ಲೇ ನನ್ಮಗನೇ ಬೀದಿಲೇ ಮುಗಿಸಬೇಡ, ಮನೆಗೆ ಬಾರೋ ಅಂತಿದ್ರು ದ್ವಾರಕೀಶ್: ನಟ ದೊಡ್ಡಣ್ಣ

By Sathish Kumar KHFirst Published Apr 16, 2024, 1:01 PM IST
Highlights

ದ್ವಾರಕೀಶ್ ಅಣ್ಣ ಅವರಿಗೆ ನಾವೆಲ್ಲಾದರೂ ಸಿಕ್ಕಿದರೆ 'ಲೇ ನನ್ಮಗನೇ ಬರೀ ಬೀದಿಯಲ್ಲೇ ಮಾತನಾಡಬೇಡ.. ಮನೆಗೆ ಬಾರೋ.. ಎಂದು ಆತ್ಮೀಯವಾಗಿ ಕರೆಯುತ್ತಿದ್ದರು' ಎಂದು ಹಿರಿಯ ನಟ ದೊಡ್ಡಣ್ಣ ತಮ್ಮ ಒಡನಾಟ ಹಂಚಿಕೊಂಡಿದ್ದಾರೆ.

ಬೆಂಗಳೂರು (ಏ.16): ದ್ವಾರಕೀಶ್ ಅವರು ಮಹಾನ್ ಅತ್ಯಂತ ಪ್ರಚಂಡ ವ್ಯಕ್ತಿತ್ವ ಅವರದ್ದಾಗಿದೆ. ಈಗವರು ನಮ್ಮಿಂದ ದೂರಾಗಿದ್ದಾರೆ ಎನ್ನುವುದೇ ದುಃಖದ ಸಂಗತಿ. ನಮ್ಮ ಒಡನಾಟ ಹೇಗಿತ್ತೆಂದರೆ ದ್ವಾರಕೀಶ್ ಅಣ್ಣ ಅವರಿಗೆ ನಾವೆಲ್ಲಾದರೂ ಸಿಕ್ಕಿದರೆ ಲೇ ನನ್ಮಗನೇ ಬರೀ ಬೀದಿಯಲ್ಲೇ ಮಾತನಾಡಬೇಡ.. ಮನೆಗೆ ಬಾರೋ.. ಎಂದು ಆತ್ಮೀಯವಾಗಿ, ಪ್ರೀತಿಯಿಂದ ಕರೆಯುತ್ತಿದ್ದರು ಎಂದು ಹಿರಿಯ ನಟ ದೊಡ್ಡಣ್ಣ ತಮ್ಮ ಒಡನಾಟವನ್ನು ಹಂಚಿಕೊಂಡಿದ್ದಾರೆ.

ದ್ವಾರಕೀಶ್ ಅವರ ಅಗಲಿಕೆ ನಂತರ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಅವರು, ದ್ವಾರಕೀಶ್ ಅವರು ಮಹಾನ್ ಅತ್ಯಂತ ಪ್ರಚಂಡ ವ್ಯಕ್ತಿತ್ವ ಅವರದ್ದಾಗಿದೆ. ಸಿದ್ದಲಿಂಗಯ್ಯ, ಭಾರ್ಗವ ಸೇರಿದಂತೆ ಅನೇಕ ಹೊಸಬರನ್ನು ಸಿನಿಮಾ ಕ್ಷೇತ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಸಮುದ್ರದಲ್ಲಿನ ಏರಿಳಿತದಂತೆಯೇ ದ್ವಾರಕೀಶ್ ಅವರು ಕೂಡ ಜೀವನದಲ್ಲಿ ಮತ್ತಿ ಚಿತ್ರರಂಗದಲ್ಲಿ ಅನೇಕ ಏರಿಳಿತಗಳನ್ನು ಕಂಡವರಾಗಿದ್ದಾರೆ. ಅಷ್ಟಾಗಿಯೂ ಹೊಸ ಪ್ರಯತ್ನಗಳನ್ನು ಕೈಗೊಳ್ಳುವುದನ್ನು ಬಿಡಲಿಲ್ಲ ಎಂದು ಹೇಳಿದರು.

Breaking: ಕಳ್ಳ ಕುಳ್ಳ ಖ್ಯಾತಿಯ ಕನ್ನಡ ನಟ ದ್ವಾರಕೀಶ್ ನಿಧನ

ದ್ವಾರಕೀಶ್ ಅವರಿಗೆ ನಾವು ಎಲ್ಲಾದರೂ ಸಿಕ್ಕಿದರೆ ಬರೀ ಬೀದಿಯಲ್ಲೇ ಮಾತನಾಡಬೇಡ ನನ್ಮಗನೇ ಮನೆಗೆ ಬಾರೋ ಎಂದು ಆತ್ಮೀಯವಾಗಿ, ಪ್ರೀತಿಯಿಂದ ಕರೆಯುತ್ತಿದ್ದರು. ಈ ವರ್ಷ ಸಿನಿಮಾ ಕ್ಷೇತ್ರಕ್ಕೆ ತುಂಬಾ ಕೆಟ್ಟದ್ದು ಎನಿಸುತ್ತಿದೆ. 3 ತಿಂಗಳ ಹಿಂದೆ ನಟಿ ಲೀಲಕ್ಕ ಅವರನ್ನು ಕಳೆದುಕೊಂಡಿದ್ದೇವೆ. ನಿನ್ನ-ಮೊನ್ನೆ ನಿರ್ಮಾಪಕ ಸೌಂದರ್ಯ ಜಗದೀಶ್ ಅವರನ್ನು ಕಳೆದುಕೊಂಡಿದ್ದೇವೆ. ಈಗ ದ್ವಾರಕೀಶ್ ಅವರನ್ನು ಕಳೆದುಕೊಂಡು ಸಿನಿಮಾ ಕ್ಷೇತ್ರ ಬಡವಾಗುತ್ತಿದೆ. ದ್ವಾರಕೀಶ್ ಅವರನ್ನು ಕಳೆದುಕೊಂಡು ದೊಡ್ಡ ಆಘಾತವೇ ಉಂಟಾಗಿದೆ ಎಂದರು.

ಮುದ್ದಿನ ಮಾವ ಸಿನಿಮಾದಲ್ಲಿ ಅವರೊಂದಿಗೆ ಕಳೆದ ಕ್ಷಣಗಳು ಎಂದಿಗೂ ಮರೆಯಲಾಗುವುದಿಲ್ಲ. ಎಷ್ಟು ಜನ್ಮದ ಪುಣ್ಯವೋ ಏನೋ ಎಂಬಂತೆ ಅವರೊಂದಿಗೆ ಕೆಲಸ ಮಾಡಿದ್ದೇನೆ. ಕೆಲವೊಮ್ಮೆ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 3 ಗಂಟೆಬವರೆಗೂ ನಾವು ಕೆಲಸ ಮಾಡಿದ್ದೇವೆ. ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಒಂದೇ ಕುಟುಂಬವಾಗಿ ಇದ್ದೆವು. ಜೀವನದಲ್ಲಿ 46 ವರ್ಷ ಚಿತ್ರರಂಗದಲ್ಲಿ ಕಳೆದಿದ್ದು ಗೊತ್ತೇ ಆಗಲಿಲ್ಲ. ನಾನು ದ್ವಾರಕೀಶ್ ಅವರ ನಿರ್ದೇಶನದಲ್ಲಿ ಒಂದು ಚಿತ್ರವನ್ನೂ ಮಾಡಿಲ್ಲ. ಆದರೆ, ನಟನಾಗಿ ಅವರೊಂದಿಗೆ ತುಂಬಾ ಚಿತ್ರಗಳನ್ನು ನಟಿಸಿದ್ದೇನೆ. ಇನ್ನು ದ್ವಾರಕೀಶ್ ಅವರು ನಟನಾಗಿ ಅವರು ಏನೇ ಮಾಡಿದರೂ ಅದಕ್ಕೆ ಉಪಮಾನ ಮತ್ತು ಉಪಮೇಯಗಳನ್ನು ಸೇರಿಸಿ ಚೆನ್ನಾಗಿ ನಗಿಸುತ್ತಿದ್ದರು. 46 ವರ್ಷಗಳಲ್ಲಿ ಅನೇಕ ಪೋಷಕ ಕಲಾವಿದರು, ನಾಯಕ ನಟ-ನಟಿಯರು ಹಾಗೂ ಹೊಸಬರು ಬಂದು ಹೋಗುತ್ತಿದ್ದಾರೆ ಎಂದರು.

ಎರಡು ತಿಂಗಳ ಹಿಂದೆ ಸಿಕ್ಕಿದ್ದ ದ್ವಾರಕೀಶ್: ಇನ್ನು ದ್ವಾರಕೀಶ್ ಅವರು ಬೆಂಗಳೂರು ಪ್ಯಾಲೇಸ್‌ನಲ್ಲಿ ಎರಡು ತಿಂಗಳ ಹಿಂದೆ ಮಾತನಾಡಿದ್ದೆವು. ಏನು ಸ್ವಲ್ಪ ವೀಕ್ ಆಗಿದ್ದೀರಲ್ಲ ಎಂದು ಕೇಳಿದಾಗ ಲೇ... ನನ್ಮಗನೇ ನಾನು ವೀಕ್ ಆಗಿಲ್ಲ, ನೀನೇ ವೀಕ್ ಆಗಿದ್ದೀಯ ನೋಡು ಎಂದು ನನಗೆ ಬೈದಿದ್ದರು. ಅವರೊಂದಿಗೆ ನಾವು ಕಳೆದ ಕ್ಷಣಗಳು ಮಾತ್ರ ಅವಿಸ್ಮರಣೀಯ. ಇನ್ನು ಕನ್ನಡ ಚಿತ್ರರಂಗದಲ್ಲಿ ಅವರ ಸೇವೆ ಮತ್ತು ಸಾಧನೆ ಮಾತ್ರ ಶಾಶ್ವತವಾಗಿ ಉಳಿಯುತ್ತದೆ ಎಂದು ನಟ ದೊಡ್ಡಣ್ಣ ಅಳಲು ತೋಡಿಕೊಂಡರು.

ಒಮ್ಮೊಮ್ಮೆ ಹೀಗೂ ಆಗುವುದು... ಸೀತಾ ರಾಮರ ಮದುವೆಗೆ ಒಪ್ಪಿಕೊಂಡು ಬಿಟ್ಲಲ್ಲಾ ವಿಲನ್​ ಭಾರ್ಗವಿ! ಆದರೆ...?

ನಾಳೆ ಚಾಮರಾಜಪೇಟೆಯಲ್ಲಿ ಅಂತ್ಯಕ್ರಿಯೆ:  ಸ್ಯಾಂಡಲ್‌ವುಡ್‌ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ 81 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ತಮ್ಮ ಮನೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಪರಪ್ಪನ ಅಗ್ರಹಾರ ಬಳಿ ಇರೋ ಮನೆಯಲ್ಲೇ ಪಾರ್ಥಿವ ಶರೀರವಿದ್ದು, ಅಭಿಮಾನಿಗಳಿಗೆ ಕಡೆಯ ದರ್ಶನದ ವ್ಯವಸ್ಥೆ ಮಾಡಲಾಗುತ್ತದೆ. ಇನ್ನು ಅವರ ಅಂತ್ಯಕ್ರಿಯೆಯನ್ನು ನಾಳೆ ಮಂಗಳವಾರ ಮಧ್ಯಾಹ್ನ ಚಾಮರಾಜಪೇಟೆ ರುದ್ರಭೂಮಿಯಲ್ಲಿ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

click me!