ಕಾಲಿವುಡ್‌ನಲ್ಲಿ ಶಿವಣ್ಣ ಎಂಟ್ರಿ; ಕಾರ್ತಿಕ್‌ ಸುಬ್ಬರಾಜು ಹೇಳಿದ ಕಥೆಗೆ ಮೆಚ್ಚುಗೆ!

By Kannadaprabha NewsFirst Published Jan 4, 2021, 9:27 AM IST
Highlights

ಕನ್ನಡದ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ಅವರು ಕಾಲಿವುಡ್‌ಗೆ ಹೋಗಲಿದ್ದಾರೆ ಎನ್ನುವ ಸುದ್ದಿಗಳು ಜೋರಾಗಿ ಕೇಳಿ ಬರುತ್ತಿದೆ. ನಟ ವಿಕ್ರಮ್‌ ಚಿತ್ರದಲ್ಲಿ ಶಿವಣ್ಣ ನಟಿಸಲಿದ್ದಾರೆ ಎಂಬುದು ಸದ್ಯದ ಸುದ್ದಿ. 

 ರಜನಿಕಾಂತ್‌ ನಟನೆಯ ‘ಪೇಟಾ’ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ಕಾರ್ತಿಕ್‌ ಸುಬ್ಬರಾಜು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಕತೆ ಕೂಡ ಕೇಳಿದ್ದಾರೆ. ಈ ಬಗ್ಗೆ ಶಿವರಾಜ್‌ಕುಮಾರ್‌ ಅವರು ಹೇಳುವುದೇನು?

‘ಒಂದು ವಾರದ ಹಿಂದೆಯಷ್ಟೆನಿರ್ದೇಶಕ ಕಾರ್ತಿಕ್‌ ಸುಬ್ಬರಾಜು ಅವರು ಬಂದು ಕತೆ ಹೇಳಿದರು. ಒಳ್ಳೆಯ ಕತೆ ಮಾಡಿಕೊಂಡಿದ್ದಾರೆ. ನನಗೂ ಖುಷಿ ಆಯಿತು ಕತೆ ಕೇಳಿ. ಈ ಚಿತ್ರದಲ್ಲಿ ನಟಿಸುವಂತೆ ಕಾರ್ತಿಕ್‌ ಸುಬ್ಬರಾಜು ಅವರೇ ಕೇಳಿದರು. ಆದರೆ, ನಾನು ಒಂದು ವಾರ ಸಮಯ ತೆಗೆದುಕೊಂಡಿದ್ದೇನೆ. ಯಾಕೆಂದರೆ ಈಗಾಗಲೇ ನಾನು ಒಪ್ಪಿಕೊಂಡಿರುವ ಚಿತ್ರಗಳ ಶೂಟಿಂಗ್‌ ಯಾವಾಗ ಮುಗಿಯುತ್ತವೆ, ನನ್ನ ಕಮಿಟ್‌ಮೆಂಟ್‌ ಏನು ಎಂಬುದು ಇನ್ನೂ ಗೊತ್ತಿಲ್ಲ. ಹೀಗಾಗಿ ನನ್ನ ಡೇಟ್ಸ್‌ ನೋಡಿಕೊಂಡು ಒಂದು ವಾರದಲ್ಲಿ ಹೇಳುವುದಾಗಿ ತಿಳಿಸಿದ್ದೇನೆ.

ವಿಕ್ರಮ್‌ ಕೂಡ ದೊಡ್ಡ ನಟರು. ಕಾರ್ತಿಕ್‌ ಸುಬ್ಬರಾಜು ಎಲ್ಲರಿಗೂ ಗೊತ್ತಿರುವ ನಿರ್ದೇಶಕ. ಅವರ ಚಿತ್ರಕ್ಕೆ ನಾನು ಜತೆಯಾಗುತ್ತೇನೆ ಎಂದು ಒಪ್ಪಿದರೆ ಅದಕ್ಕೆ ಸಂಪೂರ್ಣವಾಗಿ ಸಮಯ ಕೊಡಬೇಕು. ಆ ಸಮಯ ಅಂದರೆ ಡೇಟ್ಸ್‌ ಇದೆಯಾ ಎಂದು ನೋಡಬೇಕಿದೆ. ಈ ಕಾರಣಕ್ಕೆ ಒಂದು ವಾರ ಸಮಯ ಕೇಳಿರುವೆ. ಇದ್ದಕ್ಕಿದ್ದಂತೆ ಸಿನಿಮಾ ಒಪ್ಪಿಕೊಂಡು, ಡೇಟ್ಸ್‌ ಹೊಂದಾಣಿಕೆ ಆಗದೆ ಕೈ ಬಿಡುವುದು ಒಳ್ಳೆಯದಲ್ಲ ಎಂಬುದು ನನ್ನ ಅಭಿಪ್ರಾಯ. ನೋಡೋಣ, ಇನ್ನೊಂದು ವಾರದಲ್ಲಿ ಎಲ್ಲವೂಅಂತಿಮವಾಗಲಿದೆ’ ಎನ್ನುತ್ತಾರೆ ನಟ ಶಿವರಾಜ್‌ಕುಮಾರ್‌.

ಶಿವಣ್ಣ ಈಗ 'ಮುತ್ತುರಾಯ';ಹರ್ಷ ಹಾಗೂ ಸೆಂಚುರಿ ಸ್ಟಾರ್‌ ಕಾಂಬಿನೇಷನ್‌ನ 4ನೇ ಚಿತ್ರ! 

ಅಂದಹಾಗೆ ಶಿವಣ್ಣ ನಟಿಸಲಿರುವ ಈ ತಮಿಳು ಚಿತ್ರದಲ್ಲಿ ವಿಕ್ರಮ್‌ ಪುತ್ರ ಧ್ರುವ ವರ್ಮಾ ಕೂಡ ನಟಿಸುತ್ತಿದ್ದಾರೆ. ಅಪ್ಪ-ಮಗನ ಚಿತ್ರದಲ್ಲಿ ಶಿವಣ್ಣ ಅವರದ್ದು ಯಾವ ರೀತಿಯ ಪಾತ್ರ ಎಂಬುದು ಸದ್ಯದ ಕುತೂಹಲ. ಎಲ್ಲವೂ ಅಂದುಕೊಂಡಂತೆ ಆದರೆ ಕನ್ನಡದ ಸೆಂಚುರಿ ಸ್ಟಾರ್‌ ಕಾಲಿವುಡ್‌ಗೂ ಕಾಲಿಡಲಿದ್ದಾರೆ.

click me!