
25 ವರ್ಷಗಳ ಬಳಿಕ ಡಾ ವಿಷ್ಣುವರ್ಧನ್ ‘ಯಜಮಾನ’ ಮರುಬಿಡುಗಡೆ!
ಕರ್ನಾಟಕ ರತ್ನ, ಸಾಹಸಸಿಂಹ ಖ್ಯಾತಿಯ ನಟ ಡಾ ವಿಷ್ಣುವರ್ಧನ್ (Dr Vishnuvardhan) ಅಭಿನಯದ 'ಯಜಮಾನ' ಚಿತ್ರವು 25 ವರ್ಷಗಳ ಹಿಂದೆ (2000ನೇ ಇಸ್ವಿ) ತೆರೆಗೆ ಬಂದು ಸೂಪರ್ ಹಿಟ್ ದಾಖಲಿಸಿತ್ತು. ಈ ಚಲನಚಿತ್ರದ ನಿರ್ಮಾಪಕರು ಕೆ. ರೆಹಮಾನ್. ಇತ್ತೀಚೆಗೆ ಮರು ಬಿಡುಗಡೆ ಆಗುತ್ತಿರುವ ಚಿತ್ರವನ್ನು ವಿಷ್ಣುವರ್ಧನ್ ಅವರ ಅಭಿಮಾನಿ, ಎಸ್.ಡಿ. ಮುನಿಸ್ವಾಮಿ ಅವರು ಮರು ಬಿಡುಗಡೆ ಮಾಡುತ್ತಿದ್ದಾರೆ.
ನಿರ್ಮಾಪಕ ಕೆ. ರೆಹಮಾನ್ ಅವರು ತಮಿಳಿನ 'ವಾನಥೈಪ್ಪೊಲಾ' ಚಿತ್ರದ ರಿಮೇಕ್ ಹಕ್ಕುಗಳನ್ನು ಪಡೆದು, 2000ರಲ್ಲಿ 'ಯಜಮಾನ' (Yajamana) ಹೆಸರಿನಲ್ಲಿ ಕನ್ನಡದಲ್ಲಿ ನಿರ್ಮಿಸಿ, ಬಿಡುಗಡೆ ಮಾಡಿದ್ದರು. ಇದೀಗ, ಎಸ್.ಡಿ. ಮುನಿಸ್ವಾಮಿ: 'ಯಜಮಾನ' ಚಲನಚಿತ್ರವನ್ನು 25 ವರ್ಷಗಳ ಬಳಿಕ, ಆಧುನಿಕ ತಂತ್ರಜ್ಞಾನದೊಂದಿಗೆ ಮರು ಬಿಡುಗಡೆ ಮಾಡುತ್ತಿದ್ದಾರೆ. ಇಂದು, ಅಂದರೆ 7 ನವೆಂಬರ್ 2025ರಂದು ಈ ಚಿತ್ರವು ಮುರುಬಿಡುಗಡೆ ಕಂಡು ಹಲವು ಥಿಯೇಟರ್ಗಳಲ್ಲಿ ಯಶಸ್ವೀ ಪ್ರದರ್ಶನ ಕಾಣುತ್ತಿದೆ.
ಈ ಯಜಮಾನ ಸಿನಿಮಾದಲ್ಲಿ ನಟ ವಿಷ್ಣುವರ್ಧನ್ ಸಹೋದರನಾಗಿ ನಟಿಸಿ ಮೆಚ್ಚುಗೆ ಗಳಿಸಿದ್ದ ಕನ್ನಡದ ನಟ ಶಶಿಕುಮಾರ್ ಈ ಚಿತ್ರದ ಬಗ್ಗೆ ಹೇಳಿಕೆ ನೀಡಿದ್ದು ಇದೀಗ ಸಖತ್ ವೈರಲ್ ಆಗಿದೆ. ನಟ ಶಶಿಕುಮಾರ್ ಈ ಬಗ್ಗೆ 'ಆ ಕಾಲದಲ್ಲಿ ಸಿನಿಮಾ ಯಾವ ಪ್ಯಾನ್ ಇಂಡಿಯಾಕ್ಕೂ ಕಡಿಮೆ ಇರಲಿಲ್ಲ' ಎಂದಿದ್ದಾರೆ. 'ಆ ಕಾಲದ ಯಜಮಾನ ಸಿನಿಮಾದ ಮುಂದೆ ಯಾವ ಪ್ಯಾನ್ ಇಂಡಿಯಾ ಸಿನಿಮಾನೂ ಇಲ್ಲ' ಎಂದು ನಟ ಶಶಿಕುಮಾರ್ ಸೇರಿದಂತೆ ಹಲವು ಅಭಿಪ್ರಾಯ ಪಟ್ಟಿದ್ದು ಇದೀಗ ವೈರಲ್ ಅಗತೊಡಗಿದೆ.
25 ವರ್ಷಗಳ ಹಿಂದೆ, 2000ರ ಡಿಸೆಂಬರ್ 1ರಂದು ತೆರೆಕಂಡಿದ್ದ 'ಕರ್ನಾಟಕ ರತ್ನ' ಡಾ. ವಿಷ್ಣುವರ್ಧನ್ ಅಭಿನಯದ, ಕೆ. ರೆಹಮಾನ್ ನಿರ್ಮಾಣ ಹಾಗೂ ಆರ್ ಶೇಷಾದ್ರಿ ರಾಧಾ ಭಾರತಿ ನಿರ್ದೇಶನದ ಯಜಮಾನ ಚಿತ್ರ ಇದೇ ನವೆಂಬರ್ 7ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಮರು ಬಿಡುಗಡೆಯಾಗಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಸಿನಿಮಾದ ಆಡಿಯೋ ಗುಣಮಟ್ಟ, ದೃಶ್ಯದ ಗುಣಮಟ್ಟವನ್ನು ಹೆಚ್ಚಿಸಲಾಗಿದೆ. ಮುನಿಸ್ವಾಮಿ ಎಸ್ ಡಿ ಈ ಚಿತ್ರವನ್ನು ಮರು ಬಿಡುಗಡೆ ಮಾಡಿದ್ದಾರೆ. ಚಿತ್ರದ ರಜತೋತ್ಸವವನ್ನು ಸಂಭ್ರಮಿಸಲು ಕಲಾವಿದರ ಸಂಘದಲ್ಲಿ ಸಮಾರಂಭ ಆಯೋಜಿಸಲಾಗಿತ್ತು. ಚಿತ್ರದ ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರು ಸಮಾರಂಭದಲ್ಲಿ ಭಾಗಿಯಾಗಿ 'ಯಜಮಾನ' ಚಿತ್ರದ ಕುರಿತು ಮಾತನಾಡಿದ್ದಾರೆ.
ನಿರ್ಮಾಪಕ ರೆಹಮಾನ್, 'ಅಂದು ಈ ಚಿತ್ರ ಆಗಲು ಪ್ರಮುಖ ಕಾರಣ ಗುರು ಸಮಾನರಾದ ವಿಷ್ಣುವರ್ಧನ್ ಹಾಗೂ ಕೆ.ವಿ.ನಾಗೇಶ್ ಕುಮಾರ್. 130ಕ್ಕೂ ಹೆಚ್ಚು ಕಡೆ ಶತದಿನೋತ್ಸವ, 40ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇಪ್ಪತ್ತೈದು ವಾರ ಹಾಗೂ 4 ಕಡೆಗಳಲ್ಲಿ 1 ವರ್ಷ ಈ ಸಿನಿಮಾ ಓಡಿದೆ. 25 ವರ್ಷಗಳ ಹಿಂದೆಯೇ 35 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದ ಚಿತ್ರವಿದು. ವಿಷ್ಣುವರ್ಧನ್, ಪ್ರೇಮ, ಶಶಿಕುಮಾರ್, ಅಭಿಜಿತ್, ರಮೇಶ್ ಭಟ್, ಟೆನ್ನಿಸ್ ಕೃಷ್ಣ ಹೀಗೆ ಅನೇಕ ಕಲಾವಿದರ ತಾರಾಬಳಗವಿರುವ ಈ ಚಿತ್ರವನ್ನು ಈಗ ಮುನಿಸ್ವಾಮಿ ಅವರು ಮರು ಬಿಡುಗಡೆ ಮಾಡುತ್ತಿದ್ದಾರೆ. ಹಿಂದೆ ನೀವು ನೀಡಿದ ಗೆಲುವಿಗಿಂತ ದೊಡ್ದ ಗೆಲುವನ್ನು ಈಗ ನೀಡಿ' ಎಂದಿದ್ದಾರೆ.
'ಡಾ ವಿಷ್ಣುವರ್ಧನ್ ನಟನೆಯ 'ಯಜಮಾನ' ಚಿತ್ರವನ್ನು ಡಿಐ ಬಳಸಿ 4k ಡಿಜೆಟಲ್ ಪ್ರೊಜೆಕ್ಷನ್ ಗೆ ತಯಾರು ಮಾಡಲಾಗಿದೆ. ಇಂದಿನ ಆಧುನಿಕ ತಂತ್ರಜ್ಞಾನ ಒಳಗೊಂಡಿರುವ ಈ ಚಿತ್ರವನ್ನು ಮತ್ತೆ ಚಿತ್ರಮಂದಿರಗಳಲ್ಲಿ ಈಗ ವೀಕ್ಷಿಸಬಹುದು. ಇನ್ನು, ಮೋನೊ ಟ್ರ್ಯಾಕ್ನಲ್ಲಿದ್ದ ಈ ಚಿತ್ರದ ಕಲಾವಿದರ ಧ್ವನಿಗಳನ್ನು ಸಹ 5.1 ಹಾಗೂ 7.1 ಡಿಜಿಟಲ್ ಸೌಂಡ್ ಗೆ ಬಹಳ ವರ್ಗಾಯಿಸಲಾಗಿದೆ. ಹಾಡುಗಳಿಗೂ ಸಹ ಇದೇ ರೀತಿ ನೂತನ ತಂತ್ರಜ್ಞಾನ ಅಳವಡಿಸಲಾಗಿದೆ. ನುರಿತ ತಂತ್ರಜ್ಞರನ್ನು ಕರೆಸಿ ಅವರಿಂದ ಈಗಿನ ಆಧುನಿಕ ರೀತಿಯಲ್ಲಿ ಸೌಂಡ್ ಎಫೆಕ್ಟ್ ಅಳವಡಿಸಲಾಗಿದೆ. ಇದಕ್ಕೆಲ್ಲಾ ಬಹಳ ಸಮಯ ಹಾಗೂ ಹಣ ಹಿಡಿದಿದೆ. ಮುನಿಸ್ವಾಮಿ ಅವರು ಯಾವುದೇ ಕೊರತೆ ಬಾರದ ಹಾಗೆ ಎಲ್ಲಾ ಕೆಲಸಗಳನ್ನು ಮಾಡಿದ್ದಾರೆ' ಎಂದು ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್.
ಇನ್ನು, 'ನಾನು ಡಾ ವಿಷ್ಣುವರ್ಧನ್ ಅವರ ದೊಡ್ಡ ಅಭಿಮಾನಿ. ಅವರ ಮೇಲಿನ ಪ್ರೀತಿಯಿಂದ 'ಯಜಮಾನ' ಚಿತ್ರವನ್ನು ಈಗಿನ ತಂತ್ರಜ್ಞಾನವನ್ನು ಅಳವಡಿಸಿ ಮರು ಬಿಡುಗಡೆ ಮಾಡುತ್ತಿದ್ದೇನೆ. ನವೆಂಬರ್ 7 ರಂದು 150 ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಈ ಚಿತ್ರವು ಬಿಡುಗಡೆಯಾಗಲಿದೆ. ದಯವಿಟ್ಟು ಎಲ್ಲರೂ ಚಿತ್ರಮಂದಿರಗಳಲ್ಲೇ ಈ ಚಿತ್ರವನ್ನು ವೀಕ್ಷಿಸಿ.. ಎಂದಿದ್ದಾರೆ ಈ ಚಿತ್ರದ ಮರುಬಿಡುಗಡೆ ನಿರ್ಮಾಪಕರಾದ ಎಸ್ಡಿ ಮುನಿಸ್ವಾಮಿ.
ಈ ಚಿತ್ರದ ಮರುಬಿಡುಗಡೆ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಬಹಳಷ್ಟು ಕಾಮೆಂಟ್ಸ್ ಬರುತ್ತಿವೆ. 'ಎಲ್ಲರೂ ಕುಟುಂಬ ಸಮೇತ ಸಿನಿಮಾ ನೋಡಲು ಬರುತ್ತಾರೆ. ಪ್ರತಿ ಕುಟುಂಬಕ್ಕೂ ಆದರ್ಶವಾದ ಸಿನಿಮಾ. ನೋಡಿ ಕಲಿಬೇಕು ಅಣ್ಣ ತಮ್ಮಂದಿರು ಅತ್ತಿಗೆ ಮೈದುನರು ಎಂದರೆ ಹೇಗಿರಬೇಕು ಅನ್ನುವುದನ್ನು.. ಈ ಸಿನಿಮಾದಿಂದ ನೋಡಿ ಕಲಿಯುವಂತದ್ದು ತುಂಬಾ ಇದೆ.. ಅದ್ಭುತ ಅಭಿನಯದ ಒಂದು ಸಿನಿಮಾ' ಎಂದು ಕಾಮೆಂಟ್ ಮಾಡಿದ್ದಾರೆ ಹಲವರು.
'25 ವರ್ಷಗಳ ಹಿಂದೆ ‘ಯಜಮಾನ’ ಸಿನಿಮಾ ಬಿಡುಗಡೆ ಆದಾಗ ಹಳ್ಳಿಗಳಿಂದ ಟ್ರ್ಯಾಕ್ಟರ್ಗಳಲ್ಲಿ ಜನರು ನಗರ, ಪಟ್ಟಣಗಳಿಗೆ ಬಂದು ಸಿನಿಮಾ ನೋಡಿಕೊಂಡು ಹೋಗಿದ್ದರು. ಇಡೀ ರಾಜ್ಯದಾದ್ಯಂತ ಬಹಳ ಅದ್ಧೂರಿ ಪ್ರದರ್ಶನವನ್ನು ‘ಯಜಮಾನ’ ಸಿನಿಮಾ ಕಂಡಿತ್ತು. ಮತ್ತೆ ಅದೇ ಮ್ಯಾಜಿಕ್ ಅನ್ನು ಪುನರಾವರ್ತನೆ ಮಾಡಬಹುದೇ ಈ ಸಿನಿಮಾ? ಕಾದು ನೋಡಬೇಕು..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.