Garuda Gamana Vrishabha Vahana: ಕೊಲೆಯ ವೇಳೆ ಶ್ಲೋಕಗಳೇಕೆ ? ಸಿನಿಮಾಗೆ ವಿರೋಧ

By Suvarna NewsFirst Published Nov 24, 2021, 12:44 PM IST
Highlights
  • ಗರುಡ ಗಮನ ವೃಷಭ ವಾಹನ(Garuda Gamana Vrishabha Vahana)ಚಿತ್ರಕ್ಕೆ ಭಾರೀ ವಿರೋಧ
  • ಕೊಲೆಗೆ ಸಂಸ್ಕೃತ ಶ್ಲೋಕವೇಕೆ ? ಕೊಲೆ ಮಾಡಿ ಕುಣಿವಾಗ ಮಾದೇವನ ಹಾಡು ಬೇಕಾ ?

ಸ್ಯಾಂಡಲ್‌ವುಡ್‌ನಲ್ಲಿ(Sandalwood) ಹೊಸ ಅಲೆ ಎಬ್ಬಿಸಿರೋ ಸಿಂಪಲ್ ಸಿನಿಮಾ ಗರುಡ ಗಮನ ವೃಷಭ ವಾಹನ ವಿಮರ್ಶಾತ್ಮಕವಾಗಿ ಭಾರೀ ಮೆಚ್ಚುಗೆ ಪಡೆಯುತ್ತಿದೆ. ಸಿನಿಮಾದ ಶೈಲಿ, ಕಥಾವಸ್ತು, ಹೊಸತನಕ್ಕಾಗಿ ಎಲ್ಲೆಡೆಯಿಂದ ಪ್ರಶಂಸೆಯನ್ನು ಪಡೆಯುತ್ತಿದೆ. ಈಗಾಗಲೇ ಬಹಳಷ್ಟು ಜನ ಗಣ್ಯರು ಸಿನಿಮಾ ನೋಡಿ ತಂಡಕ್ಕೆ ಶುಭ ಹಾರೈಸಿದ್ದಾರೆ. ಇದೀಗ ಸಿನಿಮಾ ಕುರಿತಂತೆ ಅಪಸ್ವರ ಶುರುವಾಗಿದೆ. ಸಿನಿಮಾದಲ್ಲಿ(Cinema) ಕೊಲೆ, ರೌಡಿಸಂ ವೈಭವೀಕರಣ ಹಿಂದುತ್ವಕ್ಕೆ ಧಕ್ಕೆ ತಂದಿವೆ ಎಂದು ಆರೋಪ ಕೇಳಿ ಬಂದಿದೆ.

ಗರುಡ ಗಮನ ವೃಷಭ ವಾಹನ(Garuda Gamana Vrishabha Vahana) ಚಿತ್ರಕ್ಕೆ ವಿರೋಧ ವ್ಯಕ್ತವಾಗಿದ್ದು, ಚಿತ್ರದಲ್ಲಿ ಬರುವ ಕೆಲ ಸನ್ನಿವೇಶಗಳ ವಿರುದ್ಧ ಆನ್‍ಲೈನ್‍ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹಿಂದೂ(Hindu) ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆರೋಪ ಕೇಳಿ ಬಂದಿದ್ದು, ರೌಡಿಸ್ಮ್ ಚಿತ್ರಕ್ಕೆ ಈ ರೀತಿಯ ಟೈಟಲ್ ಯಾಕೆ ಬೇಕಿತ್ತು? ಎಂಬ ಪ್ರಶ್ನೆ ಕೇಳಿಬಂದಿದೆ. ಅದೇ ರೀತಿ ಎಮ್ಮೆಕೆರೆ ರೌಡಿಯ ಕೊಲೆಯ ವೇಳೆ ಶ್ಲೋಕ ಕೀರ್ತನೆಗಳು ಯಾಕೆ ಎಂದೂ ಪ್ರಶ್ನೆ ಮಾಡಲಾಗಿದೆ.

Garuda Gamana Vrishabha Vahana: ಕಡಲಂಚಿನ ಲಡಾಯಿಯ ಕಲಾಪೂರ್ಣ ಕಥಾನಕ!

ಕೊಲೆ ಮಾಡಿ ವಿಕೃತವಾಗಿ ಕುಣಿವ ಕೊಲೆಗಾರನಿಗೆ ಮಾದೇವಾ ಹಾಡು ಯಾಕೆ? ಕೊಲೆಗಡುಕನೊಬ್ಬ ಸ್ವಾಮೀಜಿಯ ಪಾದರಕ್ಷೆ ಧರಿಸುವುದೇಕೆ? ಸೈಕೋಪಾತ್ ಒಬ್ಬನನ್ನು ವೈಭವೀಕರಿಸಲು ಈ ಹಾಡನ್ನು ಬಳಸಿಕೊಂಡಿದ್ದೇಕೆ? ರೌಡಿಗಳಿಗೆ ಹರಿ, ಶಿವ ಎಂದು ಹೆಸರಿಟ್ಟಿರೋದೇಕೆ? ಈ ಚಿತ್ರದಿಂದ ಯುವಕರು ರೌಡಿಸ್ಮ್ ಕಡೆ ಆಕರ್ಷಿತರಾಗುವ ಅಪಾಯವಿದೆ. ಪುಡಿ ರೌಡಿಗಳು ದೊಡ್ಡ ರೌಡಿಗಳಾಗಲು ಪ್ರೇರಣೆ ನೀಡುವಂತಿದೆ. ಮಕ್ಕಳು, ಯುವಕರು ಅಡ್ಡದಾರಿ ತುಳಿಯುವಂತೆ ಮಾಡುವಂತಿದೆ ಎನ್ನುವುದು ಸೇರಿದಂತೆ ಹೀಗೆ ಸಿನಿಮಾದ ಬಗ್ಗೆ ಹಲವು ಪ್ರಶ್ನೆಗಳನ್ನು ಮಾಡಲಾಗಿದೆ.

ರಾಜ್ ಬಿ. ಶೆಟ್ಟಿ, ರಿಷಭ್ ಶೆಟ್ಟಿ(Rishabh shetty) ನಟಿಸಿರುವ ಗರುಡ ಗಮನ ವೃಷಭ ವಾಹನವನ್ನು ರಾಜ್ ಬಿ. ಶೆಟ್ಟಿ(Raj B Shetty) ನಿರ್ದೇಶಿಸಿದ್ದಾರೆ. ಕ್ರೈಮ್ ಥ್ರಿಲ್ಲರ್ ಸಿನಿಮಾ ಕರಾವಳಿ ಸೇರಿ ರಾಜ್ಯಾದ್ಯಂತ ಭಾರೀ ರೆಸ್ಪಾನ್ಸ್ ಪಡೆಯುತ್ತಿದೆ.

ರಿಷಬ್‌ ಶೆಟ್ಟಿ (Rishab Shetty) ಹಾಗೂ ರಾಜ್‌ ಬಿ. ಶೆಟ್ಟಿ (Raj B Shetty) ಕಾಂಬಿನೇಷನ್‌ನ 'ಗರುಡಗಮನ ವೃಷಭವಾಹನ' (Garuda Gamana Vrishabha Vahana) ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ನಗರದ ಊರ್ವಶಿ ಚಿತ್ರಮಂದಿರದಲ್ಲಿ ಚಿತ್ರವನ್ನು ವೀಕ್ಷಿಸಿದ ಸಿನಿಪ್ರೇಕ್ಷಕರು ಸಿನಿಮಾವನ್ನು ಕೊಂಡಾಡಿದ್ದಾರೆ. ಜೊತೆಗೆ ರಿಷಬ್‌ ಶೆಟ್ಟಿ ಹಾಗೂ ರಾಜ್‌ ಬಿ. ಶೆಟ್ಟಿ ಅಭಿಮಾನಿಗಳಿಗೆ ಸಾಥ್ ಕೊಟ್ಟಿದ್ದು, ಒಂದು ಹೊಸ ಪ್ರಯತ್ನವನ್ನು ಮಾಡಿದ್ದೇವೆ. ಒಳ್ಳೆಯ ಪ್ರಯತ್ನ, ಮನಸುಗಳು, ಯೋಚನೆಗಳೆಲ್ಲಾ ಒಟ್ಟಾಗಿ ಸೇರಿದರೆ ಒಂದು ಒಳ್ಳೆಯ ಸಿನಿಮಾವಾಗುತ್ತದೆ. ಆ ಸಿನಿಮಾದಿಂದನೇ ನಾವೆಲ್ಲಾ. ಸಿನಿಮಾ ವೀಕ್ಷಿಸಿದ ಎಲ್ಲರಿಗೂ ಥ್ಯಾಂಕ್ಸ್ ಎಂದು ಹೇಳಿದ್ದಾರೆ.

ಇದರಲ್ಲಿ ಗರುಡಗಮನ ಅಂದರೆ ವಿಷ್ಣು. ಪ್ರಧಾನ ಪಾತ್ರಗಳಲ್ಲಿ ಒಬ್ಬನಿಗೆ ವಿಷ್ಣುವಿನ ಸಂಯಮ ಸ್ವಭಾವ, ಇನ್ನೊಬ್ಬ ವೃಷಭವಾಹನ ಅಂದರೆ ಶಿವ, ಆತನದು ನಿಯಂತ್ರಣವೇ ಇಲ್ಲದ ವಿಪರೀತ ಸ್ವಭಾವ. ಇಂಥ ಸ್ವಭಾವದ ಇಬ್ಬರು ರೌಡಿಸಂನಲ್ಲಿ ಹೇಗೆ ಸೌಂಡ್‌ ಮಾಡ್ತಾರೆ ಅನ್ನುವ ಕಥೆ. ಇನ್ನು ಚಿತ್ರಕ್ಕೆ ರಾಜ್‌ ಬಿ ಶೆಟ್ಟಿ ಅವರೇ ಆಕ್ಷನ್ ಕಟ್ ಹೇಳಿದ್ದು, ಮಂಗಳೂರಿನ(Mangaluru) ಭೂಗತ ಜಗತ್ತಿನ ಸುತ್ತ ಕಥಾಹಂದರವಿದೆ. ಲೈಟರ್‌ ಬುದ್ಧ ಫಿಲಂನಡಿ ರವಿ ರೈ ಹಾಗೂ ವಚನ್‌ ಶೆಟ್ಟಿ ಚಿತ್ರ ನಿರ್ಮಿಸಿದ್ದಾರೆ. ಇದೀಗ ಸಿನಿಮಾಗೆ ಹಿಂದೂಗಳಿಂದ ವಿರೋಧ ಕೇಳಿ ಬಂದಿದ್ದು ಈ ವಿಚಾರವಾಗಿ ಸಿನಿಮಾ ಸಾಕಷ್ಟು ಚರ್ಚೆಯಾಗುತ್ತಿದೆ.

click me!