Bengaluru rain: ಮಳೆ ಅನಾಹುತ ನಿರ್ವಹಣೆಗೆ ಪಾಲಿಕೆ ಸಿದ್ಧ

By Kannadaprabha NewsFirst Published Jul 4, 2023, 4:48 AM IST
Highlights

ರಾಜಕಾಲುವೆಗಳಲ್ಲಿ ಹೂಳು ತೆಗೆದಿರುವುದು ಸೇರಿದಂತೆ ಇತರೆ ಕ್ರಮಗಳಿಂದ ಈ ಬಾರಿ ಮಳೆಯಿಂದ ಅನಾಹುತವಾಗುವ ಪ್ರಮಾಣ ಕಡಿಮೆ ಇರಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜು.4) :  ರಾಜಕಾಲುವೆಗಳಲ್ಲಿ ಹೂಳು ತೆಗೆದಿರುವುದು ಸೇರಿದಂತೆ ಇತರೆ ಕ್ರಮಗಳಿಂದ ಈ ಬಾರಿ ಮಳೆಯಿಂದ ಅನಾಹುತವಾಗುವ ಪ್ರಮಾಣ ಕಡಿಮೆ ಇರಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಗಾಲ ಸಂದರ್ಭದಲ್ಲಿ ರಾಜಧಾನಿಯ ಕೆಲ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತಿತ್ತು. ಮಳೆಯಿಂದ ಜಲಾವೃತ್ತವಾಗುತ್ತಿದ್ದ 198 ಸ್ಥಳಗಳನ್ನು ಗುರುತು ಮಾಡಲಾಗಿದೆ. ಆ ಸ್ಥಳಗಳಿಗೆ ಭೇಟಿ ನೀಡಿ ವಲಯ ಆಯುಕ್ತರು ವರದಿಯನ್ನು ಸಿದ್ಧಪಡಿಸಿದ್ದು, ಶೇಕಡ 80 ಜಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದರು.

Latest Videos

ಮೇ ಮತ್ತು ಜೂನ್‌ನಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿದಿದೆ. ಇದರಿಂದಾಗಿ ಯಾವುದೇ ಅನಾಹುತವಾಗಿಲ್ಲ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆ ಬಿದ್ದರೂ ಅದನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಎಲ್ಲ ವಲಯಗಳಲ್ಲಿಯೂ ನಿಯಂತ್ರಣ ಕೊಠಡಿಗಳು ಸೇರಿ ಆಯುಕ್ತರು, ಜಲಮಂಡಳಿ ಸೇರಿ ಪ್ರಮುಖ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಎಸ್‌ಡಿಆರ್‌ಎಫ್‌, ಅಗ್ನಿಶಾಮಕ ದಳದಲ್ಲಿ ಇರುವ ಸಲಕರಣೆಗಳ ಮಾಹಿತಿ ಪಡೆಯಲಾಗಿದೆ ಎಂದು ತಿಳಿಸಿದರು.

 

ಬಿಬಿಎಂಪಿಯಲ್ಲಿ 13 ಸಾವಿರ ಕೋಟಿ ಹಗರಣ: ಸಿಐಡಿಗೆ ವಹಿಸುವಂತೆ ಸಿಎಂಗೆ ಎನ್ನಾರ್ ರಮೇಶ್ ಪತ್ರ

ರಾಜ್ಯ ಸರ್ಕಾರದಡಿ ಹಾಗೂ ಬಿಬಿಎಂಪಿಯಿಂದ ಫೆಬ್ರವರಿವರೆಗೆ ನಡೆದಿರುವ ಕಾಮಗಾರಿಗಳ ಬಿಲ್‌ಗಳನ್ನು ಕ್ಲಿಯರ್‌ ಮಾಡಲಾಗಿದೆ. ವಿವಿಧ ಕಾರಣಗಳಿಂದ ಬಾಕಿ ಉಳಿದಿರುವ ಅಂದಾಜು .3 ಸಾವಿರ ಕೋಟಿ ಬಿಲ್‌ಗಳನ್ನು ಹಂತ ಹಂತವಾಗಿ ಪಾವತಿಸುತ್ತೇವೆ.

-ತುಷಾರ್‌ ಗಿರಿನಾಥ್‌, ಬಿಬಿಎಂಪಿ ಮುಖ್ಯ ಆಯುಕ್ತ.

110 ಹಳ್ಳಿಗಳಿಗೆ ನೀರು ಪೂರೈಕೆಗೆ ಕೊಳವೆಬಾವಿ

110 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಸ್ತುತ ಟ್ಯಾಂಕರ್‌ ಮೂಲಕ ನೀರು ಒದಗಿಸುವ ವ್ಯವಸ್ಥೆ ಇದೆ. ಒಂದು ವೇಳೆ ಕೊಳವೆ ಬಾವಿ ಕೊರೆಸಬೇಕಾದ ಅವಶ್ಯಕತೆ ಇದ್ದಲ್ಲಿ ಕೊಳವೆ ಬಾವಿ ಕೊರೆಸುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಹೇಳಿದರು.

ಕಳೆದ ವರ್ಷವೇ ಸಿಎಂಸಿಯಲ್ಲಿರುವ ಎಲ್ಲ ಕೊಳವೆ ಬಾವಿಗಳನ್ನು ಬೆಂಗಳೂರು ಜಲಮಂಡಳಿಗೆ ವರ್ಗಾಯಿಸಿದ್ದೇವೆ. ಅವರು ಹಳೆಯ ಸಿಎಂಸಿ, ಟಿಎಂಸಿ ಪ್ರದೇಶಗಳಲ್ಲಿ ಕೊಳವೆ ಬಾವಿ ಕೊರೆಯುವುದಿಲ್ಲ. 110 ಹಳ್ಳಿಗಳಲ್ಲಿ ಮಾತ್ರ ಕೊಳವೆ ಬಾವಿ ಕೊರೆಸುತ್ತೇವೆ. ದಕ್ಷಿಣ, ಆರ್‌.ಆರ್‌.ನಗರ, ಯಲಹಂಕ, ದಾಸರಹಳ್ಳಿ, ಮಹದೇವಪುರ ವಲಯಗಳಲ್ಲಿ ಬೋರ್‌ವೆಲ್‌ಗಳನ್ನು ಕೊರೆಯಲು ಅಂದಾಜು .10 ಕೋಟಿ ಅನುದಾನ ಕೇಳಲಾಗಿದೆ. ಇದನ್ನು ಪರಿಶೀಲಿಸಿ ಅನುದಾನವನ್ನು ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿ 1500 ಪೌರಕಾರ್ಮಿಕರ ನೇಮಕಾತಿ ಶೀಘ್ರ?

110 ಹಳ್ಳಿಗಳಲ್ಲಿ ಕಾವೇರಿ ನೀರು ಬರದೆ ಇರುವುದರಿಂದ ಮಳೆ ಕೊರತೆಯಿಂದ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಾರದು ಎಂಬ ಕಾರಣಕ್ಕೆ ಪೂರ್ವ ಸಿದ್ಧತೆ ಮಾಡಲಾಗುತ್ತಿದೆ. ಕಳೆದ ಮೂರು ವರ್ಷಗಳಿಂದ ಸತತವಾಗಿ ಮಳೆಯಾಗಿದ್ದರಿಂದ ಕೆಲವು ಕೆರೆಗಳು ತುಂಬಿದ್ದವು. ಹೀಗಾಗಿ ಅಂತರ್ಜಲ ಮಟ್ಟವೂ ಸುಧಾರಿಸಿದೆ. ಜೂನ್‌ ತಿಂಗಳಲ್ಲಿ ಹೆಚ್ಚು ಕಡಿಮೆ 110 ಮಿಮೀ ಮಳೆ ಬರುತ್ತಿತ್ತು. ಈ ಬಾರಿ ಸ್ವಲ್ಪ ಕಡಿಮೆಯಾಗಿದೆ. ಹೀಗಾಗಿ ಕೆಲವು ಕಡೆಗಳಲ್ಲಿ ಕೊಳವೆಬಾವಿ ಕೊರೆಯಲು ಚಿಂತನೆ ನಡೆಸಿದ್ದೇವೆ. ಯಲಹಂಕ, ದಾಸರಹಳ್ಳಿಯಲ್ಲಿ .4 ಕೋಟಿ ಅನುದಾನ ಕೇಳಿದ್ದಾರೆ. ಒಂದು ಕೊಳವೆ ಬಾವಿಗೆ ಸುಮಾರು .8 ಲಕ್ಷ ಖರ್ಚಾಗಲಿದೆ. ಸುಮಾರು 100 ಕೊಳವೆ ಬಾವಿ ಕೊರೆಯುವ ಸಾಧ್ಯತೆ ಇದೆ ಎಂದರು.

click me!