ಒಂದೇ ದಿನ, ಒಂದೇ ಬ್ಯಾಂಕ್, ಒತ್ತೆಯಾಳುಗಳು: ವಿಷ್ಣುವರ್ಧನ್‌ ಈ ಸಿನಿಮಾ ಹಿಂದಿದೆ ಥ್ರಿಲ್ಲರ್ ಕಥೆ!

Published : Sep 03, 2026, 08:30 PM IST
Vishnuvardhan Nishkarsha

ಸಾರಾಂಶ

ನಿಷ್ಕರ್ಷ ಕನ್ನಡ ಚಿತ್ರರಂಗದ ಮರೆಯಲಾಗದ ಕ್ಲಾಸಿಕ್ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದು. ಡಾ. ವಿಷ್ಣುವರ್ಧನ್, ಅನಂತ್ ನಾಗ್ ಹಾಗೂ ಬಿ.ಸಿ. ಪಾಟೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ 1993ರ ಸಿನಿಮಾವನ್ನು ಸುನೀಲ್ ಕುಮಾರ್ ದೇಸಾಯಿ ನಿರ್ದೇಶಿಸಿದ್ದಾರೆ.

‘ಸಾಹಸ ಸಿಂಹ’ ಡಾ. ವಿಷ್ಣುವರ್ಧನ್ ಅಭಿನಯದ ಸಿನಿಮಾಗಳ ಪೈಕಿ ಇಂದಿಗೂ ಪ್ರೇಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿರುವ ಚಿತ್ರ ‘ನಿಷ್ಕರ್ಷ’. 1993ರಲ್ಲಿ ತೆರೆಕಂಡ ಈ ಸಿನಿಮಾ ಅಂದಿನ ಕಾಲಕ್ಕೇ ವಿಭಿನ್ನ ನಿರೂಪಣೆ ಹಾಗೂ ಥ್ರಿಲ್ಲರ್ ಕಥಾಹಂದರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿತ್ತು. ಸಾಮಾನ್ಯ ಸಿನಿಮಾಗಳಿಗಿಂತ ಸಂಪೂರ್ಣ ಭಿನ್ನವಾಗಿ ಮೂಡಿಬಂದಿದ್ದ ಈ ಚಿತ್ರ, ಇಂದಿಗೂ ಕನ್ನಡದ ಕ್ಲಾಸಿಕ್ ಸಿನಿಮಾಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದೆ.

ಕನ್ನಡದಲ್ಲಿ ಥ್ರಿಲ್ಲರ್ ಸಿನಿಮಾಗಳಿಗೆ ಹೊಸ ಆಯಾಮ ನೀಡಿದ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ ‘ನಿಷ್ಕರ್ಷ’ ಚಿತ್ರವನ್ನು ನಿರ್ದೇಶಿಸಿದ್ದರು. ‘ತರ್ಕ’, ‘ಉತ್ಕರ್ಷ’, ‘ಸಂಘರ್ಷ’ ಸೇರಿದಂತೆ ವಿಭಿನ್ನ ಕಥಾಹಂದರದ ಸಿನಿಮಾಗಳನ್ನು ನೀಡಿದ್ದ ಅವರು, ‘ನಿಷ್ಕರ್ಷ’ ಮೂಲಕ ಮತ್ತೊಮ್ಮೆ ತಮ್ಮದೇ ಶೈಲಿಯ ನಿರೂಪಣೆಯನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದರು.

ಒಂದೇ ದಿನದಲ್ಲಿ ನಡೆಯುವ ಕಥೆ!

‘ನಿಷ್ಕರ್ಷ’ ಒಂದು ಮನಿ ಹೈಸ್ಟ್ ಥ್ರಿಲ್ಲರ್. ಸಿನಿಮಾದ ಸಂಪೂರ್ಣ ಕಥೆ ಒಂದೇ ದಿನದಲ್ಲಿ ನಡೆಯುವುದು ಚಿತ್ರದ ವಿಶೇಷತೆ. ಬೆಂಗಳೂರಿನ ಕೇಂದ್ರ ಭಾಗದಲ್ಲಿರುವ ಬ್ಯಾಂಕ್‌ವೊಂದಕ್ಕೆ ದರೋಡೆ ಮಾಡಲು ಬಂದ ಗ್ಯಾಂಗ್, ಅಲ್ಲಿನ ಸಿಬ್ಬಂದಿ ಹಾಗೂ ಗ್ರಾಹಕರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಳ್ಳುತ್ತದೆ. ಬಳಿಕ ಬ್ಯಾಂಕ್‌ನಿಂದ ತಪ್ಪಿಸಿಕೊಳ್ಳಲು ದರೋಡೆಕೋರರು ನಡೆಸುವ ಪ್ರಯತ್ನ ಹಾಗೂ ಅವರನ್ನು ಮಟ್ಟಹಾಕಲು ಪೊಲೀಸರು ಕೈಗೊಳ್ಳುವ ಕಾರ್ಯಾಚರಣೆಯ ಸುತ್ತ ಕಥೆ ಸಾಗುತ್ತದೆ.

ಈ ಸಂದರ್ಭದಲ್ಲಿ ಎಟಿಎಫ್ ಕಮಾಂಡೋ ಅಜಯ್ ಕುಮಾರ್ ಆಗಿ ಡಾ. ವಿಷ್ಣುವರ್ಧನ್ ಕಾಣಿಸಿಕೊಂಡಿದ್ದರು. ಬ್ಯಾಂಕ್‌ನೊಳಗೆ ಸಿಲುಕಿರುವ ಒತ್ತೆಯಾಳುಗಳನ್ನು ರಕ್ಷಿಸುವ ಜವಾಬ್ದಾರಿ ಅವರ ಮೇಲೆ ಬೀಳುತ್ತದೆ. ಕಮಾಂಡೋ ಅಜಯ್ ಕುಮಾರ್ ಹೇಗೆ ದರೋಡೆಕೋರರನ್ನು ಎದುರಿಸುತ್ತಾರೆ ಎಂಬುದೇ ಸಿನಿಮಾದ ಪ್ರಮುಖ ಹೈಲೈಟ್.

ವಿಷ್ಣುವರ್ಧನ್, ಅನಂತ್ ನಾಗ್‌ರಿಂದ ಹಿಡಿದು ಬಿ.ಸಿ. ಪಾಟೀಲ್‌ವರೆಗೆ!

‘ನಿಷ್ಕರ್ಷ’ ಸಿನಿಮಾದ ಮತ್ತೊಂದು ವಿಶೇಷತೆ ಅದರ ಬಹುತಾರಾಗಣ. ಡಾ. ವಿಷ್ಣುವರ್ಧನ್ ಕಮಾಂಡೋ ಪಾತ್ರದಲ್ಲಿ ಮಿಂಚಿದರೆ, ಅನಂತ್ ನಾಗ್ ಪೊಲೀಸ್ ಕಮೀಷನರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಶೇಷವೆಂದರೆ, ಪೊಲೀಸ್ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಬಿ.ಸಿ. ಪಾಟೀಲ್ ಅವರು ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಪ್ರಮುಖ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ಸುಮನ್ ನಗರ್ಕರ್, ರಮೇಶ್ ಭಟ್, ಪ್ರಕಾಶ್ ರಾಜ್, ಅವಿನಾಶ್, ಅಂಜನಾ, ಗುರುಕಿರಣ್, ಮನ್‌ದೀಪ್ ರಾಯ್, ಸಂಕೇತ್ ಕಾಶಿ ಹಾಗೂ ಅಭಿನಯ ಸೇರಿದಂತೆ ಹಲವು ಕಲಾವಿದರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಹಾಡುಗಳೇ ಇಲ್ಲದ ಸಿನಿಮಾ!

ಆ ಕಾಲದಲ್ಲಿ ಬಹುತೇಕ ಸಿನಿಮಾಗಳಲ್ಲಿ ಹಾಡುಗಳು ಇರಲೇಬೇಕು ಎಂಬುದು ಸಾಮಾನ್ಯವಾಗಿತ್ತು. ಆದರೆ ‘ನಿಷ್ಕರ್ಷ’ ಆ ನಿಯಮವನ್ನೇ ಮುರಿದಿತ್ತು. ಸಿನಿಮಾದಲ್ಲಿ ಒಂದೇ ಒಂದು ಹಾಡೂ ಇರಲಿಲ್ಲ. ಪ್ರೇಮಕಥೆ, ರೊಮ್ಯಾನ್ಸ್ ಅಥವಾ ಕುಟುಂಬದ ಸೆಂಟಿಮೆಂಟ್‌ನಂತಹ ಸಾಂಪ್ರದಾಯಿಕ ಅಂಶಗಳಿಗೂ ಇಲ್ಲಿ ಹೆಚ್ಚಿನ ಜಾಗ ಇರಲಿಲ್ಲ. ಚಿತ್ರದ ಕಥೆ, ವೇಗದ ನಿರೂಪಣೆ ಹಾಗೂ ಥ್ರಿಲ್ಲರ್ ಅಂಶಗಳೇ ಸಿನಿಮಾದ ಜೀವಾಳವಾಗಿದ್ದವು. ಹಾಡುಗಳ ಕೊರತೆಯನ್ನು ಸಂಗೀತ ನಿರ್ದೇಶಕ ಗುಣ ಸಿಂಗ್ ಅವರ ಹಿನ್ನೆಲೆ ಸಂಗೀತ ಸಮರ್ಥವಾಗಿ ತುಂಬಿತ್ತು. ಸಿನಿಮಾದ ಸಸ್ಪೆನ್ಸ್ ಹಾಗೂ ಟೆನ್ಶನ್ ಹೆಚ್ಚಿಸುವಲ್ಲಿ ಹಿನ್ನೆಲೆ ಸಂಗೀತ ಪ್ರಮುಖ ಪಾತ್ರ ವಹಿಸಿತ್ತು.

ಇಡೀ ಸಿನಿಮಾ ಬೆಂಗಳೂರಿನಲ್ಲೇ ಶೂಟಿಂಗ್!

‘ನಿಷ್ಕರ್ಷ’ ಸಿನಿಮಾದ ಬಹುತೇಕ ಸಂಪೂರ್ಣ ಚಿತ್ರೀಕರಣ ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಮಣಿಪಾಲ್ ಸೆಂಟರ್‌ನಲ್ಲಿ ನಡೆದಿತ್ತು ಎಂಬುದು ಮತ್ತೊಂದು ಕುತೂಹಲಕಾರಿ ಸಂಗತಿ. ಬ್ಯಾಂಕ್‌ನೊಳಗೆ ನಡೆಯುವ ಘಟನೆಗಳನ್ನೇ ಕೇಂದ್ರವಾಗಿಟ್ಟುಕೊಂಡಿದ್ದರಿಂದ, ಒಂದೇ ಪ್ರಮುಖ ಸ್ಥಳದಲ್ಲಿ ಇಡೀ ಕಥೆಯನ್ನು ಕಟ್ಟಿಕೊಡಲಾಗಿತ್ತು. ಚಿತ್ರವನ್ನು ಬಿ.ಸಿ. ಪಾಟೀಲ್ ಅವರೇ ನಿರ್ಮಿಸಿದ್ದರು ಎಂಬುದೂ ವಿಶೇಷ. ಸಿನಿಮಾ ಸುಮಾರು 100 ದಿನಗಳ ಕಾಲ ಪ್ರದರ್ಶನ ಕಂಡರೂ, ನಿರ್ಮಾಪಕರಿಗೆ ನಿರೀಕ್ಷಿತ ಮಟ್ಟದ ಲಾಭ ಸಿಗಲಿಲ್ಲ ಎಂಬ ಮಾತುಗಳು ಆ ಸಮಯದಲ್ಲಿ ಕೇಳಿಬಂದಿದ್ದವು.

ರಾಜ್ಯ ಪ್ರಶಸ್ತಿಯನ್ನೂ ಗೆದ್ದ ‘ನಿಷ್ಕರ್ಷ’

ವಿಭಿನ್ನ ಕಥೆ ಹಾಗೂ ತಾಂತ್ರಿಕ ನಿರೂಪಣೆಯಿಂದ ಗಮನ ಸೆಳೆದಿದ್ದ ‘ನಿಷ್ಕರ್ಷ’ 1993-94ನೇ ಸಾಲಿನ ರಾಜ್ಯ ಪ್ರಶಸ್ತಿಗಳಲ್ಲೂ ಮಿಂಚಿತ್ತು. ಅತ್ಯುತ್ತಮ ಸಿನಿಮಾ ಪ್ರಶಸ್ತಿಯ ಜೊತೆಗೆ ಅತ್ಯುತ್ತಮ ಚಿತ್ರಕಥೆ ಹಾಗೂ ಅತ್ಯುತ್ತಮ ಧ್ವನಿಗ್ರಹಣ ಪ್ರಶಸ್ತಿಗಳನ್ನೂ ಈ ಸಿನಿಮಾ ಪಡೆದುಕೊಂಡಿತ್ತು. ಇನ್ನು ‘ನಿಷ್ಕರ್ಷ’ ಸಿನಿಮಾವನ್ನು ಎಲ್.ಆರ್. ರಂಗನಾಥ್ ರಾವ್ ಅವರ ‘ಆ ಒಂಭತ್ತು ಗಂಟೆಗಳು’ ಕಾದಂಬರಿಯನ್ನು ಆಧರಿಸಿ ನಿರ್ಮಿಸಲಾಗಿದೆ ಎಂಬ ಮಾಹಿತಿಯೂ ಇದೆ.

ಒಟ್ಟಿನಲ್ಲಿ ‘ನಿಷ್ಕರ್ಷ’ ಇಂದಿಗೂ ತನ್ನ ವಿಭಿನ್ನತೆಯನ್ನು ಕಳೆದುಕೊಂಡಿಲ್ಲ. ವಿಷ್ಣುವರ್ಧನ್ ಅವರ ಆ್ಯಕ್ಷನ್, ಅನಂತ್ ನಾಗ್ ಅವರ ಪೊಲೀಸ್ ಪಾತ್ರ, ಬಿ.ಸಿ. ಪಾಟೀಲ್ ಅವರ ಖಳನಾಯಕನ ಪಾತ್ರ, ಹಾಡುಗಳಿಲ್ಲದ ನಿರೂಪಣೆ ಹಾಗೂ ಒಂದೇ ದಿನದಲ್ಲಿ ನಡೆಯುವ ರೋಚಕ ಕಥಾಹಂದರ, ಇವೆಲ್ಲವೂ ಸೇರಿ ‘ನಿಷ್ಕರ್ಷ’ ಅನ್ನು ಕನ್ನಡದ ಮರೆಯಲಾಗದ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದಾಗಿಸಿವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿಗ್‌ಬಾಸ್‌ ಇಂದ ಕಾಲ್‌ ಬಂದ್ರೂ ನಾನು ಹೋಗೋದಿಲ್ಲ, ಇದು ನನ್ನ ನಿರ್ಧಾರ ಎಂದ ಕನ್ನಡದ ನಟಿ
'ಬಿಗ್‌ ಬಾಸ್‌' ಖ್ಯಾತಿಯ ರಾಶಿಕಾ ಶೆಟ್ಟಿಯ ಹೊಸ ಅವತಾರ: ರವಿಚಂದ್ರನ್ ಜೊತೆ ‘ಪ್ಯಾರ್’ ಟೀಸರ್ ಸದ್ದು