
ಒಂದೆಡೆ ರಚಿತಾರಾಮ್ ಸಿನಿಮಾ ಪ್ರಮೋಶನ್ನಲ್ಲಿ ಭಾಗಿಯಾಗಿಲ್ಲ, ನಮ್ಮ ನಟಿಯರಿಗೆ ನಕರಾ ಜಾಸ್ತಿ ಎಂಬ ಬಗೆಯ ಮಾತುಗಳು ಕೇಳಿಬರುತ್ತಿರುವಾಗ ಸಿನಿಮಾ ಪ್ರಚಾರದಲ್ಲಿ ಭಾಗವಹಿಸುವುದು ಎಷ್ಟು ಮುಖ್ಯ ಎಂಬ ಕುರಿತು ಕೆಲವು ನಟಿಯರು ಹೇಳಿದ್ದಾರೆ.
ಸಿನಿಮಾ ಪ್ರಚಾರ ತಂಡದ ಪ್ರತಿಯೊಬ್ಬರ ಕರ್ತವ್ಯ: ಬೃಂದಾ ಆಚಾರ್ಯ
ನನ್ನ ನಟನೆಯ ‘ಎಕ್ಸ್ ಆ್ಯಂಡ್ ವೈ’ ಸಿನಿಮಾ ಮುಂದಿನ ವಾರ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಪ್ರಚಾರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ. ಕೇವಲ ಬೆಂಗಳೂರು ಮಾತ್ರವಲ್ಲ ಬೇರೆ ಬೇರೆ ಜಿಲ್ಲಾಕೇಂದ್ರಗಳಲ್ಲೂ ಪ್ರಚಾರದಲ್ಲಿ ಭಾಗಿಯಾಗುತ್ತೇನೆ. ಈ ಸಿನಿಮಾ ಅಂತಲ್ಲ, ನಾನು ಈವರೆಗೆ ನಟಿಸಿದ ಎಲ್ಲಾ ಚಿತ್ರಗಳಲ್ಲೂ ನನ್ನ ಪಾತ್ರದ ಕಾಸ್ಟ್ಯೂಮ್ ಸೆಟ್ ಮಾಡೋದ್ರಿಂದ ಕೊನೆಯವರೆಗೂ ಪ್ರತಿಹಂತದಲ್ಲೂ ಜೊತೆಗಿರುತ್ತೇನೆ.
ನಿರ್ಮಾಪಕರ ಜೊತೆಗೆ ಚಿತ್ರತಂಡದ ಪ್ರತಿಯೊಬ್ಬರೂ ನಿಲ್ಲಬೇಕು. ಸಿನಿಮಾದ ಕೆಲಸಗಳಿಂದ ಹಿಡಿದು ಪ್ರಚಾರ ರಿಲೀಸ್ವರೆಗೆ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸಲು ತಮ್ಮ ಶೇ.100ರಷ್ಟು ಶ್ರಮ ಹಾಕಬೇಕು. ನಿರ್ಮಾಪಕ ಗೆದ್ದರೆ ಇನ್ನೊಂದು ಸಿನಿಮಾ ಮಾಡಿದರೆ ಆಗ ಆ ಜನರಿಗೂ ಉದ್ಯೋಗ ಸಿಗುತ್ತದೆ. ಕನ್ನಡ ಸಿನಿಮಾಗಳು ಗೆಲ್ಲಬೇಕು, ತಲೆ ಎತ್ತಿ ನಿಲ್ಲಬೇಕು. ಚಿತ್ರರಂಗದ ಭಾಗವಾಗಿರುವ ನಾವೆಲ್ಲರೂ ಇದಕ್ಕೆ ಶ್ರಮಿಸಬೇಕು.
ನಖರಾ ಮಾಡಲ್ಲ, ಅಹಂಕಾರ ತೋರಿಸಲ್ಲ: ಸಾನ್ಯಾ ಅಯ್ಯರ್
ನನಗೆ ಸಿನಿಮಾ ಅನ್ನೋದು ಪ್ರೀತಿ. ಆರಂಭದ ಸ್ಕ್ರಿಪ್ಟ್ ಕೆಲಸದಿಂದ ಕೊನೆಯ ಹಂತದವರೆಗೂ ನಾನು ಭಾಗಿಯಾಗುತ್ತೇನೆ. ನಿರ್ದೇಶನ ನಾನಿಷ್ಟ ಪಡುವ ಕೆಲಸ. ಹೀಗಾಗಿ ನಟನೆ ಮಾಡುತ್ತಲೇ ನಿರ್ದೇಶಕರ ಜಾಣ್ಮೆ, ಸವಾಲುಗಳ ಬಗ್ಗೆ ಗಮನಿಸುತ್ತಾ ಇರುತ್ತೇನೆ. ಸೆಟ್ನಲ್ಲಿ ನಟ ನಟಿಯರಿಗಿಂತ ಸಾಮಾನ್ಯರ ಜೊತೆಗೆ ಬೆರೆಯುವುದೇ ಹೆಚ್ಚು. ಆ ವೇಳೆಗೆ ಬಹಳ ಸೂಕ್ಷ್ಮವಾಗಿ ಅವರ ಬದುಕಿನ ಕಥೆಗಳು ಅರ್ಥವಾಗುತ್ತ ಹೋಗುತ್ತವೆ.
ಕಲಾವಿದನಿಗೆ ಅವನ ಪ್ರತಿಭೆಯ ಅಭಿವ್ಯಕ್ತಿಗೆ ಅವಕಾಶ ಸಿಗುವುದೇ ಹೆಚ್ಚು. ಸಿಕ್ಕ ಅವಕಾಶಕ್ಕೆ ನನ್ನೆಲ್ಲ ಶ್ರಮ ಸುರಿದು ಅದಕ್ಕೆ ಜೀವ ತುಂಬುತ್ತೇನೆಯೇ ಹೊರತು ಡೇಟ್ಸ್ ಕೊಡದೆ ನಖರಾ ಮಾಡೋದು, ಸೆಟ್ನಲ್ಲಿ ಅಹಂಕಾರ ತೋರಿಸೋದು ಇಂಥವನ್ನೆಲ್ಲ ಮಾಡೋದಿಲ್ಲ ಸಿನಿಮಾ ಪ್ರಚಾರ ನಮ್ಮ ಪ್ರೇಕ್ಷಕರನ್ನು ನೇರ ಮುಖಾಮುಖಿಯಾಗುವ ಅವಕಾಶ. ಅಂಥಾ ಅವಕಾಶವನ್ನು ಕಲಾವಿದರು ಮಿಸ್ ಮಾಡಿಕೊಳ್ಳಬಾರದು. ನಾನಂತೂ ಸಿನಿಮಾದ ಪ್ರಚಾರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತೇನೆ. ಜನರಿಗೆ ಸಾಧ್ಯವಾದಷ್ಟು ಕನೆಕ್ಟ್ ಆಗಲು ಪ್ರಯತ್ನಿಸುತ್ತೇನೆ.
ಸಿನಿಮಾವನ್ನು ಸಿನಿಮಾವಾಗಷ್ಟೇ ನೋಡೋದಿಲ್ಲ: ಸಂಯುಕ್ತಾ ಹೊರನಾಡು
‘ಮ್ಯಾಕ್ಸ್’ ಸಿನಿಮಾ ಪ್ರಚಾರದಲ್ಲಿ ನಾನು ಬಹಳ ಖುಷಿಯಿಂದ ಭಾಗವಹಿಸಿದ್ದೆ. ಆಗ ಸುದೀಪ್ ಒಂದು ಮಾತು ಹೇಳಿದ್ದು ಸೋಷಿಯಲ್ ಮೀಡಿಯಾದಲ್ಲೆಲ್ಲ ಸುದ್ದಿಯಾಯಿತು. ಈ ಸಂಯುಕ್ತಾ ಎಷ್ಟೊಂದು ಪ್ರಶ್ನೆ ಕೇಳ್ತಾರೆ ಅಂತ. ಅವರ ಮಾತು ನೂರಕ್ಕೆ ನೂರು ನಿಜ. ನಾನು ಸಿನಿಮಾದ ಸೂಕ್ಷ್ಮಾತಿಸೂಕ್ಷ್ಮ ಪ್ರೊಸೆಸ್ಗಳನ್ನೂ ಗಮನಿಸುತ್ತ, ಅರ್ಥವಾಗದ್ದನ್ನು ಕೇಳಿ ತಿಳಿದುಕೊಳ್ಳುತ್ತ ಇರುತ್ತೇನೆ. ಅದು ನನ್ನ ಗುಣ. ನಿರ್ದೇಶಕರು ಸ್ವಲ್ಪ ಹೊತ್ತು ಸುಮ್ನೆ ಕೂತ್ಕೊಳಮ್ಮ ಅಂತ ಹೇಳೋವರೆಗೂ ನನ್ನ ಪ್ರಶ್ನಾವಳಿ ಇರುತ್ತದೆ. ಆದರೆ ಯಾರೊಬ್ಬ ನಿರ್ದೇಶಕರೂ ನನ್ನ ಈ ಆಸಕ್ತಿ ಕುಂದಿಸುವ ಹಾಗೆ ಮಾಡಿಲ್ಲ. ಸಿನಿಮಾ ಪ್ರೊಸೆಸ್ ಒಂದು ಮದುವೆ ಮನೆ ಥರ ಅನಿಸುತ್ತೆ. ಅಲ್ಲಿ ಸಡಗರ, ಖುಷಿ, ಕೆಲಸದ ಗಡಿಬಿಡಿ, ಸಣ್ಣಪುಟ್ಟ ಕೊಂಕು ತಗಾದೆ, ಇವೆಲ್ಲವನ್ನೂ ಮೀರಿದ ಸೆಲೆಬ್ರೇಶನ್ ಇರುತ್ತೆ. ಅದು ನನಗಿಷ್ಟ.
ಸಿನಿಮಾದಲ್ಲಿ ನನ್ನ ಪಾತ್ರ ಹೇಗೇ ಇರಲಿ. ನಾನು ಆ ಪಾತ್ರದ ಸಾಮಾನ್ಯ ಅಂಶಗಳನ್ನು ಗಮನಿಸುತ್ತೇನೆ. ಆ ಪಾತ್ರ ಹೇಗೆ ನಡೆಯುತ್ತೆ, ಹೇಗೆ ಊಟ ಮಾಡುತ್ತೆ, ಅದರ ಶೈಕ್ಷಣಿಕ ಹಿನ್ನೆಲೆ ಏನು, ಆಕೆ ಸಿಟ್ಟು ಬಂದಾಗ ಹೇಗೆ ರಿಯಾಕ್ಟ್ ಮಾಡುತ್ತಾಳೆ ಇತ್ಯಾದಿ. ಇಷ್ಟೆಲ್ಲ ಮಾಡಿದಾಗ ನಾನು ಟೋಬಿಯ ಸಾವಿತ್ರಿಯಾಗಿ ಕಾಣಿಸಿಕೊಂಡಾಗ ಆಕೆ ವೇಶ್ಯೆಯಾದರೂ ಜನ ಅವಳನ್ನು ಮನುಷ್ಯಳನ್ನಾಗಿ ಮಾಡುತ್ತದೆ. ಸಿನಿಮಾ ನನಗಿಷ್ಟ. ಅಲ್ಲಿ ನನ್ನ ಸಂಪೂರ್ಣ ತಲ್ಲೀನತೆ ಇರುತ್ತದೆ. ಅಪ್ಪಿತಪ್ಪಿಯೂ ನಿರ್ದೇಶಕರಿಗೆ ತಂಡಕ್ಕೆ ನೋವುಂಟುಮಾಡುವಂತೆ ಅಥವಾ ತೊಂದರೆಯಾಗುವಂತೆ ನಡೆದುಕೊಂಡಿಲ್ಲ.
ನಾಯಕಿ ಪ್ರಧಾನ ಚಿತ್ರಗಳಲ್ಲಿ ಚಾಲೆಂಜ್ ಹೆಚ್ಚು: ರಾಗಿಣಿ ದ್ವಿವೇದಿ
ಸಿನಿಮಾವೊಂದು ನಾಯಕನಿಂದ ಬೇಡುವ ಅಂಶಗಳು ಬೇರೆ ನಾಯಕಿಯಿಂದ ಬಯಸೋದೇ ಬೇರೆ. ನಾಯಕಿಯ ಲುಕ್, ಫಿಸಿಕ್ಕು, ನಿಲುವಿನಲ್ಲಿರುವ ತಾಜಾತನ ಎಲ್ಲವೂ ಮುಖ್ಯವಾಗುತ್ತೆ. ನಾಯಕ ಪ್ರಧಾನ ಸಿನಿಮಾಗಳಲ್ಲಿ ಆಕೆ ಸಿನಿಮಾದ ಎಲ್ಲಾ ಪ್ರಾಸೆಸ್ಗಳಲ್ಲಿ ಭಾಗಿಯಾದರೂ ಆಕೆಗೆ ಸಿಗುವ ಕ್ರೆಡಿಟ್ ಬಹಳ ಕಡಿಮೆ. ಆದರೆ ನಾವು ಅದನ್ನು ಗಣನೆಗೇ ತೆಗೆದುಕೊಳ್ಳದೇ ಸಿನಿಮಾದ ಪ್ರತಿ ಹಂತದಲ್ಲೂ ತೊಡಗಿಸಿಕೊಳ್ಳುತ್ತೇವೆ. ಪ್ರಚಾರದಲ್ಲಂತೂ ಸಂಪೂರ್ಣವಾಗಿ ಭಾಗಿಯಾಗುತ್ತೇವೆ. ನಾಯಕಿ ಪ್ರಧಾನ ಸಿನಿಮಾಗಳಾದರೆ ಇಡೀ ಚಿತ್ರವನ್ನು ನಮ್ಮ ಹೆಗಲ ಮೇಲೆ ಹೊತ್ತು ಮುನ್ನಡೆಸಬೇಕಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.