ಮತ ಜಾಗೃತಿಯಿಂದ ಕಲುಷಿತ ರಾಜಕಾರಣವನ್ನು ಸ್ವಚ್ಛಗೊಳಿಸಲು ಸಾಧ್ಯ: ನಟ ನೀನಾಸಂ ಸತೀಶ್‌

By Kannadaprabha NewsFirst Published Apr 14, 2023, 2:00 AM IST
Highlights

ಎಲ್ಲಿಯವರೆಗೆ ಮತದಾರರು ಜಾಗೃತರಾಗುವುದಿಲ್ಲವೋ ಅಲ್ಲಿಯವರೆಗೆ ಕೆಟ್ಟ ಹಾಗೂ ಭ್ರಷ್ಟರಾಜಕಾರಣಿಗಳನ್ನು ತೊಲಗಿಸಲು ಸಾಧ್ಯವಿಲ್ಲ. ಮತ ಜಾಗೃತಿಯಿಂದ ಕಲುಷಿತ ರಾಜಕಾರಣವನ್ನು ಸ್ವಚ್ಛಗೊಳಿಸಲು ಸಾಧ್ಯ ಎಂದು ಮಂಡ್ಯ ಯೂತ್‌ ಐಕಾನ್‌ ನಟ ನೀನಾಸಂ ಸತೀಶ್‌ ಅಭಿಪ್ರಾಯಪಟ್ಟರು. 

ಮಂಡ್ಯ (ಏ.14): ಎಲ್ಲಿಯವರೆಗೆ ಮತದಾರರು ಜಾಗೃತರಾಗುವುದಿಲ್ಲವೋ ಅಲ್ಲಿಯವರೆಗೆ ಕೆಟ್ಟ ಹಾಗೂ ಭ್ರಷ್ಟ ರಾಜಕಾರಣಿಗಳನ್ನು ತೊಲಗಿಸಲು ಸಾಧ್ಯವಿಲ್ಲ. ಮತ ಜಾಗೃತಿಯಿಂದ ಕಲುಷಿತ ರಾಜಕಾರಣವನ್ನು ಸ್ವಚ್ಛಗೊಳಿಸಲು ಸಾಧ್ಯ ಎಂದು ಮಂಡ್ಯ ಯೂತ್‌ ಐಕಾನ್‌ ನಟ ನೀನಾಸಂ ಸತೀಶ್‌ ಅಭಿಪ್ರಾಯಪಟ್ಟರು. ಜಿಲ್ಲಾಡಳಿತ, ಜಿಪಂ ಸ್ವೀಪ್‌ ಸಮಿತಿ ನಗರದ ಮಂಡ್ಯ ವಿಶ್ವವಿದ್ಯಾಲಯ ಆವರಣದಲ್ಲಿರುವ ಶಾರದಾ ಮಂದಿರದಲ್ಲಿ ಆಯೋಜಿಸಿದ್ದ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಮತದಾರ ಪಾಲ್ಗೊಳ್ಳುವಿಕೆ (ಸ್ವೀಪ್‌) ಕುರಿತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮತದಾನ ಬಹಳ ಅಮೂಲ್ಯವಾದುದು. ಆದ್ದರಿಂದ ಪ್ರತಿಯೊಬ್ಬರೂ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸಿ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ನಾನ್ಯಾಕೆ ಮತದಾನ ಮಾಡಬೇಕು ಎಂಬ ಮನೋಭಾವನೆ ಬೇಡ, ಪ್ರತಿಯೊಬ್ಬರೂ ಲೋಕ ಜ್ಞಾನ ತಿಳಿದುಕೊಳ್ಳಬೇಕು. ಸಮಾಜಕ್ಕೆ ಏನಾದರೂ ಒಳ್ಳೆಯದು ಮಾಡುವ ನಿಟ್ಟಿನಲ್ಲಿ ಆಲೋಚನೆ ಮಾಡಬೇಕು ಎಂದು ಸಲಹೆ ನೀಡಿದರು. ಚುನಾವಣೆಯಲ್ಲಿ ಯಾರು ಗೆದ್ದರೆ ನನಗೇನು ಎಂದು ಸುಮ್ಮನೆ ಕೂರಬಾರದು. ಇದರಿಂದ ಕೆಟ್ಟಹಾಗೂ ಭ್ರಷ್ಟ ರಾಜಕಾರಣಿಗಳನ್ನು ಬೆಳೆಸಲು ನಾವೇ ಕಾರಣರಾದಂತಾಗುತ್ತದೆ. 

Latest Videos

ಸೋನಿಯಾ, ರಾಹುಲ್‌ ಬಿಟ್ಟ ಮುರುಕಲು ಕುರ್ಚಿಗೆ ಖರ್ಗೆ ಅಧ್ಯಕ್ಷ: ಸಂಸದ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ

ಮತದಾರರಿಗೆ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಲು ಚುನಾವಣೆಯಲ್ಲಿ ಮುಕ್ತ ಅವಕಾಶಗಳಿರುತ್ತವೆ. ಒಂದೊಂದು ಮತಗಳು ಬಹಳ ಮಹತ್ವದ್ದಾಗಿವೆ. ಆದ್ದರಿಂದ ಮತದಾರರು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗಬೇಡಿ, ಪಕ್ಷ ನೋಡಿ ಮತ ಹಾಕಬೇಡಿ, ಯೋಗ್ಯ ವ್ಯಕ್ತಿ ನೋಡಿ ಮತ ಹಾಕಿ ಎಂದು ಕಿವಿಮಾತು ಹೇಳಿದರು. ಈ ಸರ್ಕಾರಗಳು ಸರಿ ಹೋಗಬೇಕಾದರೆ ಮೊದಲು ನಾವು ಎಚ್ಚೆತ್ತುಕೊಳ್ಲಬೇಕು. ಇಲ್ಲದಿದ್ದರೆ ಈ ವ್ಯವಸ್ಥೆ ಬದಲಾವಣೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಜಾಗೃತರಾಗಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ. ಎಲ್ಲರೂ ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. 

ಬಡವರ ಮಕ್ಕಳು ಬಡವರಾಗಿಯೇ ಇರಬೇಕೆಂದೇನಿಲ್ಲ. ಎಷ್ಟು ದಿನ ಎಂದು ಕೈ ಕಟ್ಟಿನಿಂತುಕೊಳ್ಳಲು ಸಾಧ್ಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಎಲ್ಲ ರೀತಿಯ ಹಕ್ಕುಗಳಿವೆ. ಅವುಗಳನ್ನು ಪಡೆಯಬೇಕು ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

ಜಿಪಂ ಸಿಇಒ ಶೇಖ್‌ ತನ್‌ವೀರ್‌ ಆಸಿಫ್‌ ಮಾತನಾಡಿದರು. ವೇದಿಕೆಯಲ್ಲಿ ಮಂಡ್ಯ ವಿಶ್ವ ವಿದ್ಯಾಲಯ ಕುಲಪತಿ ಡಾ.ಪುಟ್ಟರಾಜು, ಅಪರ ಜಿಲ್ಲಾಧಿಕಾರಿ ಡಾ.ಎಚ್‌.ಎಲ್‌.ನಾಗರಾಜು, ಜಿಲ್ಲಾ ವಿಶೇಷ ಚೇತನ ರಾಯಭಾರಿ ಡಾ.ಎಂ.ಎಸ್‌.ಚಲುವರಾಜು, ಮಂಡ್ಯ ವಿಶ್ವವಿದ್ಯಾಲಯದ ಕುಲಸಚಿವ ಡಾ.ರಂಗರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಧನಂಜಯ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಟಿ.ಜವರೇಗೌಡ ಹಾಗೂ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಿ ಎಚ್‌.ಎಸ್‌.ನಿರ್ಮಲಾ ಹಾಜರಿದ್ದರು.

ನನ್ನ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿಗೆ ತಲೆಬಿಸಿ: ಶಾಸಕ ಶರತ್‌ ಬಚ್ಚೇಗೌಡ

ರಾಜಕೀಯ ಪ್ರಜ್ಞೆ ಇರುವ ಜಿಲ್ಲೆ ಮಂಡ್ಯ. ಕಳೆದ ವಿಧಾನಸಭೆ ಚುನಾವಣೆ ವೇಳೆ ಮಂಡ್ಯ ಜಿಲ್ಲೆಯಲ್ಲಿ ಶೇ.82.3ರಷ್ಟುಮತದಾನವಾಗಿದ್ದು ರಾಜ್ಯದಲ್ಲಿಯೇ 2ನೇ ಸ್ಥಾನ ಪಡೆದಿತ್ತು. ಈ ಬಾರಿ ಶೇ.90ಕ್ಕಿಂತ ಹೆಚ್ಚು ಮತದಾನ ನಡೆಯುವ ಮೂಲಕ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನ ಪಡೆಯಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ.
- ಡಾ.ಎಚ್‌.ಎನ್‌.ಗೋಪಾಲಕೃಷ್ಣ, ಜಿಲ್ಲಾಧಿಕಾರಿ

click me!