
ಕುತೂಹಲ ಹಾಗೂ ನಿರೀಕ್ಷೆ ಮೂಡಿಸಿರುವ ಬನಾರಸ್ ಸಿನೆಮಾ ಸದ್ಯ ಚಿತ್ರರಂಗದಲ್ಲಿ ಟಾಕ್ ಕ್ರಿಯೇಟ್ ಮಾಡಿದೆ. ಇದೇ ನವೆಂಬರ್ 4 ರಂದು ದೇಶಾದ್ಯಂತ ಪಂಚ ಭಾಷೆಯಲ್ಲಿ ರಿಲೀಸ್ ಆಗಲಿರುವ ಚಿತ್ರದ ಕುರಿತು ಸಿನಿಪ್ರಿಯರಲ್ಲಿ ಬೇರೆಯದ್ದೇ ಒಂದು ನಿರೀಕ್ಷೆ ಮೂಡಿದೆ. ಹೀಗೆ ಸಮಸ್ತ ಪ್ರೇಕ್ಷಕರ ಕುತೂಹಲದ ಕೇಂದ್ರ ಬಿಂದುವಾಗಿರುವ ಬನಾರಸ್ ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಈ ಹಂತದಲ್ಲಿ ಸಿನಿತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ಪ್ರೇಕ್ಷಕರನ್ನು ನಾನಾ ರೀತಿಯಲ್ಲಿ ಸೆಳೆಯುತ್ತಿರುವ ಬನಾರಸ್ ಹಾಡು, ಟ್ರೈಲರ್, ಮೋಷನ್ ಪೋಸ್ಟರ್ ಮೂಲಕವೇ ದಾಖಲೆಯನ್ನ ಕ್ರಿಯೇಟ್ ಮಾಡಿತ್ತು. ಈಗ ರಿಲೀಸ್ ಹಂತದಲ್ಲೂ ಸಹ ಸಿನೆಮಾ ವಿತರಣೆ ಹಕ್ಕು ಪ್ರತಿಷ್ಠಿತ ಸಂಸ್ಥೆಗಳ ಪಾಲಾಗುತ್ತಾ ಅಚ್ಚರಿ ಮೂಡಿಸುತ್ತಿದೆ. ಈ ಮೂಲಕವೇ ಪ್ರೇಕ್ಷಕರ ಮೇಲಿನ ಬನಾರಸ್ ಪರಿಣಾಮಗಳು ಮತ್ತಷ್ಟು ಬಿಗಿಯಾಗುತ್ತಾ ಸಾಗುತ್ತಿವೆ.
ಇದೀಗ ತಮಿಳುನಾಡಿನ ತುಂಬೆಲ್ಲ ಬನಾರಸ್ ಪಸರಿಸುವ ಕುರಿತು ಸಿಹಿ ಸುದ್ದಿ ಖಾತ್ರಿಯಾಗಿದೆ. ಹೌದು ಕಾಲಿವುಡ್ ನಲ್ಲೂ ತೆರೆಕಾಣ್ತಿರುವ ಬನಾರಸ್ ಅನ್ನು ಇಡೀ ತಮಿಳು ನಾಡಿದ್ಯಾಂತ ಹಂಚುವ ಹಕ್ಕನ್ನ ತಮಿಳು ನಾಡಿನ ಹೆಸರಾಂತ ಶಕ್ತಿ ಫಿಲ್ಮ್ ಫ್ಯಾಕ್ಟರಿ ಸಂಸ್ಥೆ ವಹಿಸಿಕೊಂಡಿದೆ. ಈಗಾಗಲೇ ಕರ್ನಾಟಕದಲ್ಲಿ ಡಿ ಬೀಟ್ಸ್, ಕೇರಳದಲ್ಲಿ ಮುಲಕುಪ್ಪಡಮ್, ಬಾಲಿವುಡ್ ನಲ್ಲಿ ಪನೋರಮಾ ಸಂಸ್ಥೆ ಗಳಂತ ಹೆಸರಾಂತ ಸಂಸ್ಥೆಗಳೇ ಸಿನೆಮಾ ನೋಡಿ ಬಹುವಾಗಿ ಮೆಚ್ಚಿ ವಿತರಿಸುವ ಹಕ್ಕನ್ನ ತಮ್ಮ ತೆಕ್ಕೆಗೆ ಪಡೆದುಕೊಂಡಿದ್ದವು. ಈ ಸಂತಸದಲ್ಲಿದ್ದ ಚಿತ್ರತಂಡಕ್ಕೆ ಈಗ ತಮಿಳುನಾಡಿನಲ್ಲಿ ಮತ್ತೊಂದು ಶಕ್ತಿ ದೊರೆತಂತಾಗಿದೆ. ಇದುವರೆಗೂ ಉತ್ತಮ ಗುಣಮಟ್ಟದ ಚಿತ್ರಗಳನ್ನೇ ಹಂಚಿದ್ದ, ದಾಖಲೆ ನಿರ್ಮಿಸಿರುವ ಶಕ್ತಿ ಫಿಲ್ಮ್ ಫ್ಯಾಕ್ಟರಿ ಬನಾರಸ್ ಚಿತ್ರವನ್ನು ಹಂಚುತ್ತಿರುವುದು ಇನ್ನಷ್ಟು ಚಿತ್ರತಂಡಕ್ಕೆ ಹುರುಪನ್ನ ನೀಡಿದಂತಾಗಿದೆ. ಈ ಮೂಲಕ ತಮಿಳುನಾಡಿನಲ್ಲಿ ಬನಾರಸ್ ಬಗೆಗೆ ಬೇರೆಯದ್ದೇ ಲೇವೆಲ್ ನಲ್ಲಿ ಕ್ರೇಜ್ ಮೂಡಿಕೊಂಡಿದೆ.
ಬನಾರಸ್ ಚಿತ್ರದ ಮೂಲಕ ಹಲವು ತಯಾರಿಯೊಂದಿಗೆ ಝೈದ್ ಖಾನ್ ನಾಯಕನಾಗಿ ಸಿನಿರಂಗಕ್ಕೆ ಮೊದಲ ಹೆಜ್ಜೆ ಇಟ್ಟಿದ್ದು, ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ಈಗಾಗಲೇ ಚಿತ್ರದ ಕೆಲವು ಝಲಕ್ ನೋಡಿರುವ ಪ್ರೇಕ್ಷಕರಿಗೆ ಝೈದ್ ಮೇಲೆ ನಿರೀಕ್ಷೆ ಮತ್ತು ಭರವಸೆ ಮೂಡಿದೆ. ಈಗಾಗಲೇ ನಿರ್ದೇಶನದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಿರ್ದೇಶಕ ಜಯತೀರ್ಥ ಅವರ ನಿರ್ದೇಶನದ ಮೇಲೂ ಅಷ್ಟೇ ಕುತೂಹಲವಿದೆ. ಪ್ರತೀ ಸಿನೆಮಾದಲ್ಲೂ ಹೊಸತನ, ಪ್ರಾಯೋಗಿಕತೆ, ವಿಭಿನ್ನತೆಯನ್ನ ತೋರಿಸಿದ್ದ ನಿರ್ದೇಶಕ ಬನಾರಸ್ ನಲ್ಲಿ ಏನು ಹೇಳಲು ಹೊರಟಿದ್ದಾರೆ ಎಂಬ ಕಾತುರ ಬರೀ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಇತರ ೪ ಭಾಷೆಯಲ್ಲೂ ಚರ್ಚೆ ಹುಟ್ಟುಹಾಕಿದೆ.
ಉತ್ತರ ಭಾರತಕ್ಕೆ Banaras ವಿತರಿಸುವ ಹಕ್ಕು ಪಡೆದ ಬಾಲಿವುಡ್ ಸ್ಟಾರ್ ಅಜಯ್ ದೇವಗನ್!
ಈ ಚಿತ್ರದಲ್ಲಿ ಝೈದ್ ಗೆ ಸೋನಲ್ ಮೊಂಥೆರೋ ನಾಯಕಿಯಾಗಿ ಜೊತೆಯಾಗಿದ್ದು, ಸದ್ಯ ಪ್ರಚಾರ ಕಾರ್ಯದಲ್ಲಿ ಬೇರೆ ಬೇರೆ ರಾಜ್ಯ ಸುತ್ತುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ನ್ಯಾಷನಲ್ ಖಾನ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಿಲಕ್ ರಾಜ್ ಬಲ್ಲಾಳ್ ನಿರ್ಮಿಸಿರುವ ಅದ್ದೂರಿಯಾಗಿ ನಿರ್ಮಿಸಿರುವ ಈ ಚಿತ್ರದಲ್ಲಿ ದೇವರಾಜ್, ಅಚ್ಯುತಕುಮಾರ್, ಸುಜಯ್ ಶಾಸ್ತ್ರಿ, ಸ್ವಪ್ನ ರಾಜ್, ಬರ್ಕತ್ ಆಲಿ, ಚಿರಂತ್, ರೋಹಿತ್ ಮುಂತಾದವರ ತಾರಾಗಣ ಇದೆ. ಅಜನೀಶ್ ಲೋಕನಾಥ್ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರಘು ನಿಡುವಳ್ಳಿ ಸಂಭಾಷಣೆ ಬನಾರಸ್ ಚಿತ್ರಕ್ಕಿದೆ. ಈಗಾಗಲೇ ಸಿನಿಮಾಪ್ರೇಮಿಗಳನ್ನು ಆವರಿಸಿಕೊಂಡಿರುವ ಬನಾರಸ್ ಇದೇ ನವೆಂಬರ್ 4ರಂದು ವಿಶ್ವಾದ್ಯಂತ ತನ್ನ ಯಾನಕ್ಕೆ ನಾಂದಿ ಹಾಡಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.