ಸ್ಯಾಂಡಲ್ವುಡ್ನ ನಟಿ ಅಮೂಲ್ಯ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ತಾವು ಗರ್ಭಿಣಿ ಎಂಬ ವಿಚಾರವನ್ನು ಅವರು ಇತ್ತೀಚೆಗೆ ಬಹಿರಂಗಪಡಿಸಿದ್ದರು. ಇದೀಗ ಅವರ ಸೀಮಂತ ಶಾಸ್ತ್ರ ನೆರವೇರಿದೆ.
ಸ್ಯಾಂಡಲ್ವುಡ್ನ (Sandalwood) ನಟಿ ಅಮೂಲ್ಯ (Amulya) ಸೀಮಂತ ಶಾಸ್ತ್ರ ಇಂದು ಅದ್ದೂರಿಯಾಗಿ ಜರುಗಿದೆ. ಅಮೂಲ್ಯ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇಂದು ಹಸಿರು ಥೀಮ್ನಲ್ಲಿ ಅದ್ದೂರಿಯಾಗಿ ಸೀಮಂತ ಶಾಸ್ತ್ರ ನಡೆದಿದೆ. ಸೀಮಂತದ ಫೋಟೋ ಅಭಿಮಾನಿಗಳ ವಲಯದಲ್ಲಿ ವೈರಲ್ (Viral) ಆಗುತ್ತಿದೆ. ಹಲವು ಗಣ್ಯರು ಇದರಲ್ಲಿ ಪಾಲ್ಗೊಂಡಿದ್ದರು. ಈ ಫೋಟೋದಲ್ಲಿ ಅಮೂಲ್ಯ ಕ್ಯೂಟ್ ಆಗಿ ಕಾಣುತ್ತಿದ್ದಾರೆ. ಫೋಟೋದಲ್ಲಿ ಅಮೂಲ್ಯ ಪತಿ ಜಗದೀಶ್ (Jagadish) ಮತ್ತು ಕುಟುಂಬಸ್ಥರು ಹಾಜರಿದ್ದು, ಹೂಗಳಿಂದ ಸಿಂಗಾರಗೊಂಡಿರುವ ವೇದಿಕೆ ಮೇಲೆ ಅಮೂಲ್ಯ ಕುಳಿತುಕೊಂಡಿದ್ದಾರೆ.
ಹೂಗಳಿಂದ ಗಿಳಿಗಳನ್ನು ಮಾಡಿದ್ದು, ಅಲಂಕಾರ ಸಖತ್ ಆಗಿದೆ. ಸದ್ಯ ಅಮೂಲ್ಯ ಅವರ ಸೀಮಂತ ಕಾರ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಸಖತ್ ವೈರಲ್ ಆಗುತ್ತಿದೆ. ಕಳೆದ ವಾರ ತುಂಬು ಗರ್ಭಿಣಿಯಾಗಿರುವ ಅಮೂಲ್ಯ ಬೇಬಿ ಬಂಪ್ ಫೋಟೋಶೂಟ್ (Baby Bump Photoshoot) ಮಾಡಿಸಿದ್ದರು. ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ (Instagram) ಹೃದಯದ ಎಮೋಜಿಯೊಂದಿಗೆ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಮೆಚ್ಚುಗೆ ಸೂಚಿಸಿ ಕಾಮೆಂಟ್ ಮಾಡಿದ್ದರು. ತಾವು ತಾಯಿಯಾಗುತ್ತಿರುವ ವಿಚಾರವನ್ನು ಸ್ವತಃ ಅಮೂಲ್ಯ ಅವರೇ ಈ ಹಿಂದೆ ತಿಳಿಸಿದ್ದರು.
ಪತಿ ಜಗದೀಶ್ ಜೊತೆ ಇರುವ ಒಂದು ವಿಶೇಷ ಫೋಟೋವನ್ನು ಹಂಚಿಕೊಂಡು ಸದ್ಯ ನಾವು ಈಗ ಇಬ್ಬರಲ್ಲ. 2022ರಲ್ಲಿ ಮೂವರಾಗುತ್ತಿದ್ದೇವೆ ಎಂದು ಬರೆದುಕೊಂಡಿದ್ದರು. ಬಾಲನಟಿಯಾಗಿಯೇ ಚಿತ್ರರಂಗಕ್ಕೆ ಕಾಲಿಟ್ಟ ಅಮೂಲ್ಯ ಅವರು 'ಚೆಲುವಿನ ಚಿತ್ತಾರ' ಸಿನಿಮಾ ಮೂಲಕ ಹೀರೋಯಿನ್ ಆಗಿ ಚಿರಪರಿಚಿತರಾದರು. ಗಣೇಶ್, ಯಶ್, ಲವ್ಲೀ ಸ್ಟಾರ್ ಪ್ರೇಮ್, ಕೃಷ್ಣ ಅಜಯ್ ರಾವ್, ದುನಿಯಾ ವಿಜಯ್ ಮುಂತಾದ ಸ್ಟಾರ್ ಕಲಾವಿದರಿಗೆ ಅವರು ಜೋಡಿಯಾಗಿ ನಟಿಸಿದರು. 'ನಾನು ನನ್ನ ಕನಸು' ಸಿನಿಮಾದಲ್ಲಿ ಬಹುಭಾಷಾ ಕಲಾವಿದ ಪ್ರಕಾಶ್ ರೈ ಜತೆ ತೆರೆಹಂಚಿಕೊಂಡು ಮೆಚ್ಚುಗೆ ಗಳಿಸಿದರು.
ಇತ್ತ ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ 2017ರಲ್ಲಿ ರಾಜಕೀಯ ಹಿನ್ನೆಲೆ ಇರುವ ಕುಟುಂಬದ ಜಗದೀಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದಿಚುಂಚುನಗಿರಿಯ (Adichunchanagiri) ಕಾಲಭೈರವೇಶ್ವರ ಸನ್ನಿಧಿಯಲ್ಲಿ ಮದುವೆ ಕಾರ್ಯಕ್ರಮ ನಡೆದಿತ್ತು. ಇಬ್ಬರೂ ಒಕ್ಕಲಿಗರಾಗಿದ್ದು, ಆ ಸಂಪ್ರದಾಯದಂತೆ, ಮದುವೆ ಅದ್ಧೂರಿಯಾಗಿ ನಡೆದಿತ್ತು. ಆದಿಚುಂಚನಗಿರಿ ಮಠಾಧೀಶರಾದ ನಿರ್ಮಲಾನಂದ ಸ್ವಾಮಿಗಳು (Nirmalanandanatha Swamiji) ನವ ಜೋಡಿಯನ್ನು ಆಶೀರ್ವಾದ ಮಾಡಿದ್ದರು. ಮದುವೆ ಆದ ನಂತರ ಅಮೂಲ್ಯ ಲೈಮ್ಲೈಟ್ನಿಂದ ಕೊಂಚ ದೂರ ಉಳಿದರು. ಮಾಸ್ತಿಗುಡಿ (Mastigudi) ಸಿನಿಮಾ ನಂತರ ಯಾವ ಪ್ರಾಜೆಕ್ಟ್ಗೂ ಸಹಿ ಮಾಡಿರಲಿಲ್ಲ.
ಸದ್ಯ ಅಮೂಲ್ಯ 7 ತಿಂಗಳ ಗರ್ಭಿಣಿಯಾಗಿದ್ದು, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಾತ್ರವಲ್ಲದೇ ಕನ್ನಡದ ಹಲವಾರು ಸಿನಿಮಾಗಳಲ್ಲಿ ಅಮೂಲ್ಯ ನಟಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಯಾವುದೇ ಹೊಸ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಕೆಲವೊಂದು ಸಂದರ್ಶನಗಳಲ್ಲಿ ಕಥೆ ಹುಡುಕುತ್ತಿರುವುದಾಗಿ ಹೇಳಿದ್ದರಷ್ಟೆ. ಈ ಮೂಲಕ ಅವರು ಸಂಸಾರದ ಕಡೆಗೆ ಅವರು ಹೆಚ್ಚು ಗಮನ ನೀಡಿದ್ದಾರೆ. ಈಗ ಅವರು ತಾಯಿ ಆಗುತ್ತಿರುವ ಸುದ್ದಿ ಕೇಳಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು, ಸಂಕ್ರಾಂತಿ ಹಬ್ಬದ ದಿನ ಗಂಗೆ ಮತ್ತು ದ್ರೌಪದಿ ಎಂಬ ಹೆಸರಿನ ಹೊಸ ಅತಿಥಿಗಳ ಆಗಮನವಾಗಿದೆ ಎಂದು ಹಸುಗಳಿಗೆ ಪೂಜೆ ಮಾಡುತ್ತಿರುವ ಫೋಟೊವನ್ನು ಅಮೂಲ್ಯ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು.