
ಬೆಂಗಳೂರು (ಏ.3): ಕಳೆದ ವರ್ಷ ಕಾಂತಾರ, ರಿಷಭ್ ಶೆಟ್ಟಿ, ಆರ್ಆರ್ಆರ್ ಹಾಗೂ ರಾಜಮೌಳಿ ಅವರದ್ದೇ ಸದ್ದು. ಅದರಲ್ಲೂ ಚಿಕ್ಕ ಬಜೆಟ್ನಲ್ಲಿ ನಿರ್ಮಾಣವಾಗಿ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದ ಕಾಂತಾರದಲ್ಲಿ ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಭಾಗದ ನಂಬಿಕೆಗಳೇ ಆಧಾರವಾಗಿತ್ತು. ಕಾಂತಾರ ಚಿತ್ರ ತುಳುನಾಡಿನ ದೈವಾರಾಧನೆಯನ್ನು ಜಗತ್ತಿಗೆ ಪಸರಿಸಿದ್ದು, ನಿಜ ಇದರ ಬೆನ್ನಲ್ಲಿಯೇ ದೈವಾರಾಧನೆಯನ್ನು ಅವಮಾನಿಸುವ, ಕರಾವಳಿ ಭಾಗದ ಜನರ ಮನಸ್ಸಿನ ಭಾವನೆಗಳನ್ನು ಘಾಸಿಗೊಳಿಸುವ ಘಟನೆಗಳೂ ನಡೆದಿವೆ. ದೈವನರ್ತಕರು ಮಾತ್ರವೇ ಧರಿಸುವಂಥ ವಸ್ತ್ರಗಳನ್ನು ಧರಿಸಿಕೊಂಡು, ಅವರಂತೆಯೇ ನಟಿಸಲು ಪ್ರಯತ್ನ ಮಾಡಿದ ಘಟನೆಗಳು ನಡೆದಿದ್ದವು. ಅದೀಗ ಐಪಿಎಲ್ನಲ್ಲೂ ಕಾಣಿಸಿಕೊಂಡಿದೆ. ಐಪಿಎಲ್ನಲ್ಲಿ ಆರ್ಸಿಬಿ ತಂಡದ ಅಭಿಮಾನಿಯೊಬ್ಬ ಕಾಂತಾರ ಚಿತ್ರದಲ್ಲಿ ರಿಷಭ್ ಶೆಟ್ಟಿಯ ದೈವನರ್ತಕನ ಪಾತ್ರದ ರೀತಿ ವಸ್ತ್ರ ಧರಿಸಿ ಬಂದಿದ್ದ. ಇದನ್ನು ಸ್ವತಃ ಆರ್ಸಿಬಿ ಟೀಮ್ ಕೂಡ ತನ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಪ್ರಕಟ ಮಾಡಿತ್ತು. ಇದನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ದುರ್ಗಾದಾಸ್ ರಾಮದಾಸ್ ಕಟೀಲ್ ಎನ್ನುವವರು, ಇಂಥ ಚಿತ್ರಗಳನ್ನು ನೋಡೋದಕ್ಕೆ ಬಹಳ ಬೇಸರವಾಗುತ್ತದೆ. ರಿಷಭ್ ಶೆಟ್ಟಿ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನೂ ಟ್ಯಾಗ್ ಮಾಡಿದ್ದಾರೆ. ಇನ್ನೂ ಕೆಲವರು ರಿಷಭ್ ಶೆಟ್ಟಿಯವರೆ ನೀವು ಕಾಂತಾರದ 2ನೇ ಭಾಗದ ಚಿತ್ರವನ್ನು ಮಾಡೋದು ಬೇಡ ಇದು ನಮ್ಮ ಕಳಕಳಿಯ ಮನವಿ ಎಂದು ಬರೆದುಕೊಂಡಿದ್ದಾರೆ.
'ಬೆಂಗಳೂರಿನಲ್ಲಿ ನಿನ್ನೆ ಆರ್ಸಿಬಿ ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ ಇದನ್ನು ನೋಡಿ ತುಂಬಾ ಬೇಸರವಾಯಿತು. ಕರಾವಳಿ ಕರ್ನಾಟಕದಲ್ಲಿ ದೈವಾರಾಧನೆ ಒಂದು ಆಚರಣೆಯಾಗಿದ್ದು, ಮುಂದಿನ ಪಂದ್ಯಗಳಲ್ಲಿ ದೈವಾರಾಧನೆಯನ್ನು ಬಳಸದಂತೆ ಅಭಿಮಾನಿಗಳಲ್ಲಿ ವಿನಂತಿಸಲಾಗಿದೆ. ನಾವು ತುಳುವರು ಈ ಸಂಪ್ರದಾಯವನ್ನು ಗೌರವದಿಂದ ಪರಿಗಣಿಸುತ್ತೇವೆ' ಎಂದು ದುರ್ಗಾದಾಸ್ ಕಟೀಲ್ ಬರೆದುಕೊಂಡಿದ್ದಾರೆ. 'ಕಾಂತಾರದ ಯಾವುದೇ ಪ್ರೀಕ್ವೆಲ್ ಅಥವಾ ಸೀಕ್ವೆಲ್ಅನ್ನು ಮಾಡಬೇಡಿ ಎಂದು ನಿಮ್ಮನ್ನು ವಿನಂತಿಸುತ್ತೇನೆ ... ಇಲ್ಲದಿದ್ದರೆ ಈ ಪವಿತ್ರ ಸಂಪ್ರದಾಯವು ಪ್ರಪಂಚದ ಮುಂದೆ ತಮಾಷೆಯಾಗಿ ಕೊನೆಗೊಳ್ಳುತ್ತದೆ' ಎಂದು ರಿಷಬ್ ಶೆಟ್ಟಿಗೆ ಟ್ಯಾಗ್ ಮಾಡಿ ಸುದೀಪ್ ಶೆಟ್ಟಿ ಎನ್ನುವವರು ಟ್ವೀಟ್ ಮಾಡಿದ್ದಾರೆ. 'ಪ್ಲೀಸ್ ಇದರ ಸೀಕ್ವೆಲ್ ಮಾಡಬೇಡಿ. ಕಾಂತಾರ -2 ಬೇಡ ಶೇಟ್ರೆ, ಕಾಂತಾರಾ-2 ಮಾಡಬೇಡಿ. ಇದು ಕರಾವಳಿ ನಿವಾಸಿಗಳ ಮನವಿ ಎಂದುಕೊಳ್ಳಿ' ಎಂದು ಪವನಜ ಶೆಟ್ಟಿ ಎನ್ನುವವರು ಕೋಟ್ ಟ್ವೀಟ್ ಮಾಡಿದ್ದಾರೆ.
'40 ಸಾವಿರ ಪ್ರೇಕ್ಷಕರಲ್ಲಿ 36 ಸಾವಿರ ಆರ್ಸಿಬಿ ಅಭಿಮಾನಿಗಳು..' ಬೆಂಗ್ಳೂರು ಟೀಮ್ ಕುರಿತಾಗಿ ಸುನಿ ಸ್ಪೆಷಲ್ ಟ್ವೀಟ್!
'ಭೂತಕೋಲಕ್ಕೆ ಸಂಬಂಧಿಸಿದ ಅಂಶಗಳನ್ನು ಮನರಂಜನೆಗಾಗಿ ಬಳಸಬೇಡಿ ಎಂದು ಬಲವಾಗಿ ಜನರನ್ನು ಒತ್ತಾಯಿಸಿ....ಇದು ಕಾಂತಾರರಿಂದ ಪ್ರಾರಂಭವಾಗಿದೆ. ಇದನ್ನು ಜನರಿಗೆ ನೀವೇ ಹೇಳಬೇಕು' ಎಂದು ರಿಷಭ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂ ಅವರನ್ನು ಟ್ಯಾಗ್ ಮಾಡಿ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. 'ದೈವಾರಾಧನೆ ಎಲ್ಲೂ ಬಳಸಬಹುದಾದ ಜಾನಪದ ನೃತ್ಯವಲ್ಲ. ಇದು ತನ್ನದೇ ಆದ ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ. ಮತ್ತು ಇದು ಧಾರ್ವಿುಕ ಆಚರಣೆಗಳೊಂದಿಗೆ ಸಂಪರ್ಕ ಹೊಂದಿದೆ. ದಯವಿಟ್ಟು ಆರಾಧನೆಯನ್ನು ಅಗೌರವಗೊಳಿಸಬೇಡಿ' ಎಂದು ಕರಾವಳಿ ಭಾಗದ ಇನ್ನೊಬ್ಬರು ಬರೆದಿದ್ದಾರೆ. 'ಇದು ಯಾವುದೋ ಹಾಡು ಮತ್ತು ನೃತ್ಯವಲ್ಲ ಎಂದು ಈ ಮೂರ್ಖರು ಯಾವಾಗ ಕಲಿಯುತ್ತಾರೆ? ಅತ್ಯಂತ ಅಗೌರವ' ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
5 ರಿಂದ 50 ಕೋಟಿ ರೂಪಾಯಿ; ಕಾಂತಾರ ಪಾರ್ಟ್-2ಗೆ ರಿಷಬ್ ಶೆಟ್ಟಿ ಸಂಭಾವನೆ ಕೇಳಿದ್ರೆ ಅಚ್ಚರಿ ಪಡ್ತೀರಾ!
'ಕಾಂತಾರದ ಯಶಸ್ಸನ್ನು ಸಂಭ್ರಮ ಮಾಡಿದವರು ನೀವೇ ಅಲ್ಲವೇ? ಆದರೆ, ಈ ವಿಚಾರವೀಗ ಮುಖ್ಯಭೂಮಿಕೆಯಲ್ಲಿದೆ, ಜನರು ಇದನ್ನು ಇಲ್ಲಿಗೆ ನಿಲ್ಲಿಸೋದಿಲ್ಲ. ಇಷ್ಟು ದೈವೀ ರೂಪದ ವಿಚಾರವಾಗಿದ್ದರೆ ಅದನ್ನು ಸಿನಿಮಾ ಮಾಡಲು ಬಿಟ್ಟಿದ್ದೇಕೆ' ಎಂದು ಗಣೇಶ್ ಎನ್ನುವವರು ಮಾಡಿರುವ ಪ್ರಶ್ನೆಗೆ, ಕಾಂತಾರದ ಶೈಲಿಯಲ್ಲಿಯೇ, 'ಒಳ್ಳೆಯ ಪ್ರಶ್ನೆ' ಎನ್ನುವ ಕಾಮೆಂಟ್ ಬಂದಿದೆ. ಇದಕ್ಕೆ ಅಖಿಲ್ ಪ್ರಭು ಎನ್ನುವವರು ಕಾಮೆಂಟ್ ಮಾಡಿದ್ದು, 'ಅಣ್ಣಾ ನಿನ್ನ ಈ ಪ್ರಶ್ನೆಗೆ ಖಂಡಿತವಾಗಿ ಉತ್ತರ ಪಡೆದುಕೊಳ್ಳುತ್ತೀರಿ. ಕೊರಗಜ್ಜ ದೇವಸ್ಥಾನದಲ್ಲಿ ಚೇಷ್ಟೆ ಮಾಡಿದವರು ಅನುಭವಿಸಿದಂತೆಯೇ ನೀನು ಪಾಠ ಕಲಿಯುತ್ತೀಯ' ಎಂದು ಟ್ವೀಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.