
ಚಿತ್ರನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರ ಚಿತ್ರರಂಗ ಹಾಗೂ ಸಮಾಜ ಸೇವೆಯನ್ನು ಪರಿಗಣಿಸಿ ಯುನೈಟೆಡ್ ಥಿಯಾಲಜಿಕಲ್ ರೀಸರ್ಚ್ ಯೂನಿವರ್ಸಿಟಿ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಅಮೆರಿಕದ ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಿಂದ ಅನುಮೋದಿಸಲಾದ ಮತ್ತು ಮಾನ್ಯತೆ ಪಡೆದಿರುವ ಸಂಸ್ಥೆ ಇದಾಗಿದೆ. ಈ ಕುರಿತಾಗಿ ಫೇಸ್ಬುಕ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸದೆ ಸುಮಲತಾ, ಈ ಗೌರವ ನನ್ನ ಮುಂದಿನ ಹಾದಿಯಲ್ಲಿ ನನ್ನನ್ನು ಪ್ರೇರೇಪಿಸಲು ಇದು ಸ್ಫೂರ್ತಿಯಾಗಲಿದೆ. ನಾನು ಈ ಗೌರವವನ್ನು ನನ್ನ ಪತಿ ಅಂಬರೀಶ್, ನನ್ನ ಹೆತ್ತವರು, ನನ್ನ ಹಿತೈಷಿಗಳು, ಚಲನಚಿತ್ರ ಮತ್ತು ರಾಜಕೀಯ ಉದ್ಯಮದ ಬೆಂಬಲಿಗರಿಗೆ ಅರ್ಪಿಸುತ್ತೇನೆ. ಇಂಥದ್ದೊಂದು ಗೌರವ ಸಿಕ್ಕಿರುವುದು ನನ್ನ ಮೇಲಿನ ನಂಬಿಕೆ ಮತ್ತು ನಿಮ್ಮೆಲ್ಲರ ಆಶೀರ್ವಾದ ಕಾರಣ. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ಈ ಗೌರವ ನನ್ನ ಮುಂದಿನ ಹಾದಿಯಲ್ಲಿ ನನ್ನನ್ನು ಪ್ರೇರೇಪಿಸಲು ಸ್ಫೂರ್ತಿಯಾಗಲಿದೆ. ನಾನು ಈ ಗೌರವವನ್ನು ನನ್ನ ಪತಿ ಅಂಬರೀಶ್, ನನ್ನ ಹೆತ್ತವರು ಮತ್ತು ನನ್ನ ಹಿತೈಷಿಗಳು, ಚಲನಚಿತ್ರ ಹಾಗೂ ರಾಜಕೀಯ ಉದ್ಯಮದ ಬೆಂಬಲಿಗರಿಗೆ ಅರ್ಪಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ. 2017ರಲ್ಲಿ ಸುಮಲತಾ ಅವರ ಪತಿ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಲಭಿಸಿತ್ತು.
ಇದೀಗ ರಾಜಕಾರಣಿಯಾಗಿ ಪ್ರಸಿದ್ಧಿ ಪಡೆದಿರುವ ಸುಮಲತಾ ಅವರು, ದಕ್ಷಿಣ ಭಾರತ ಚಲನಚಿತ್ರ ರಂಗದ ಹೆಸರಾಂತ ತಾರೆ. ಕನ್ನಡ ಮಾತ್ರವಲ್ಲದೇ ತೆಲಗು, ಮಲಯಾಳ, , ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿಯೂ ಇವರು ಅಭಿನಯಿಸಿದ್ದಾರೆ. 220 ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಇವರು ಬಣ್ಣ ಹಚ್ಚಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಗಟ್ಟಿಮೇಳದ ಅದಿತಿ- ಪಾರು ಸೀರಿಯಲ್ ಪ್ರೀತು ದಂಪತಿಯ ಸಂಕ್ರಾಂತಿ ಸಂಭ್ರಮ ಹೇಗಿತ್ತು ನೋಡಿ...
ಇವರ ವೈಯಕ್ತಿಯ ಜೀವನದ ಕುರಿತು ಹೇಳುವುದಾದರೆ, 1963ರ ಆಗಸ್ಟ್ 27ರಂದು ಚೆನ್ನೈನಲ್ಲಿ ಜನಿಸಿದರು. ಮುಂಬೈನಲ್ಲಿಯೇ ಹೆಚ್ಚು ವರ್ಷ ನೆಲೆಸಿದ್ದರಿಂದ ಅಲ್ಲಿಯೇ ಹೆಚ್ಚು ಕಾಲ ಕಳೆದಿದ್ದಾರೆ. ಇದಲ್ಲದೇ ಆಂಧ್ರಪ್ರದೇಶದಲ್ಲಿಯೂ ಬಹು ವರ್ಷ ನೆಲೆಸಿದ್ದಾರೆ. ಕೆಲವೇ ಜನರಿಗೆ ತಿಳಿದಿರುವಂತೆ ಸುಮಲತಾ ಅವರು ತಮ್ಮ 15ನೇ ವಯಸ್ಸಿನಲ್ಲಿಯೇ ಆಂಧ್ರಪ್ರದೇಶ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾದವರು. ಇದಾದ ಬಳಿಕ ಅವರಿಗೆ ಚಿತ್ರರಂಗದಲ್ಲಿ ಅವಕಾಶ ಹುಡುಕಿ ಬಂದವು. ತಮಿಳು ಮತ್ತು ತೆಲುಗು ಚಿತ್ರರಂಗಗಳಿಗೆ ಪದಾರ್ಪಣೆ ಮಾಡಿದರು. ಸ್ಯಾಂಡಲ್ವುಡ್ ನಟಿಯಾಗಿ ಗುರುತಿಸಿಕೊಂಡದ್ದು ಡಾ.ರಾಜ್ಕುಮಾರ್ ಅಭಿನಯದ `ರವಿಚಂದ್ರ' ಚಿತ್ರದ ಮೂಲಕ. ಇದಾದ ಬಳಿಕ ಆಹುತಿ, ಅವತಾರ ಪುರುಷ, ತಾಯಿ ಕನಸು, ಕರ್ಣ, ಕಥಾನಾಯಕ ಮುಂತಾದ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.
1991ರ ಡಿಸೆಂಬರ್ 8ರಂದು ಅಂಬರೀಶ್ ಜೊತೆ ಇವರ ವಿವಾಹವಾಯಿತು. ಎಲ್ಲರಿಗೂ ತಿಳಿದಿರುವಂತೆ 2018ರ ನವೆಂಬರ್ 24ರಂದು ಅಂಬರೀಶ್ ಅವರು ನಿಧನರಾದರು. ಇದಾದ ಬಳಿಕ ಅಂಬರೀಶ್ ಅವರ ಫ್ಯಾನ್ಸ್ ಒತ್ತಾಯದ ಮೇರೆಗೆ ಸುಮಲತಾ 2019ರ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದರು. ಇವರು ಸಮಾಜಸೇವೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇವರ ಒಟ್ಟಾರೆ ಜೀವನದ ಸಾಧನೆಗೆ ಇದೀಗ ಗೌರವ ಡಾಕ್ಟರೇಟ್ ಪುರಸ್ಕಾರ ದೊರೆತಿದೆ.
ಅಗೆದಷ್ಟೂ, ಬಗೆದಷ್ಟೂ ಸಂಶೋಧಕರಿಗೆ ಉತ್ತರವೇ ಸಿಗದ ವಿಷದ ಕೆರೆ! ಶ್ರೀರಾಮನಿಗೂ ಇದಕ್ಕೂ ಇರೋ ನಂಟೇನು?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.