Gandasi Nagaraj Death: ಹಾಸ್ಯ ನಟ, ವಸ್ತ್ರಾಲಂಕಾರ ಕಲಾವಿದ ಗಂಡಸಿ ನಾಗರಾಜ್​ ನಿಧನ

By Shruthi KrishnaFirst Published Dec 12, 2022, 1:16 PM IST
Highlights

ಸ್ಯಾಂಡಲ್‌‍ವುಡ್‌ನಲ್ಲಿ ಹಲವು ವರ್ಷಗಳ ಕಾಲ ವಸ್ತ್ರಾಲಂಕಾರ ಕಲಾವಿದನಾಗಿ ಹಾಗೂ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದ ಗಂಡಸಿ ನಾಗರಾಜ್​  ನಿಧನರಾಗಿದ್ದಾರೆ. ಭಾನುವಾರ (ಡಿಸೆಂಬರ್ 11) ರಾತ್ರಿ 10.30ಕ್ಕೆ ಅವರು ಕೊನೆಯುಸಿರು ಎಳೆದರು.

ಸ್ಯಾಂಡಲ್‌‍ವುಡ್‌ನಲ್ಲಿ ಹಲವು ವರ್ಷಗಳ ಕಾಲ ವಸ್ತ್ರಾಲಂಕಾರ ಕಲಾವಿದನಾಗಿ ಹಾಗೂ ಹಾಸ್ಯ ನಟನಾಗಿ ಗುರುತಿಸಿಕೊಂಡಿದ್ದ ಗಂಡಸಿ ನಾಗರಾಜ್​  ನಿಧನರಾಗಿದ್ದಾರೆ. ಭಾನುವಾರ (ಡಿಸೆಂಬರ್ 11) ರಾತ್ರಿ 10.30ಕ್ಕೆ ಅವರು ಕೊನೆಯುಸಿರು ಎಳೆದರು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ನಟ ಗಂಡಸಿ ನಾಗರಾಜ್ ಚಿಕಿತ್ಸೆ ಫಲಿಸದೆ ನಿಧನರಾದರು. ಗಂಡಸಿ ನಾಗರಾಜ್​ ಅವರಿಗೆ 57 ವರ್ಷ ವಯಸ್ಸಾಗಿತ್ತು. ಕಳೆದ 5 ವರ್ಷಗಳಿಂದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಫಲಕಾರಿ ಆಗದೇ ಪದ್ಮನಾಭ ನಗರದ ದೇವೇಗೌಡ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಅವರ ಆಪ್ತರು ತಿಳಿಸಿದ್ದಾರೆ. 

ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಗಂಡಸಿ ನಾಗರಾಜ್ ಚಿತ್ರರಂಗದಲ್ಲಿ ನಟನಾಗುವ ಕನಸು ಕಂಡರು. ಅವಕಾಶ ಸಿಗದೇ ಟೈಲರಿಂಗ್​ ಮಾಡಿಕೊಂಡಿದ್ದ ಗಂಡಸಿ ನಾಗರಾಜ್ ಅವರು ನಂತರ ವಸ್ತ್ರಾಲಂಕಾರ ಕಲಾವಿದರಾಗಿ ಚಿತ್ರರಂಗದಲ್ಲಿ ಕೆಲಸ ಮಾಡುವ ಅವಕಾಶ ಗಿಟ್ಟಿಸಿಕೊಂಡರು. 40 ವರ್ಷಗಳ ಕಾಲ ಗಂಡಸಿ ನಾಗರಾಜ್​ ಅವರು ಕಾಸ್ಟ್ಯೂಮರ್ ಆಗಿ ಕೆಲಸ ಮಾಡಿದ್ದಾರೆ. ನಟ ಜಗ್ಗೇಶ್​ ಅವರ ಆಪ್ತ ವಸ್ತ್ರಾಲಂಕಾರ ಕಲಾವಿದನಾರಿ ಅವರು ಗುರುತಿಸಿಕೊಂಡಿದ್ದರು. ಜಗ್ಗೇಶ್​  ನಟನೆಯ 35ಕ್ಕೂ ಅಧಿಕ ಸಿನಿಮಾಗಳಿಗೆ ಗಂಡಸಿ ನಾಗರಾಜ್​ ಕೆಲಸ ಮಾಡಿದ್ದರು.

ಫಲಿಸದ ಚಿಕಿತ್ಸೆ; KGF ತಾತ ಕೃಷ್ಣ ಜಿ.ರಾವ್ ನಿಧನ

ಕೊವಿಡ್​ನಿಂದಾಗಿ ಗಂಡಸಿ ನಾಗರಾಜ್​ ಅವರ ಮಗಳು ಮೃತಪಟ್ಟಿದ್ದರು. ಪುತ್ರ ಹರೀಶ್​ ಸಾಫ್ಟ್​ವೇರ್​ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದಾರೆ. ಸಹೋದರ ಗಂಡಸಿ ರಾಜು ಕೂಡ ಚಿತ್ರರಂಗದಲ್ಲಿ ಪ್ರೊಡಕ್ಷನ್​ ಮ್ಯಾನೇಜರ್​ ಆಗಿ ಗುರುತಿಸಿಕೊಂಡಿದ್ದಾರೆ. ತರ್ಲೆ ನನ್​ ಮಗ, ಸರ್ವರ್​ ಸೋಮಣ್ಣ, ಸೂಪರ್​ ನನ್ನ ಮಗ, ಭಂಡ ನನ್ನ ಗಂಡ, ಗುಂಡನ ಮದುವೆ, ರಾಯರ ಮಗ, ಹಬ್ಬ, ಶ್ರೀಮಂಜುನಾಥ, ಮದುವೆ, ಮಾತಾಡ್​ ಮಾತಾಡು ಮಲ್ಲಿಗೆ, ಪರ್ವ, ರಾಜಾಹುಲಿ, ಶಿಕಾರಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಗಂಡಸಿ ನಾಗರಾಜ್​ ಕಾಸ್ಟ್ಯೂಮ್​ ಡಿಸೈನರ್​ ಆಗಿ ಕೆಲಸ ಮಾಡಿದ್ದರು.

900ಕ್ಕೂ ಅಧಿಕ ಸಿನಿಮಾಗಳಲ್ಲಿ ಗಂಡಸಿ ನಾಗರಾಜ್​ ಕೆಲಸ ಮಾಡಿದ್ದಾರೆ. ಅವರೊಂದಿಗೆ ಕೆಲಸ ಕಲಿತ ಅನೇಕರು ಇಂದು ಚಿತ್ರರಂಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ವಸ್ತ್ರ ವಿನ್ಯಾಸ ಮಾಡುವುದರ ಜೊತೆಗೆ ಹಾಸ್ಯ ನಟನಾಗಿಯೂ ಅವರು ಗುರುತಿಸಿಕೊಂಡಿದ್ದರು. ಸಣ್ಣ-ಪುಟ್ಟ ಪಾತ್ರಗಳನ್ನು ಮಾಡಿ ಗಮನ ಸೆಳೆದರು. ಆದರೆ ಪೂರ್ಣ ಪ್ರಮಾಣದಲ್ಲಿ ಹಾಸ್ಯ ಕಲಾವಿದನಾಗಿ ಬೆಳೆಯಲು ಸಾಧ್ಯವಾಗಲಿಲ್ಲ ಎಂಬ ಬೇಸರ ಅವರಲ್ಲಿತ್ತು.

ಖ್ಯಾತ ನಿರ್ಮಾಪಕ ಮುರಳೀಧರನ್ ಹೃದಯಾಘಾತದಿಂದ ನಿಧನ; ಕಂಬನಿ ಮಿಡಿದ ಕಮಲ್ ಹಾಸನ್

ಗಂಡಸಿ ನಾಗರಾಜ್ ನಿಧನಕ್ಕೆ ಆಪ್ತರು, ಚಿತ್ರರಂಗದ ಗಣ್ಯರು ಸಂಪಾತ ಸೂಚಿಸುತ್ತಿದ್ದಾರೆ. ಇಂದು (ಡಿಸೆಂಬರ್12) ಮಧ್ಯಾಹ್ನ 3.30ರ ಸುಮಾರಿಗೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ಮಾಹಿತಿ ನೀಡಿವೆ. 

click me!