
ಪ್ರಜ್ವಲ್ ದೇವರಾಜ್ (Prajwal Devaraj) ಮುಖ್ಯ ಭೂಮಿಕೆಯ 'ಕರಾವಳಿ' (Karavali) ಚಿತ್ರದ ವಿವಾದ ದಿನದಿನಕ್ಕೂ ಕ್ಷಣಕ್ಷಣಕ್ಕೂ ಹೊಸ ತಿರುವು ಪಡೆಯುತ್ತಲೇ ಇದೆ. ಇದೀಗ ಕರಾವಳಿ ಚಿತ್ರೆದ ನಿರ್ದೇಶಕರಾಗಿರುವ ಗುರುದತ್ ಗಾಣಿಗ (Gurudatha Ganiga) ಅವರು ಮಾಧ್ಯಮ ಪ್ರಕಟಣೆ ಮೂಲಕ, ವಿವಾದ, FIR ಹಾಗೂ ಸದ್ಯದ ಸ್ಥಿತಿಗತಿ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಅದರ ಯಥಾವತ್ ಕಾಪಿ ಇಲ್ಲಿದೆ ನೋಡಿ..
ಮಾಧ್ಯಮ ಪ್ರಕಟಣೆ
* “ಕರಾವಳಿ” ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಅನಧಿಕೃತವಾಗಿ ಪ್ರವೇಶಿಸಿ ಅಡ್ಡಿಪಡಿಸಲು ಪ್ರಯತ್ನಿಸಿರುವ ಅಪರಿಚಿತ ವ್ಯಕ್ತಿಗಳ ವಿರುದ್ಧ ನಿರ್ಮಾಣ ಸಂಸ್ಥೆ ಅಧಿಕೃತವಾಗಿ ಪೋಲಿಸ್ ದೂರನ್ನು ದಾಖಲಿಸಿದೆ.
* ನಟ “ಪ್ರಜ್ವಲ್ ದೇವರಾಜ್" ಅವರಿಗೆ ಕೊಡಲು ಬಾಕಿ ಇದ್ದ ಹಣವನ್ನು ಘಟನೆ ನಡೆದ ಮರುದಿನವೇ ಅಧಿಕೃತವಾಗಿ
ಪಾವತಿಸಲಾಗಿದೆ.
ನಟ “ಪ್ರಜ್ವಲ್ ದೇವರಾಜ್” ಅವರು ಕರಾವಳಿ ಚಿತ್ರದಲ್ಲಿನ ಪಾತ್ರಕ್ಕಾಗಿ “ದೈಹಿಕ ರೂಪಾಂತರ” (Physical Transformation/6 packs) ಮಾಡುವುದಾಗಿ ಒಪ್ಪಿಕೊಂಡಿದ್ದರು ಮತ್ತು ಅದು ಕಥೆಗೆ ಬಹುಮುಖ್ಯ ಅಂಶವಾಗಿತ್ತು, ಅದೇ ಕಾರಣಕ್ಕಾಗಿ ಅಷ್ಟು ದೊಡ್ಡ ಮೊತ್ತವನ್ನು ಸಂಭಾವನೆಯಾಗಿ ಕೊಡಲು ನಿರ್ಮಾಣ ಸಂಸ್ಥೆ ಒಪ್ಪಿಕೊಂಡಿತ್ತು. ಆದರೆ ಮೇಲ್ಕಂಡ ದೈಹಿಕ ರೂಪಾಂತರ ಸಾಧ್ಯವಾಗದೆ ಇದ್ದಿದ್ದರಿಂದ ಉಳಿದ ಹಣವನ್ನು ಬಾಕಿಯಾಗಿ ಉಳಿಸಿಕೊಳ್ಳಲಾಗಿತ್ತು.
* ನಟ “ಪ್ರಜ್ವಲ್ ದೇವರಾಜ್” ಬಾಕಿ ಹಣವನ್ನು ನೀಡದೆ ಡಬ್ಬಿಂಗ್ ಮಾಡುವುದಿಲ್ಲವೆಂದು ಖಡಾಖಂಡಿತವಾಗಿ ಹೇಳಿದ್ದರಿಂದ, ಅವರಿಗಾಗಿ ಎರಡು ತಿಂಗಳು ಕಾದ ನಂತರ, ಅನಿವಾರ್ಯವಾಗಿ ಬೇರೆಯವರಿಂದ ಡಬ್ಬಿಂಗ್ ಮಾಡಿಸಲಾಯಿತು.
* ಈ ಬಗ್ಗೆ ನಟ “ಪ್ರಜ್ವಲ್ ದೇವರಾಜ್” ಅವರನ್ನು ಹಲವಾರು ಬಾರಿ ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಕ್ಕಿರುವುದಿಲ್ಲ ಹಾಗೂ ಸಿನಿರಂಗದ ಪ್ರಮುಖರು ಮತ್ತು ನಿರ್ಮಾಪಕರಾದ “ಕೆ ವಿ ಎನ್ ಸಂಸ್ಥೆಯ ಸುಪ್ರಿತ್” ರವರು, ನಿರ್ಮಾಪಕರಾದ “ಜಾಕ್ ಮಂಜುರವರು ಮತ್ತು ನಿರ್ಮಾಪಕರಾದ “ಲೋಹಿತ್ (ಚಕ್ರವ್ಯೂಹ)” ರವರೆಲ್ಲರೂ ಪ್ರತ್ಯೇಕವಾಗಿ ಅವರನ್ನು ಸಂಪರ್ಕಿಸಿ ಮಧ್ಯಸ್ಥಿಕೆಗೆ ಪ್ರಯತ್ನಿಸಿದರಾದರೂ ಅದು ವಿಫಲವಾಗಿ, ಬಾಕಿ ಹಣ ಪಾವತಿಯಾಗದೆ ಕರಾವಳಿ ಚಿತ್ರದ ಯಾವುದೇ ಕೆಲಸಗಳಲ್ಲೂ ಭಾಗಿಯಾಗುವುದಿಲ್ಲವೆಂದು ಖಡಾಖಂಡಿತವಾಗಿ ತಿರಸ್ಕರಿಸಿರುತ್ತಾರೆ.
ಟ್ರೈಲರ್ ನಲ್ಲಿ ಅವರ ಧ್ವನಿ ಇಲ್ಲವೆನ್ನುವುದು ನಟ “ಪ್ರಜ್ವಲ್ ದೇವರಾಜ್” ರವರಿಗೆ ತಿಳಿದಿತ್ತು. ಮತ್ತು ಬೇರೆಯವರಿಂದ ಡಬ್ಬಿಂಗ್ ಮಾಡಿಸಿರುವ ವಿಚಾರವನ್ನು ಅವರ ಮ್ಯಾನೇಜರ್ ಮೂಲಕ ತಲುಪಿಸಲಾಗಿತ್ತು.
ಇಷ್ಟಾಗಿಯೂ ಬಾಕಿ ಇರುವ ಹಣ ತಲುಪಿದ ಮೇಲೂ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತ ಖಾತೆಗಳಿಂದ ಇಲ್ಲ-ಸಲ್ಲದ್ದನ್ನೆಲ್ಲಾ ಆರೋಪ ಮಾಡುತ್ತ ಕರಾವಳಿ ಸಿನಿಮಾ, ನಿರ್ದೇಶಕರು ಮತ್ತು ನಿರ್ಮಾಣ ಸಂಸ್ಥೆಯ ಮೇಲೆ ಅಪಪ್ರಚಾರ ಮಾಡುತ್ತಿರುವವರ ಮೇಲೆ ತನಿಖೆ ನಡೆಸುವಂತೆ ಮೇಲ್ಕಂಡ ದೂರಿನಲ್ಲಿ ಉಲ್ಲೇಖಿಸಲಾಗಿದೆ.
GURUDATHA GANIGA FILMS,
Jayanagar,
Bangalore-560041
ಒಟ್ಟಿನಲ್ಲಿ, ಇತ್ತೀಚಿನ ಒಂದೊಂದೇ ಬೆಳವಣಿಗೆ ನೋಡುತ್ತಿದ್ದರೆ ಸದ್ಯಕ್ಕೆ ಈ ಕರಾವಳಿ ವಿವಾದ ತಣ್ಣಗಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಆದಷ್ಟು ಬೇಗ ಈ ವಿವಾದ ಬಗೆಹರಿಯಲಿ, 'ಕರಾವಳಿ' ಸಿನಿಮಾ ಬೇಗ ತೆರೆಗೆ ಬರಲಿ ಎಂದು ಕನ್ನಡ ಸಿನಿಪ್ರೇಮಿಗಳು ಆಶಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.