ವಿಚಾರವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ ಇದ್ದಾಗ ಇಂಥ ಅಪಮಾನವಾಗಿದೆ. ಯಾಕೆ ಅವರು ಕ್ರಮ ಕೈಗೊಂಡಿಲ್ಲ? ಅಥವಾ ಸಿದ್ದರಾಮಯ್ಯನವರು ಹೋಗಲಿ ಬಿಡಿ ಎಂದು ಉದಾಸೀನ ಮಾಡಿದರೇ ಎಂದು ಪ್ರಶ್ನಿಸಿದರು. ಇವತ್ತು ಬರಗೂರು ರಾಮಚಂದ್ರಪ್ಪ ಅವರ ಈ ಬರಹದ ಬಗ್ಗೆ ಸಿದ್ದರಾಮಯ್ಯ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ ರವಿಕುಮಾರ್‌ ಅವರು, ಪೊಲೀಸ್‌ ಇಲಾಖೆಯು ರಾಷ್ಟ್ರಧ್ವಜಕ್ಕೆ ಆದ ಅವಮಾನದ ಹಿನ್ನೆಲೆಯಲ್ಲಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಪಠ್ಯ ಪರಿಷ್ಕರಣೆ ವಿವಾದ: ಸಚಿವರ ಪ್ರತಿ ಆರೋಪಕ್ಕೂ ಬರಗೂರು ತಿರುಗೇಟು

ಕಾನೂನು ಇಲಾಖೆ, ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜೊತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುವುದಾಗಿ ಪೊಲೀಸ್‌ ಆಯುಕ್ತರು ತಿಳಿಸಿದ್ದಾರೆ. ಭರತನಗರಿ ಕಾದಂಬರಿಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು. ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಬರಗೂರರಿಗೆ ರಾಷ್ಟ್ರಗೀತೆ ಬಗ್ಗೆ ಇರುವ ವಿಕೃತ ಮನಸ್ಸು ಈಗ ಅರಿವಿಗೆ ಬಂದಿದೆ ಎಂದು ಟೀಕಿಸಿದರು. ಈ ವೇಳೆ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ಯೋಗೇಂದ್ರ ಹೊಡಾಘಟ್ಟಹಾಗೂ ಚಾಮರಾಜಪೇಟೆ ಕಾನೂನು ಪ್ರಕೋಷ್ಠದ ಮಂಡಲ ಸಹ ಸಂಚಾಲಕ ವಿ.ಎಲ್‌.ಜಗದೀಶ್‌ ಇದ್ದರು.

click me!