‘ಅಂಡು ಬಗ್ಗಿಸಿ...’ ಹೇಳಿಕೆ ವಿವಾದ: ಮೆತ್ತಗಾದ ದರ್ಶನ್‌!

By Suvarna NewsFirst Published Feb 6, 2020, 9:41 AM IST
Highlights

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಹೇಳಿಕೆಯಿದು. ಈ ಮೂಲಕ ಮಂಗಳವಾರ ಭುಗಿಲೆದ್ದಿದ್ದ ‘ಅಂಡು ಬಗ್ಗಿಸಿಕೊಂಡು ಕನ್ನಡ ಸಿನಿಮಾ ನೋಡ್ರಯ್ಯಾ’ ಎಂಬ ತಮ್ಮ ಹೇಳಿಕೆಗೆ ದರ್ಶನ್‌ ಪರೋಕ್ಷವಾಗಿ ಕ್ಷಮೆ ಕೋರಿದ್ದಾರೆ.

ಬೆಂಗಳೂರಿನ ಕಲಾವಿದರ ಸಂಘದಲ್ಲಿ ಆಯೋಜಿಸಲಾಗಿದ್ದ ‘ಮೌನಂ’ ಚಿತ್ರದ ಆಡಿಯೋ ಬಿಡುಗಡೆಗೆ ದರ್ಶನ್‌ ಆಗಮಿಸಿದ್ದರು. ಈ ವೇಳೆ ತಮ್ಮ ಮಾತಿನ ಆರಂಭದಲ್ಲೇ ‘ನಾನು ಮೊನ್ನೆ ಚಿತ್ರದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದಂತೆ ಇಲ್ಲೂ ಮಾತನಾಡಲ್ಲ. ದಯವಿಟ್ಟು ತಪ್ಪು ತಿಳಿಯಬೇಡಿ’ ಎಂದು ಹೇಳಿಕೆ ನೀಡುವುದರ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

'ಜಂಟಲ್‌ಮನ್' ಟ್ರೈಲರ್‌ ರಿಲೀಸ್‌ನಲ್ಲಿ ಕನ್ನಡಿಗರಿಗೆ ವಾರ್ನಿಂಗ್ ಕೊಟ್ಟ ಡಿ-ಬಾಸ್!

ಪ್ರಜ್ವಲ್‌ ದೇವರಾಜ್‌ ನಟನೆಯ ‘ಜಂಟಲ್‌ಮನ್‌’ ಚಿತ್ರದ ಪ್ರೀ ರಿಲೀಸ್‌ ಕಾರ್ಯಕ್ರಮದಲ್ಲಿ ಸಂಚಾರಿ ವಿಜಯ್‌ ಅವರ ‘ನಾನು ಅವನಲ್ಲ, ಅವಳು’ ಚಿತ್ರವನ್ನು ಮೆಚ್ಚಿ ಮಾತನಾಡುತ್ತಾ, ‘ಪರಭಾಷೆಯ ಚಿತ್ರಗಳನ್ನು ನೋಡಿ, ಪರಭಾಷೆಯ ನಟರಿಗೆ ಮಾತ್ರ ಬೆನ್ನು ತಟ್ಟೋದಲ್ಲ. ನಮ್ಮಲ್ಲೂ ಅಂಥ ಚಿತ್ರಗಳು ಬಂದಾಗ ಅಂಡು ಬಗ್ಗಿಸಿಕೊಂಡು ನೋಡ್ರಯ್ಯ’ ಎಂದಿದ್ದರು ದರ್ಶನ್‌.

ದರ್ಶನ್‌ ಅವರ ಈ ಹೇಳಿಕೆಗೆ ಪರ- ವಿರೋಧದ ಮಾತುಗಳು ಕೇಳಿ ಬಂದಿದ್ದವು. ಆದರೆ ಆರಂಭದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ಕೊಡದ ದರ್ಶನ್‌ ‘ಮೌನಂ’ ಚಿತ್ರದ ಆಡಿಯೋ ಬಿಡುಗಡೆಗೆ ಆಗಮಿಸಿ ಕ್ಷಮೆ ಕೋರುವ ರೀತಿಯಲ್ಲಿ ಮಾತನಾಡಿದ್ದು ಅವರು ಈ ವಿವಾದದ ಬಗ್ಗೆ ಮೆತ್ತಗಾದದ್ದನ್ನು ಸೂಚಿಸುವಂತಿತ್ತು. ಸೋಷಿಯಲ್ ಮೀಡಿಯಾದಲ್ಲಂತೂ ನೋಡುವಂಥ ಚಿತ್ರಗಳನ್ನು ಮಾಡಿದರೆ ಖಂಡಿತಾ ನೋಡುತ್ತೇವೆ ಎನ್ನುವ ಮೂಲಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ದರ್ಶನ್ ತಮ್ಮ ಮಾತನ್ನು ಹಿಂಪಡೆದಿದ್ದಾರೆ.

ಅಷ್ಟನ್ನು ಹೇಳಿ ತಮ್ಮ ಹಿಂದಿನ ಹೇಳಿಕೆ ಹಾಗೂ ಬೇರೆ ವಿಚಾರಗಳ ಪ್ರಸ್ತಾಪ ಮಾಡದೇ ಹಿರಿಯ ನಟ ಅವಿನಾಶ್‌ ಮತ್ತು ‘ಮೌನಂ’ ಚಿತ್ರದ ಬಗ್ಗೆಯಷ್ಟೇ ಮಾತನಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿ ಕಾರ್ಯಕ್ರಮದಿಂದ ತೆರಳಿದರು.

ಅಷ್ಟಕ್ಕೂ ಕನ್ನಡ ಚಿತ್ರಗಳನ್ನು ನೋಡಿದರೆ ಕನ್ನಡಿಗರಿಗೇ ಲಾಭವಲ್ಲವೇ?
ಕನ್ನಡ ಸಾಹಿತಿಗಳು, ಬರಹಗಾರರು..ಹೀಗೆ ಎಲ್ಲರೂ ಕನ್ನಡ ಉಳಿಸಿ, ಬೆಳೆಸಲು ಕನ್ನಡ ಮಾತನಾಡಿ, ಕನ್ನಡ ಪುಸ್ತಕಗಳನ್ನು ಓದಿ ಎಂದು ಕರೆ ನೀಡುತ್ತಲೇ ಇರುತ್ತಾರೆ. ಅದೇ ರೀತಿ ದರ್ಶನ್ ಸಹ ಕನ್ನಡ ಚಿತ್ರ ನೋಡುವಂತೆ ಕರೆ ನೀಡಿದ್ದು, ಅದರಲ್ಲಿ ತಪ್ಪೇನಿದೆ ಎಂದು ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಫೆಸ್‌ಬುಕ್‌ನಲ್ಲಿ ಈ ಬಗ್ಗೆ ಸ್ಟೇಟಸ್ ಹಾಕಿದ್ದಾರೆ. 

 

 

 

click me!