
"ಕಾರ್ಯೇಷು ದಾಸಿ, ಕರಣೇಷು ಮಂತ್ರಿ, ಭೋಜೇಷು ಮಾತಾ, ಶಯನೇಷು ರಂಭಾ, ರೂಪೇಷು ಲಕ್ಷ್ಮೀ, ಕ್ಷಮಯಾ ಧರಿತ್ರಿ, ಷಟ್ ಧರ್ಮಯುಕ್ತ ಕುಲಧರ್ಮ ಪತ್ನೀ" ಎಂದು ಹೇಳುತ್ತೇವೆ. ಇದಕ್ಕೆ ತಕ್ಕಂತೆ ಕನ್ನಡ ನಟ ದರ್ಶನ್ ತೂಗುದೀಪ ಪತ್ನಿ ವಿಜಯಲಕ್ಷ್ಮೀ ನಡೆದುಕೊಳ್ತಿದ್ದಾರೆ ಎಂದು ಅವರ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಹೌದು, ನಟ ದರ್ಶನ್ ಜೈಲಿನಲ್ಲಿದ್ದು, ವಿಜಯಲಕ್ಷ್ಮೀ ಅವರು ಸೋಶಿಯಲ್ ಮೀಡಿಯಾದಲ್ಲಿ ಪತಿಯ ಜೊತೆಗಿನ ಫೋಟೋ ಶೇರ್ ಮಾಡಿ, ಗೌರಿ ಗಣೇಶ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
ಕಾರ್ಯೇಷು ದಾಸಿ-ಕೆಲಸಗಳಲ್ಲಿ ಸೇವಕಿಯಂತೆ ಕಾರ್ಯ ನಿರ್ವಹಿಸುವಳು, ಕರಣೇಷು ಮಂತ್ರಿ-ಸಲಹೆ ನೀಡುವಲ್ಲಿ ಮಂತ್ರಿಯಂತೆ ಬುದ್ಧಿವಂತಿಕೆ ತೋರುವಳು, ಭೋಜೇಷು ಮಾತಾ-ಊಟ ಬಡಿಸುವಾಗ ತಾಯಿಯಂತೆ ಪ್ರೀತಿ ತೋರುವಳು, ಶಯನೇಷು ರಂಭಾ-ಹಾಸಿಗೆಯಲ್ಲಿ ರಂಭೆಯಂತಹ ಅಪ್ಸರೆಯಂತೆ ಇರುವಳು, ರೂಪೇಷು ಲಕ್ಷ್ಮೀ-ರೂಪದಲ್ಲಿ ಲಕ್ಷ್ಮಿ ದೇವಿಯಂತೆ ಸುಂದರವಾಗಿರುವಳು, ಕ್ಷಮಯಾ ಧರಿತ್ರಿ-ಭೂಮಿಯಂತೆ ಸಹನಶೀಲಳಾಗಿ ಎಲ್ಲವನ್ನೂ ಸಹಿಸಿಕೊಳ್ಳುವಳು, ಷಟ್ ಧರ್ಮಯುಕ್ತ ಕುಲಧರ್ಮ ಪತ್ನಿ-ಈ ಆರು ಗುಣಗಳಿಂದ ಕೂಡಿದವಳೇ ಆದರ್ಶ ಪತ್ನಿ ಎನ್ನುತ್ತಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ ಅವರು ಆರೋಪಿಯಾಗಿದ್ದು, ಇದೀಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಮಯ ಕಳೆಯುತ್ತಿದ್ದಾರೆ. 2024ರ ಜೂನ್ನಲ್ಲಿ ಈ ಕೊಲೆ ನಡೆದಿದ್ದು, ನಟ ದರ್ಶನ್ ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಕರ್ನಾಟಕ ಹೈಕೋರ್ಟ್ನಿಂದ 2024ರ ಡಿಸೆಂಬರ್ 13ರಂದು ಅವರಿಗೆ ಜಾಮೀನು ಸಿಕ್ಕಿತ್ತು. ದರ್ಶನ್ ಅವರು ಅನಾರೋಗ್ಯ ಆಗಿದ್ದು, ಆಪರೇಶನ್ ಮಾಡಿಸಿಕೊಳ್ಳೋದಾಗಿ ಕಾರಣ ನೀಡಿ ಜಾಮೀನು ಪಡೆದಿದ್ದರು. ಆದರೆ ಆಪರೇಶನ್ ಮಾಡಿಸಿಕೊಳ್ಳದೆ, ಚಿಕಿತ್ಸೆ ಪಡೆಯದೆ, ದಿ ಡೆವಿಲ್ ಸಿನಿಮಾ ಶೂಟಿಂಗ್ನಲ್ಲಿ ಭಾಗಿಯಾಗಿದ್ದರು. ಅಷ್ಟೇ ಅಲ್ಲದೆ ದಿನಕರ್ ತೂಗುದೀಪ ಅವರ ಸಿನಿಮಾ ಪ್ರೀಮಿಯರ್ನಲ್ಲಿ ಭಾಗಿಯಾಗಿದ್ದರು. ಹೀಗಾಗಿ ರಾಜ್ಯ ಸರ್ಕಾರವು ದರ್ಶನ್ರಿಗೆ ಜಾಮೀನು ಹೇಗೆ ಕೊಡಲಾಗುವುದು ಎಂದು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನೆ ಮಾಡಿತ್ತು. ಹೀಗಾಗಿ 2025ರ ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ದರ್ಶನ್ರಿಗೆ ನೀಡಿದ್ದ ಜಾಮೀನನ್ನು ರದ್ದು ಮಾಡಿದೆ. ಹೀಗಾಗಿ, ದರ್ಶನ್ ಮತ್ತೆ ಜೈಲು ಸೇರಿದ್ದಾರೆ.
ಈ ಕಷ್ಟವಾದ ಸಂದರ್ಭದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಪತಿಯ ಬೆನ್ನೆಲುಬಾಗಿ ನಿಂತಿದ್ದಾರೆ. ದರ್ಶನ್ ಜೈಲಿಗೆ ಸೇರಿದ ಬಳಿಕ ಸಾಕಷ್ಟು ಬಾರಿ ಜೈಲಿಗೆ ಹೋಗಿ ಆಹಾರವನ್ನು ಕೊಟ್ಟು ಬರುತ್ತಿದ್ದರು, ವಕೀಲರ ಜೊತೆ ಮಾತನಾಡಿ ಅವರನ್ನು ಹೊರಗಡೆ ತರುವ ಕೆಲಸ ಮಾಡುತ್ತಿದ್ದರು. ಈಗ ಅವರು ಸೋಶಿಯಲ್ ಮೀಡಿಯಾ ಮೂಲಕ ದಿ ಡೆವಿಲ್ ಸಿನಿಮಾ ಅಪ್ಡೇಟ್ ನೀಡುತ್ತಿದ್ದಾರೆ. ದರ್ಶನ್ ಮಾತುಗಳನ್ನು ಅವರು ಅಭಿಮಾನಿಗಳಿಗೆ ತಲುಪಿಸುತ್ತಿದ್ದಾರೆ. ದರ್ಶನ್ ತಪ್ಪಿಗೆ ಬೆಂಬಲ ಕೊಡ್ತಿದ್ದಾರೆ ಎಂದು ಕೆಲವರು ಆರೋಪ ಮಾಡ್ತಿದ್ರೆ, ಇನ್ನೂ ಕೆಲವರು ದರ್ಶನ್ಗೆ ಕಷ್ಟ ಬಂದಾಗಲೂ ಬೆಂಬಲಕ್ಕೆ ನಿಂತಿದ್ದಾರೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ದರ್ಶನ್ ಬೇಗ ಬಿಡುಗಡೆಯಾಗಲಿ ಎಂದು ವಿಜಯಲಕ್ಷ್ಮೀ ಅವರು ಆಗಾಗ ದೇವಸ್ಥಾನಗಳಿಗೆ ಭೇಟಿ ನೀಡಿ, ಪೂಜೆ-ಹವನಗಳನ್ನು ಮಾಡುತ್ತಿರುತ್ತಾರೆ. ಕಳೆದ ವರ್ಷ ಉಡುಪಿಯ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ನವಚಂಡಿಕಾ ಹೋಮವನ್ನು ಮಾಡಿಸಿದ್ದರು. ಇನ್ನು ಅಸ್ಸಾಂನ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಷ್ಟೇ ಅಲ್ಲದೆ ದರ್ಶನ್ ಅವರು ಹೊರಗಡೆ ಬಂದಮೇಲೂ ಕೂಡ, ಎಲ್ಲರೂ ಅವರನ್ನು ಭೇಟಿ ಮಾಡಲು ವಿಜಯಲಕ್ಷ್ಮೀ ಬಿಟ್ಟಿರಲಿಲ್ಲ, ದರ್ಶನ್ಗೆ ಕಾವಲಾಗಿ ನಿಂತಿದ್ದರು. ಇನ್ನು ದರ್ಶನ್ ಜೊತೆ ಸಿನಿಮಾ ಶೂಟಿಂಗ್ನಲ್ಲಿ ಭಾಗಿಯಾಗಿದ್ದಲ್ಲದೆ, ಪತಿ ಸಮೇತ ಕೆಲ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.