ಮಾಲಾಶ್ರೀ ಮತ್ತು ಸುಧಾರಾಣಿ ಮಧ್ಯೆ ಅಂದು ಏನಾಗಿತ್ತು? ಸೀಕ್ರೆಟ್ ಬಿಚ್ಚಿಟ್ಟ 'ಮನ ಮೆಚ್ಚಿದ ಹುಡುಗಿ'..!

By Shriram BhatFirst Published Oct 16, 2024, 10:54 AM IST
Highlights

ತೊಂಬತ್ತರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ್ದ ನಟಿಯರಾದ ಮಾಲಾಶ್ರೀ, ಸುಧಾರಾಣಿ ಹಾಗೂ ಶ್ರುತಿ ಮಧ್ಯೆ ಸಂಬಂಧ ಅಂದು ಹೇಗಿತ್ತು ಎಂಬ ಕುತೂಹಲಕ್ಕೆ ಇಲ್ಲಿದೆ ಉತ್ತರ..

ಕನ್ನಡ ಚಿತ್ರರಂಗದಲ್ಲಿ 1990ರ ದಶಕವನ್ನು 'ಮಾಲಾಶ್ರೀ ಯುಗ' ಎಂದೇ ಕರೆಯಲಾಗುತ್ತದೆ. ಏಕೆಂದರೆ, 1989ರಲ್ಲಿ ತೆರೆಗೆ ಬಂದ 'ನಂಜುಂಡಿ ಕಲ್ಯಾಣ' ಸಿನಿಮಾ (Nanjudi Kalyana) ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಮಾಲಾಶ್ರೀ, ಬಳಿಕ ಗಜಪತಿಯ ಗರ್ವಭಂಗ, ಪೊಲೀಸ್‌ನ ಹೆಂಡ್ತಿ, ಮೃತ್ಯುಂಜಯ ಹೀಗೆ ಸಾಲು ಸಾಲು ಸಿನಿಮಾಗಳ ಮೂಲಕ ಸುಂಟರಗಾಳಿ ಹಾಗೂ ಬಿರುಗಾಳಿ ಒಟ್ಟಿಗೇ ಅಟ್ಯಾಕ್ ಮಾಡಿದಂತೆ ಕನ್ನಡ ಚಿತ್ರರಂಗವನ್ನು ಆಳಿದವರು. ಆದರೆ, ಅಂತಹ ಸಮಯದಲ್ಲೂ ಅಚ್ಚಕನ್ನಡದ ನಟಿ ಸುಧಾರಾಣಿ (Sudharani) ಕೂಡ ಬಹಳಷ್ಟು ಮಿಂಚಿ ಹೆಸರು ಮಾಡಿರುವ ನಟಿ. ಇದೇ ಮಾತನ್ನು ನಟಿ ಶ್ರುತಿ (Sruthi) ಬಗ್ಗೆಯೂ ಕೂಡ ಹೇಳಲೇಬೇಕು!

ತೊಂಬತ್ತರ ದಶಕದ ಮಾಧ್ಯಮಗಳೇ ಇರಲಿ, ಪ್ರೇಕ್ಷಕರೇ ಇರಲಿ, ಅಂದು ತೆಲುಗು ಮೂಲದಿಂದ ಕನ್ನಡಕ್ಕೆ ಬಂದ ಮಾಲಾಶ್ರೀ ಕ್ರೇಜ್ ಹಾಗೂ ಮೇನಿಯಾ ಬಗ್ಗೆ ಎಲ್ಲರಿಗೂ ಗೊತ್ತು.  ಹಾಗೆಯೇ, ಕನ್ನಡದ ನಟಿಯರಾದ ಸುಧಾರಾಣಿ ಹಾಗು ಶ್ರುತಿ ಪ್ರಸಿದ್ಧಿಯೂ ಗೊತ್ತು. ಅದೆಷ್ಟೋ ಬಾರಿ ಪ್ರಮುಖ ಮಾಧ್ಯಮಗಳಲ್ಲಿ 'ಮಾಲಾಶ್ರೀ ಅಲೆಯಲ್ಲೂ ಕೊಚ್ಚಿ ಹೋಗದ ನಟಿಯರಾದ ಸುಧಾರಾಣಿ ಹಾಗೂ ಶ್ರುತಿ.. ಎಂದು ಬರೆಯಲಾಗುತ್ತಿತ್ತು ಎಂಬುದು ಗುಟ್ಟಾಗಿ ಉಳಿದಿರುವ ಸಂಗತಿಯೇನೂ ಅಲ್ಲ. 

Latest Videos

ಲಕ್ಷ್ಮೀ-ಮಾಲಾಶ್ರೀ ಅವ್ರೆಲ್ಲ ಯಾವುದೇ ಕಂಪ್ಲೇಂಟ್ ಮಾಡ್ತಿರ್ಲಿಲ್ಲ, ಸಿನಿಮಾ ಪ್ರೀತಿ ಅಷ್ಟಿತ್ತು: ಕೆ ಮಂಜು!

ಹಾಗಿದ್ದರೆ, ಮಾಲಾಶ್ರೀ, ಸುಧಾರಾಣಿ ಹಾಗೂ ಶ್ರುತಿ ಮಧ್ಯೆ ಸಂಬಂಧ ಅಂದು ಹೇಗಿತ್ತು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇದೆ. ಇಂದು ಈ ಮೂವರೂ ಅತ್ಯತ್ತಮ ಸ್ನೇಹಿತೆಯರು ಎಂಬುದೂ ಗೊತ್ತು. ಹೀಗಿರುವಾಗ ನಟಿ ಸುಧಾರಾಣಿ ಅವರು ಭಾಗಿಯಾಗಿದ್ದ ಖಾಸಗಿ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಈ ಬಗ್ಗೆ ಅವರಿಗೆ ಪ್ರಶ್ನೆ ಕೇಳಲಾಗಿದೆ. ಆದರೆ ಆ ಪ್ರಶ್ನೆಯಲ್ಲಿ ನಟಿ ಸುಧಾರಾಣಿಗೆ ಮಾಲಾಶ್ರೀ ಅವರ ಬಗ್ಗೆ ಮಾತ್ರ ಕೇಳಲಾಗಿದೆ, ನಟಿ ಶ್ರುತಿ ಬಗ್ಗೆ ಪ್ರಶ್ನೆ ಕೇಳಲಾಗಿಲ್ಲ. ಆದ್ದರಿಂದ ಉತ್ತರ ಕೂಡ ಮಾಲಾಶ್ರೀ ಹಾಗೂ ಸುಧಾರಾಣಿ ನಡುವಿನ ಸಂಬಂಧಕ್ಕೆ ಮಾತ್ರ ಸೀಮಿತವಾಗಿದೆ. 

ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಟಿ ಸುಧಾರಾಣಿ, 'ನಮ್ಮಿಬ್ಬರ ಮಧ್ಯೆ ಖಂಡಿತ ಯಾವುದೇ ಮನಸ್ತಾಪ ಇರಲಿಲ್ಲ. ಡೇ ಒನ್ ಇಂದಲೂ ನಾವಿಬ್ಬರೂ ಫ್ರೆಂಡ್ಲಿಯಾಗಿಯೇ ಇದ್ವಿ. ಆಗ ಪ್ರತಿಯೊಂದು ಜೋನರ್ ಸಿನಿಮಾಗಳೂ ಬರ್ತಿದ್ವು.. ಪ್ರತಿಯೊಬ್ಬರಿಗೂ ಅವರದೇ ಆದ ಮಾರ್ಕೆಟ್ ಇತ್ತು. ಮಾಲಾಶ್ರೀ ಅವರು ಸ್ಟ್ರಾಂಗ್ ರೋಲ್ ಮಾಡ್ತಾ ಇದ್ರೆ ನಾನು ವೆರೈಟಿ ಟೈಪ್ಸ್ ರೋಲ್ ಮಾಡ್ತಾ ಇದ್ದೆ.. ಅದು ತುಂಬಾ ಹೆಲ್ತಿ ಕಾಂಪಿಟೀಶನ್, ಯಾವುದೇ ಬೇಸರ ಇರಲಿಲ್ಲ. ಹಿಂದಿನಿಂದ ಚೂರಿ ಹಾಕುವ, ಟೀಕೆ ಮಾಡುವ ಪರಿಪಾಠವೇ ಇರಲಿಲ್ಲ. 

ನಮ್ಮಿಬ್ಬರಿಗೂ ನಮ್ಮದೇ ಆದ ಸ್ಥಾನವಿತ್ತು. ಎಲ್ಲೂ ಯಾವುದೇ ಮನಸ್ತಾಪ, ವೈರತ್ವ ಬರೋದಕ್ಕೆ ಚಾನ್ಸೇ ಇರಲಿಲ್ಲ. ಅವರಿಗೂ ಸಾಕಷ್ಟು ಸಿನಿಮಾಗಳಿತ್ತು, ನನಗೂ ಇತ್ತು. ಎಲ್ಲೋ ಸಿಕ್ಕಾಗ ಕೂಡ ಆ ವಯಸ್ಸಿನಲ್ಲಿ, ಆ ಕ್ಷಣದಲ್ಲಿ ಏನು ಮಾತಾಡಬೇಕಿತ್ತೋ ಅದನ್ನು ಮಾತನಾಡುತ್ತಿದ್ದೆವು. ಶೂಟಿಂಗ್, ಮೇಕಪ್, ಔಟ್‌ಡೋರ್ ಸಂಗತಿಗಳ ಬಗ್ಗೆ ಪರಸ್ಪರ ಮಾತನಾಡುತ್ತಿದ್ದೆವು. ನಾನು ಹಾಗೂ ಮಾಲಾಶ್ರೀ ಮಧ್ಯೆ ಆಗಲೀ ಅಥವಾ ಬೇರೆ ನಟಿಯರ ಮಧ್ಯೆ ಆಗಲೀ ಯಾವುದೇ ಜಗಳ, ಮನಸ್ತಾಪಗಳು ಇರಲೇ ಇಲ್ಲ' ಎಂದಿದ್ದಾರೆ 'ಮನ ಮೆಚ್ಚಿದ ಹುಡುಗು ಖ್ಯಾತಿಯ ನಟಿ ಸುಧಾರಾಣಿ!

ಮಾಲಾಶ್ರೀ-ರವಿಚಂದ್ರನ್ ಮಧ್ಯೆ 'ರಾಮಾಚಾರಿ' ವೇಳೆ ಯಾಕೆ ಸಮಸ್ಯೆ ಆಗಿತ್ತು, ಪರಿಹಾರ ಹೇಗಾಯ್ತು..?

ಅಂದಹಾಗೆ, ಸುಧಾರಾಣಿ ಹಾಗು ಶಿವರಾಜ್‌ಕುಮಾರ್ ನಟನೆಯ 'ಆನಂದ್' ಚಿತ್ರವು (Anand) 1986ರಲ್ಲಿ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ಗಳಿಸಿತ್ತು. ಅದೇ ರೀತಿ, ಮಾಲಾಶ್ರೀ ಹಾಗು ರಾಘವೇಂದ್ರ ರಾಜ್‌ಕುಮಾರ್ ನಟನೆಯ 'ನಂಜುಂಡಿ ಕಲ್ಯಾಣ' ಚಿತ್ರವು 1989ರಲ್ಲಿ ಬಿಡುಗಡೆಯಾಗಿ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನು ಬರೆದಿತ್ತು. ಈ ಮೂಲಕ ಕನ್ನಡಕ್ಕೆ ಮೊದಲು ಸುಧಾರಾಣಿ ನಾಯಕಿ ನಟಿಯಾಗಿ ಪದಾರ್ಪಣೆ ಮಾಡಿದ್ದಾರೆ. ಮೂರು ವರ್ಷದ ಬಳಿಕ ಮಾಲಾಶ್ರೀ ಯುಗ ಶುರುವಾಗಿದೆ. 

click me!