ಹೋಟೆಲ್‌ನಲ್ಲಿ ಸಂಪಾದಿಸಿದ ಹಣದಿಂದ ಚಿತ್ರ ಮಾಡಿದೆ: ಪ್ರದೀಪ್‌ ಕುಮಾರ್‌

By Kannadaprabha NewsFirst Published Jul 6, 2020, 8:50 AM IST
Highlights

ಸಿನಿಮಾ ಎಂಥವರನ್ನೂ ಸೆಳೆಯುವ ಮಾಧ್ಯಮ ಎನ್ನುವುದಕ್ಕೆ ‘ಕಲಾವಿದ’ ಎನ್ನುವ ಚಿತ್ರವೇ ಸಾಕ್ಷಿ. ಹಾಸನ ಜಿಲ್ಲೆಯ ಪ್ರದೀಪ್‌ ಕುಮಾರ್‌ ಅವರು ಚಿಕ್ಕಂದಿನಿಂದಲೂ ಸಿನಿಮಾಗಳ ಮೇಲೆ ಆಸಕ್ತಿ ಬೆಳೆಸಿಕೊಂಡಿದ್ದವರು.

ಇಂಜಿನಿಯರಿಂಗ್‌ ಓದಿ, ಒಳ್ಳೆಯ ಸಂಬಳ ಸಿಗುವ ಉದ್ಯೋಗ ಇದ್ದಾಗಲೂ ಸಿನಿಮಾಗಳ ಮೇಲಿನ ಆಕರ್ಷಣೆ ಬಿಟ್ಟು ಹೋಗದ ಕಾರಣ, ಉದ್ಯೋಗ ಬಿಟ್ಟು ಗಾಂಧಿನಗರಕ್ಕೆ ಬಂದವರು. ಸತತವಾಗಿ ಎರಡು ವರ್ಷ ಸಿನಿಮಾ ಹೋರಾಟ ನಡೆಸಿದ ಮೇಲೆ ‘ಕಲಾವಿದ’ ಎನ್ನುವ ಚಿತ್ರಕ್ಕೆ ನಾಯಕ, ನಿರ್ಮಾಪಕ ಆಗಿದ್ದಾರೆ. ಸದ್ಯ ಈ ಚಿತ್ರಕ್ಕೆ ಈಗಷ್ಟೆಸೆನ್ಸಾರ್‌ ಆಗಿದ್ದು, ಯು/ಎ ಪ್ರಮಾಣ ಪತ್ರ ನೀಡಲಾಗಿದೆ.

ಶ್ರೀಮುರಳಿಗೆ ಎದುರಾದ ವಿಜಯ್ ಸೇತುಪತಿ; 16ದಿನಕ್ಕೆ 2 ಕೋಟಿ ಸಂಭಾವನೆ ? 

ಚಿತ್ರೀಕರಣ ಮುಗಿದು, ಸೆನ್ಸಾರ್‌ ಕೂಡ ಮುಗಿಸಿಕೊಂಡು ಬಿಡುಗಡೆಗೆ ಸಜ್ಜಾಗಿರುವ ತಮ್ಮ ನಟನೆಯ ಮೊದಲ ಚಿತ್ರದ ಸಂಭ್ರಮದಲ್ಲಿರುವ ಪ್ರದೀಪ್‌ ಕುಮಾರ್‌ ಅವರು ಚಿತ್ರದ ಬಗ್ಗೆ ಹೇಳುವುದಿಷ್ಟು, ‘ವಿಭಿನ್ನವಾದ ಕತೆಯನ್ನು ಒಳಗೊಂಡಿರುವ ಸಿನಿಮಾ ಇದು. ಶಿವಾನಂದ್‌ ಎಚ್‌ ಡಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ನನಗೆ ಮೊದಲ ಸಿನಿಮಾ ಆಗಿರುವ ಕಾರಣ ಸಾಕಷ್ಟುಕುತೂಹಲ ಇದೆ. ಅಂದುಕೊಂಡಂತೆ ಸಿನಿಮಾ ಬಂದಿದೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಲೇ ನಾಟಕಗಳಲ್ಲಿ ನಟಿಸಿದೆ. ಒಂದು ವರ್ಷದ ಕಾಲ ಬೇರೆ ಬೇರೆ ನಿರ್ದೇಶಕರ ಜತೆ ಕೆಲಸ ಮಾಡಿದೆ. ಈ ನಡುವೆ ಬಿಗ್‌ಬಾಸ್‌ ಕಿಚನ್‌ ಹೆಸರಿನ ಹೋಟೆಲ್‌ ಆರಂಭಿಸಿ ಇಲ್ಲಿ ಬಂದ ಹಣದಿಂದ ಈಗ ‘ಕಲಾವಿದ’ ಸಿನಿಮಾ ಮಾಡಿದ್ದೇನೆ. ಹೀಗಾಗಿ ಇದು ನನ್ನ ಕಷ್ಟಮತ್ತು ಪ್ರೀತಿಯಿಂದ ರೂಪಿಸಿರುವ ಸಿನಿಮಾ’ ಎನ್ನುತ್ತಾರೆ ಪ್ರದೀಪ್‌ ಕುಮಾರ್‌.

ಮಗಳಿಗೆ ಸೈಕಲ್‌ ಕಲಿಸಿದೆ, ಮಗನ ಜತೆ ಫುಟ್‌ಬಾಲ್‌ ಆಡಿದೆ: ಶ್ರೀಮುರಳಿ 

ಸದ್ಯ ಅವರ ನಿರೀಕ್ಷೆಯಂತೆ ಸಿನಿಮಾ ಬಂದಿದ್ದು, ಚಿತ್ರದ ಹೆಸರಿಗೆ ತಕ್ಕಂತೆ ತೆರೆ ಮೇಲೆ ಕಲಾವಿದನೊಬ್ಬನ ಸಾಹಸಗಳನ್ನು ನೋಡಬಹುದು. ಬಣ್ಣದ ಜಗತ್ತಿನ ಮೋಹವೂ ಚಿತ್ರದ ಮುಖ್ಯ ಅಂಶ. ಕಿರುತೆರೆಯಲ್ಲಿ ಗುರುತಿಸಿಕೊಂಡು, ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಸಂಭ್ರಮ ಈ ಚಿತ್ರದ ನಾಯಕಿ. ಮಂಜುನಾಥ್‌ ಹೆಗ್ಡೆ, ಅರುಣಾ ಬಾಲರಾಜ್‌, ಮೂಗು ಸುರೇಶ್‌, ಶ್ರೀಧರ್‌, ಜಗದೀಶ್‌, ಲೋಕೇಶ್‌ ಹೀಗೆ ಹಲವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿದಾನಂದ್‌ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ವಿವೇಕ್‌ ಚಕ್ರವರ್ತಿ - ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಅಂದಹಾಗೆ ಇತ್ತೀಚೆಗೆ ನಟ ಶ್ರೀಮುರುಳಿ ಅವರು ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

click me!