Puneeth Rajkumar; ಚಿತ್ರ ರಂಗದಿಂದ ಇಂದು ಪುನೀತ್‌ ಗೀತ ನಮನ, ದೇಶದ ಸಿನಿ ರಂಗ 2,000 ಕಲಾವಿದರು ಭಾಗಿ

By Suvarna NewsFirst Published Nov 16, 2021, 5:20 AM IST
Highlights
  • ಪುನೀತ್ ರಾಜ್‌ಕುಮಾರ್‌ಗೆ ವಿಷೇಷ ಗೀತನ ನಮನ ಕಾರ್ಯಕ್ರಮ
  • ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ
  • ಸಾರ್ವಜನಿಕರಿಗೆ ಪ್ರವೇಶವಿಲ್ಲ, ಪಾಸ್ ಕಡ್ಡಾಯ
  • ಬಾಲಿವುಡ್ ಸೇರಿ ದೇಶದ ಸಿನಿ ರಂಗದ 2,000 ಕಲಾವಿದರು ಭಾಗಿ

ಬೆಂಗಳೂರು(ನ.16):  ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಿಧನದ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ್‌ ಗೀತ ನಮನ’ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಪುಟದ ಸಚಿವರು, ಕನ್ನಡ ಚಿತ್ರರಂಗದ 142 ಕಲಾವಿದರು, ಹೊರ ರಾಜ್ಯದ ಹಲವು ನಟ, ನಟಿಯರು, ಗಣ್ಯರು ಸೇರಿ ಸುಮಾರು 2000 ಜನ ಭಾಗವಹಿಸುವ ನಿರೀಕ್ಷೆ ಇದೆ. ಮಧ್ಯಾಹ್ನ 3 ಗಂಟೆಯಿಂದ ಸಂಜೆ ಆರೂವರೆವರೆಗೆ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.

ಮಧ್ಯಾಹ್ನ ಗಣ್ಯರ ಆಗಮನದ ವೇಳೆಗೆ ಸ್ಯಾಕ್ಸೋಫೋನ್‌ ವಾದನ ನಡೆಯಲಿದೆ. ಬಳಿಕ ಪುನೀತ್‌ ರಾಜ್‌ಕುಮಾರ್‌ ಅವರ ಹುಟ್ಟಿನಿಂದ ಕೊನೆಯ ಕ್ಷಣದವರೆಗಿನ ದೃಶ್ಯಾವಳಿ ಪ್ರಸಾರವಾಗುತ್ತದೆ. ಬಳಿಕ ನಾಗೇಂದ್ರ ಪ್ರಸಾದ್‌ ಅವರು ಅಪ್ಪುಗಾಗಿ ರಚಿಸಿರುವ ‘ಮುತ್ತುರಾಜ ಹೆತ್ತ ಮುತ್ತು ಎತ್ತ ಹೋದೆಯೋ’ ಎಂಬ ಸಾಲುಗಳ ಗೀತೆಯ ಪ್ರಸಾರ. ಗಾಯಕ ವಿಜಯ ಪ್ರಕಾಶ್‌ ಅವರು ಈ ಹಾಡಿಗೆ ದನಿಯಾಗಿದ್ದಾರೆ. ಈ ವೇಳೆ ಗಣ್ಯರು ಎದ್ದುನಿಂತು ಕ್ಯಾಂಡಲ್‌ ಹಚ್ಚುತ್ತಾರೆ. ಆ ಬಳಿಕ ಗಣ್ಯರಿಂದ ಪುಷ್ಪಾಂಜಲಿ ನಡೆಯುತ್ತದೆ. ಪ್ರತಿ ನಾಲ್ಕು ಜನ ಗಣ್ಯರ ಪುಷ್ಪ ನಮನದ ಬಳಿಕ ಗುರುಕಿರಣ್‌ ಸಾರಥ್ಯದಲ್ಲಿ ಒಂದೊಂದು ಹಾಡಿನ ಗಾಯನ ನಡೆಯುತ್ತದೆ. ಸುಮಾರು 15ಕ್ಕೂ ಹೆಚ್ಚು ಹಾಡುಗಳ ಗಾಯನ ನಡೆಯಲಿದೆ.

Puneeth Rajkumar: ಅಪ್ಪು ಅಗಲುವ ಹಿಂದಿನ ರಾತ್ರಿ ಆದದ್ದೇ ಬೇರೆ, ಮಗಳನ್ನು ರೌಂಡ್ಸ್ ಕರೆದೊಯ್ಯಲೇ ಇಲ್ಲ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟದ ಸದಸ್ಯರು, ರಾಜ್‌ ಕುಟುಂಬಸ್ಥರು, ಹೊರರಾಜ್ಯದಿಂದ ಕಲಾವಿದರಾದ ಪ್ರಕಾಶ್‌ ರಾಜ್‌, ಶ್ರೀಕಾಂತ್‌, ನಾಗಾರ್ಜುನ, ಆಲಿ, ವಿಶಾಲ್‌, ವಿಶಾಲ್‌, ಶರತ್‌ ಕುಮಾರ್‌, ಪ್ರಭುದೇವ್‌ ಮೊದಲಾದವರು, ಅಲ್ಲಿನ ಫಿಲಂ ಚೇಂಬರ್‌ ಪದಾಧಿಕಾರಿಗಳು ಉಪಸ್ಥಿತರಿರುತ್ತಾರೆ. ಸ್ಯಾಂಡಲ್‌ವುಡ್‌ನಿಂದ ಸುದೀಪ್‌, ಗಣೇಶ್‌, ರಮೇಶ್‌ ಅರವಿಂದ್‌, ರಮ್ಯಾ, ಹಿರಿಯ ಕಲಾವಿದರಾದ ಭಾರತಿ, ಸುಮಲತಾ, ರಾಜವಂಶಸ್ಥ ಯದುವೀರ್‌, ಚಿತ್ರೋದ್ಯಮದ ಅಂಗ ಸಂಸ್ಥೆಗಳ ಮುಖ್ಯಸ್ಥರು ಸೇರಿದಂತೆ 2000 ಜನ ಪಾಲ್ಗೊಳ್ಳಲಿದ್ದಾರೆ.

ಪಾಸ್‌ ಇಲ್ಲದೇ ಪ್ರವೇಶ ಇಲ್ಲ:
ನಾಲ್ಕು ಕಡೆ ತಪಾಸಣೆ ನಡೆಯಲಿದ್ದು, ಪಾಸ್‌ ಇಲ್ಲದೇ ಯಾರಿಗೂ ಒಳಗೆ ಪ್ರವೇಶ ಇರುವುದಿಲ್ಲ ಎಂದು ಫಿಲಂ ಚೇಂಬರ್‌ ತಿಳಿಸಿದೆ. ವಿವಿಐಪಿಗಳಿಗೆ ಒಂದು ಗೇಟ್‌ ಹಾಗೂ ವಿಐಪಿಗಳಿಗೆ ಮತ್ತೊಂದು ಗೇಟ್‌ ಮೂಲಕ ಪ್ರವೇಶ ಇರುತ್ತದೆ. ಸಾರ್ವಜನಿಕರಿಗೆ ಕಾರ್ಯಕ್ರಮಕ್ಕೆ ಪ್ರವೇಶ ಇಲ್ಲ. ವಿವಿಧ ಚಾನಲ್‌ಗಳಲ್ಲಿ ಕಾರ್ಯಕ್ರಮದ ಲೈವ್‌ ಟೆಲಿಕಾಸ್ಟ್‌ ನಡೆಯಲಿದೆ. ಕಾರ್ಯಕ್ರಮದ ಬಳಿಕ ವಿವಿಐಪಿಗಳಿಗೆ ಪಕ್ಕದ ಎ.ಸಿ. ಹಾಲ್‌ನಲ್ಲಿ ಹಾಗೂ ಇತರರಿಗೆ ಹೊರಭಾಗದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಹೊರ ಭಾಗದಲ್ಲಿ ಹತ್ತು ಕೌಂಟರ್‌ಗಳ ವ್ಯವಸ್ಥೆ ಇರಲಿದೆ.

ಪುನೀತ್‌ ನುಡಿ ನಮನ
ಬಂಜಾರ (ಲಂಬಾಣಿ) ಜನ ಸೇವಾ ಸಂಘ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ನಟ ದಿ.ಪುನೀತ್‌ ರಾಜಕುಮಾರ್‌ ನುಡಿ ನಮನ ಕಾರ್ಯಕ್ರಮದಲ್ಲಿ ಅಪ್ಪು ಭಾವಚಿತ್ರಕ್ಕೆ ವಿಧಾನ ಪರಿಷತ್‌ ಸದಸ್ಯ ಪ್ರಕಾಶ್‌ ರಾಥೋಡ್‌, ಸಂಘದ ಗೌರವಾಧ್ಯಕ್ಷ ಡಾ.ಎ.ಆರ್‌.ಗೋವಿಂದಸ್ವಾಮಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್‌, ಬಿಜೆಪಿ ಮುಖಂಡ ರವಿಕುಮಾರ್‌ ಇತರರು ಪುಷ್ಪನಮನ ಸಲ್ಲಿಸಿದರು.

ಅಪ್ಪು ನಿಧನದ ಬಳಿಕ ಮೊದಲ ಹೇಳಿಕೆ ಕೊಟ್ಟ ಪತ್ನಿ: ಪತ್ರದ ಮೂಲಕ ಧನ್ಯವಾದ ತಿಳಿಸಿದ ಅಶ್ವಿನಿ

ನಟ ಪುನೀತ್‌ರಾಜಕುಮಾರ್‌ ಅವರ ಅಕಾಲಿಕ ನಿಧನಕ್ಕೆ ಕಂಬನಿ ಮಿಡಿದ ಸಹಸ್ರ ಅಭಿಮಾನಿಗಳ ಪೈಕಿ ಇಲ್ಲೊಬ್ಬ ಚಿತ್ರ ಕಲಾವಿದರು ನಗರದ ತಮ್ಮ ಮನೆಯಲ್ಲಿ ರಂಗೋಲಿಯಲ್ಲಿ ಪುನೀತ್‌ ಅವರ ‘ಕಲಾಕೃತಿ’ ಬಿಡಿಸುವ ಮೂಲಕ ಭಾವನಮನ ಸಲ್ಲಿಸಿದ್ದಾರೆ.

ನಟನೆ, ಸರಳ ವ್ಯಕ್ತಿತ್ವ, ಸಾಮಾಜಿಕ ಕಳಕಳಿಯ ಜತೆಗೆ ಸದಾ ಹಸನ್ಮುಖಿಯಾಗಿದ್ದ ನಟ ಪುನೀತ್‌ ರಾಜಕುಮಾರ್‌ ಅವರು ನಿಧನದಿಂದ ದುಃಖ ಆವರಿಸಿದೆ. ನಮ್ಮ ಮನೆಯ ಸದಸ್ಯರಲ್ಲಿ ಒಬ್ಬರನ್ನು ಕಳೆದುಕೊಂಡಷ್ಟೇ ನೋವಾಗಿದೆ. ಕೆಂಪು, ಬಿಳಿ, ಕಪ್ಪು ಸೇರಿದಂತೆ ವಿವಿಧ ಬಣ್ಣಗಳ ರಂಗೋಲಿ ಬಳಸಿ ‘ಮಿಲನ’ ಚಿತ್ರದಲ್ಲಿನ ಪುನೀತ್‌ ಅವರ ಚಿತ್ರ ಪ್ರೋಟ್ರೆಟ್‌ ಮೂಡ್‌ನಲ್ಲಿ ನ.4ರಂದು ಬಿಡಿಸಿದ್ದೇನೆ. ಆರೂವರೆ ಗಂಟೆಯ ಸಮಯದಲ್ಲಿ ಹೊರಹೊಮ್ಮಿದ ಚಿತ್ರ ನನ್ನಲ್ಲಿನ ಅಭಿಮಾನ ಇಮ್ಮಡಿಗೊಳಿಸಿತು ಎಂದು ಚಿತ್ರಕಲಾವಿದ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ತುರವಿಹಾಳ ಮೂಲದ ಬೆಂಗಳೂರು ನಿವಾಸಿ ನಾರಾಯಣ ರಾವ್‌ ತುರವಿಹಾಳ್‌ (49) ತಿಳಿಸಿದರು.

click me!