
ಕನ್ನಡ ಚಿತ್ರರಂಗದ ಖ್ಯಾತ ನಟಿ ರಕ್ಷಿತಾ ಪ್ರೇಮ್ ಅವರು ತಮಿಳುನಾಡಿನ ಪ್ರಸಿದ್ಧ ಮಧುರೈ ಮೀನಾಕ್ಷಿ ಸುಂದರೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ಅಲ್ಲಿನ ದೈವಿಕ ಅನುಭವವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ದೇವಾಲಯದ ಸನ್ನಿಧಿಯಲ್ಲಿ ಕಳೆದ ಕೆಲ ಕ್ಷಣಗಳ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರಕ್ಷಿತಾ, ಈ ಭೇಟಿಯನ್ನು ತಮ್ಮ ಪಾಲಿನ ವಿಶೇಷ ಆಧ್ಯಾತ್ಮಿಕ ಅನುಭವ ಎಂದು ಬಣ್ಣಿಸಿದ್ದಾರೆ.
ಮೀನಾಕ್ಷಿ ಅಮ್ಮನ ಸನ್ನಿಧಿಯಲ್ಲಿ ರಕ್ಷಿತಾ
ಮಧುರೈನ ಐತಿಹಾಸಿಕ ಮೀನಾಕ್ಷಿ ಅಮ್ಮನ ದೇವಾಲಯಕ್ಕೆ ಭೇಟಿ ನೀಡಿದ ರಕ್ಷಿತಾ, ಸರಳವಾದ ಚೂಡಿದಾರ್ ಧರಿಸಿ ದೇಗುಲದ ಆವರಣದಲ್ಲಿ ಕಾಣಿಸಿಕೊಂಡಿದ್ದಾರೆ. ದೇವಾಲಯದ ಭವ್ಯ ವಾಸ್ತುಶಿಲ್ಪ ಹಾಗೂ ದೈವಿಕ ವಾತಾವರಣದ ನಡುವೆ ಕಳೆದ ಕ್ಷಣಗಳನ್ನು ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸುಂದರ ದೇವಾಲಯಗಳ ಸನ್ನಿಧಿಯಲ್ಲಿ ಕಳೆದ ಕೆಲವು ದಿನಗಳು ನನಗೆ ದೇವರ ಅನುಗ್ರಹ ಸಿಕ್ಕಿದಂತೆ ಭಾಸವಾಯಿತು ಎಂದು ರಕ್ಷಿತಾ ತಮ್ಮ ಅನುಭವವನ್ನು ಬರೆದುಕೊಂಡಿದ್ದಾರೆ.
ನಾನು ಯಾವಾಗಲೂ ಒಳ್ಳೆಯದನ್ನಷ್ಟೇ ನೋಡಲು ಪ್ರಯತ್ನಿಸುತ್ತೇನೆ
ತಮ್ಮ ಪೋಸ್ಟ್ನಲ್ಲಿ ಜೀವನದ ಕುರಿತಾದ ವಿಚಾರವನ್ನೂ ರಕ್ಷಿತಾ ಹಂಚಿಕೊಂಡಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತದೆ. ಆದರೆ ತಾವು ಯಾವಾಗಲೂ ಒಳ್ಳೆಯದನ್ನೇ ನೋಡಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ. ರಕ್ಷಿತಾ ಅವರ ಈ ಮಾತುಗಳು ಅಭಿಮಾನಿಗಳ ಗಮನ ಸೆಳೆದಿದ್ದು, ಅವರ ಸರಳ ಹಾಗೂ ಸಕಾರಾತ್ಮಕ ಮನೋಭಾವಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆ ತಾಯಿಯನ್ನು ನೋಡಿದಾಗಲೆಲ್ಲಾ ನನಗೆ ಶಕ್ತಿ ಬರುತ್ತದೆ
ಮಧುರೈ ಮೀನಾಕ್ಷಿ ಅಮ್ಮನೊಂದಿಗೆ ತಮಗೆ ವಿಶೇಷವಾದ ಆಧ್ಯಾತ್ಮಿಕ ಬಾಂಧವ್ಯವಿದೆ ಎಂದು ರಕ್ಷಿತಾ ಹೇಳಿದ್ದಾರೆ. ಮಧುರೈ ಮೀನಾಕ್ಷಿ ಮತ್ತು ಸುಂದರೇಶ್ವರರೊಂದಿಗೆ ಒಂದು ವಿಶೇಷ ಆಧ್ಯಾತ್ಮಿಕ ಬಾಂಧವ್ಯವಿದೆ. ಆ ತಾಯಿಯನ್ನು ನೋಡಿದಾಗಲೆಲ್ಲಾ ನನಗೆ ಶಕ್ತಿ ಬರುತ್ತದೆ ಎಂದು ತಮ್ಮ ಭಕ್ತಿಭಾವವನ್ನು ವ್ಯಕ್ತಪಡಿಸಿದ್ದಾರೆ. ತಮ್ಮನ್ನು ಈ ಪವಿತ್ರ ಕ್ಷೇತ್ರಕ್ಕೆ ಕರೆದುಕೊಂಡು ಬಂದ ಆರ್ಯವರ್ಧನ್ ಗೂರುಜಿ ಅವರಿಗೆ ಧನ್ಯವಾದವನ್ನೂ ರಕ್ಷಿತಾ ತಿಳಿಸಿದ್ದಾರೆ. ದೇವಾಲಯದಲ್ಲಿ ತಾವು ಅನುಭವಿಸಿದ ವಿಶೇಷ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವುದು ತಮ್ಮ ಪುಟ್ಟ ಪ್ರಯತ್ನ ಎಂದು ಹೇಳಿದ್ದಾರೆ.
ರಕ್ಷಿತಾ ಹಂಚಿಕೊಂಡಿರುವ ದೇಗುಲದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿವೆ. ದೈವಿಕ ವಾತಾವರಣದಲ್ಲಿ ನಟಿಯನ್ನು ಕಂಡ ಅಭಿಮಾನಿಗಳು, ಓಂ ಶಕ್ತಿ, ಮೀನಾಕ್ಷಿ ಅಮ್ಮನ ಆಶೀರ್ವಾದ ಸದಾ ಇರಲಿ ಎಂದು ಕಾಮೆಂಟ್ಗಳ ಮೂಲಕ ಶುಭ ಹಾರೈಸುತ್ತಿದ್ದಾರೆ. ಇನ್ನು ಸಿನಿಮಾ, ವೈಯಕ್ತಿಕ ಜೀವನದ ನಡುವೆಯೂ ಆಧ್ಯಾತ್ಮಿಕತೆಯತ್ತ ಒಲವು ತೋರುವ ರಕ್ಷಿತಾ ಪ್ರೇಮ್ ಅವರ ಈ ವಿಶೇಷ ದೇವಾಲಯ ಭೇಟಿ ಅಭಿಮಾನಿಗಳಿಗೂ ಸಂತಸ ತಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.