ಮೈತ್ರಿ ಸರ್ಕಾರದಲ್ಲಿ ಕಮಿಷನ್‌ ನನ್ನ ಗಮನಕ್ಕೆ ಬಂದಿಲ್ಲ: ಪರಮೇಶ್ವರ್‌

By Kannadaprabha NewsFirst Published Aug 28, 2022, 11:30 PM IST
Highlights

ಕಮಿಷನ್‌ ಬಗ್ಗೆ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಈಗ ಹೇಳಿದ್ದಾರೆ. ಯಾವ ಸಚಿವಾಲಯದಲ್ಲಿ, ಯಾವ ಸಚಿವರು ಮಾಡಿದ್ದಾರೆ ಎಂಬುದನ್ನು ಅವರೇ ಹೇಳಬೇಕಿದೆ: ಪರಂ 

ತುಮಕೂರು(ಆ.28):  ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಮಿಷನ್‌ ದಂಧೆ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ. ಕಾಂಗ್ರೆಸ್‌ ಸಚಿವರ್ಯಾರೂ ಕಮೀಷನ್‌ ದಂಧೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ. ಜಿ. ಪರಮೇಶ್ವರ್‌ ಹೇಳಿದರು.

ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಆ ಬಗ್ಗೆ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಈಗ ಹೇಳಿದ್ದಾರೆ. ಯಾವ ಸಚಿವಾಲಯದಲ್ಲಿ, ಯಾವ ಸಚಿವರು ಮಾಡಿದ್ದಾರೆ ಎಂಬುದನ್ನು ಅವರೇ ಹೇಳಬೇಕಿದೆ. ಏಕೆಂದರೆ ಮುಖ್ಯಮಂತ್ರಿಯಾಗಿದ್ದವರು ಅವರು, ಹಾಗಾಗಿ ಜವಾಬ್ದಾರಿಯಿಂದ ಈ ಹೇಳಿಕೆ ನೀಡಿದ್ದಾರೆ ಎಂದೆನಿಸುತ್ತದೆ. ಆದರೆ ನಮ್ಮ ಕಾಂಗ್ರೆಸ್‌ನ ಸಚಿವರು ಯಾರೂ ಸಹ ಈ ಪರ್ಸಂಟೆಜ್‌ ದಂಧೆಯಲ್ಲಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು.

40ರಷ್ಟು ಕಮಿಷನ್‌ ಆರೋಪ ನ್ಯಾಯಾಂಗ ತನಿಖೆಯಾಗಲಿ: ಡಿಕೆಶಿ

ರಾಜ್ಯ ಬಿಜೆಪಿ ಸರ್ಕಾರ ಗುತ್ತಿಗೆದಾರರಿಂದ 40 ಪರ್ಸಂಟೆಜ್‌ ಕಮೀಷನ್‌ ಪಡೆಯುತ್ತಿದೆ. ಕ್ರಮ ಕೈಗೊಳ್ಳಬೇಕು ಎಂದು ಪ್ರಧಾನಿಯವರಿಗೆ ಗುತ್ತಿಗೆದಾರ ಕೆಂಪಣ್ಣನವರು ಪತ್ರ ಬರೆದಿದ್ದಾರೆ. ಈ ಪತ್ರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.

ತುಮಕೂರು ವಿವಿಯಲ್ಲಿ ವೀರ ಸಾವರ್ಕರ್‌ ಅಧ್ಯಯನ ಪೀಠ ಸ್ಥಾಪನೆ ಮಾಡಲು ವಿವಿ ಸಿಂಡಿಕೇಟ್‌ ಸಭೆ ಒಪ್ಪಿಗೆ ಸೂಚಿಸಿದೆ ಎಂಬ ಪ್ರಶ್ನೆಗೆ ವಿವಿ ಸಿಂಡಿಕೇಟ್‌ ಸದಸ್ಯರಿಗೆ ರಾಜ್ಯ ಬಿಜೆಪಿ ಸರ್ಕಾರ ಸೂಚನೆ ಕೊಟ್ಟಿರಬಹುದು. ಹಾಗಾಗಿ ರಾಜಕೀಯ ಒತ್ತಡದಿಂದ ಸಾವರ್ಕರ್‌ ಅಧ್ಯಯನ ಪೀಠ ಸ್ಥಾಪನೆ ಮಾಡಲು ಮುಂದಾಗಿರಬಹುದು. ಏಕಾಏಕಿ ಕುಲಪತಿಗಳು, ಕುಲಸಚಿವರು, ವಿವಿ ಸಿಂಡಿಕೇಟ್‌ ಸದಸ್ಯರುಗಳು ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದರು.

ಮೈತ್ರಿ ಸರ್ಕಾರದಲ್ಲೂ ಕಮಿಷನ್‌ ವ್ಯವಹಾರ ನಡೆದಿದೆ: ಎಚ್‌.ಡಿ.ಕುಮಾರಸ್ವಾಮಿ

ತುಮಕೂರು ವಿವಿಯನ್ನು ಇದುವರೆಗೆ ಆಡಳಿತ ನಡೆಸಿರುವ ಎಲ್ಲ ಸರ್ಕಾರಗಳು ನಿರ್ಲಕ್ಷ್ಯ ಮಾಡಿವೆ. ನನ್ನ ಪ್ರಯತ್ನದಿಂದ ವಿಶ್ವವಿದ್ಯಾನಿಲಯವನ್ನು ಸ್ಥಾಪನೆಯಾಯಿತು. ಆದರೆ ಇದುವರೆಗೂ ಹೊಸ ಕ್ಯಾಂಪಸ್‌ಗೆ ಹೋಗಲು ಸಾಧ್ಯವಾಗಿಲ್ಲ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚು ಅನುದಾನ ಬಿಡುಗಡೆ ಮಾಡಿ ಆದಷ್ಟುಬೇಗ ಹೊಸ ಕ್ಯಾಂಪಸ್‌ಗೆ ತುಮಕೂರು ವಿವಿ ಸ್ಥಳಾಂತರವಾಗುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

ಮುನಿಯಪ್ಪನವರು ಪಕ್ಷ ಬಿಡಲ್ಲ: ಮುನಿಯಪ್ಪನವರು ನಮ್ಮ ಪಕ್ಷದ ಹಿರಿಯ ನಾಯಕರು. 7 ಬಾರಿ ಲೋಕಸಭಾ ಸದಸ್ಯರಾಗಿದ್ದವರು. ಅವರು ನಮ್ಮ ಪಕ್ಷ ಬಿಡುವುದಿಲ್ಲ. ಮಾದಾರ ಚನ್ನಯ್ಯ ಸ್ವಾಮೀಜಿಯವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೋ ನನಗೆ ಗೊತ್ತಿಲ್ಲ ಎಂದು ಪರಮೇಶ್ವರ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 

click me!