ನನ್ನ ಸಿನಿಮಾಗೆ ಪುನೀತ್ ಸರ್ ಹಾಡಬೇಕಿತ್ತು: ವಿಕ್ರಮ್ ರವಿಚಂದ್ರನ್

By Suvarna NewsFirst Published Nov 7, 2021, 1:36 PM IST
Highlights

ಅಪ್ಪು ನಿಧನದ ಶಾಕ್‌ನಿಂದ ನಾನು ಹೊರಗೇ ಬಂದಿಲ್ಲ. ಅವರ ಆಶೀರ್ವಾದ ಯಾವತ್ತೂ ನಮ್ಮ ಮೇಲೆ ಇದೆ. ನನ್ನ ಸಿನಿಮಾಗೆ ಪುನೀತ್ ಸರ್ ಹಾಡಬೇಕಿತ್ತು. ಲಾಸ್ಟ್ ಟೈಮ್ ಅದರ ಬಗ್ಗೆ ಮಾತನಾಡಬೇಕಿತ್ತು, ಆದರೆ ಆಗಲಿಲ್ಲ. 

ಬೆಂಗಳೂರು (ನ.07): ನಟ ಪುನೀತ್ ರಾಜಕುಮಾರ್ (Puneeth Rajkumar) ಸಮಾಧಿಯ ದರ್ಶನ ಪಡೆದು, ಚಿತ್ರರಂಗದ ಹಲವರು ನಮನ ಸಲ್ಲಿಸುತ್ತಿದ್ದಾರೆ. ಇಂದು ಕ್ರೇಜಿಸ್ಟಾರ್ ರವಿಚಂದ್ರನ್ (Ravichaandran) ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ (Vikram Ravichandran) ಆಗಮಿಸಿ, ದರ್ಶನ ಪಡೆದು, ನಮನ ಸಲ್ಲಿಸಿದ್ದಾರೆ. ಈ ಬಗ್ಗೆ ವಿಕ್ರಮ್, ಅಪ್ಪು ನಿಧನದ ಶಾಕ್‌ನಿಂದ ನಾನು ಹೊರಗೇ ಬಂದಿಲ್ಲ. ಅವರ ಆಶೀರ್ವಾದ ಯಾವತ್ತೂ ನಮ್ಮ ಮೇಲೆ ಇದೆ. ನನ್ನ ಸಿನಿಮಾಗೆ ಪುನೀತ್ ಸರ್ ಹಾಡಬೇಕಿತ್ತು. ಲಾಸ್ಟ್ ಟೈಮ್ ಅದರ ಬಗ್ಗೆ ಮಾತನಾಡಬೇಕಿತ್ತು, ಆದರೆ ಆಗಲಿಲ್ಲ. ಶೀಘ್ರವೇ ಆ ಹಾಡು ಬಿಡುಗಡೆಯಾಗುತ್ತೆ. ಆದರೆ ಈಗ ಅವರು ಇಲ್ಲ ಅನ್ನೋದೆ ನನಗೆ ನಂಬುವುದಕ್ಕೆ ಆಗುತ್ತಿಲ್ಲ. 6 ತಿಂಗಳಾಗಿತ್ತು ಅಪ್ಪು ಸರ್ ಜೊತೆ ಮಾತನಾಡಿ ಹಾಗೂ ಅವರನ್ನು ಭೇಟಿ ಮಾಡಿ ತುಂಬಾ ವಿಚಾರ ಮಾತನಾಡಬೇಕಿತ್ತು. ಆದರೆ ಆಗಲಿಲ್ಲ, ಬೇಸರವಾಗುತ್ತಿದೆ ಎಂದು ವಿಕ್ರಮ್ ರವಿಚಂದ್ರನ್ ಕಂಬನಿ ಮಿಡಿದಿದ್ದಾರೆ.

ಕೊರಿಯೋಗ್ರಾಫರ್ ಇಮ್ರಾನ್ ಸರ್ದಾರಿಯಾ (Imran Sardhariya) ನಿನ್ನೆಯಷ್ಟೇ, ಅಭಿಮಾನಿಗಳ ಜೊತೆ ಕ್ಯೂನಲ್ಲಿಯೇ ಬಂದು ಅಪ್ಪು ಸಮಾಧಿ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿ, ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ. ಇವತ್ತಿಗೂ ಅವರು ಇಲ್ಲ ಎಂಬುದನ್ನು ನಾನು ಇವತ್ತಿಗೂ, ಎಂದಿಗೂ ಒಪ್ಪಲ್ಲ. ಏಕೆಂದರೆ ಅವರ ಜೊತೆ ನನ್ನ ಜರ್ನಿ ತುಂಬಾ ದೊಡ್ಡದಾಗಿದೆ. ಅವರೊಂದಿಗೆ ನನ್ನ ಒಡನಾಟ ಬಹಳ ದೊಡ್ಡದು ಎಂದು ನೆನೆದರು. ಅಪ್ಪು ಜೊತೆಗಿದ್ದ ಯಾರನ್ನದರೂ ಕೇಳಿ ಅವರು ಎಂದೂ ಯಾರನ್ನೂ ಭೇದ ಭಾವ ಮಾಡಿಲ್ಲ. ಯಾರನ್ನು ಕೂಡಾ ಕೀಳಾಗಿ ನೋಡಿಲ್ಲ. 

ಬೆಳಕು ಹೋದ್ಮೇಲೆ ರಾತ್ರಿ ಬರಬೇಕು ಎಂದಿದ್ದ ಅಪ್ಪು: ಭಾವುಕರಾದ ರಮೇಶ್‌ ಅರವಿಂದ್‌

ಅವರ ಬಗ್ಗೆ ಏನು ಹೇಳಬೇಕು ಎಂದೇ ತಿಳಿಯುತ್ತಿಲ್ಲ. ಅವರು ನಮ್ಮನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ. ಅವರು ನಮ್ಮೊಳಗೆ ಮತ್ತು ನಮ್ಮ ಜೊತೆಗೆ ಇದ್ದೇ ಇರುತ್ತಾರೆ ಎಂದು ಹೇಳಿದರು. ಅಪ್ಪು ಅವರ ನಿಧನ ಸುದ್ದಿ ಬರುವ ಒಂದು ವಾರದ ಮುನ್ನ ನಾನು ಗೋವಾದಲ್ಲಿ ಶೂಟಿಂಗ್‍ನಲ್ಲಿದ್ದೆ. ಆಗ ಅವರು ಗೋವಾದಿಂದ ಬಂದ ತಕ್ಷಣ ನನ್ನನ್ನು ಭೇಟಿ ಮಾಡು, ಹೊಸ ಪ್ರಾಜೆಕ್ಟ್ ಏನಾದರೂ ಪ್ಲ್ಯಾನ್ ಮಾಡೋಣ ಎಂದಿದ್ದರು. ಆದರೆ ನಾನು ಗೋವಾದಲ್ಲಿ ಇರುವಾಗಲೇ ಈ ಸುದ್ದಿ ಬಂತು. ಸುದ್ದಿ ತಿಳಿದ ತಕ್ಷಣ ನಾವು ಇಲ್ಲಿಗೆ ಬಂದೆವು. ಆದರೆ ಅವರು ಇಲ್ಲ ಎಂದು ನನಗೆ ಅನಿಸುತ್ತಿಲ್ಲ ಎಂದರು. ಪುನೀತ್ ಅವರ ಜೊತೆ ನಾನು ಸಾಕಷ್ಟು ಪ್ರಾಜೆಕ್ಟ್ ಮಾಡಿದ್ದೇನೆ. ಬಹಳ ಡೌನ್ ಟು ಅರ್ಥ್ ವ್ಯಕ್ತಿತ್ವ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಇಮ್ರಾನ್ ಸರ್ದಾರಿಯಾ ಭಾವುಕರಾಗಿ ತಿಳಿಸಿದ್ದರು.

ಪುನೀತ್‌ನನ್ನು ನಾನು ತುಂಬಾ ಮಿಸ್​ ಮಾಡಿಕೊಳ್ಳುತ್ತೇನೆ: ಭಾವುಕರಾದ ಜಯಪ್ರದಾ

ಪುನೀತ್‌ ರಾಜ್‌ಕುಮಾರ್‌  ಸಮಾಧಿ ದರ್ಶನಕ್ಕೆ ಅಭಿಮಾನಿಗಳ ದಂಡು ಹರಿದು ಬರುತ್ತಲೇ ಇದೆ. ಪುನೀತ್‌ ರಾಜ್‌ಕುಮಾರ್‌ ಅವರ ಸಮಾಧಿ ಬಳಿ ಮದುವೆಯಾಗಲು ನವಜೋಡಿ ಮುಂದಾಗಿದ್ದು ಅನುಮತಿ ಸಿಗದ ಪರಿಣಾಮ ಕಂಠೀರವ ಸ್ಟುಡಿಯೋ ಪಕ್ಕದಲ್ಲಿರುವ ದೇವಾಲಯವೊಂದರಲ್ಲಿ ವಿವಾಹವಾಗಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಕೂಡ ಬಂದು ಪುನೀತ್‌ಗೆ ನಮನ ಸಲ್ಲಿಸುತ್ತಿದ್ದಾರೆ. ಎಲ್ಲರೂ ಶಾಂತಿಯುತವಾಗಿ ಸಮಾಧಿ ದರ್ಶನ ಪಡೆಯಲು ಪೊಲೀಸರು ಸೂಕ್ತ ಭದ್ರತೆ ಕಲ್ಪಿಸಿದ್ದಾರೆ. ಇನ್ನು ಪುನೀತ್‌ ರಾಜ್‌ಕುಮಾರ್‌ಗೆ ಕರ್ನಾಟಕ ಚಿತ್ರ ಪ್ರದರ್ಶಕರ ಸಂಘ ಇಂದು ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಸಂಜೆ 6 ಗಂಟೆಗೆ ರಾಜ್ಯದ ಎಲ್ಲಾ ಚಿತ್ರಮಂದಿರಗಳ ಮುಂದೆ ದೀಪ ಬೆಳಗಿಸುವ ಮೂಲಕ ಅಗಲಿದ ಪುನೀತ್‌ಗೆ ಗೌರವ ನಮನ ಅರ್ಪಿಸಲಿದ್ದಾರೆ. ರಾಜ್ಯದ ಎಲ್ಲ ಚಿತ್ರಮಂದಿರಗಳು, ಪ್ರೇಕ್ಷಕರು, ಅಭಿಮಾನಿಗಳಿಂದ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. 

"

click me!