ನಾವೆಲ್ಲಾ ಶಾರದೆಯ ಮಕ್ಕಳು: ಸ್ಯಾಂಡಲ್‌ವುಡ್ ಒಗ್ಗಟ್ಟಿಗೆ ಕರೆ ನೀಡಿದ ಜಗ್ಗೇಶ್

By Suvarna NewsFirst Published Nov 3, 2021, 7:19 PM IST
Highlights

ಈ ಭಾವ ನನ್ನ ಕಣ್ಣಲ್ಲಿ ಆನಂದಭಾಷ್ಪ ತರಿಸಿತು. ಮಾನ್ಯರೆ ನಾವೆಲ್ಲಾ ಶಾರದೆಯ ಮಕ್ಕಳು ಚಿತ್ರರಂಗ ನಮ್ಮ ಮನೆ. ಕನ್ನಡಿಗರು ನಮ್ಮ ಬಂಧುಗಳು. ನಮ್ಮ ಈ ಒಗ್ಗಟ್ಟು ರಾಜಣ್ಣನ ಕಾಲದಲ್ಲಿ ಇತ್ತು. ಮತ್ತೆ ಬರೋದಿಲ್ಲವೆ ಎಂಬ ಕೊರಗು ಕಾಡುತ್ತಿತ್ತು. ಈಗ ಇದನ್ನ ನೋಡಿ ಹಾಲುಜೇನು ಸವಿದಂತೆ ಆಯಿತು. 

ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Rajkumar) ಬಾರದ ಲೋಕಕ್ಕೆ ಪಯಣಿಸಿರುವುದು ಎಲ್ಲರನ್ನೂ ಆಘಾತಕ್ಕೆ ದೂಡಿದೆ. ನಂಬಲಾಗದ ಸತ್ಯವನ್ನು ಅರಗಿಸಿಕೊಳ್ಳಲು ಚಿತ್ರರಂಗದವರು, ಅಭಿಮಾನಿಗಳು ಕಷ್ಟಪಡುತ್ತಿದ್ದಾರೆ. ಕರುನಾಡಿನ ಜನ  ಇದುವರೆಗೂ ಸಹ ಈ ಕಹಿ ಸತ್ಯವನ್ನು ಸ್ವೀಕರಿಸಲು ಸಾಧ್ಯವಾಗದೇ ಕಣ್ಣೀರಿಡುತ್ತಿದ್ದಾರೆ. ಚಿತ್ರರಂಗದ ತಾರೆಯರು ಕೂಡ ಪುನೀತ್‌ರನ್ನು ನೆನೆದು ಭಾವುಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಈ ನಡುವೆ ಹಿರಿಯ ನಟ, ನವರಸ ನಾಯಕ ಜಗ್ಗೇಶ್ (Jaggesh) ಅವರು ಇಡೀ ಸ್ಯಾಂಡಲ್‌ವುಡ್ (Sandalwood) ಒಗ್ಗಟ್ಟಿಗೆ ಕರೆ ನೀಡಿದ್ದಾರೆ.  ಹೌದು! ಸ್ಯಾಂಡಲ್‌ವುಡ್‌ನ ಪ್ರಮುಖ ನಟರ ಭಾವಚಿತ್ರಗಳು ಒಟ್ಟಿಗೆ ಇರುವ ಫೋಟೊವೊಂದು ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಹಂಚಿಕೊಂಡಿದ್ದು, ಇದೀಗ ಎಲ್ಲೆಡೆ ವೈರಲ್‌ ಆಗಿದೆ. ಯುನೈಟೆಡ್‌ ಕೆಎಫ್‌ಐ ಕನ್ನಡ ಚಿತ್ರರಂಗ (United KFI), ಯುನೈಟೆಡ್‌ ಕೆಎಫ್‌ಐ ಫ್ಯಾನ್ಸ್‌ ( UnitedKFIfans) ಎಂಬ ಸಾಲುಗಳು ಆ ಫೋಟೊದಲ್ಲಿದ್ದು, ನಾವೆಲ್ಲರೂ ಒಗ್ಗಟ್ಟಾಗಿರೋಣ ಎಂಬ ಸಂದೇಶವನ್ನು ಬಿಂಬಿಸುತ್ತಿದೆ. 

ನಂಬರ್ 17 ರಂದು ಜನಿಸಿದವರು ಸತ್ತ ಮೇಲೆ ಬದುಕುತ್ತಾರೆ: ಜಗ್ಗೇಶ್ ವಿಡಿಯೋ ವೈರಲ್

ಜೊತೆಗೆ 'ಈ ಭಾವ ನನ್ನ ಕಣ್ಣಲ್ಲಿ ಆನಂದಭಾಷ್ಪ ತರಿಸಿತು. ಮಾನ್ಯರೆ ನಾವೆಲ್ಲಾ ಶಾರದೆಯ ಮಕ್ಕಳು ಚಿತ್ರರಂಗ ನಮ್ಮ ಮನೆ. ಕನ್ನಡಿಗರು ನಮ್ಮ ಬಂಧುಗಳು. ನಮ್ಮ ಈ ಒಗ್ಗಟ್ಟು ರಾಜಣ್ಣನ ಕಾಲದಲ್ಲಿ ಇತ್ತು. ಮತ್ತೆ ಬರೋದಿಲ್ಲವೆ ಎಂಬ ಕೊರಗು ಕಾಡುತ್ತಿತ್ತು. ಈಗ ಇದನ್ನ ನೋಡಿ ಹಾಲುಜೇನು ಸವಿದಂತೆ ಆಯಿತು. ಈ ಒಗ್ಗಟ್ಟಿನ ಮಂತ್ರ ಯಾವ ಅಡೆತಡೆ ಇಲ್ಲದೆ ಮುಂದುವರಿಯಲಿ. ಲವ್‌ ಆಲ್‌' ಎಂಬ ಸಂದೇಶ ರವಾನಿಸಿದ್ದಾರೆ. ಹಾಗೂ ಕೂಡಿ ಬಾಳಿದರೆ ಸ್ವರ್ಗ. ನಗುತ್ತ ಕೂಡಿದರೆ ನಂದನವನ. ದ್ವೇಷ ಮರೆತು ಹೆಜ್ಜೆಹಾಕಿದರೆ ಮನಸ್ಸು ಮಾನಸಸರೋವರ. ಒಬ್ಬರಿಗೊಬ್ಬರು ಕೈ ಹಿಡಿದು ನಡೆದರೆ ಕೈಲಾಸ ಪ್ರಾಪ್ತಿ. ನಾಲ್ಕು ದಿನದ ಬಾಳಿಗೆ ನಗು ಆಯ್ಕೆ ಮಾಡಿ. ದ್ವೇಷ ಅಸೂಹೆ ದೂರತಳ್ಳಿ! ಎಂಬ ಆಶಯವನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ.
 


ಇನ್ನು ನಟ ಜಗ್ಗೇಶ್, ಪುನೀತ್ ರಾಜ್‌ ಕುಮಾರ್ ನಿಧನದ ಸುದ್ದಿ ತಿಳಿದಾಗಿನಿಂದಲೂ ಸಾಮಾಜಿಕ ಜಾಲತಾಣ (Social Media) ಖಾತೆಯಲ್ಲಿ ಅವರ ಒಡನಾಟವನ್ನು ನೆನೆದು ಹಲವಾರು ಪೋಸ್ಟ್‌ಗಳನ್ನು ಮಾಡಿದ್ದಾರೆ. '30ವರ್ಷದ ಒಡನಾಟ ಹೇಗೆ ಮರೆಯಲಿ ಬಂಧುವೆ, ಅಪ್ಪ ನನ್ನನ್ನು ನಿನಗೆ ಪರಿಚಯಿಸಿದಾಗ ನಿನ್ನ ಆಶ್ಚರ್ಯದ ಮುದ್ದು ಮುಖ ಹೇಗೆ ಮರೆಯಲಿ, ನನ್ನ ಚಿತ್ರಗಳ ನೋಡಿ ಸಂಭ್ರಮಿಸಿ ನನಗೆ ಕರೆಮಾಡಿ ಹರಸುತ್ತಿದ್ದ ನಿನ್ನ ಗುಣ ಹೇಗೆ ಮರೆಯಲಿ, ನನ್ನ ಗ್ರಾಮದ ಭೈರವನ ನೋಡಲು ಬಂದು ನನ್ನ ಗ್ರಾಮೀಣ ಹಿನ್ನೆಲೆ ಬದುಕಿನ ಅನುಭವ ಕೇಳಿ ಮರುಗಿದ್ದು ಹೇಗೆ ಮರೆಯಲಿ, ನನ್ನ ಜೊತೆ ಮಂತ್ರಾಲಯಕ್ಕೆ ಬಂದು ಸಾಮಾನ್ಯನಂತೆ ರಸ್ತೆ ಬದಿಯ ಚಹಾದ ಅಂಗಡಿ ಮುಂದಿನ ಆನಂದಮಯ ಕ್ಷಣದ ದಿನ ಹೇಗೆ ಮರೆಯಲಿ. 

ಪುನೀತ್‌ಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಜಗ್ಗೇಶ್‌ ಆಗ್ರಹ

ಆನಂದರಾಮ ನನಗಾಗಿ ನಿರ್ದೇಶನ ಮಾಡುವ ಚಿತ್ರದ ಕಥೆ ಕೇಳಿ ನೀನು ನಗುತ್ತಿದ್ದ ಆ ನಗು ಮುಖ ಹೇಗೆ ಮರೆಯಲಿ, ಮಗ ಗುರುರಾಜನ ಚಿತ್ರಕ್ಕೆ ಶುಭ ಹಾರೈಸಿ ಮಗನಿಗೆ ಭುಜ ತಟ್ಟಿದ ದಿನ ಹೇಗೆ ಮರೆಯಲಿ, ನಿನ್ನ ತಂದೆಯ ಧ್ವನಿ ಅನುಕರಣೆ ಮಾಡಿದಾಗ ನೀ ಮಗುವಂತೆ ನಗುತ್ತಿದ್ದ ಆ ಮುದ್ದು ಮುಖ ಹೇಗೆ ಮರೆಯಲಿ, ಕೇವಲ ವಾರದ ಹಿಂದೆ ಅಣ್ಣ ಮಲ್ಲೇಶ್ವರಕ್ಕೆ ಬಂದಿರುವೆ ಬನ್ನಿ ಎಂದು ಕರೆದು ನನ್ನ ನಿನ್ನ ಬದುಕಿನ ಕಡೆಯ ಭೇಟಿ ಹೇಗೆ ಮರೆಯಲಿ. ಪ್ರೀತಿಯ ಆತ್ಮವೆ ಹೋಗಿ ಬಾ ಎಂದು ಹೇಳಲು ನನಗೆ ಮನಸ್ಸು ಒಪ್ಪುತ್ತಿಲ್ಲ, ನನ್ನ ಕಡೆ ಉಸಿರಿನವರೆಗು ನಿನ್ನ ನೆನಪು ಒಡನಾಟ ನನ್ನಮನದಲ್ಲಿ ಉಳಿಸಿಕೊಳ್ಳುವೆ. ನಿನ್ನ ಆತ್ಮ ಎಲ್ಲೆ ಇರಲಿ ಶಾಂತಿಯಿಂದ ಉಳಿಯಲಿ I love you ಚಿನ್ನ' ಎಂದು ಜಗ್ಗೇಶ್ ಭಾವನಾತ್ಮಕವಾಗಿ ನೋವನ್ನು ವ್ಯಕ್ತಪಡಿಸಿದ್ದರು.

click me!