Puneeth Namana: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಸಕಲ ಸಿದ್ಧತೆ

By Suvarna NewsFirst Published Nov 12, 2021, 6:31 PM IST
Highlights

ಪುನೀತ್ ನಮನ ನಗರದ ಅರಮನೆ‌ ಮೈದಾನದಲ್ಲಿ ನಡೆಯಲಿದ್ದು, ನಾಗೇಂದ್ರ‌ ಪ್ರಸಾದ್ ಸಾಹಿತ್ಯದ ಗುರುಕಿರಣ್ ಸಂಗೀತದ ಗೀತ ನಮನ ಇರುತ್ತದೆ. ಇಡೀ ರಾಜ್ ಕುಟುಂಬ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಸಿನಿಮಾ ಚಿತ್ರೀಕರಣಕ್ಕೆ ಆ ದಿನ ರಜೆ ಇರುತ್ತದೆ.

ಬೆಂಗಳೂರು (ನ. 12): ಸ್ಯಾಂಡಲ್‌ವುಡ್‌ನ ಪುನೀತ್ ರಾಜ್‌ಕುಮಾರ್  (Puneeth Rajkumar) ನಿಧನರಾಗಿ ಇಂದಿಗೆ ಎರಡು ವಾರ ಕಳೆದಿದೆ. ಅವರು ಇಲ್ಲದೆ ಕನ್ನಡ ಚಿತ್ರರಂಗ ಮಂಕಾಗಿದೆ. ಅಭಿಮಾನಿಗಳ​ ಮನದಲ್ಲಿನ ನೋವು ಸ್ವಲ್ಪವೂ ಕಡಿಮೆ ಆಗಿಲ್ಲ. ಪುನೀತ್ ಅವರನ್ನು ಸದಾ ನೆನಪಿನಲ್ಲಿಡಲು ರಸ್ತೆ, ಆಸ್ಪತ್ರೆಗೆ ಹೆಸರಿಡಲು ವಿವಿಧ ಸಂಘ, ಸಂಸ್ಥೆಗಳು, ಗಣ್ಯರು ಉದ್ದೇಶಿಸಿದ್ದಾರೆ. ಗಾಯಕರು ತಮ್ಮ ಹಾಡಿನ ಮೂಲಕ ಪುನೀತ್​ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಪುನೀತ್​ಗೆ ನುಡಿ ನಮನ ಸಲ್ಲಿಸುತ್ತಿದ್ದಾರೆ. ಇದೀಗ ನವೆಂಬರ್​ 16ರಂದು ಕನ್ನಡ ಚಿತ್ರೋದ್ಯಮದ ಪರವಾಗಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (Karnataka Film Chamber Of Commerce) 'ಪುನೀತ್ ನಮನ' (Puneeth Namana) ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ‌ ಕಾರ್ಯಕ್ರಮದ‌ ರೂಪುರೇಷೆ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಯಿತು. 

'ಪುನೀತ್ ನಮನ' ನಗರದ ಅರಮನೆ‌ ಮೈದಾನದಲ್ಲಿ ನಡೆಯಲಿದ್ದು, ಕರ್ನಾಟಕದ ಎಲ್ಲ ಕಲಾವಿದರು ಸೇರಿದಂತೆ ಬೇರೆ ರಾಜ್ಯದ ಕಲಾವಿದರು ಹಾಗೂ ರಾಜಕೀಯ ಗಣ್ಯರು ಭಾಗಿಯಾಗುತ್ತಿದ್ದಾರೆ. ವಿಶೇಷವಾಗಿ ನಾಗೇಂದ್ರ‌ ಪ್ರಸಾದ್ (Nagendra Prasad) ಸಾಹಿತ್ಯದ ಗುರುಕಿರಣ್ (Gurukiran) ಸಂಗೀತದ ಗೀತ ನಮನ ಕಾರ್ಯಕ್ರಮ ಇರುತ್ತದೆ. ಇಡೀ ರಾಜ್ ಕುಟುಂಬ (Rajkumar Family) ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಸಿನಿಮಾ ಚಿತ್ರೀಕರಣಕ್ಕೆ ಆ ದಿನ ರಜೆ ಇರುತ್ತದೆ. ಯಾವ ಸಿನಿಮಾ ಕೆಲಸಗಳು ಅಂದು ನಡೆಯುವುದಿಲ್ಲ. ಕಾರ್ಯಕ್ರಮಕ್ಕೆ‌ ಎಲ್ಲರೂ ಬರಲಿ ಎನ್ನುವ ಉದ್ದೇಶದಿಂದ‌ ಈ ನಿರ್ಧಾರ ಮಾಡಿದ್ದೇವೆ. ಥಿಯೇಟರ್‌ಗಳಲ್ಲಿ ಸಿನಿಮಾ ಪ್ರದರ್ಶನ ಎಂದಿನಂತೆ ಇರುತ್ತದೆ. 

ಅಪ್ಪು ಸರ್ ನನ್ನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ: ಭಾವುಕರಾದ ಶೈನ್ ಶೆಟ್ಟಿ

ಪ್ರಮುಖವಾಗಿ 'ಪುನೀತ್ ನಮನ' ದಲ್ಲಿ ಒಂದೂ‌ವರೆ ಸಾವಿರ ಜನ ಕಾರ್ಯಕ್ರಮಕ್ಕೆ ಬರಬಹುದು. ಮನರಂಜನೆಗೆ ಯಾವುದೇ ಅವಕಾಶ‌‌ ಇಲ್ಲದೆ ಶ್ರದ್ಧಾಂಜಲಿ ಸಲ್ಲಿಸುತ್ತೇವೆ. ಪುನೀತ್‌ ರಾಜ್ ಕುಮಾರ್ ವಿಚಾರವಾಗಿ ಎಲ್ಲರೂ ಭಾಗವಹಿಸುತ್ತಾರೆ. ಈ ಕಾರ್ಯಕ್ರಮಕ್ಕೆ ಮೈಸೂರಿನ‌ ಮಹಾರಾಜ ಯದುವೀರ್ ಒಡೆಯರ್ ಅವರು ಕೂಡ ಬರುತ್ತಾರೆ. ಎರಡು ವಿಂಗಡನೆ ಮಾಡಿ ಎಲ್ಲರಿಗೂ ಪಾಸ್ ವ್ಯವಸ್ಥೆ ಮಾಡಿದ್ದೇವೆ. ಮಧ್ಯಾಹ್ನ ಮೂರು ಗಂಟೆಗೆ ಕಾರ್ಯಕ್ರಮ ಆರಂಭವಾಗಿ ಆರು ಗಂಟೆಗೆ ಮುಕ್ತಾಯವಾಗುತ್ತದೆ. ಹಾಗೂ ತಮಿಳು, ತೆಲುಗು, ಮಲಯಾಳಂ ಕಲಾವಿದರಿಗೆ ಆಹ್ವಾನ ಕೊಟ್ಟಿದ್ದೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್, ಮಾಜಿ ಅಧ್ಯಕ್ಷ ಸಾರಾಗೋವಿಂದ್, ಕಾರ್ಯದರ್ಶಿ ಎನ್ ಎಂ ಸುರೇಶ್, ಎ ಗಣೇಶ್, ನರಸಿಂಹಲು, ಉಪಾಧ್ಯಕ್ಷ ಉಮೇಶ್ ಬಣಕಾರ್, ನಿರ್ದೇಶಕ‌ ನಾಗಣ್ಣ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಈ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದರು.

ಪುನೀತ್ ರಾಜ್‌ಕುಮಾರ್ ಸಮಾಧಿ ನೋಡಲು ದಿನವೂ ದೂರದ ಊರುಗಳಿಂದ ಅಭಿಮಾನಿಗಳು ಬರುತ್ತಿದ್ದಾರೆ. ಅಂತಿಮ ದರ್ಶನ ಪಡೆಯಲು 25ಲಕ್ಷ ಜನರು ಬಂದಿದ್ದರು, ಈಗ ದಿನವೂ ಮಳೆ ಇರಲಿ, ಬಿಸಿಲಿರಲಿ ಸುಮಾರು  20 ಸಾವಿರ ಜನರು ಸಮಾಧಿಗೆ ಬಂದು ನಮಿಸುತ್ತಿದ್ದಾರೆ. ಅಲ್ಲದೆ ಇಬ್ಬರು ಪ್ರೇಮಿಗಳು ಸಮಾಧಿ ಬಳಿ ಬಂದು ಅಪ್ಪು ಆಶೀರ್ವಾದ ಪಡೆದುಕೊಂಡು ಮದುವೆಯಾಗಿದ್ದಾರೆ. ಇತ್ತೀಚೆಗಷ್ಟೇ ರಾಜ್ಯದ ಎಲ್ಲಾ ಚಿತ್ರಮಂದಿರಗಳ ಮುಂದೆ ದೀಪ ಬೆಳಗಿಸುವ ಮೂಲಕ ಅಗಲಿದ ಪುನೀತ್‌ಗೆ ಗೌರವ ನಮನ ಅರ್ಪಿಸಿದ್ದಾರೆ. ರಾಜ್ಯದ ಎಲ್ಲ ಚಿತ್ರಮಂದಿರಗಳು, ಪ್ರೇಕ್ಷಕರು, ಅಭಿಮಾನಿಗಳಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆದಿದೆ.

ಪುನೀತ್‌ಗೆ ಸಂತಾಪ ಸೂಚಿಸಿದ ರಾಧಿಕಾ ಪಂಡಿತ್, ದರ್ಶನ ಪಡೆಯದ ಆರೋಪಕ್ಕೆ ಪ್ರತ್ಯುತ್ತರ

ಇನ್ನು ಶಿವಮೊಗ್ಗದ ಸಕ್ರೆಬೈಲು ಬಿಡಾರದ ಮರಿಯಾನೆಗೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡಲಾಗಿದೆ. ಕಳೆದೆರೆಡು ತಿಂಗಳ ಹಿಂದೆಯಷ್ಟೇ, ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಭೇಟಿ ನೀಡಿದ್ದ ಪವರ್ ಸ್ಟಾರ್ ಪುನೀತ್, ಈ ಮರಿಯಾನೆಯನ್ನು ಅಪ್ಪಿ ಮುದ್ದಾಡಿದ್ದರು.  ಹೀಗಾಗಿ, ಈ ಮರಿ ಗಜ ರಾಜಕುಮಾರನಿಗೆ ಪವರ್ ಸ್ಟಾರ್​ ಹೆಸರು ಇಡಲಾಗಿದೆ. ಪುನೀತ್ ಆನೆಗೆ ಸಂಬಂಧಿಸಿದ ಸರ್ಕಾರಿ ಡಾಕ್ಯುಮೆಂಟರಿ ಶೂಟಿಂಗ್ ಹಿನ್ನೆಲೆಯಲ್ಲಿ ಸಕ್ರೆಬೈಲು​ ಆನೆ ಬಿಡಾರಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಕೆಲ ಸಮಯ ಈ ಗಜ ರಾಜಕುಮಾರನ ಬಳಿ ಆಟವಾಡಿ, ಮುದ್ದಾಡಿದ್ದರು. 

"

click me!