
ವಾಷಿಂಗ್ಟನ್(ಅ.05): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಕಣಿವೆಯಲ್ಲಿ ನಿಷೇಧಾಜ್ಞೆ ಹೇರಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಮಧ್ಯೆ ಕಣಿವೆಯ ವಾಸ್ತವ ಸ್ಥಿತಿಗತಿ ಅರಿಯಲು ಪ್ರಯತ್ನಿಸಿದ ಅಮೆರಿಕದ ಜನಪ್ರತಿನಿಧಿಯೋರ್ವರಿಗೆ ಪ್ರವೇಶ ನಿರಾಕರಿಸಲಾಗಿದೆ ಎನ್ನಲಾಗಿದೆ.
ಕಣಿವೆಯ ವಾಸ್ತವ ಪರಿಸ್ಥಿತಿ ಅರಿಯಲು ಮುಂದಾದಾಗ ಸ್ಥಳೀಯ ಆಡಳಿತ ತಮಗೆ ಪ್ರವೇಶ ನಿರಾಕರಿಸಿದೆ ಎಂದು ಡೆಮಾಕ್ರಟಿಕ್ ಪಕ್ಷದ ಸೆನೆಟರ್ ಕ್ರಿಸ್ ವ್ಯಾನ್ ಹೊಲೆನ್ ಗಂಭೀರ ಆರೋಪ ಮಾಡಿದ್ದಾರೆ.
ಕಣಿವೆಗೆ ಭೇಟಿ ನೀಡಲು ಭಾರತ ಸರ್ಕಾರ ಅನುಮತಿ ನೀಡದಿರುವುದು ವಾಸ್ತವ ಸಂಗತಿ ಬೇರೆಯೇ ಇದೆ ಎಂಬ ಅನುಮಾನ ಮೂಡಲು ಕಾರಣವಾಗಿಎ ಎಂದು ಹೊಲೆನ್ ಕಿಡಿಕಾರಿದ್ದಾರೆ.
ಸಂವಹನ ಜಾಲ ನಿರ್ಬಂಧಿಸಿರುವ ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ಅರಿಯುವುದು ಬಹಳ ಮುಖ್ಯವಾಗಿದ್ದು, ಎಲ್ಲವೂ ಸರಿ ಇದೆ ಎಂದು ಹೇಳುವ ಭಾರತ ಸರ್ಕಾರ ಭಯಪಡುತ್ತಿರುವುದೇಕೆ ಎಂದು ಹೊಲೆನ್ ಪ್ರಶ್ನಿಸಿದ್ದಾರೆ. ಭಾರತ ಸರ್ಕಾರದ ವಿರುದ್ಧ ಹೊಲೆನ್ ಮಾಡಿರುವ ಆರೋಪ ಇದೀಗ ಚರ್ಚೆಗೆ ಇಂಬು ನೀಡಿದೆ.
ಇನ್ನು ಕಾಶ್ಮೀರದಲ್ಲಿನ ನಿರ್ಬಂಧಕ್ಕೆ ಸಂಬಂಧಿಸಿದಂತೆ ಅಮೆರಿಕ ಸೆನೆಟ್ ಸಮಿತಿಯಲ್ಲಿ ಭಾರತದ ವಿರುದ್ಧ ಮಸೂದೆ ಪ್ರಸ್ತಾಪಿಸಲಾಗಿದ್ದು, ಕಾಶ್ಮೀರದಲ್ಲಿನ ಪ್ರಸ್ತುತ ಮಾನವ ಹಕ್ಕುಗಳ ಉಲ್ಲಂಘನೆಯತ್ತ ಗಮನಹರಿಸುವುದು ಅತ್ಯಂತ ಅವಶ್ಯ ಎಂದು ಹೊಲೆನ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.