
‘ಸಂಜು ಮತ್ತು ಗೀತಾಳ ಪ್ರೇಮ ಕತೆಯ ಸಿನಿಮಾ. ರೇಷ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆಯಲ್ಲಿ ಕತೆ ಸಾಗುತ್ತದೆ. ಈ ಕಾಲದ ಪ್ರೇಮಕತೆ ಜತೆಗೆ ಸರ್ಪ್ರೈಸ್ ಅಂಶಗಳು ಚಿತ್ರದಲ್ಲಿದೆ’ - ಹೀಗೆ ಹೇಳಿದ್ದು ನಿರ್ದೇಶಕ ನಾಗಶೇಖರ್. ಶ್ರೀನಗರ ಕಿಟ್ಟಿ ಹಾಗೂ ರಚಿತಾರಾಮ್ ಜೋಡಿಯ ‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕೆ ಶೂಟಿಂಗ್ ಮುಗಿದಿರುವ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ನಿರ್ಮಾಪಕ ಛಲವಾದಿ ಕುಮಾರ್, ‘ಏನೂ ತೊಂದರೆ ಆಗದಂತೆ ಚಿತ್ರೀಕರಣ ಮಾಡಿದ್ದೇವೆ.
ಚಿತ್ರದ ಮೂರು ಹಾಡುಗಳನ್ನು ಬೇರೆ ಬೇರೆ ಊರುಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್ ಇದೆ ಎಂದರು. ನಟ ಶ್ರೀನಗರ ಕಿಟ್ಟಿ, ‘ಸಂಭ್ರಮದಿಂದ ಶೂಟಿಂಗ್ ಮುಗಿಸಿದ್ದೇವೆ. ಪಾರ್ಟ್ 1ಗೆ ಬಂದ ಯಶಸ್ಸು ಪಾರ್ಟ್ 2ಗೂ ಬರಲಿದೆ ಎನ್ನುವ ನಂಬಿಕೆ ಇದೆ. ನಾನು ಚಿತ್ರದಲ್ಲಿ ರೇಷ್ಮೇ ಬೆಳೆಗಾರನ ಪಾತ್ರ ಮಾಡಿದ್ದೇನೆ’ ಎಂದರು. ರಚಿತಾರಾಮ್, ‘ನೆನಪಿನಲ್ಲಿ ಉಳಿಯುವಂತಹ ಚಿತ್ರದಲ್ಲಿ ನಟಿಸಿದ್ದೇನೆಂಬ ಖುಷಿ ಇದೆ’ ಎಂದರು. ಛಾಯಾಗ್ರಾಹಕ ಸತ್ಯ ಹೆಗ್ಡೆ, ಸಾಧು ಕೋಕಿಲ, ತಬಲಾ ನಾಣಿ, ಮೂಗು ಸುರೇಶ್, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಮುಂತಾದವರು ಹಾಜರಿದ್ದರು.
ನಟಿ ರಾಗಿಣಿ ದ್ವಿವೇದಿ ಇದೇ ಮೊದಲ ಬಾರಿಗೆ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ನಟನೆಯ ‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅವರು ಖಳನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ರಾಗಿಣಿ, ‘ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ನಾನು ಖಳನಾಯಕಿಯಾಗಿ ನಟಿಸಲು ಖುಷಿಯಾಗುತ್ತಿದೆ. ಎಂತಹ ಅದ್ಭುತ ಪಾತ್ರ. ಈ ಪಾತ್ರದಲ್ಲಿ ನಟಿಸುತ್ತಾ ಹೋದಂತೆ ಕೆಲವೊಮ್ಮೆ ಕೆಟ್ಟವರಾಗಿರುವುದೇ ಉತ್ತಮ ಅನಿಸಿತು. ಉಳಿದಂತೆ ಅದ್ಭುತ ತಂಡ, ಅದ್ಭುತ ಕಥೆ. ಈ ಕಥೆ ಹಲವು ಆಯಾಮಗಳಲ್ಲಿ ನನ್ನನ್ನು ಸೆಳೆಯಿತು. ಈ ಚಿತ್ರ ಭಾವನೆಗಳ ಜೊತೆಗೆ ಆಟವಾಡುವ ಜೊತೆಗೆ ಉತ್ತಮ ಮನರಂಜನೆಯನ್ನೂ ನೀಡುತ್ತದೆ’ ಎಂದಿದ್ದಾರೆ.
ಕ್ಲೈಮ್ಯಾಕ್ಸ್ ಶೂಟಿಂಗ್ ಮುಗೀತು: ‘ನಮ್ಮ ಶಿಡ್ಲಘಟ್ಟದ ರೇಷ್ಮೆ ಗೂಡು ಮಾರುಕಟ್ಟೆಗೆ ಬರುವ ರೈತರ ಕಥೆ ಕೇಳಿದರೆ ಕಷ್ಟವಾಗುತ್ತದೆ. ಏರದ ಮಾರುಕಟ್ಟೆ ದರ, ಒದ್ದಾಡಿಸುವ ಸಮಸ್ಯೆಗಳು, ಸದಾ ಹಸಿದೇ ಇರುವ ಹೊಟ್ಟೆ, ಇವರಿಂದ ಕಡಿಮೆ ಬೆಲೆಗೆ ರೇಷ್ಮೆ ಖರೀದಿಸಿ ತಮ್ಮ ಬ್ರಾಂಡ್ನಡಿ ದುಬಾರಿ ಬೆಲೆಗೆ ಮಾರುವ ವರ್ಗ.. ಇಂಥಾ ದಾರುಣ ಬದುಕನ್ನು ಪೊಯೆಟಿಕ್ ಆಗಿ ನಮ್ಮ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದೇವೆ. ಇಲ್ಲಿ ಪ್ರೇಮಕಥೆಯೊಂದಿಗೆ ರೈತ ಹೋರಾಟದ ಎಳೆಯೂ ಇದೆ’.- ಹೀಗೆಂದವರು ನಿರ್ದೇಶಕ ನಾಗಶೇಖರ್. ಅವರ ನಿರ್ದೇಶನದ ‘ಸಂಜು ವೆಡ್ಸ್ ಗೀತಾ 2’ ಸಿನಿಮಾದ ಕ್ಲೈಮ್ಯಾಕ್ಸ್ ಶೂಟ್ ಇತ್ತೀಚೆಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಕೊನೆಯ ಹಂತದ ಚಿತ್ರೀಕರಣ ನೆದರ್ಲ್ಯಾಂಡ್ನಲ್ಲಿ ನಡೆಯಲಿದೆ. ‘ಕ್ಲೈಮ್ಯಾಕ್ಸ್ ಭಾಗಕ್ಕೆ ಸ್ವಿಟ್ಜರ್ಲ್ಯಾಂಡ್ ರಾಣಿ ಹಾಗೂ ಯೋಧನ ಕಥೆ ಸ್ಫೂರ್ತಿಯಾಗಿದೆ’ ಎಂದೂ ನಾಗಶೇಖರ್ ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.