
ಬೆಂಗಳೂರು(ನ.01): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯನ್ನು ಈ ವರ್ಷಾಂತ್ಯದ ವೇಳೆಗೆ ನಡೆಸುವುದಾಗಿ ಸರ್ಕಾರದ ಚುಕ್ಕಾಣಿ ಹಿಡಿದವರು ಪದೇ ಪದೇ ಹೇಳುತ್ತಿದ್ದರೂ ಅದು ಕಾರ್ಯಸಾಧುವಾಗುವ ಯಾವುದೇ ಲಕ್ಷಣಗಳಿಲ್ಲ.
ವಾರ್ಡ್ ಮೀಸಲಾತಿ ಪ್ರಕಟ ಸೇರಿದಂತೆ ಇನ್ನಿತರ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದು ಮಾತ್ರವಲ್ಲದೆ, ಇದೀಗ ಬಸವನಗುಡಿ ವಾರ್ಡ್ ಹೆಸರು ಬದಲಾವಣೆ ವಿಚಾರ ನ್ಯಾಯಾಲಯದ ಮೆಟ್ಟಿಲೇರುವುದು ಚುನಾವಣೆ ಮುಂದೂಡಲು ಹೊಸ ನೆಪ ಸಿಕ್ಕಂತಾಗಿದೆ.
ಬೆಂಗಳೂರು: ಪಾಲಿಕೆಯಿಂದ ತ್ಯಾಜ್ಯ ವಿಲೇವಾರಿಗೆ ಲ್ಯಾಂಡ್ ಬ್ಯಾಂಕ್
ಬಿಬಿಎಂಪಿಯಲ್ಲಿ ಜನಪ್ರತಿನಿಧಿಗಳ ಅವಧಿ ಮುಗಿದು ಐಎಎಸ್ ಅಧಿಕಾರಿಗಳ ಆಡಳಿತ ಆರಂಭವಾಗಿ ಬರೋಬ್ಬರಿ 3 ವರ್ಷಗಳಾಗಿವೆ. ಆದರೂ, ರಾಜ್ಯ ಸರ್ಕಾರ ಮಾತ್ರ ಬಿಬಿಎಂಪಿ ಚುನಾವಣೆಗಿರುವ ಅಡೆತಡೆಗಳನ್ನು ನಿವಾರಿಸಿ, ಚುನಾವಣೆ ನಡೆಸುವ ಗೋಜಿಗೇ ಹೋಗುತ್ತಿಲ್ಲ. ಮೇಲ್ನೋಟಕ್ಕೆ ಬಿಬಿಎಂಪಿ ಚುನಾವಣೆ ನಡೆಸುತ್ತೇವೆ ಎಂದು ಹೇಳುತ್ತಿದ್ದರೂ, ಪೂರಕ ಪ್ರಕ್ರಿಯೆಗಳನ್ನು ಮಾತ್ರ ಮಾಡುತ್ತಿಲ್ಲ.
ಬಸವನಗುಡಿಯಿಂದ ಚುನಾವಣೆ ವಿಳಂಬ?
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಚನೆಯಾಗಿದ್ದ 243 ವಾರ್ಡ್ಗಳನ್ನು ಹಾಲಿ ಕಾಂಗ್ರೆಸ್ ಸರ್ಕಾರ 225ಕ್ಕೆ ಇಳಿಸಿದೆ. ಹೀಗೆ ವಾರ್ಡ್ಗಳ ಸಂಖ್ಯೆ ಕುಗ್ಗಿಸುವ ಸಂದರ್ಭದಲ್ಲಿ ಹಲವು ವಾರ್ಡ್ಗಳ ಹೆಸರನ್ನು ಬದಲಿಸಲಾಗಿದೆ. ಅದರಲ್ಲಿ 1949ರಿಂದಲೂ ಅಸ್ತಿತ್ವದಲ್ಲಿರುವ ಬಸವನಗುಡಿ ವಾರ್ಡ್ ಹೆಸರನ್ನು ದೊಡ್ಡ ಗಣಪತಿ ದೇವಸ್ಥಾನ ವಾರ್ಡ್ ಎಂದು ಮರುನಾಮಕರಣ ಮಾಡಲಾಗಿದೆ. ಅದರಿಂದ ಸಿಟ್ಟಾಗಿರುವ ಬಸವನಗುಡಿ ನಿವಾಸಿಗಳು ಹಾಗೂ ಕೆಲ ಮಾಜಿ ಕಾರ್ಪೋರೇಟರ್ಗಳು ವಾರ್ಡ್ ಹೆಸರು ಬದಲಾವಣೆ ಹಿಂಪಡೆದು ಬಸವನಗುಡಿ ಎಂದೇ ಮರುನಾಮಕರಣ ಮಾಡಬೇಕೆಂದು ಸರ್ಕಾರಕ್ಕೆ ನಿರ್ದೇಶಿಸುವಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಹೀಗೆ ಒಂದು ವಾರ್ಡ್ನ ವಿಚಾರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವಾಗ ಚುನಾವಣೆಗೆ ಸಂಬಂಧಿಸಿದಂತೆ ಬೇರೆ ಪ್ರಕ್ರಿಯೆಗಳು ನಡೆಸಲು ಸಾಧ್ಯವಿಲ್ಲ ಎಂಬುದು ಸರ್ಕಾರದ ವಾದವಾಗಿದೆ. ಹೀಗಾಗಿಯೇ ಚುನಾವಣೆ ವಿಳಂಬವಾಗುತ್ತಿದೆ ಎಂದು ಸಬೂಬು ಹೇಳಲಾಗುತ್ತಿದೆ.
ಡಿ.13ರೊಳಗೆ ಚುನಾವಣೆ ಕಷ್ಟಸಾಧ್ಯ
ನಿಯಮದಂತೆ ಲೋಕಸಭೆ, ವಿಧಾನಸಭೆ ಚುನಾವಣೆಗಳು ನಡೆಯುವುದಕ್ಕೂ 180 ದಿನಗಳ (6 ತಿಂಗಳು) ಒಳಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿದ್ದರೆ, ಅದರ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಅದರಂತೆ 2024ರಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಅದರ ಪ್ರಕಾರ ಡಿ.13ರೊಳಗೆ ರಾಜ್ಯದಲ್ಲಿ ಬಿಬಿಎಂಪಿ ಚುನಾವಣೆ ಪೂರ್ಣಗೊಳಿಸಬೇಕಿದೆ. ಹಾಗಾದರೆ ಬಿಬಿಎಂಪಿ ಚುನಾವಣೆ ನಡೆಸಲು ಕೇವಲ 43 ದಿನಗಳು ಮಾತ್ರ ಉಳಿದಿವೆ. ಅಷ್ಟರೊಳಗೆ ಬಿಬಿಎಂಪಿ ವಾರ್ಡ್ ಮೀಸಲಾತಿ ಪ್ರಕಟಿಸಿ, ಅದಕ್ಕೆ ಸಾರ್ವಜನಿಕರಿಂದ ಆಕ್ಷೇಪಣೆ ಪಡೆದು, ನಂತರ ಅಂತಿಮ ಮೀಸಲಾತಿ ಪಟ್ಟಿ ಪ್ರಕಟಿಸಬೇಕು. ಅದಾದ ನಂತರ ಚುನಾವಣಾ ಆಯೋಗ ಚುನಾವಣಾ ಪ್ರಕ್ರಿಯೆ ನಡೆಸಿ, ಡಿ.13ರೊಳಗೆ ಫಲಿತಾಂಶ ಪ್ರಕಟಿಸಬೇಕು. ಕೇವಲ 43 ದಿನಗಳಲ್ಲಿ ಇಷ್ಟೆಲ್ಲ ಪ್ರಕ್ರಿಯೆ ನಡೆಸುವುದು ಕಷ್ಟವಾಗಲಿದೆ. ಹೀಗಾಗಿ 2024ರ ಜುಲೈ-ಆಗಸ್ಟ್ವರೆಗೆ ಬಿಬಿಎಂಪಿ ಚುನಾವಣೆ ನಡೆಯುವುದು ಅನುಮಾನ ಎಂಬುದು ಮಾಜಿ ಕಾರ್ಪೋರೇಟರ್ಗಳ ಅಭಿಪ್ರಾಯವಾಗಿದೆ.
ಬಿಬಿಎಂಪಿ ವ್ಯಾಪ್ತಿಯ ಪಬ್, ಬಾರ್ ಪರಿಶೀಲನೆ; ನಿಯಮ ಪಾಲಿಸದ 5 ಉದ್ದಿಮೆಗಳಿಗೆ ಬೀಗ
2024ರಲ್ಲಿ ಲೋಕಸಭೆ ಚುನಾವಣೆಯಿದ್ದು, ಹೀಗಾಗಿ ಈ ವರ್ಷದ ಡಿಸೆಂಬರ್ 13ರೊಳಗೆ ಬಿಬಿಎಂಪಿ ಚುನಾವಣೆ ನಡೆಸಬೇಕು. ಆದರೆ, ಸರ್ಕಾರಕ್ಕೆ ಚುನಾವಣೆ ನಡೆಸುವ ಯಾವುದೇ ಉದ್ದೇಶ ಇಲ್ಲವಾಗಿದೆ. ಒಂದೆಡೆ ಚುನಾವಣೆ ನಡೆಸುತ್ತೇವೆ ಎಂದರೂ, ಅದಕ್ಕೆ ಅಗತ್ಯವಿರುವ ಪ್ರಕ್ರಿಯೆ ನಡೆಸದೆ, ನಿರ್ಲಕ್ಷ್ಯವಹಿಸಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಹೇಳಿದ್ದಾರೆ.
ರಾಜ್ಯ ಸರ್ಕಾರ ಚುನಾವಣೆ ನಡೆಸಲು ಸಿದ್ಧವಿದೆ. ಅದಕ್ಕಾಗಿಯೇ ವಾರ್ಡ್ ಮರುವಿಂಗಡಣೆ ಮಾಡಿ ಪಟ್ಟಿಯನ್ನೂ ಬಿಡುಗಡೆ ಮಾಡಿದೆ. ಆದರೆ, ಬಸವನಗುಡಿ ವಾರ್ಡ್ನ ಹೆಸರು ಬದಲಾವಣೆ ಮಾಡಿದ್ದಕ್ಕೆ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದು, ಅದರಿಂದ ಚುನಾವಣಾ ಪ್ರಕ್ರಿಯೆ ಮಾಡದಂತಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಯಾವುದೇ ದೋಷವಿಲ್ಲ ಎಂದು ಮಾಜಿ ಮೇಯರ್ ಸಂಪತ್ರಾಜ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.