'ಮತ್ತೆ ಉದ್ಭವ' ಚಿತ್ರಕ್ಕೆ ದರ್ಶನ್, ಸೀತಾರಾಮ್‌ ಸಾಥ್!

By Suvarna NewsFirst Published Jan 24, 2020, 10:17 AM IST
Highlights

ಯಾವುದೇ ಸಿನಿಮಾದ ಟ್ರೇಲರ್‌ ರಿಲೀಸ್‌ಗೆ ದರ್ಶನ್‌ ಬರುತ್ತಾರೆ ಅಂದ್ರೆ ಅಲ್ಲೊಂದು ಹಬ್ಬದ ವಾತಾವರಣ ಇರುತ್ತದೆ. ಮನೆ ಹಿರಿಯರು ಒಂಚೂರು ಆತಂಕದಿಂದಲೂ ಕಿರಿಯರು ಸಂತೋಷದಿಂದಲೂ ಓಡಾಡುತ್ತಿರುತ್ತಾರೆ. ಹಾಗಾಗಿಯೇ ‘ಮತ್ತೆ ಉದ್ಭವ’ ಸಿನಿಮಾದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ ಕಳೆಗಟ್ಟಿತ್ತು.

ನಿರ್ದೇಶಕ ಕೋಡ್ಲು ರಾಮಕೃಷ್ಣ ಬಿಳಿ ಜುಬ್ಬಾ ಧರಿಸಿಕೊಂಡು ನಿರ್ಲಿಪ್ತರಾಗಿ ನಿಂತಿದ್ದರೆ ನಿರ್ಮಾಪಕ ನಿತ್ಯಾನಂದ ಭಟ್ರು ಖುಷಿಯಿಂದ ವೇದಿಕೆ ತುಂಬಾ ಓಡಾಡುತ್ತಿದ್ದರು. ಸಮಾರಂಭದ ಸಂಭ್ರಮ ಹೆಚ್ಚಿಸಲು ನಿರ್ದೇಶಕ ಹಿರಿ ಟಿಎನ್‌ ಸೀತಾರಾಮ್‌, ಕತೆಗಾರ ಜೋಗಿ ಬಂದಿದ್ದರು. ಸಿನಿಮಾ ತಂಡದಲ್ಲೇ ಇರುವ ಸಂಗೀತ ನಿರ್ದೇಶಕ ವಿ. ಮನೋಹರ್‌, ಕಾರ್ಯಕಾರಿ ನಿರ್ಮಾಪಕ ಗುರುಪ್ರಸಾದ್‌ ಮುದ್ರಾಡಿ ಕುತೂಹಲದಿಂದ ನೋಡುತ್ತಿದ್ದರು. ನೋಡನೋಡುತ್ತಿದ್ದಂತೆ ದರ್ಶನ್‌ ಬಂದರು, ಟ್ರೇಲರ್‌ ರಿಲೀಸ್‌ ಮಾಡಿದರು, ಚಿತ್ರತಂಡಕ್ಕೆ ಶುಭಕೋರಿದರು. ದರ್ಶನ್‌ ಉಪಸ್ಥಿತಿಯೇ ಶುಭ ಸೂಚನೆ ಅನ್ನುವ ನಿಲುವು ಎಲ್ಲರದೂ ಅನ್ನಿಸುವಂತೆ ಇತ್ತು ಆ ಸಂದರ್ಭ.

ಡಿ-ಬಾಸ್‌ ಮೇಲೆ ಈ ಹೀರೋಗೆ ಲವ್ವಾಯ್ತು, 'ಮತ್ತೆ ಉಧ್ಭವ' ಟ್ರೈಲರ್‌ ಹೀಗಿದೆ ನೋಡಿ!

ಒಂದು ಕಾಲದಲ್ಲಿ ಅನಂತ್‌ನಾಗ್‌ ಅಭಿನಯದ ‘ಉದ್ಭವ’ ಸಿನಿಮಾ ಸೂಪರ್‌ ಡ್ಯೂಪರ್‌ ಹಿಟ್‌. ಅದರಲ್ಲಿ ಅನಂತ್‌ ನಾಗ್‌ಗೆ ಇಬ್ಬರು ಮಕ್ಕಳು. ಅವರು ಈಗ ದೊಡ್ಡವರಾಗಿದ್ದಾರೆ. ಇಂಥಾ ಸಂದರ್ಭದಲ್ಲಿ ದೇಗುಲ, ರಾಜಕೀಯ ಇಟ್ಟುಕೊಂಡು ಸಿನಿಮಾ ಮಾಡಿದರೆ ಹೇಗಿರುತ್ತದೆ ಅನ್ನುವ ಐಡಿಯಾನೇ ಮಜವಾಗಿದೆ. ಅದಕ್ಕೆ ತಕ್ಕಂತೆ ‘ಮತ್ತೆ ಉದ್ಭವ’ ಟ್ರೇಲರ್‌ ಕೂಡ ಮೆಚ್ಚುಗೆಗೆ ಅರ್ಹ. ಮೋಹನ್‌ ಬರೆದಿರುವ ಡೈಲಾಗುಗಳು, ಅದ್ಭುತ ಕಲಾವಿದರ ನಟನೆ, ಒಂದೊಳ್ಳೆ ಚಿತ್ರಕತೆ ಎಲ್ಲವೂ ಮತ್ತೆ ಉದ್ಭವ ಚಿತ್ರದ ಟ್ರೇಲರ್‌ ಅನ್ನು ವಿಶೇಷವಾಗಿಸಿದೆ.

ಅದಕ್ಕೆ ತಕ್ಕಂತೆ ಟಿಎನ್‌ ಸೀತಾರಾಮ್‌ ಅವರು ಕೋಡ್ಲುಗೆ, ನಿಮ್ಮ ಉದ್ಭವ ಸಿನಿಮಾ ನೋಡಿ ಹೊಟ್ಟೆಕಿಚ್ಚು ಮತ್ತು ಮೆಚ್ಚುಗೆ ಎರಡೂ ಉಂಟಾಗಿತ್ತು ಎಂದರು. ಜೋಗಿ, ‘ಸ್ವಲ್ಪ ದಿನ ಸುಮ್ಮನೆ ಇರುವ ಕೋಡ್ಲು ಒಂದೊಳ್ಳೆಯ ಕತೆ ಜತೆ ಬರುತ್ತಾರೆ’ ಎಂದು ಹೇಳಿದರು. ಕೋಡ್ಲು ನಿಧಾನಕ್ಕೆ ಮಾತನಾಡುತ್ತಾ, ‘ಎಲ್ಲರೂ ಕೇಳುತ್ತಿದ್ದ ಮತ್ತೆ ಯಾವಾಗ ಉದ್ಭವ ಸಿನಿಮಾ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ’ ಎಂದು ಹೇಳಿ ಸರ್ವರಿಗೂ ಧನ್ಯವಾದ ಸಮರ್ಪಿಸಿದರು.

ಐ‍ಷಾರಾಮಿ ಕಾರಿಗೆ ಗುಡ್‌ಬೈ ಹೇಳಿದ ಡಿ-ಬಾಸ್‌; 'ಕರಿಯಾ' ಚಿತ್ರದ ಲೂನಾ ನೋಡಿ!

ಈ ಕಾರ್ಯಕ್ರಮದಲ್ಲಿ ಅತಿ ಉತ್ಸಾಹದಿಂದ ಓಡಾಡುತ್ತಾ ಎಲ್ಲರ ಗಮನ ಸೆಳೆದಿದ್ದು ನಾಯಕ ನಟ ಪ್ರಮೋದ್‌. ಪ್ರೀಮಿಯರ್‌ ಪದ್ಮಿನಿ ಚಿತ್ರದಿಂದ ಒಳ್ಳೆಯ ಹೆಸರು ಗಳಿಸಿದ ಪ್ರಮೋದ್‌ ಈ ಚಿತ್ರದಿಂದ ಮತ್ತೊಂದು ಹಂತಕ್ಕೆ ಹೋಗುತ್ತಾರೆ ಅನ್ನುವ ನಂಬಿಕೆ ಅಲ್ಲಿದ್ದವರಿಗೆಲ್ಲಾ ಇತ್ತು. ಮಿಲನ ನಾಗರಾಜ್‌ ಈ ಚಿತ್ರದ ನಾಯಕಿ. ಅವರು ಮಾತನಾಡಿದ್ದು ಕಡಿಮೆಯಾದರೂ ಗಮನ ಸೆಳೆಯುವುದಕ್ಕೆ ಅಷ್ಟುಸಾಕಿತ್ತು.

ಸಿನಿಮಾದ ನಿರ್ಪಾಕರ ತಂಡದಲ್ಲಿರುವ ಮಹೇಶ್‌ ಮುದ್ಗಲ್‌, ರಾಜೇಶ್‌, ಸತ್ಯ ನಗುವಲ್ಲೇ ತಮ್ಮ ಸಂತೋಷ ವ್ಯಕ್ತಪಡಿಸಿದರು. ಧೀರಜ್‌ ಎಂಟರ್‌ಪ್ರೈಸಸ್‌ನ ದೀರಜ್‌ ಈ ಸಿನಿಮಾ ವಿತರಣೆ ಮಾಡುತ್ತಿದ್ದಾರೆ. ಫೇ.7ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾದ ಟ್ರೇಲರ್‌ ಈಗಾಗಲೇ ಭಾರಿ ಜನಪ್ರೀತಿ ಗಳಿಸಿದೆ. ಒಂದ್ಸಲ ನೀವೂ ನೋಡಿ.

click me!