
Karnataka High Court Interim Stay Order for Bangalore Iconic Urvashi Theater Demolition. ಬೆಂಗಳೂರಿನ ಹೆಮ್ಮೆಯ 'ಊರ್ವಶಿ' ಚಿತ್ರಮಂದಿರ ನೆಲಸಮ ಕಾರ್ಯಾಚರಣೆಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ಬ್ರೇಕ್!
ಬೆಂಗಳೂರಿನ ಲಾಲ್ಬಾಗ್ ರಸ್ತೆಯಲ್ಲಿರುವ 'ಊರ್ವಶಿ' ಚಿತ್ರಮಂದಿರ ಕೇವಲ ಒಂದು ಸಿನಿಮಾ ಹಾಲ್ ಅಲ್ಲ, ಅದು ಕನ್ನಡಿಗರ ಭಾವನೆಗಳೊಂದಿಗೆ ಬೆಸೆದುಕೊಂಡಿರುವ ತಾಣ. ಕಳೆದ 55 ವರ್ಷಗಳಿಂದ ಲಕ್ಷಾಂತರ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಈ ಚಿತ್ರಮಂದಿರವನ್ನು ಕೆಡವಲು ಭೂಮಾಲೀಕರು ಸಜ್ಜಾದಾಗ ಸಿನಿಕಾಶಿ ಬೆಂಗಳೂರು ಬೆಚ್ಚಿಬಿದ್ದಿತ್ತು. ಆದರೆ, ಸೋಮವಾರ (ಆಗಸ್ಟ್ 24) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಧ್ಯಪ್ರವೇಶಿಸಿದ್ದು, ಕಟ್ಟಡ ನೆಲಸಮಗೊಳಿಸುವ ಪ್ರಕ್ರಿಯೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.
ಡಾ. ರಾಜ್ಕುಮಾರ್ ಉದ್ಘಾಟಿಸಿದ್ದ ಭವ್ಯ ಚಿತ್ರಮಂದಿರ!
1970ರಲ್ಲಿ ಕನ್ನಡ ಚಿತ್ರರಂಗದ ಧ್ರುವತಾರೆ ಡಾ. ರಾಜ್ಕುಮಾರ್ ಅವರು ಈ ಚಿತ್ರಮಂದಿರವನ್ನು ಉದ್ಘಾಟಿಸಿದ್ದರು. ಅಂದಿನಿಂದ ಇಂದಿನವರೆಗೆ ಸುಮಾರು 5,000ಕ್ಕೂ ಹೆಚ್ಚು ಸಿನಿಮಾಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟನೆಯ 'ಎಕೆ 47' ಸಿನಿಮಾ ಇಲ್ಲಿ 100 ದಿನಗಳ ಕಾಲ ಓಡಿ ಇತಿಹಾಸ ನಿರ್ಮಿಸಿತ್ತು. 1,100 ಆಸನಗಳ ಸಾಮರ್ಥ್ಯ ಹೊಂದಿರುವ ಈ ಥಿಯೇಟರ್, ಇಡೀ ಭಾರತದಲ್ಲೇ ಅತ್ಯಾಧುನಿಕ ಸೌಂಡ್ ಟೆಕ್ನಾಲಜಿ ಹೊಂದಿರುವ ಬೆರಳೆಣಿಕೆಯ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಒಂದಾಗಿದೆ.
ಈ ಚಿತ್ರಮಂದಿರದ ಜಾಗಕ್ಕೆ ಸಂಬಂಧಿಸಿದಂತೆ ಎಂಟು ವರ್ಷಗಳಿಂದ ಲೀಸ್ ವಿವಾದ ನಡೆಯುತ್ತಲೇ ಇದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ಆದೇಶದ ಅನ್ವಯ, ಭೂಮಾಲೀಕರು ಜಾಗವನ್ನು ವಶಕ್ಕೆ ಪಡೆದಿದ್ದರು. ಚಿತ್ರಮಂದಿರವನ್ನು ಖಾಲಿ ಮಾಡಲು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ನೀಡಿತ್ತು. ಆದರೂ, ಭೂಮಾಲೀಕರು ಆತುರಪಟ್ಟು ಗಡುವಿಗೂ ಮುನ್ನವೇ ಕಟ್ಟಡ ನೆಲಸಮಕ್ಕೆ ಮುಂದಾಗಿದ್ದಾರೆ ಎಂದು ಊರ್ವಶಿ ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿತು.
ಕೋಟಿ ಬೆಲೆಯ ಸಾಮಗ್ರಿಗಳಿಗೆ ಹಾನಿ!
ಹೈಕೋರ್ಟ್ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ಸುಂದರ್, "ಭೂಮಾಲೀಕರು ಏಕಾಏಕಿ ಕಾರ್ಯಾಚರಣೆ ನಡೆಸಿದ್ದರಿಂದ ಚಿತ್ರಮಂದಿರದಲ್ಲಿದ್ದ ಅತ್ಯಾಧುನಿಕ ಪ್ರೊಜೆಕ್ಟರ್, ಬೃಹತ್ ಸ್ಕ್ರೀನ್ ಹಾಗೂ ಬೆಲೆಬಾಳುವ ಆಸನಗಳಿಗೆ ಹಾನಿಯಾಗಿದೆ" ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಈ ದೂರು ಆಲಿಸಿದ ನ್ಯಾಯಮೂರ್ತಿಗಳು, ಮಂಗಳವಾರದವರೆಗೂ (ಆಗಸ್ಟ್ 25) ಯಾವುದೇ ಕಟ್ಟಡ ಕೆಡವಬಾರದು ಅಥವಾ ಚಿತ್ರಮಂದಿರದ ಒಳಗಿರುವ ಯಾವುದೇ ವಸ್ತುವನ್ನು ಹೊರಗೆ ಹಾಕಬಾರದು ಎಂದು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
ಸದ್ಯಕ್ಕೆ ಊರ್ವಶಿ ಚಿತ್ರಮಂದಿರ ನೆಲಸಮವಾಗುವುದು ತಪ್ಪಿದೆ. ಸುಪ್ರೀಂ ಕೋರ್ಟ್ ಸೂಚಿಸಿದಂತೆ ಅಗತ್ಯ ಪ್ರಮಾಣಪತ್ರವನ್ನು ತಕ್ಷಣವೇ ಸಲ್ಲಿಸಲು ಹೈಕೋರ್ಟ್ ಆಡಳಿತ ಮಂಡಳಿಗೆ ಸೂಚಿಸಿದೆ. ಈ ಸುದ್ದಿಯಿಂದಾಗಿ ಬೆಂಗಳೂರಿನ ಸಾವಿರಾರು ಸಿನಿಮಾ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ನಮ್ಮೂರಿನ ಐತಿಹಾಸಿಕ ಹೆಗ್ಗುರುತೊಂದು ಈ ರೀತಿ ಧೂಳೀಪಟವಾಗಬಾರದು ಎಂಬುದು ಎಲ್ಲರ ಆಶಯವಾಗಿದೆ. ಸದ್ಯಕ್ಕಂತೂ ಹೈಕೋರ್ಟ್ ಆದೇಶದಿಂದ 'ಊರ್ವಶಿ' ಚಿತ್ರಮಂದಿರದ ಭವ್ಯ ಪರದೆಗೆ ಹೊಸ ಉಸಿರು ಬಂದಂತಾಗಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.