Latest Videos

ನಾನು ಚಿಕ್ಕವನಿದ್ದಾಗ ನೋಡಿದಷ್ಟು ಹಣವನ್ನು ದರ್ಶನ್ ಈವರೆಗೂ ನೋಡಿರಲಿಕ್ಕಿಲ್ಲ; ಉಮಾಪತಿ ಶ್ರೀನಿವಾಸ್‌ಗೌಡ

By Sathish Kumar KHFirst Published Jun 30, 2024, 8:36 PM IST
Highlights

ನಾನು ಆವಾಗ ನೋಡಿದ್ದೀನಲ್ಲ ಆ ದುಡ್ಡನ್ನು ಈವತ್ತಿನವರೆಗೂ ದರ್ಶನ್ ನೋಡಿರಲು ಸಾಧ್ಯವೇ ಇಲ್ಲ. ಅಷ್ಟು ದೊಡ್ಡ ಮೊತ್ತದ ಹಣವಿರುವ ದೊಡ್ಡ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದೇನೆ.

ಬೆಂಗಳೂರು (ಜೂ.30):  ನಾನು ಆವಾಗ ನೋಡಿದ್ದೀನಲ್ಲ ಆ ದುಡ್ಡನ್ನು ಈವತ್ತಿನವರೆಗೂ ದರ್ಶನ್ ನೋಡಿರಲು ಸಾಧ್ಯವೇ ಇಲ್ಲ. ಅಷ್ಟು ದೊಡ್ಡ ಮೊತ್ತದ ಹಣವಿರುವ ದೊಡ್ಡ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದೇನೆ. ನಾವು ಅವರ ಹೆಸರೇಳಿಕೊಂಡು ಬದುಕುವುದು ಅಲ್ಲ, ನಮ್ಮಿಂದ ಅವರು ಅನ್ನ ತಿನ್ನುತ್ತಿದ್ದಾರೆ. ನಾನು ದುಡ್ಡು ಕೊಟ್ಟು ಸಿನಿಮಾ ಮಾಡಿದ್ದೇನೆ ಹೊರತು ಯಾವುದೇ ಪುಗಸಟ್ಟೆ ಸಿನಿಮಾ ಮಾಡಿಸಿಲ್ಲ ಎಂದು ಕನ್ನಡ ಸಿನಿಮಾ ನಿರ್ಮಾಪಕ ಉಮಾಪತಿ ಶ್ರೀನಿವಾಸಗೌಡ ಹೇಳಿದರು.

ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡುವ ವೇಳೆ ನಟ ದರ್ಶನ್ ಅವರ ಅಭಿಮಾನಿಗಳು ನೀವು ದರ್ಶನ್ ನಟನೆಯಿಂದ ಹಣ ಮಾಡಿಕೊಂಡಿದ್ದೀರಿ ಎಂದು ಹೇಳಿದ್ದ ಬಗ್ಗೆ ಪ್ರತಿಕ್ರಿಯೆ ನೀಡಿದರು. ನಾನು ಚಿಕ್ಕವನಿದ್ದಾಗ ಅಂದರೆ ಆವಾಗ ನೋಡಿದ್ದೇನಲ್ಲ, ಅಷ್ಟು ದುಡ್ಡನ್ನು ದರ್ಶನ್ ಇವತ್ತಿನವರೆಗೂ ನೋಡಿಲ್ಲ. ದೊಡ್ಡ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದೇನೆ. ನಾನು ಮನೆ ಕಟ್ಟಿರುವ ಈ ಜಾಗವಿದೆಯಲ್ಲಾ ಇದು 1.5 ಎಕರೆ ಭೂಮಿಯಾಗಿದೆ. ನಮ್ಮನೆ ಸುತ್ತಲಿರುವ ಜಾಗ ಮಾರಾಟ ಮಾಡಿದರೆ 2 ಲ್ಯಾಂಬೋರ್ಗಿನಿ ಕಾರು ಖರೀದಿ ಮಾಡುವಷ್ಟು ಹಣ ಬರುತ್ತದೆ. ಆದರೆ, ನನಗೆ ಅಗತ್ಯವಿಲ್ಲದ ಕಾರಣ ದುಬಾರಿ ಬೆಲೆಯ ಜಾಗದಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಿದ್ದೇನೆ ಎಂದು ಹೇಳಿದರು.

ದರ್ಶನ್ ಲ್ಯಾಂಬೋರ್ಗಿನಿ ಕಾರು ಖರೀದಿಗೆ ಅಡ್ವಾನ್ಸ್ ಕೊಟ್ಟಿಲ್ಲ; ನಾನು ದುಡ್ಡು ಕೊಟ್ಟು ಕುಣಿಸಿದ್ದೀನಿ!

ನಾವು ವಾಸವಿರುವ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಒಂದು ಚದರ ಅಡಿಗೆ 45 ಸಾವಿರ ರೂ.ನಂತೆ ಮಾರಾಟ ಆಗುತ್ತಿದೆ. ರೆಸಿಡೆನ್ಸಿಯಲ್ ಜಾಗವಾದರೆ 30 ಸಾವಿರ ರೂ. ಬೆಲೆ ಬಾಳುತ್ತದೆ. ಒಂದೂವರೆ ಎಕರೆ ಭೂಮಿಗೆ ಎಷ್ಟಾಗುತ್ತದೆ ಹೇಳಿ? ಇಲ್ಲಿ ನಮ್ಮನೆ ಸುತ್ತ ಮುತ್ತಲೂ ನಮ್ಮ ಕುಟುಂಬಕ್ಕೆ ಸೇರಿ ಎಷ್ಟೋ ಎಕರೆ ಭೂಮಿಯಿದೆ. ನಮ್ಮ ಮನೆಯವರಿಗೆ ಸೇರಿದ ಒಂದೊಂದು ತುಂಡು ಭೂಮಿ ಕೂಡ 2 ರಿಂದ 5 ಎಕರೆ ಇದೆ. ನಾವು ಅವರ ಹೆಸರೇಳಿಕೊಂಡು ಬದುಕುವುದು ಅಲ್ಲ, ನಮ್ಮಿಂದ ಅವರು ಅನ್ನ ತಿನ್ನುತ್ತಿದ್ದಾರೆ. ನಾನು ದುಡ್ಡು ಕೊಟ್ಟು ಸಿನಿಮಾ ಮಾಡಿದ್ದೇನೆ ಹೊರತು ಯಾವುದೇ ಪುಗಸಟ್ಟೆ ಸಿನಿಮಾ ಮಾಡಿಸಿಲ್ಲ. ದುಡ್ಡು ಕೊಟ್ಟಿದ್ದೀನಿ ಆಕ್ಟ್ ಮಾಡಿಸಿಕೊಂಡಿದ್ದೀನಿ. ದುಡ್ಡು ಕೊಟ್ಟು ಕುಣಿಸಿದ್ದೀನಿ, ಯಾವುದಕ್ಕೂ ಫ್ರೀಯಾಗಿ ಮಾಡಿಸಿಕೊಂಡಿಲ್ಲ ಎಂದು ಚಾಟಿ ಬೀಸಿದರು.

ನಾನು ಮಲ್ಲತ್ತಹಳ್ಳಿಯಲ್ಲಿ ಒಂದು ಜಾಗಕ್ಕೆ ಕಾಂಪೌಂಡ್ ಹಾಕಿಸಿಕೊಟ್ಟೆ. ಆ ಧಮ್ ಇದ್ದಿದ್ದರೆ ಇವರು ಅಭಿಮಾನಿಗಳನ್ನು ಕರೆಸಿಕೊಂಡು ಕಾಂಪೌಂಡ್ ಹಾಕಿಸಿಕೊಳ್ಳಲಿಲ್ಲ ಹೇಳಿ. ಈವಯ್ಯ ಅಲ್ಲಿ ಯಾರಿಗೋ ಒಬ್ಬರಿಗೆ ಹೊಡೆದಿದ್ದರೆಂದು ಅಲ್ಲಿನ ಜನರು ಇವರನ್ನು ಕಾಲಿಡಲೂ ಬಿಟ್ಟಿರಲಿಲ್ಲ. ನಾನು  ಅಲ್ಲಿ ಹೋಗಿ ನಿಂತುಕೊಂಡು ಮಲ್ಲತ್ತಹಳ್ಳಿ ಜಾಗಕ್ಕೆ ಕಾಂಪೌಂಡ್ ಹಾಕಿಸಿಕೊಟ್ಟಿದ್ದೇನೆ. ಯಾಕೆ ಅವರ ಫ್ಯಾನ್ಸ್‌ಗೆ ಈ ತಾಕತ್ತು ಇರಲಿಲ್ಲವೇ? ಫ್ಯಾನ್ಸ್‌ಗಳು ಹೋಗಿ ಕಾಂಪೌಂಡ್‌ ಹಾಕಿಸಬೇಕಿತ್ತು. ಅಷ್ಟು ತಾಕತ್ತಿದ್ದರೆ ಫ್ಯಾನ್ಸ್‌ಗೆ ಹೋಗಿ ಬಿಡಿಸಿಕೊಂಡು ಬರಲು ಹೇಳಿ ಎಂದು ಉಮಾಪತಿಗೌಡ ಸವಾಲು ಹಾಕಿದರು.

ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ನಟ ದರ್ಶನ್ ವಿರುದ್ಧವೇ ಹೇಳಿಕೆ ನೀಡಿದ ನಟಿ ಪವಿತ್ರಾಗೌಡ

ದರ್ಶನ್ ಅಭಿಮಾನಿಗಳು ಮಾಧ್ಯಮಗಳನ್ನು ಕೆಟ್ಟದಾಗಿ ಬೈಯುತ್ತಾ, ಕಾಳಜಿಯಿದ್ದರೆ ನೀವು ರೇಣುಕಾಸ್ವಾಮಿ ಕುಟುಂಬಕ್ಕೆ ನೆರವು ನೀಡಿ ಎಂದು ಹೇಳುತ್ತಿದ್ದಾರೆ ಎಂಬ ಪ್ರಶ್ನೆ ಬಗ್ಗೆ ಮಾತನಾಡಿ, ನಾವು-ನೀವು ಯಾಕೆ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡಬೇಕು? ನಾವು ಕೊಲೆ ಮಾಡಿದ್ದೀವಾ? ಅವರ ಸಿನಿಮಾಗಳನ್ನು ಮಾಧ್ಯಮದಲ್ಲಿ ಪ್ರಚಾರ ಮಾಡಲು ಬ್ಯಾನ್ ಮಾಡಿದಾಗ ಯಾಕೆ ಸಿನಿಮಾಗಳು ಸಕ್ಸಸ್ ಆಗಲಿಲ್ಲ. ಸಿನಿಮಾ ನಟ ನಟಿಯರ ಬೆಳವಣಿಗೆಯಲ್ಲಿ ಮಾಧ್ಯಮದವರ ಕೊಡುಗೆ ಮತ್ತು ನಿರ್ಮಾಪಕದ ಕೊಡುಗೆಗಳು ಸಾಕಷ್ಟಿರುತ್ತದೆ. ನಮ್ಮನೆ ಕಾರ್ಯಕ್ರಮಕ್ಕೆ ಯಾವೊಬ್ಬ ನಟರನ್ನೂ ನಾನು ಕರೆದಿಲ್ಲ. ಹಾಗೇನಾದರೂ ಕರೆದಿದ್ದರೆ ಚಿಕ್ಕಣ್ಣ ಮಾತ್ರ, ಏಕೆಂದರೆ ಚಿಕ್ಕಣ್ಣ ನನಗೆ ಒಬ್ಬ ಸ್ನೇಹಿತನಾಗಿ, ನನ್ನ ಸಹೋದರನಾಗಿ ನಿಂತಿದ್ದಾನೆ. ಅವರಾರೋ ಬೊಗಳುತ್ತಾರೆಂದರೆ ನೀವು ನಾವ್ಯಾಕೆ ಕೇರ್ ಮಾಡಬೇಕು ಹೇಳಿ ಎಂದು ಹೇಳಿದರು.

ಇವರೆಲ್ಲಾ ಬಾವಿಯಲ್ಲಿರುವ ಕಪ್ಪೆಗಳಲ್ಲ, ಮೋರಿಯಲ್ಲಿರುವ ಕಪ್ಪೆಗಳು. ನೀವು ನಾವೆಲ್ಲರೂ ಪ್ರತಿನಿತ್ಯ ಕಷ್ಟಪಟ್ಟು ದುಡಿಯುತ್ತಿದ್ದೇವೆ ಎಂದರೆ ತಿನ್ನುವ ಅನ್ನಕ್ಕಾಗಿ ಕಷ್ಟಪಡುತ್ತಿಲ್ಲ. ನಾವು ಜೀವನದಲ್ಲಿ ಉದ್ಧಾರವಾಗಲು ಕಷ್ಟಪಡುತ್ತಿದ್ದೇನೆ. ಈಗಿನ ಕಾಲ ಹೇಗಿದೆ ಎಂದರೆ ನಾವು-ನೀವು ಉದ್ಧಾರ ಆಗಲು ಕಷ್ಟಪಡುತ್ತಿದ್ದರೆ, ಇವರೆಲ್ಲರೂ ಹಾಳಾಗಲು ಕಷ್ಟಪಡುತ್ತಿದ್ದಾರೆ. ಅವರ ಅಭಿಮಾನಿಗಳು ಅತಿರೇಕ ಮೀರಿದರೆ ಕಾನೂನು ಕ್ರಮದಲ್ಲಿ ಏನಾಗಬೇಕೋ ಅದು ಆಗುತ್ತದೆ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ಗೌಡ ಹೇಳಿದರು.

click me!