Latest Videos

ಕಾಸರಗೋಡಿನ ಕಾಡಿನಲ್ಲಿ ವಿಸ್ಮಯ: ರಾತ್ರಿಯಲ್ಲಿ ರೇಡಿಯಂನಂತೆ ಹೊಳೆಯುವ ಅಣಬೆ ಪತ್ತೆ

By Anusha KbFirst Published Jun 18, 2024, 4:14 PM IST
Highlights

ಗಡಿನಾಡು ಕೇರಳದ ಕಾಸರಗೋಡಿನಲ್ಲಿ ಅಪರೂಪದ ಪ್ರಕೃತಿ ವಿಸ್ಮಯವೊಂದು ಬೆಳಕಿಗೆ ಬಂದಿದೆ. ರಾತ್ರಿಯಲ್ಲಿ ಹೊಳೆಯುವ ಜೈವಿಕವಾಗಿ ಪ್ರಕಾಶಿಸಲ್ಪಡುವ ಅಣಬೆಗಳನ್ನು ಕಾಸರಗೋಡಿನ ದಟ್ಟ ಕಾಡುಗಳಲ್ಲಿ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.

ಕಾಸರಗೋಡು: ಗಡಿನಾಡು ಕೇರಳದ ಕಾಸರಗೋಡಿನಲ್ಲಿ ಅಪರೂಪದ ಪ್ರಕೃತಿ ವಿಸ್ಮಯವೊಂದು ಬೆಳಕಿಗೆ ಬಂದಿದೆ. ರಾತ್ರಿಯಲ್ಲಿ ಹೊಳೆಯುವ ಜೈವಿಕವಾಗಿ ಪ್ರಕಾಶಿಸಲ್ಪಡುವ ಅಣಬೆಗಳನ್ನು ಕಾಸರಗೋಡಿನ ದಟ್ಟ ಕಾಡುಗಳಲ್ಲಿ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ನೈಸರ್ಗಿಕವಾಗಿ ಹೊಳೆಯಲ್ಪಡುವ ಅತೀ ಅಪರೂಪದ ಅಣಬೆಯನ್ನು ಸಂಶೋಧಕರು ಪತ್ತೆ ಮಾಡಿದ್ದು, ರಾತ್ರಿಯ ದಟ್ಟ ಕತ್ತಲಲ್ಲಿ ಇದು ರೇಡಿಯಂನಂತೆ ಹಸಿರು ಬಣ್ಣದಲ್ಲಿ ಕಂಗೊಳಿಸುತ್ತದೆ ಎಂದು ಕೇರಳದ ಮಲೆಯಾಳಂ ಪತ್ರಿಕೆ ಮನೋರಮಾ ವರದಿ ಮಾಡಿದೆ. 

ಬೆಳಕಿಗೆ ಬಂದಿದ್ದು ಹೇಗೆ?
ವೈಜ್ಞಾನಿಕವಾಗಿ 'ಫಿಲೋಬೊಲೆಟಸ್ ಮ್ಯಾನಿಪುಲಾರಿಸ್' (Filoboletus manipularis) ಎಂದು ಕರೆಯಲ್ಪಡುವ ಈ ಆಕರ್ಷಕ ಶಿಲೀಂಧ್ರಗಳು ಅಥವಾ ಅಣಬೆಗಳು ಜೀವರಾಸಾಯನಿಕ ಪ್ರಕ್ರಿಯೆಯ ಮೂಲಕ ತಮ್ಮದೇ ಆದ ಬೆಳಕನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ.  ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆಯ ಕಾಸರಗೋಡು ವಿಭಾಗ ಮತ್ತು ಮಶ್ರೂಮ್ಸ್ ಆಫ್ ಇಂಡಿಯಾ ಕಮ್ಯುನಿಟಿ ಜಂಟಿಯಾಗಿ ಕೇರಳದ ರಾಣಿಪುರಂ ಅರಣ್ಯದಲ್ಲಿ ಮೈಕ್ರೋ ಫಂಗಲ್ ಸಮೀಕ್ಷೆ ನಡೆಸಿದ ನಂತರ ಈ ರಾತ್ರಿ ಬೆಳಗುವ ಅಣಬೆಗಳು ಇರುವುದು ಬೆಳಕಿಗೆ ಬಂದಿದೆ. 

ಬರೋಬ್ಬರಿ 5 ಕೆಜಿ ತೂಗುವ ಗಜಗಾತ್ರದ ನಿಂಬೆ ಹಣ್ಣು! ನೋಡಲು ಮುಗಿಬಿದ್ದ ಜನರು!

ವಿಷಕಾರಿ, ಬಳಕೆಗೆ ಯೋಗ್ಯವಲ್ಲ

ವಿಜ್ಞಾನಿಗಳು ಮತ್ತು ಸಂಶೋಧಕರನ್ನು ಒಳಗೊಂಡ ಈ ಸಮೀಕ್ಷಾ ತಂಡದಲ್ಲಿ ಕಾಸರಗೋಡು ವಿಭಾಗೀಯ ಅರಣ್ಯಾಧಿಕಾರಿ ಕೆ.ಅಶ್ರಫ್, ಡಾ.ಜಿನು ಮುರಳೀಧರನ್, ಡಾ.ಸಂತೋಷ್ ಕುಮಾರ್ ಕೂಕಲ್, ಕೆ.ಎಂ.ಅನೂಪ್, ಸಚಿನ್ ಪೈ ಮತ್ತು ಪೂರ್ಣಾ ಸಜ್ನಾ ಇವರು ಈ ಮೈಕ್ರೋ ಫಂಗಲ್ ಭಾಗವಹಿಸಿದ್ದರು. ಈ ಸೀಕ್ಷೆಯ ವೇಳೆ 50 ಕ್ಕೂ ಹೆಚ್ಚು ವಿವಿಧ ಜಾತಿಯ ಅಣಬೆಗಳು ಕಂಡು ಬಂದಿವೆ. ಅದರಲ್ಲೂ ರಾತ್ರಿಯ ವೇಳೆ ಬೆಳಕು ಸೂಸುವ ಬಯೋಲ್ಯುಮಿನೆಸೆಂಟ್ ಅಣಬೆಗಳು ಈ ಸಮೀಕ್ಷಾ ತಂಡದ ಪ್ರಮುಖ ಆವಿಷ್ಕಾರವಾಗಿದೆ. ಆದರೆ ಅವುಗಳು ಸೇವಿಸಲು ಅಥವಾ ಬಳಕೆಗೆ ಯೋಗ್ಯವಾಗಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 

ಇದೇನಿದು? ಮನುಷ್ಯನ ಕೊಳೆತ ಬೆರಳಿನ ಫೋಟೋ ಅಲ್ಲ, ವಿಸ್ಮಯ ಬಿಚ್ಚಿಟ್ಟ IFS ಅಧಿಕಾರಿ!

ಸಿಕ್ಕಿಂನ ಯಂಗ್ಸಮ್ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಪ್ರಿನ್ಸಿಪಾಲ್ ಆಗಿ ಕೆಲಸ ಮಾಡುವ ಹಾಗೂ ಸಸ್ಯಶಾಸ್ತ್ರದಲ್ಲಿ ಪರಿಣಿತರಾಗಿರುವ ದಿಲೀಪ್ ಕುಮಾರ್ ರೈ ಈ ಬಗ್ಗೆ ಪ್ರತಿಕ್ರಿಯಿಸಿದ್ದು,  ಕಾಸರಗೋಡಿನಲ್ಲಿ ಈ ನೈಸರ್ಗಿಕವಾಗಿ ರಾತ್ರಿಯ ವೇಳೆ ಬೆಳಕು ಸೂಸುವ ಅಣಬೆ ಕಂಡು ಬಂದಿರುವುದು ಶೀಲಿಂಧ್ರಗಳ ಜೀವ ವೈವಿಧ್ಯತೆಗೆ ಸಂಬಂಧಿಸಿದಂತೆ ನಮಗೆ ಗೊತ್ತಿರುವ ಜ್ಞಾನಕ್ಕೆ ಹೊಸ ಮಹತ್ವದ ಸೇರ್ಪಡೆಯಾಗಿದೆ ಜೊತೆಗೆ ಅವು ಪ್ರಕೃತಿಯ ಅದ್ಭುತಕ್ಕೆ ತಮ್ಮದೇ ಕೊಡುಗೆ ನೀಡುತ್ತಿವೆ ಎಂದು ಹೇಳಿದ್ದಾರೆ.

ಕೇರಳದಲ್ಲೇ ಏಕೆ

ಫಿಲೋಬೊಲೆಟಸ್ ಮ್ಯಾನಿಪುಲಾರಿಸ್, ಬಯೋಲುಮಿನೆಸೆಂಟ್ ಅಣಬೆಗಳ ಆಕರ್ಷಕ ಜಾತಿಯಾಗಿದೆ. ಈ ಅಣಬೆಗಳು ತಮ್ಮ ಜೀವಕೋಶಗಳಲ್ಲಿನ ರಾಸಾಯನಿಕ ಕ್ರಿಯೆಯಿಂದಾಗಿ ರಾತ್ರಿಯಲ್ಲಿ ಪ್ರಕಾಶಮಾನವಾದ ಹಸಿರು ಬಣ್ಣವನ್ನು ಹೊರಸೂಸುತ್ತವೆ. ಇವು ಉಷ್ಣವಲಯದ, ಆರ್ದ್ರತೆ ಇರುವ ವಾತಾವರಣದಲ್ಲಿ ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ದಟ್ಟವಾದ ಕಾಡುಗಳಲ್ಲಿ ಬಿದ್ದ ಮರಗಳು ಮತ್ತು ಕೊಳೆತ ಎಲೆಗಳಿಂದ  ನಿರ್ಮಿತವಾದ ಸಾವಯವ ಕಾಂಪೋಸ್ಟ್‌ಗಳು ಸಾಕಷ್ಟು ಇರುತ್ತವೆ. ಈ ಸಮೃದ್ಧ ತೇವಾಂಶವುಳ್ಳ ಪರಿಸರವು ಅವುಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ.  ಮತ್ತು ಈ ವಾತಾವರಣ ಅಣಬೆಗಳಿಗೆ ವಿಶಿಷ್ಟವಾದ ಹೊಳೆಯುವ ಸಾಮರ್ಥ್ಯವನ್ನು ನೀಡುತ್ತವೆ ಎಂದು ಸಸ್ಯಶಾಸ್ತ್ರ ತಜ್ಞ  ದಿಲೀಪ್ ಕುಮಾರ್ ವಿವರಿಸಿದ್ದಾರೆ.

click me!