ವಿಜಯ್‌ ಕಿರಗಂದೂರು ನಿರ್ಮಾಣದ ಚಿತ್ರಕ್ಕೆ ಆ.27ರಿಂದ ಶೂಟಿಂಗ್‌ ಶುರು!

By Kannadaprabha NewsFirst Published Aug 7, 2021, 5:26 PM IST
Highlights

ಇದೇ ಮೊದಲ ಬಾರಿಗೆ ತಾವು ನಾಯಕನಾಗಿರುವ ಸಿನಿಮಾವನ್ನು ತಾವೇ ನಿರ್ದೇಶಿಸುತ್ತಿದ್ದಾರೆ ರಿಷಬ್‌ ಶೆಟ್ಟಿ. ಸಿನಿಮಾ ಹೆಸರು ‘ಕಾಂತಾರ’. ನಿರ್ಮಾಣದ ಹೊಣೆ ಹೊತ್ತಿರುವುದು ಹೊಂಬಾಳೆ ಫಿಲಂಸ್‌ನ ವಿಜಯ್‌ ಕಿರಗಂದೂರು.

ಕಾಂತಾರ ಎಂದರೆ ದಟ್ಟಅಡವಿ ಎಂದರ್ಥ. ಕಠಿಣ ದಾರಿ ಎಂಬ ಅರ್ಥವೂ ಉಂಟು. ಅಡವಿ ನಿಗೂಢತೆಯನ್ನು ತನ್ನೊಗಿಟ್ಟುಕೊಂಡಿರುತ್ತದೆ. ಅದೇ ಥರ ಕಾಂತಾರ ಕೂಡ ನಿಗೂಢತೆಯನ್ನು ತನ್ನೊಳಗೆ ಇಟ್ಟುಕೊಂಡಿರುವ ಕತೆ ಅನ್ನುವುದು ರಿಷಬ್‌ ಶೆಟ್ಟಿಮಾತು. ಅರಣ್ಯ ಮತ್ತು ಮಾನವನ ನಡುವಿನ ಸಂಘರ್ಷದ ಕಥಾ ಹಂದರ ಹೊಂದಿರುವ ಸಿನಿಮಾ ಇದು. ಪ್ರಸ್ತುತ ಬಿಡುಗಡೆಯಾಗಿರುವ ಪೋಸ್ಟರಿನಲ್ಲಿ ಅರಣ್ಯವನ್ನು ಧರಿಸಿರುವ ದೈವದ ಕಾಲು, ಕಾಡ್ಗಿಚ್ಚು, ಕೋಣ ಓಡಿಸುತ್ತಿರುವ ತರುಣ, ದಿಕ್ಕೆಟ್ಟು ಹೋಗುತ್ತಿರುವ ಹಂದಿಗಳು ಕಾಣಿಸಿಕೊಳ್ಳುತ್ತವೆ. ಆ ಪ್ರಕಾರ ಹೇಳುವುದಾದರೆ ಈ ಸಿನಿಮಾದಲ್ಲಿ ದಕ್ಷಿಣ ಕನ್ನಡದ ಸಂಸ್ಕೃತಿ, ಸಂಪ್ರದಾಯವನ್ನು ಕಾಡುವಂತೆ ಚಿತ್ರಿಸಲಾಗುತ್ತದೆ.

ಇದೇ ಮೊದಲ ಬಾರಿಗೆ ಧೈರ್ಯ ಮಾಡಿ ನನ್ನ ನಿರ್ದೇಶನದ ಸಿನಿಮಾದಲ್ಲಿ ನಾನೇ ನಟಿಸುವ ಮನಸ್ಸು ಮಾಡಿದ್ದೇನೆ. ನಿಗೂಢ ಅರಣ್ಯದಲ್ಲಿ ಸಿಗುವುದೆಲ್ಲಾ ಅಚ್ಚರಿಯೇ. ಸದ್ಯ ಊರಲ್ಲಿದ್ದೇನೆ. ಚಿತ್ರೀಕರಣಕ್ಕೆ ಹೊರಡಲು ಸಿದ್ಧರಾಗುತ್ತಿದ್ದೇವೆ.- ರಿಷಬ್‌ ಶೆಟ್ಟಿ

ನಿರ್ದೇಶಕ ರಿಷಬ್‌ ಶೆಟ್ಟಿಆ ಮಾತನ್ನು ಅನುಮೋದಿಸುತ್ತಲೇ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸುತ್ತಾರೆ. ‘ಎರಡು ವರ್ಷದ ಹಿಂದಿನಿಂದಲೂ ಹೊಂಬಾಳೆ ಫಿಲಂಸ್‌ಗೆ ಸಿನಿಮಾ ಮಾಡುವ ಮಾತುಕತೆ ನಡೆಯುತ್ತಿತ್ತು. ಆದರೆ ಒಂದು ಒಳ್ಳೆಯ ಕತೆ ಬೇಕಿತ್ತು. ಈ ಸಲ ಲಾಕ್‌ಡೌನ್‌ ಸಂದರ್ಭ ಊರಿಗೆ ಹೋದಾಗ ಈ ಕತೆ ಬರೆದೆ. ನನ್ನ ಊರು ಕುಂದಾಪುರದ ಕೆರಾಡಿಯಲ್ಲಿ ಬಹುತೇಕ ಚಿತ್ರೀಕರಣ ನಡೆಯುತ್ತದೆ. ಆ.27ರಿಂದ ಶೂಟಿಂಗ್‌ ಶುರು’ ಎನ್ನುತ್ತಾರೆ ರಿಷಬ್‌.

ಹೊಂಬಾಳೆ ಫಿಲಂಸ್‌ನ 11ನೇ ಸಿನಿಮಾ 'ಕಾಂತಾರ' ಫಸ್ಟ್‌ ಲುಕ್‌ ಬಿಡುಗಡೆ!

ರಿಷಬ್‌ ಶೆಟ್ಟಿಕನ್ನಡ ಚಿತ್ರರಂಗದ ಹೆಮ್ಮೆ. ಈಗಾಗಲೇ ಅವರು ತಮ್ಮ ನಿರ್ದೇಶನ ಚಾತುರ್ಯವನ್ನು ತೋರಿಸಿದ್ದಾರೆ. ಅವರ ಜೊತೆ ಸಿನಿಮಾ ಮಾಡುತ್ತಿರುವುದಕ್ಕೆ ಖುಷಿ ಇದೆ.- ವಿಜಯ್‌ ಕಿರಗಂದೂರು

ಸಿನಿಮಾದಲ್ಲಿ ರಿಷಬ್‌ ಶೆಟ್ಟಿಹೊರತಾಗಿ ಕಿಶೋರ್‌, ಅಚ್ಯುತ್‌ ಕುಮಾರ್‌, ಪ್ರಮೋದ್‌ ಶೆಟ್ಟಿಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನುಳಿದ ವಿವರಗಳು ನಿಧಾನಕ್ಕೆ ಲಭ್ಯವಾಗಲಿದೆ.

click me!