
‘ಪ್ರೇಕ್ಷಕರು ಅತ್ಯಂತ ಶ್ರೇಷ್ಠ ಸಿನಿಮಾ ಕೊಟ್ಟರೆ ಮಾತ್ರ ನೋಡುತ್ತೇವೆ ಅನ್ನುತ್ತಿದ್ದಾರೆ. ಉಳಿದ ಯಾವ ಸಿನಿಮಾಗಳಿಗೂ ಮನ್ನಣೆ ಸಿಗುತ್ತಿಲ್ಲ. ಇದೊಂಥರ ಒಳ್ಳೆಯದೇ. ಸಿನಿಮಾ ಮಂದಿಗೆ ಸವಾಲು ಒಡ್ಡುತ್ತಿದ್ದಾರೆ. ನಾವು ಅದಕ್ಕೆ ಹೊಂದಿಕೊಂಡು ಒಳ್ಳೆಯ ಸಿನಿಮಾಗಳನ್ನೇ ಕೊಡಬೇಕಿದೆ’. ಹೀಗೆ ಹೇಳಿದ್ದು ನಟ ರಮೇಶ್ ಅರವಿಂದ್. ಸೆ.10ರಂದು ಅವರ ಹುಟ್ಟುಹಬ್ಬ. ಆ ಸಂಭ್ರಮದಲ್ಲಿ ಅವರು ಮಾತನಾಡಿದರು.
ಕನ್ನಡ ಚಿತ್ರರಂಗದಲ್ಲಿ ಸದಾ ಹೊಸತನದತ್ತ ತುಡಿಯುವ ಒಬ್ಬ ಅಪರೂಪದ ವ್ಯಕ್ತಿ ರಮೇಶ್. ಯಾವುದಾದರೊಂದು ಪುಸ್ತಕ ಓದುತ್ತಲೇ ಇರುತ್ತಾರೆ. ಇತ್ತೀಚೆಗೆ ನೈಕಿ ಕತೆಯುಳ್ಳ ‘ಶೂ ಡಾಗ್’ ಓದಿ ಮುಗಿಸಿದ್ದೇನೆ ಎಂದರು. ಹೊಸ ಕಾಲವನ್ನು ಹೇಗೆ ಎದುರಿಸಬೇಕು ಎಂದರೆ, ‘ಹೊಸ ಕಾಲಕ್ಕೆ ಹೊಂದಿಕೊಳ್ಳಬೇಕು. ಈಗ ಎಐ ಬಂದಿದೆ. ಅದಕ್ಕೆ ಹೊಂದಿಕೊಳ್ಳುವುದು ಕಲಿಯದೇ ಹೋದರೆ ತುಳಿದು ಹಾಕಿ ಮುಂದಕ್ಕೆ ಹೋಗುತ್ತದೆ. ಫಿಟ್ ಆಗಿರುವವರೇ ಇಲ್ಲಿ ಉಳಿಯುವುದು’ ಎನ್ನುತ್ತಾರೆ.
ಸದ್ಯ ಅವರು ಅವರ ನಟನೆಯ 106ನೇ ಸಿನಿಮಾ ‘ದೈಜಿ’ ಪೋಸ್ಟರ್ ಬಿಡುಗಡೆ ಆಗಿದೆ. ‘ಇದೊಂದು ಯುಕೆಯಲ್ಲಿ ನಡೆಯುವ ಕತೆ. ಭಾರತೀಯ ದೆವ್ವಗಳ ಕತೆ ನೋಡಿರುತ್ತೀರಿ, ಈ ಚಿತ್ರದಲ್ಲಿ ಇಂಗ್ಲಿಷ್ ದೆವ್ವ ನೋಡುತ್ತೀರಿ. ಬಹಳ ಇಂಟರೆಸ್ಟಿಂಗ್ ಕತೆ. ನಿರ್ಮಾಪಕರಾದ ರವಿ ಕಶ್ಯಪ್ ಅವರ ಬದುಕಿನ ಕತೆ ಇಟ್ಟುಕೊಂಡು ರಚಿಸಿದ ಕತೆ’ ಎನ್ನುತ್ತಾರೆ. ಈ ಚಿತ್ರವನ್ನು ಆಕಾಶ್ ಶ್ರೀವತ್ಸ ನಿರ್ದೇಶಿಸಿದ್ದಾರೆ.
‘ಇನ್ನೊಂದು ವಿಖ್ಯಾತ್ ನಿರ್ದೇಶನದ ‘ಯುವರ್ ಸಿನ್ಸಿಯರ್ಲೀ ರಾಮ್’ ಚಿತ್ರಕ್ಕಾಗಿ ವಿವಿಧ ಕಡೆಗಳಲ್ಲಿ ಚಿತ್ರೀಕರಣ ನಡೆಯುತ್ತಿದೆ. ಒಂಥರ ಭಾರತ ದರ್ಶನ ಮಾಡುತ್ತಿದ್ದೇವೆ. ಪ್ರತೀ ಫ್ರೇಮ್ ಕೂಡ ಸುಂದರವಾಗಿ ಮೂಡಿಬರುತ್ತಿದೆ’ ಎನ್ನುವ ರಮೇಶ್ ಮತ್ತೊಂದು ಮಹತ್ವದ ಯೋಜನೆ ಹಾಕಿಕೊಂಡಿದ್ದಾರೆ. ಅದರ ಬಗ್ಗೆ ಒಂಚೂರು ಹೇಳಿ, ಕುತೂಹಲ ಮೂಡಿಸಿದರು.
‘ನನಗೆ ವಿಜ್ಞಾನ ಎಂದರೆ ಬಹಳ ಇಷ್ಟ. ಹಾಗಾಗಿ ಮಕ್ಕಳಿಗೆ ಯೂನಿವರ್ಸ್ ತೋರಿಸುವ ಒಂದು ವಿನೂತನ ಯೋಜನೆಗೆ ಹಾಕಿದ್ದೇನೆ. ತೆರೆಯ ಮೂಲಕ ಮಕ್ಕಳಿಗೆ ವಿಭಿನ್ನ ಲೋಕ ತೋರಿಸಲಿದ್ದೇವೆ. ಅದರ ವಿವರಗಳು ಸದ್ಯದಲ್ಲೇ ಕೊಡುತ್ತೇವೆ’ ಎಂದು ಮಾತು ಮುಗಿಸಿದರು. ಚಿರ ಯುವಕನಿಗೆ ಹುಟ್ಟುಹಬ್ಬದ ಶುಭಾಶಯಗಳು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.