ಸಾಮಾನ್ಯ ಯುವಕನೇ ಮುಖ್ಯಮಂತ್ರಿಯಾದರೆ?: 'ಕಾಮನ್ ಮ್ಯಾನ್' ಸಿನಿಮಾದಲ್ಲಿ ರೋಚಕ ರಾಜಕೀಯ ಆಟ

Published : Sep 17, 2026, 08:02 PM IST
Common Man Kannada Movie

ಸಾರಾಂಶ

ಓಂ ಸಾಯಿ ಪ್ರಕಾಶ್ ನಿರ್ದೇಶನದ ‘ಕಾಮನ್ ಮ್ಯಾನ್’ ಸಿನಿಮಾ ವಿಭಿನ್ನ ರಾಜಕೀಯ ಥ್ರಿಲ್ಲರ್ ಕಥೆಯೊಂದಿಗೆ ಸೆಪ್ಟೆಂಬರ್ 25ರಂದು ಬಿಡುಗಡೆಯಾಗಲಿದೆ. ಸಾಮಾನ್ಯ ಮಧ್ಯಮ ವರ್ಗದ ಯುವಕ ಅಚಾನಕ್ ಮುಖ್ಯಮಂತ್ರಿ ಆಗಿ, ವ್ಯವಸ್ಥೆಯ ವಿರುದ್ಧ ಹೋರಾಡುವ ಕಥೆ ಚಿತ್ರದ ಪ್ರಮುಖ ಆಕರ್ಷಣೆ.

ಸಿನಿಮಾದಲ್ಲಿ ರಾಜಕೀಯ ಕಥೆಗಳು ಹೊಸದೇನಲ್ಲ. ಆದರೆ, ಒಬ್ಬ ಸಾಮಾನ್ಯ ಮಧ್ಯಮ ವರ್ಗದ ಯುವಕನೇ ಅಚಾನಕ್ ರಾಜ್ಯದ ಮುಖ್ಯಮಂತ್ರಿ ಆಗಿಬಿಟ್ಟರೆ ಏನಾಗಬಹುದು? ಅಧಿಕಾರ ಕೈಗೆ ಬಂದ ಬಳಿಕ ಆತ ವ್ಯವಸ್ಥೆಯನ್ನು ಬದಲಿಸಲು ಮುಂದಾದರೆ ಎದುರಾಗುವ ಸವಾಲುಗಳೇನು? ಇಂಥದ್ದೊಂದು ವಿಭಿನ್ನ ಕಥಾಹಂದರದೊಂದಿಗೆ ಸದ್ದು ಮಾಡುತ್ತಿರುವ ಸಿನಿಮಾ ‘ಕಾಮನ್ ಮ್ಯಾನ್’.

ಈಗಾಗಲೇ ಚಿತ್ರದ ಶೀರ್ಷಿಕೆಯೇ ಸಿನಿಪ್ರಿಯರ ಗಮನ ಸೆಳೆದಿದೆ. ಅದಕ್ಕೆ ತಕ್ಕಂತೆ ಸಿನಿಮಾದ ಕಥೆಯೂ ಕುತೂಹಲ ಮೂಡಿಸುವಂತಿದೆ. ಭ್ರಷ್ಟಾಚಾರ, ಜನಸಾಮಾನ್ಯರ ಮೇಲಿನ ದೌರ್ಜನ್ಯ, ರಾಜಕೀಯ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಬೇಸತ್ತಿರುವ ಒಬ್ಬ ಸಾಮಾನ್ಯ ಯುವಕ ಜನರ ಧ್ವನಿಯಾಗುತ್ತಾನೆ. ಆದರೆ, ಯಾರೂ ಊಹಿಸದ ರೀತಿಯಲ್ಲಿ ನಡೆಯುವ ಕೆಲವು ಘಟನೆಗಳು ಆತನನ್ನು ನೇರವಾಗಿ ಮುಖ್ಯಮಂತ್ರಿ ಗಾದಿಗೆ ತಂದು ಕೂರಿಸುತ್ತವೆ.

ಅಧಿಕಾರ ಸಿಕ್ಕ ಮೇಲೆ ಶುರುವಾಗುತ್ತೆ ಅಸಲಿ ಆಟ!

ಸಾಮಾನ್ಯ ವ್ಯಕ್ತಿಯೊಬ್ಬನ ಕೈಗೆ ಮುಖ್ಯಮಂತ್ರಿ ಅಧಿಕಾರ ಬಂದರೆ ಆತ ಏನು ಮಾಡಬಹುದು? ‘ಕಾಮನ್ ಮ್ಯಾನ್’ ಇದೇ ಪ್ರಶ್ನೆಯನ್ನು ಕಥೆಯ ಕೇಂದ್ರಬಿಂದುವಾಗಿಸಿಕೊಂಡಿದೆ. ತಳಮಟ್ಟದ ಜನರ ಕಷ್ಟಗಳನ್ನು ಕಣ್ಣಾರೆ ಕಂಡಿರುವ ನಾಯಕ, ಅಧಿಕಾರ ಸಿಕ್ಕ ತಕ್ಷಣ ಸುಮ್ಮನೆ ಕೂರುವುದಿಲ್ಲ. ವ್ಯವಸ್ಥೆಯಲ್ಲಿರುವ ಲೋಪಗಳನ್ನು ಸರಿಪಡಿಸಲು ಮುಂದಾಗುತ್ತಾನೆ. ಜನರ ಪರವಾಗಿ ಹಲವು ಕ್ರಾಂತಿಕಾರಿ ನಿರ್ಧಾರಗಳನ್ನು ಕೈಗೊಳ್ಳುತ್ತಾನೆ.

ಆದರೆ, ಇದುವರೆಗೆ ವ್ಯವಸ್ಥೆಯನ್ನೇ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ರಾಜಕೀಯ ಶಕ್ತಿಗಳಿಗೆ ಇದು ಇಷ್ಟವಾಗುವುದಿಲ್ಲ. ಪ್ರಭಾವಿ ರಾಜಕೀಯ ವಿರೋಧಿಗಳು ಮತ್ತು ಭೂಗತ ಶಕ್ತಿಗಳು ಒಂದಾಗುತ್ತವೆ. ಮುಖ್ಯಮಂತ್ರಿಯ ಜನಪರ ಮಿಷನ್‌ ಅನ್ನು ವಿಫಲಗೊಳಿಸಲು ಸಂಚುಗಳು ಆರಂಭವಾಗುತ್ತವೆ. ಹೀಗಾಗಿ ಜನರ ಬೆಂಬಲವನ್ನೇ ತನ್ನ ದೊಡ್ಡ ಶಕ್ತಿಯನ್ನಾಗಿ ಮಾಡಿಕೊಂಡಿರುವ ಈ ಸಾಮಾನ್ಯ ಮುಖ್ಯಮಂತ್ರಿ, ತನ್ನ ವಿರುದ್ಧ ನಿಂತಿರುವ ಪ್ರಬಲ ಶತ್ರುಗಳನ್ನು ಹೇಗೆ ಎದುರಿಸುತ್ತಾನೆ ಎಂಬುದೇ ಚಿತ್ರದ ಪ್ರಮುಖ ಕುತೂಹಲ.

ಹೈ-ವೋಲ್ಟೇಜ್ ರಾಜಕೀಯ ಥ್ರಿಲ್ಲರ್!

ಯಾವುದೇ ದೊಡ್ಡ ರಾಜಕೀಯ ಹಿನ್ನೆಲೆ ಇಲ್ಲದ ವ್ಯಕ್ತಿ ಮುಖ್ಯಮಂತ್ರಿ ಆಗುವುದು, ನಂತರ ವ್ಯವಸ್ಥೆಯನ್ನೇ ಬದಲಿಸಲು ಹೊರಡುವುದು-ಈ ಕಾನ್ಸೆಪ್ಟ್‌ ‘ಕಾಮನ್ ಮ್ಯಾನ್’ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ತನ್ನ ಬಳಿ ಯಾವುದೇ ಹೈಟೆಕ್ ರಾಜಕೀಯ ತಂತ್ರಗಳಿಲ್ಲ. ಆದರೆ ಧೈರ್ಯ, ಚಾಣಾಕ್ಷತನ ಮತ್ತು ತ್ಯಾಗದ ಮನೋಭಾವವನ್ನು ನಂಬಿಕೊಂಡು ಆತ ರಾಜಕೀಯ ದೈತ್ಯರನ್ನು ಎದುರಿಸಬೇಕಾಗುತ್ತದೆ. ಕೊನೆಗೆ ಜನರ ನಂಬಿಕೆಯನ್ನು ಉಳಿಸಿಕೊಳ್ಳಲು ಆತ ಯಾವ ಬೆಲೆ ತೆರಬೇಕಾಗುತ್ತದೆ ಎಂಬುದೇ ಸಿನಿಮಾದ ಮತ್ತೊಂದು ಪ್ರಮುಖ ಅಂಶ.

ಓಂ ಸಾಯಿ ಪ್ರಕಾಶ್ ನಿರ್ದೇಶನ

ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನ ‘ಕಾಮನ್ ಮ್ಯಾನ್’ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ನರಸಿಂಹಮೂರ್ತಿ ಅವರು ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸುವುದರ ಜೊತೆಗೆ ಕಥೆ ಬರೆದಿದ್ದು, ಪ್ರಮುಖ ಪಾತ್ರವೊಂದರಲ್ಲೂ ಅಭಿನಯಿಸಿದ್ದಾರೆ. ಇನ್ನು ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ ‘ಕೆರೆಬೇಟೆ’ ಚಿತ್ರದ ಬಳಿಕ ಗೌರಿಶಂಕರ್ ಎಸ್.ಆರ್.ಜಿ. ಅವರ ನಿರೀಕ್ಷಿತ ಸಿನಿಮಾ ಇದಾಗಿರುವುದು. ‘ಕೆರೆಬೇಟೆ’ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದ ಗೌರಿಶಂಕರ್ ಅವರಿಂದ ‘ಕಾಮನ್ ಮ್ಯಾನ್’ನಲ್ಲಿ ಏನನ್ನು ನಿರೀಕ್ಷಿಸಬಹುದು ಎಂಬ ಕುತೂಹಲವೂ ಇದೆ.

ಹಾಡುಗಳಲ್ಲೂ ದೊಡ್ಡ ತಾರಾಬಳಗ

ಇತ್ತೀಚೆಗೆ ‘ಕಾಮನ್ ಮ್ಯಾನ್’ ಚಿತ್ರದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮವೂ ನಡೆದಿದೆ. ಹಾಡುಗಳ ಸಂಗೀತ ಸಂಯೋಜನೆಯನ್ನು ವಿನಯ್ ಚಂದ್ರ ಮಾಡಿದ್ದಾರೆ. ಕ್ಯಾಚಿ ಟ್ಯೂನ್‌ಗಳ ಮೂಲಕ ಹಾಡುಗಳನ್ನು ಸಿದ್ಧಪಡಿಸಲಾಗಿದ್ದು, ನಾಗೇಂದ್ರ ಪ್ರಸಾದ್ ಮತ್ತು ಸಾಯಿ ಸರ್ವೇಶ್ ಸಾಹಿತ್ಯ ಬರೆದಿದ್ದಾರೆ. ಚಿತ್ರದ ಹಾಡುಗಳಿಗೆ ಕನ್ನಡ ಚಿತ್ರರಂಗದ ಹಲವು ಪ್ರತಿಭಾವಂತ ಗಾಯಕರು ಧ್ವನಿ ನೀಡಿದ್ದಾರೆ. ಕೈಲಾಶ್ ಖೇರ್, ಬಾಬಾ ಸೆಹಗಲ್, ಜಾವೇದ್ ಅಲಿ, ಶ್ರುತಿ ಪ್ರಹ್ಲಾದ್ ಮತ್ತು ಚೈತ್ರಾ ಜೆ. ಆಚಾರ್ ಸೇರಿದಂತೆ ಹಲವು ಗಾಯಕರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಹಾಡುಗಳ ಬಿಡುಗಡೆ ವೇಳೆ ಕೇಳಿಬಂದ ಪ್ರತಿಕ್ರಿಯೆ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

50ಕ್ಕೂ ಹೆಚ್ಚು ಹಿರಿಯ ಕಲಾವಿದರ ವಿಶೇಷತೆ

‘ಕಾಮನ್ ಮ್ಯಾನ್’ ಚಿತ್ರದ ಮತ್ತೊಂದು ವಿಶೇಷವೆಂದರೆ 50ಕ್ಕೂ ಹೆಚ್ಚು ಹಿರಿಯ ಕಲಾವಿದರು ಸಿನಿಮಾದಲ್ಲಿ ಅಭಿನಯಿಸಿರುವುದು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಹಿರಿಯ ಕಲಾವಿದರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆಯುವ ಅಂಶವಾಗಿದೆ. ಚಿತ್ರದಲ್ಲಿ ಸೋನಾ ಲಡ್ಡ, ಸ್ಯಾಬಿ ಸೂರಿ, ಪ್ರಕಾಶ್ ತುಮಿನಾಡು, ರಮೇಶ್ ಭಟ್, ಬಲಾರಾಜವಾಡಿ, ಅಶೋಕ್, ನಾಗೇಂದ್ರ ಅರಸ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ಅಭಿನಯಿಸಿದ್ದಾರೆ.

ತಂತ್ರಜ್ಞರ ಬಳಗವೂ ಗಮನ ಸೆಳೆಯುತ್ತಿದೆ

‘ಕಾಮನ್ ಮ್ಯಾನ್’ಗೆ ಓಂ ಸಾಯಿ ಪ್ರಕಾಶ್ ನಿರ್ದೇಶನವಿದ್ದು, ಥಿಲ್ಲರ್ ಮಂಜು ಮತ್ತು ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿದ್ದಾರೆ. ಜೆ.ಜಿ. ಕೃಷ್ಣ ಮತ್ತು ದೀಪಕ್ ಕುಮಾರ್ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಎಂ. ಮುನಿರಾಜು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಸಂಗೀತವನ್ನು ವಿನಯ್ ಚಂದ್ರ ನೀಡಿದ್ದಾರೆ.

ಸೆಪ್ಟೆಂಬರ್ 25ಕ್ಕೆ ‘ಕಾಮನ್ ಮ್ಯಾನ್’ ಬಿಡುಗಡೆ

ಇಂದಿನ ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಗೆ ಕನ್ನಡಿ ಹಿಡಿಯುವಂತಹ ಕಥಾಹಂದರದೊಂದಿಗೆ ‘ಕಾಮನ್ ಮ್ಯಾನ್’ ಸಿನಿಮಾ ಸೆಪ್ಟೆಂಬರ್ 25ರಂದು ತೆರೆಗೆ ಬರಲು ಸಿದ್ಧವಾಗಿದೆ. ಒಬ್ಬ ಸಾಮಾನ್ಯ ವ್ಯಕ್ತಿ ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಪಟ್ಟಕ್ಕೇರಿದರೆ ವ್ಯವಸ್ಥೆಯೊಳಗೆ ಏನೆಲ್ಲ ಬದಲಾವಣೆ ತರಬಹುದು? ಆತನ ಜನಪರ ನಿರ್ಧಾರಗಳಿಗೆ ರಾಜಕೀಯ ಶಕ್ತಿಗಳು ಹೇಗೆ ಪ್ರತಿಕ್ರಿಯಿಸುತ್ತವೆ? ತನ್ನ ವಿರುದ್ಧ ನಡೆಯುವ ಸಂಚುಗಳನ್ನು ಆತ ಹೇಗೆ ಎದುರಿಸುತ್ತಾನೆ? ಕೊನೆಗೆ ಜನರ ನಂಬಿಕೆಯನ್ನು ಉಳಿಸಿಕೊಳ್ಳಲು ಆತ ಏನು ಮಾಡುತ್ತಾನೆ?

ಇನ್ನು ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾ ಬಿಡುಗಡೆಯ ಬಳಿಕ ಉತ್ತರ ಸಿಗಲಿದೆ. ವಿಭಿನ್ನ ರಾಜಕೀಯ ಕಥಾಹಂದರ, ದೊಡ್ಡ ತಾರಾಬಳಗ ಮತ್ತು ಹಿರಿಯ ನಿರ್ದೇಶಕರ ಸಾರಥ್ಯದಿಂದಾಗಿ ‘ಕಾಮನ್ ಮ್ಯಾನ್’ ಸದ್ಯ ಕನ್ನಡ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿರುವ ಸಿನಿಮಾಗಳ ಪಟ್ಟಿಗೆ ಸೇರಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮೆಜೆಸ್ಟಿಕ್‌ನಲ್ಲಿ ನೈಜ ಬದುಕು ಕಂಡ ಮೋನಿಷಾ: 'ಸಿಟಿ ಲೈಟ್ಸ್' ಕುರಿತು ವಿನಯ್ ಹಂಚಿಕೊಂಡ ಅನುಭವವೇನು?
ಹೊಸ ದಂಪತಿಯ ಕಥೆಗೆ ಸಖತ್ ಟ್ವಿಸ್ಟ್: ಡಾಲಿ ಧನಂಜಯ 'ಹೆಗ್ಗಣ ಮುದ್ದು' ಟ್ರೇಲರ್‌ನಲ್ಲಿ ಏನಿದೆ?