
ಕಲಬುರಗಿ(ಫೆ.23): ಬಿಜೆಪಿ ಕರ್ನಾಟಕ ರಾಜ್ಯದಲ್ಲಿ ಹಿಂಸಾತ್ಮಕ ರಾಜನೀತಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲಾ ಟೀಕಿಸಿದ್ದಾರೆ. ಕಲಬುರಗಿಯಲ್ಲಿ ಮಂಗಳವಾರ ಗೃಹ ಜ್ಯೋತಿ, ಗೃಹ ಲಕ್ಷ್ಮೇ ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮಗಳ ಬಗ್ಗೆ ಮಾತನಾಡಲು ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಸಾರ್ವಜನಿಕ ಸಭೆಯಲ್ಲಿ ಸಚಿವ ಅಶ್ವತ್ಥನಾರಾಯಣ ಇವರು ಸಿದ್ದರಾಮಯ್ಯ ಕುರಿತಂತೆ ಆಡಿರುವ ಹಿಂಸೆ, ಕೊಲೆ ಮಾಡುವ ಮಾತುಗಳು ಶೋಭೆ ತಾರವು. ಹಾಗೊದು ವೇಳೆ ಅವರು ಹಿಂಸೆಗೆ ಪ್ರಚೋದನೆ ನೀಡೋದಾದಲ್ಲಿ ದಮ್ ಇದ್ರೆ ಕಾಂಗ್ರೆಸ್ಸಿಗರನ್ನು ಮುಟ್ಟಿನೋಡಲಿ ಎಂದು ಸುರ್ಜೆವಾಲಾ ಸವಾಲು ಹಾಕಿದರು.
ದೇಶಾದ್ಯಂತ ಹಿಂಸೆಯ ರಾಜಕೀಯವನ್ನೇ ಬಿಜೆಪಿ ಮಾಡುತ್ತ ಹೊರಟಿದೆ ಅದೀಗ ಕರ್ನಾಟಕದಲ್ಲಿ ಶುರುವಾಗಿದೆ. ಇದನ್ನು ನಾವು ಸಹಿಸೋದಿಲ್ಲ. ಜನರೂ ಹಿಂಸೆಗೆ ಪ್ರೋತ್ಸಾಹ ನೀಡೋದಿಲ್ಲ. ಜನ ಇಂತಹ ಸರ್ಕಾರದಿಂದ ಬೇಸತ್ತಿದ್ದಾರೆ. ಈ ಬಾರಿ ಇವರಿಗೆ ಮನೆ ದಾರಿ ತೋರಿಸುತ್ತಾರೆಂದರು.
'ಗುಜರಾತ್ ರೀತಿ ಕರ್ನಾಟಕದಲ್ಲೂ ಬಿಜೆಪಿ ಟಿಕೆಟ್: ಹಾಲಿ ಎಂಎಲ್ಎ, ಸಚಿವರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ'
ದೇಶಾದ್ಯಂತ ಸಿಎಂ ಬೊಮ್ಮಾಯಿ ಶೇ.40 ಕಮಿಷನ್ ಸಿಎಂ ಎಂದು ಹೆಸರಾಗಿದ್ದಾರೆ. ರಾಜ್ಯದ ಮಾನ ಹರಾಜಿಗೆ ಹಾಕಿದ್ದಾರೆ. ಶಾಸಕರು, ಸಿಎಂ ಹುದ್ದೆಗಳನ್ನು ಮಾರಾಟಕ್ಕೆ ಇಟ್ಟಿದ್ದಾರೆ. ಇದರಿಂದಾಗಿ ದೇಶದಲ್ಲೇ ರಾಜ್ಯದ ಮಾನ ಹರಾಜತ್ತಿದೆ ಎಂದು ಬಿಜೆಪಿಯನ್ನು ಜರಿದರು.
ಸಿದ್ದರಾಮಯ್ಯ ಅಷ್ಟೇ ಯಾಕೆ, ಈಶ್ವರ ಖಂಡರೆ, ಡಿಕೆಶಿ ಇವರನ್ನೂ ನೀವು ಹಿಂಸೆ ಮಾಡ್ತಿರಾ? ಇವರನ್ನೆಲ್ಲ ನಿಮ್ಮ ಮುಂದೆ ತರುತ್ತೇನೆ. ಹಿಂಸೆಯನ್ನು ಪ್ರಚೋದಿಸುವ ನಿಮಗೆ ಜನರೇ ಪಾಠ ಕಲಿಸುತ್ತಾರೆಂದು ಬಿಜೆಪಿಗೆ ಸುರ್ಜೆವಾಲಾ ಜರಿದರು. ಪಂಜಾಬ್, ತ್ರಿಪುರಾ ಸೇರಿದಂತೆ ಹಲವೆಡೆ ಹಿಂಸೆಯ ರಾಜನೀತೆಯನ್ನೇ ಮಾಡಿದ್ದಾರೆ. ಇಲ್ಲಿಯೂ ಅಕ್ಕೇ ಮುಂದಾಗಿದ್ದಾರೆಂದು ಬಿಜೆಪಿಯನ್ನು ತಿವಿದರು.
ಚುನಾವಣೆಯಲ್ಲಿ ಸ್ಪರ್ಧೆಸಲು ಜಡ್ಜ್ ಹುದ್ದೆಗೆ ರಾಜೀನಾಮೆ ನೀಡಿದ ರಾಠೋಡ್
ಬಡವರು, ಶೋಷಿತರು, ನೊಂದವರ ಧ್ವನಿಯಾಗಿ ಯಾರು ಪ್ರತಿನಿಧಿಸುತಾರೋ ಅಂತಹವರನ್ನು ತುಳಿಯುವುದೇ ಬಿಜೆಪಿಯ ರಾಜನೀತಿಯಾಗಿದೆ. ಅದನ್ನೇ ಮಾಡುತ್ತ ಬಂದಿದ್ದಾರೆಂದರು. ಜನರ ಸಂಕಷ್ಟಕ್ಕೆ ಮಿಡಿಯುವ ಕಾಂಗ್ರೆಸ್ ಪಕ್ಷಕ್ಕೆ ಜನರ ಒಲವು ಹೆಚ್ಚುತ್ತಿರೋದು ಬಿಜೆಪಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಬಿಜೆಪಿ ಮುಖಂಡರು ಏನೊಂದೂ ತೋಚದಂತಾಗಿ ಹೀಗೆ ವರ್ತಿಸುತ್ತಿದ್ದಾರೆಂದರು.
ಕಾಂಗ್ರೆಸ್ ಪಕ್ಷ ರಾಜ್ಯದ ಜನರಿಗೆ ಗೃಹ ಲಕ್ಷ್ಮೇ ಹಾಗೂ ಗೃಹ ಜ್ಯೋತಿ ಯೋಜನೆಗಳ ಹೆಸರಲ್ಲಿ ಕಾಂಗ್ರೆಸ್ ಗ್ಯಾರಂಟಿ ನೀಡಿದೆ. ಜನತೆಗೆ ಇದನ್ನು ತಿಳಿಸುವ ಮೂಲಕ ನಾವು ಜನಮತ ಪಡೆಯಲು ಪ್ರಯತ್ನಿಸಬೇಕೆಂದು ಕರೆ ನೀಡಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ್, ಕೆಪಿಸಿಸಿ ಪ್ರ ಕಾರ್ಯದರ್ಶಿ ಶರಣು ಮೋದಿ, ತಿಪ್ಪಣ್ಣ ಕಮಕನೂರ್, ಶಾಸಕಿ ಕನೀಜ್ ಫಾತೀಮಾ, ಮಾಜಿ ಶಾಸಕರಾದ ಅಲ್ಲಂಪ್ರಭು ಪಾಟೀಲ್, ಡಾ. ಶರಣಪ್ರಕಾಶ ಪಾಟೀಲ್, ಬಿಆರ್ ಪಾಟೀಲ್, ಲತಾ ರಾಠೋಡ ಸೇರಿದಂತೆ ಇನೇಕರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.