
ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಉಮೇಶ್ ಅವರು ಇನ್ನಿಲ್ಲ. ಇಂದು ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ಅಸು ನೀಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
1960ರಿಂದ ಅವರು ಚಿತ್ರರಂಗದಲ್ಲಿದ್ದರು. ‘ಮಕ್ಕಳ ರಾಜ್ಯ’ ಸಿನಿಮಾದಲ್ಲಿ ನಟಿಸಿದ ಅವರು ಆಮೇಲೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿದರು. 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಅವರು ಯುನಿಕ್ ಆದ ಡೈಲಾಗ್ ಡೆಲಿವರಿ ಮಾಡುತ್ತ, ಮುಖದ ಹಾವಭಾವ ನೀಡುತ್ತ, ಅದರಲ್ಲಿಯೂ ಅಜ್ಜಿ ಪಾತ್ರವನ್ನು ಚೆನ್ನಾಗಿ ನಿಭಾಯಿಸುತ್ತಿದ್ದರು. 1975ರಲ್ಲಿ ಕಥಾ ಸಂಗಮ ಎನ್ನುವ ಸಿನಿಮಾಕ್ಕೆ ಉತ್ತಮ ಪೋಷಕ ನಟ ಎಂಬ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದಿದ್ದರು.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಟ ಉಮೇಶ್ ಅವರು ಬಚ್ಚಲು ಮನೆಯಲ್ಲಿ ಕಾಲು ಜಾರಿ ಬಿದ್ದಿದ್ದರು, ಆಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಅವರಿಗೆ ಲಿವರ್ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಉಮೇಶ್ ಅವರಿಗೆ ಅಲ್ಲಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮೂಳೆಗೆ ಏಟಾಗಿದೆ ಎಂದು ಸರ್ಜರಿ ಮಾಡಲು ವೈದ್ಯರು ತಯಾರಿ ನಡೆಸಿದ್ದಾಗಲೇ, ಯಕೃತ್ತು (Liver) ನಲ್ಲಿ ಕ್ಯಾನ್ಸರ್ ಗಡ್ಡೆ ಇರೋದು ಗೊತ್ತಾಗಿ ಸರ್ಜರಿ ನಿಲ್ಲಿಸಿದ್ದರು. ಉಮೇಶ್ ಅವರಿಗೆ 80 ವರ್ಷ ವಯಸ್ಸಾಗಿದ್ದು, ಕ್ಯಾನ್ಸರ್ ಆಗಲೇ ನಾಲ್ಕನೇ ಹಂತಕ್ಕೆ ಹೋಗಿತ್ತು. ಬೆಂಗಳೂರಿನ ಜೆ ಪಿ ನಗರ ನಿವಾಸದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಅನೇಕರು ಅವರನ್ನು ಭೇಟಿ ಮಾಡಿದ್ದರು. ನಟಿ ಶ್ರುತಿ, ಗಿರಿಜಾ ಲೋಕೇಶ್ ಸೇರಿ ಸಾಕಷ್ಟು ಗಣ್ಯರು ಆಗಮಿಸಿದ್ದರು. ಕಳೆದ ಮೂರು ದಿನಗಳ ಹಿಂದೆ ಗಿರಿಜಾ ಅವರು ಹೋಗಿ, ಉಮೇಶ್ ಅವರಿಗೆ ನೀರು ಕುಡಿಸಿದ್ದರು. ಆಸ್ಪತ್ರೆ ಬೆಡ್ ಮೇಲೆ ಮಲಗಿದ್ದಾಗಲೂ ಕೂಡ ಉಮೇಶ್ ಅವರು ಹಾಸ್ಯ ಮಾಡೋದನ್ನು ಮರೆತಿರಲಿಲ್ಲ. ನಟಿ ಗಿರಿಜಾ ಲೋಕೇಶ್ ಅವರು ಭೇಟಿಯಾಗಲಿ ಬಂದಾಗ ಉಮೇಶ್ ಹಾಸ್ಯ ಮಾಡಿದ್ದಾರೆ.
ಗಿರಿಜಾ ಲೋಕೇಶ್ ಹಾಡನ್ನು ಹೇಳಿದಾಗ, ಉಮೇಶ್ ಅದಕ್ಕೆ ದನಿಗೊಟ್ಟು ಹಾಸ್ಯ ಮಾಡಿದ್ದಾರೆ. ಇದರ ವಿಡಿಯೋ ವೈರಲ್ ಆಗಿತ್ತು. ಇಂಥ ಪರಿಸ್ಥಿತಿಯಲ್ಲಿ ಕೂಡ ಹೀಗೆ ಹಾಡಿದರು, ಹಾಸ್ಯ ಮಾಡಿದರು, ಈ ವ್ಯಕ್ತಿಯ ಜೀವನೋತ್ಸಾಹ ಎಷ್ಟಿದ್ದರೂ ಹೀಗೆ ಆಯ್ತಲ್ಲ ಎಂದು ಬೇಸರ ಮಾಡಿಕೊಂಡಿದ್ದರು.
ವೈದ್ಯರು ನಡೆಸಿರುವ ಪರೀಕ್ಷೆ ಪ್ರಕಾರ ಲಿವರ್ನಲ್ಲಿ ಕ್ಯಾನ್ಸರ್ ಆಗಿದೆ, ಅದು ಬೇರೆ ಅಂಗಗಳಿಗೆ ಹರಡಿತ್ತು. ‘ಉಮೇಶ್ ನೋಡಲು ಆರೋಗ್ಯವಾಗಿ ಕಾಣಿಸಿದ್ದರು. ಆದರೆ, ಕ್ಯಾನ್ಸರ್ ಕಾಯಿಲೆ ಮೈಯೊಳಗಡೆ ಪ್ರವೇಶ ಮಾಡಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.