
ಬಳ್ಳಾರಿ (ಸೆ.03): ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಬಳ್ಳಾರಿ ಜೈಲಿಗೆ ನಟ ದರ್ಶನ್ ಸ್ಥಳಾಂತರಗೊಂಡು ಐದು ದಿನ ಕಳೆದಿದ್ದು ಜೈಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದಾರೆ. ಈ ಮೊದಲೇ ಇದ್ದ ಮೈ-ಕೈನೋವು, ಬೆನ್ನುಮೂಳೆ ಸಮಸ್ಯೆ ಹೊರತುಪಡಿಸಿದರೆ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವಾರದಿಂದ ಮೋಡಕವಿದ ವಾತಾವರಣ ಹಾಗೂ ತುಂತುರು ಮಳೆಯಾಗುತ್ತಿರುವುದರಿಂದ ಬಳ್ಳಾರಿಯ ಬೇಸಿಗೆಯ ಬಿಸಿ ನಟ ದರ್ಶನ್ ಗೆ ತಾಕಿಲ್ಲ. ಜೈಲು ಸೇರಿದ ಮೊದಲ ದಿನ ಊಟ ನಿರಾಕರಿಸಿದ್ದ ನಟನೀಗ ಎಲ್ಲ ಕೈದಿಗಳಂತೆ ಊಟ, ಉಪಹಾರ ಮಾಡುತ್ತಿದ್ದಾರೆ. ದಿನಕ್ಕೆರೆಡು ಬಾರಿ ಒಂದಷ್ಟು ಹೊತ್ತು ವಾಕಿಂಗ್ ಮಾಡುತ್ತಿದ್ದಾರೆ. ಬಳ್ಳಾರಿ ಜೈಲಿನ ಹೈ ಸೆಕ್ಯುರಿಟಿ ಜೈಲಿನಲ್ಲಿರುವ ನಟ ದರ್ಶನ್ಗೆ ಚಲನ ವಲನಗಳ ನಿಗಾ ಮುಂದುವರಿದಿದೆ. ನಿತ್ಯ ಓಡಾಟದ ದೃಶ್ಯಾವಳಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಸರ್ಜಿಕಲ್ ಚೇರ್ ಪೂರೈಕೆ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಕೋರಿಕೆಯಂತೆ ಸೋಮವಾರ ಶೌಚಕ್ಕೆ ಅನುಕೂಲವಾಗುವಂತೆ ಸರ್ಜಿಕಲ್ ಚೇರ್ ನೀಡಲಾಗಿದೆ. ತಮಗೆ ಇಂಡಿಯನ್ ಶೈಲಿಯ ಶೌಚಾಲಯದಿಂದ ಸಮಸ್ಯೆ ಆಗುತ್ತಿದೆ. ಹೀಗಾಗಿ ಸರ್ಜಿಕಲ್ ಚೇರ್ ಒದಗಿಸುವಂತೆ ದರ್ಶನ್ ಜೈಲಧಿಕಾರಿಗಳಿಗೆ ಮನವಿ ಮಾಡಿದ್ದರು. ದರ್ಶನ್ರ ಆರೋಗ್ಯ ಸಂಬಂಧಿ ದಾಖಲೆಗಳನ್ನು ಪರಿಶೀಲಿಸಿದ ವೈದ್ಯರು, ಸಮಸ್ಯೆಯಾಗುತ್ತಿದೆ ಎಂದು ಖಚಿತಪಡಿಸಿಕೊಂಡ ಬಳಿಕ ಜಿಲ್ಲಾಸ್ಪತ್ರೆಯಿಂದ ತಂದ ಸರ್ಜಿಕಲ್ ಚೇರ್ ಅನ್ನು ನೀಡಿದರು.
ಚನ್ನಪಟ್ಟಣ ಟಿಕೆಟ್ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ಯೋಗೇಶ್ವರ್
ಈಚೆಗೆ ಕಾರಾಗೃಹಕ್ಕೆ ಆಗಮಿಸಿದ್ದ ಉತ್ತರ ವಲಯದ ಡಿಐಜಿ ಟಿ.ಪಿ.ಶೇಷಾ ಬಳಿ ತಮ್ಮ ಆರೋಗ್ಯ ಸಮಸ್ಯೆ ಹೇಳಿಕೊಂಡಿದ್ದ ನಟ ದರ್ಶನ್, ಮಲಬದ್ಧತೆ ಸಮಸ್ಯೆಯಿದೆ. ಇದರಿಂದ ಭಾರತೀಯ ಶೈಲಿ ಶೌಚಾಲಯ ಬಳಕೆಗೆ ಕಷ್ಟವಾಗುತ್ತಿದೆ. ಹೀಗಾಗಿ ಗಟ್ಟಿಪದಾರ್ಥದ ಊಟ ಮಾಡಲು ಹಿಂದೇಟು ಹಾಕುತ್ತಿದ್ದೇನೆ ಎಂದು ಅಳಲು ತೋಡಿಕೊಂಡಿದ್ದರು. ಸರ್ಜಿಕಲ್ ಚೇರ್ ನೀಡುವ ಮೊದಲು ಆರೋಗ್ಯದ ಸ್ಥಿತಿಗತಿಯ ದಾಖಲೆಗಳನ್ನು ಪರಿಶೀಲಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಟಿ.ಪಿ.ಶೇಷಾ ಹೇಳಿದ್ದರು. ಅದರಂತೆ ಇದೀಗ ದರ್ಶನ್ ಗೆ ಸರ್ಜಿಕಲ್ ಚೇರ್ ನೀಡಲಾಗಿದೆ. ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಸರ್ಜಿಕಲ್ ಚೇರ್ ಹೊರತುಪಡಿಸಿದರೆ, ಬೇರೆ ಯಾವುದೇ ಬೇಡಿಕೆಯಿಟ್ಟಿಲ್ಲ ಎಂದು ಜೈಲು ಅಧಿಕಾರಿಗಳು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.