Guru Shishyaru Film Review: ಮನರಂಜನೆಯ ಮೈದಾನದಲ್ಲಿ ಕ್ರೀಡಾ ಕಲಿಗಳು

By Govindaraj SFirst Published Sep 24, 2022, 3:00 AM IST
Highlights

ಈ ಹಿಂದೆ ‘ಜಂಟಲ್‌ಮನ್‌’ ಚಿತ್ರದ ಮೂಲಕ ಹೊಸದೊಂದು ಕತೆಯನ್ನು ಹೊಸ ರೀತಿಯಲ್ಲೇ ತೆರೆ ಮೇಲೆ ಪ್ರಸ್ತುತಿ ಪಡಿಸಿದ್ದ ಜಡೇಶ್‌ಕುಮಾರ್‌ ಹಂಪಿ ‘ಗುರು ಶಿಷ್ಯರು’ ಚಿತ್ರದಿಂದ ಸಿನಿಮಾ ಕಟ್ಟುವ ತಮ್ಮ ಪ್ರತಿಭೆಯನ್ನು ಮತ್ತಷ್ಟು ಹುರಿಗೊಳಿಸಿದ್ದಾರೆ.

ಆರ್‌ ಕೇಶವಮೂರ್ತಿ

ಕ್ರೀಡೆಯನ್ನು ಒಳಗೊಂಡ ಸಿನಿಮಾಗಳನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಕೊಂಚ ಯಾಮಾರಿದರೂ ಡ್ರೈ ಅನಿಸುತ್ತವೆ. ಇಲ್ಲವೇ, ಅದು ಮೈದಾನಕ್ಕೆ ಮಾತ್ರ ಸೀಮಿತ ಅನ್ನುವ ಭಾವನೆ ಮೂಡುತ್ತದೆ. ಅದರಲ್ಲೂ ಕಮರ್ಷಿಯಲ್‌ ಚಿತ್ರಗಳಿಗೆ ಕ್ರೀಡಾ ರೋಚಕತೆಯನ್ನು ತುಂಬುವುದು ಸವಾಲು. ಈ ಸವಾಲನ್ನು ‘ಗುರು ಶಿಷ್ಯರು’ ಸಿನಿಮಾ ಅದ್ಭುತವಾಗಿ ನಿಭಾಯಿಸಿದೆ. ಕತೆಗೆ ತಕ್ಕಂತೆ ಮೇಕಿಂಗ್‌, ಭರಪೂರ ಮನರಂಜನೆಯ ಗೂಡಿನಲ್ಲಿ ಭಾವನೆಗಳ ಚಿಲಿಪಿಲಿ, ಮರಿತಾರೆಗಳ ಅಬ್ಬರ ಮತ್ತು ಭರವಸೆಯ ನಟನೆ, ಗುರು ಮತ್ತು ಶಿಷ್ಯರ ಸ್ಫೂರ್ತಿದಾಯಕ ಆಟ- ಪಾಠ ಮತ್ತು ನೋಟ ಇಷ್ಟನ್ನೂ ಒಳಗೊಂಡಿರುವ ‘ಗುರು ಶಿಷ್ಯರು’ ನೋಡಲೇ ಬೇಕು ಎಂಬುದಕ್ಕೆ ಮತ್ತಷ್ಟುತಿರುವು ಮತ್ತು ಹಳ್ಳಿಗಾಡಿನ ಅಚ್ಚರಿಗಳು ಚಿತ್ರದಲ್ಲಿ ಅಡಗಿವೆ. ನಿರ್ದೇಶಕ ಜಡೇಶ್‌ ಕುಮಾರ್‌ ಹಂಪಿ ನಂಬಿಕೆಗೆ ಮೋಸ ಮಾಡಿಲ್ಲ. ಆ ಮಟ್ಟಿಗೆ ಇದು ಪ್ರೇಕ್ಷಕರ ಚಿತ್ರವಾಗಿದೆ.

ಈ ಹಿಂದೆ ‘ಜಂಟಲ್‌ಮನ್‌’ ಚಿತ್ರದ ಮೂಲಕ ಹೊಸದೊಂದು ಕತೆಯನ್ನು ಹೊಸ ರೀತಿಯಲ್ಲೇ ತೆರೆ ಮೇಲೆ ಪ್ರಸ್ತುತಿ ಪಡಿಸಿದ್ದ ಜಡೇಶ್‌ಕುಮಾರ್‌ ಹಂಪಿ ‘ಗುರು ಶಿಷ್ಯರು’ ಚಿತ್ರದಿಂದ ಸಿನಿಮಾ ಕಟ್ಟುವ ತಮ್ಮ ಪ್ರತಿಭೆಯನ್ನು ಮತ್ತಷ್ಟು ಹುರಿಗೊಳಿಸಿದ್ದಾರೆ. ಒಂದು ಸರಳ ಕತೆಗೆ ಮನರಂಜನೆ ಮೆರುಗು, ನೈಜತೆಯ ತಳಹದಿ, ಹಳ್ಳಿಗಾಡಿನ ಸೊಗಸು, ನೇಟಿವಿಟಿಯ ಅಂದದ ಜತೆಗೆ ಸ್ಫೂರ್ತಿ ಮತ್ತು ಕನಸುಗಳನ್ನು ತುಂಬಿದರೆ ಅದ್ಭುತ ಸಿನಿಮಾ ಆಗುತ್ತದೆ ಎಂಬುದಕ್ಕೆ ‘ಗುರು ಶಿಷ್ಯರು’ ಚಿತ್ರ ಉದಾಹರಣೆ. ವಿರಾಮದ ನಂತರ ಕನ್ನಡದ ಲಗಾನ್‌ ಎನಿಸಿಕೊಳ್ಳುವಂತೆ ರೋಚಕತೆಯನ್ನು ಮೈಗೂಡಿಸಿಕೊಂಡು ಕ್ಲೈಮ್ಯಾಕ್ಸ್‌ ವರೆಗೂ ಎಲ್ಲೂ ಬೋರ್‌ ಆಗದಂತೆ ಇಡೀ ಚಿತ್ರವನ್ನು ಖೋ ಖೋ ಆಟ ಮುನ್ನಡೆಸುತ್ತದೆ. ಈ ಹಂತದಲ್ಲಿ ಕ್ರೀಡಾ ಪಟುಗಳಾಗಿ ನಟಿಸಿರುವ ಸ್ಟಾರ್‌ ನಟರ ಮಕ್ಕಳು, ಭರವಸೆಯ ತಾರೆಗಳಾಗಿ ವಿಜೃಂಭಿಸಿದ್ದಾರೆ.

ಚಿತ್ರ: ಗುರು ಶಿಷ್ಯರು

ತಾರಾಗಣ: ಶರಣ್‌, ದತ್ತಣ್ಣ, ಸುರೇಶ್‌ ಹೆಬ್ಳಿಕರ್‌, ನಿಶ್ವಿಕಾ ನಾಯ್ಡು, ಅಪೂರ್ವ ಕಾಸರವಳ್ಳಿ, ಮಹೇಶ್‌

ನಿರ್ದೇಶನ: ಜಡೇಶ್‌ ಕುಮಾರ್‌ ಹಂಪಿ

ರೇಟಿಂಗ್‌: 4

ಒಂದು ಹಳ್ಳಿಯನ್ನು ತನ್ನ ಖಾಸಗಿ ಆಸ್ತಿ ಎನ್ನುತ್ತಿರುವ ಜಮೀನ್ದಾರ. ತಮ್ಮ ಹಳ್ಳಿಯನ್ನು ಉಳಿಸಿಕೊಳ್ಳುವ ಊರಿನ ಜನರ ಹೋರಾಟ, ಕಾನೂನಿನ ಸಮರಕ್ಕೆ ನಿಲುಕದ ಈ ಹೋರಾಟಕ್ಕೆ ಕ್ರೀಡಾ ಮೈದಾನದಲ್ಲಿ ನ್ಯಾಯ ದಕ್ಕಿಸಿಕೊಳ್ಳುವ ಬೆಟ್ಟದಪುರ ಜನರಿಗೆ ನಗರದಿಂದ ಬರುವ ಶಿಕ್ಷಕ ಯಾವ ರೀತಿ ಬೆಂಬಲವಾಗಿ ನಿಲ್ಲುತ್ತಾನೆ ಹಾಗೂ ತಮ್ಮೂರಿನ ಶಾಲೆಯ ಮಕ್ಕಳ ಸಾಧನೆ ಏನು ಎಂಬುದನ್ನು ಈ ಚಿತ್ರದಲ್ಲಿ ನೋಡಬಹುದು. ಕನ್ನಡದ ಮಟ್ಟಿಗೆ ಅದ್ಭುತವಾದ ಕ್ರೀಡಾ ಕತೆಯನ್ನು ಒಳಗೊಂಡಿರುವ ಸಿನಿಮಾ ‘ಗುರು ಶಿಷ್ಯರು’. ಇಲ್ಲಿ ಗುರುವಿಗೆ ತಕ್ಕಂತೆ ಶಿಷ್ಯರು, ಶಿಷ್ಯರಿಗೆ ತಕ್ಕಂತೆ ಗುರು, ಇವರ ನಡುವೆ ಇರುವ ಮುಗ್ಧ ಹಳ್ಳಿ ಜನ ಹಾಗೂ ಒಬ್ಬ ಜಮೀನ್ದಾರ ಇವಿಷ್ಟು ಪಾತ್ರಗಳ ಮೂಲಕ ಒಳ್ಳೆಯ ನೆಲದ ಕತೆಯನ್ನು ಹೇಳಿದ್ದಾರೆ ನಿರ್ದೇಶಕರು.

Kapala Review ತಾಂತ್ರಿಕ ಶ್ರೀಮಂತ ಕುತೂಹಲಕರ ಕಪಾಲ

ಹಳ್ಳಿ ಮೇಷ್ಟ್ರು ಶರಣ್‌, ಮೇಷ್ಟ್ರು ಪ್ರೀತಿಗೆ ಮನಸೋಲುವ ಹಳ್ಳಿ ಹುಡುಗಿ ಪಾತ್ರದಲ್ಲಿ ನಿಶ್ವಿಕಾ ನಾಯ್ಡು ಜೋಡಿ ನೋಡಲು ಮುದ್ದಾಗಿರುವ ಜತೆಗೆ ನಿರ್ದೇಶಕರ ಕನಸಿನ ಕತೆ ಮತ್ತು ಪಾತ್ರಗಳಿಗೆ ನ್ಯಾಯ ಸಲ್ಲಿಸಿದೆ. ಗಾಂಧಿವಾದಿಯಾಗಿ ಸುರೇಶ್‌ ಹೆಬ್ಳಿಕರ್‌, ಶಿಕ್ಷಕರಾಗಿ ದತ್ತಣ್ಣ ನೆನಪಿನಲ್ಲಿ ಉಳಿಯುತ್ತಾರೆ. ಜಮೀನ್ದಾರನಾಗಿ ಅಪೂರ್ವ ಕಾಸರವಳ್ಳಿ ಮಿಂಚಿದ್ದಾರೆ. ಆರೂರು ಸುಧಾರ್‌ ಶೆಟ್ಟಿ ಛಾಯಾಗ್ರಾಹಣ ಚಿತ್ರದ ಜೀವಂತಿಕೆಯನ್ನು ಉಳಿಸಿದೆ. ಎಂದಿನಂತೆ ತಮ್ಮ ಒಳ್ಳೆಯ ಸಂಭಾಷಣೆಗಳ ಮೂಲಕ ಮಾಸ್ತಿ ಅವರು ‘ಗುರು ಶಿಷ್ಯರು’ ಚಿತ್ರವನ್ನು ಪ್ರೇಕ್ಷಕರ ಬಳಿಗೆ ಲಿಫ್ಟ್‌ ಮಾಡುತ್ತಾರೆ.

click me!