
ಬೆಂಗಳೂರು (ಏ.22): ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರ ನರಮೇಧ ನಡೆದಿದ್ದು, ಕ್ಷಣದಿಂದ ಕ್ಷಣಕ್ಕೆ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದ. ಇಲ್ಲಿಯವರೆಗೂ ಅಧಿಕೃತವಾಗಿ ಸಾವಿನ ಸಂಖ್ಯೆ ಘೋಷಣೆಯಾಗಿಲ್ಲ. ಇದರ ನಡುವೆಯೇ ಬಹುತೇಕ ಮಾಧ್ಯಮಗಳಲ್ಲಿ ಎರಡು ವಿದೇಶಿಯರು ಸೇರಿದಂತೆ 28 ಮಂದಿ ಪ್ರವಾಸಿಗರು ಸಾವು ಕಂಡಿದ್ದಾರೆ ಎಂದು ವರದಿಯಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆಯೂ ಇದೆ.
ಈ ಘಟನೆಯಲ್ಲಿ ಕರ್ನಾಟಕದ ಇಬ್ಬರು ಪ್ರವಾಸಿಗರು ಸಾವು ಕಂಡಿದ್ದಾರೆ. ಕಾಶ್ಮೀರ ಪ್ರವಾಸದಲ್ಲಿದ್ದ ಶಿವಮೊಗ್ಗ ಮೂಲದ ಮಂಜುನಾಥ್ ರಾವ್ ಹಾಗೂ ಹಾವೇರಿ ಮೂಲದ ಭರತ್ ಭೂಷಣ್ ಸಾವು ಕಂಡಿದ್ದಾರೆ. ಭರತ್ ಭೂಷಣ್ ಮಾಜಿ ಸ್ಪೀಕರ್ ಎಂಬಿ ಕೋಳಿವಾಡ ಅವರ ದೂರದ ಸಂಬಂಧಿಯ ಆಗಿದ್ದಾರೆ.
ಇದರ ನಡುವೆ ಮಂಜುನಾಥ್ ರಾವ್ ಅವರು ತಮ್ಮ ಪತ್ನಿ ಪಲ್ಲವಿ ಅವರೊಂದಿಗೆ ದಾಲ್ ಲೇಕ್ನಲ್ಲಿ ವಿಹಾರ ಮಾಡುತ್ತಿರುವ ಕೊನೇ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ತಾವು ಎರಡು ದಿನಗಳ ಹಿಂದೆ ಕಾಶ್ಮೀರ ಪ್ರವಾಸಕ್ಕೆ ಬಂದಿದ್ದು, ಪ್ರವಾಸವನ್ನು ತುಂಬಾ ಎಂಜಾಯ್ ಮಾಡುತ್ತಿರುವುದಾಗಿ ಹೇಳಿದ್ದಾರೆ. ಆದರೆ, ಇದೇ ವಿಡಿಯೋ ಅವರ ಕೊನೇ ವಿಡಿಯೋ ಆಗಿರಲಿದೆ ಎನ್ನುವ ಸಣ್ಣ ಸುಳಿವೂ ಕೂಡ ದಂಪತಿಗಳಿಗೆ ಇದ್ದಿರಲಿಲ್ಲ.
'ನಾನು ಮಂಜುನಾಥ್. ಕರ್ನಾಟಕದ ಶಿವಮೊಗ್ಗದವನು. ನಾವು ಇಂಡಿಯನ್ ಟ್ರಾವೆಲ್ಸ್ ಟೂರ್ನೊಂದಿಗೆ ಬುಕ್ ಮಾಡಿ ಕಾಶ್ಮೀರ ಪ್ರವಾಸಕ್ಕೆ ಬಂದಿದ್ದೇವೆ. ಇಂದು ನಮ್ಮ ಕಾಶ್ಮೀರ ಪ್ರವಾಸದ 2ನೇ ದಿನ' ಎಂದು ಮಂಜುನಾಥ್ ಹೇಳಿದ್ದಾರೆ. ನಂತರ ಮಾತನಾಡುವ ಪಲ್ಲವಿ, 'ನಿನ್ನೆ ನಾವು ಬೋಟ್ ಹೌಸ್ಗೆ ಹೋಗಿದ್ದೆವು. ಬೋಟ್ ಹೌಸ್ ತುಂಬಾ ಚೆನ್ನಾಗಿತ್ತು. ಈಗ ನಾವು ಶಿಖಾರಾ ರೈಡ್ ಮಾಡುತ್ತಿದ್ದೇವೆ. ಇದನ್ನು ಮೊಹಮದ್ ರಫೀಕ್ ಎನ್ನುವವರು ನಮಗೆ ಮಾಡಿಸುತ್ತಿದ್ದಾರೆ. ಇಲ್ಲಿನ ನಮ್ಮ ಎಲ್ಲಾ ಟೂರ್ಗಳನ್ನು ವ್ಯವಸ್ಥೆ ಮಾಡಿದ್ದ ಕಾಜಲ್ ಠಾಕೂರ್ ಎನ್ನುವವರು. ಇವರು ಇಂಡಿಯಲ್ ಟ್ರಾವೆಲ್ಸ್ ಟೂರ್ಸ್ನವರು. ಧನ್ಯವಾದ್, ಥ್ಯಾಂಕ್ಯು, ಥ್ಯಾಂಕ್ಯು ಕಾಜಲ್ ಜೀ' ಎಂದು ಇಬ್ಬರೂ ಮಾತನಾಡಿದ್ದಾೆ.
ಪಹಲ್ಗಾಮ್ ಎಂಬ ರೆಸಾರ್ಟ್ ಪಟ್ಟಣದಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಬೈಸರನ್, ದಟ್ಟವಾದ ಪೈನ್ ಕಾಡುಗಳು ಮತ್ತು ಪರ್ವತಗಳಿಂದ ಸುತ್ತುವರೆದಿರುವ ವಿಸ್ತಾರವಾದ ಹುಲ್ಲುಗಾವಲು ಮತ್ತು ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ. ಇದೇ ಪ್ರದೇಶದಲ್ಲಿ ಪ್ರವಾಸಿಗರ ರಕ್ತದೋಕುಳಿ ಹರಿಸಲಾಗಿದೆ.
'ಮಿನಿ ಸ್ವಿಟ್ಜರ್ಲೆಂಡ್' ಎಂದು ಕರೆಯಲ್ಪಡುವ ಹುಲ್ಲುಗಾವಲು ಪ್ರದೇಶಕ್ಕೆ ಶಸ್ತ್ರಸಜ್ಜಿತ ಭಯೋತ್ಪಾದಕರು ನುಗ್ಗಿ, ತಿಂಡಿ ತಿನ್ನುತಿದ್ದ, ಸುತ್ತಲೂ ಓಡಾಡುತ್ತದ್ದ,, ಕುದುರೆ ಸವಾರಿ ಮಾಡುತ್ತಿದ್ದ ಅಥವಾ ಪಿಕ್ನಿಕ್ ಮಾಡುತ್ತಿದ್ದ ಪ್ರವಾಸಿಗರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದರು ಎಂದು ಅಧಿಕಾರಿಗಳು ಮತ್ತು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ದಾಳಿಯಲ್ಲಿ ಕನಿಷ್ಠ 28 ಮಂದಿ ಸಾವು ಕಂಡಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಕಾಶ್ಮೀರದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದಕ ದಾಳಿಯ ಸುದ್ದಿ ಹರಡುತ್ತಿದ್ದಂತೆ, ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೈಬಾ (ಎಲ್ಇಟಿ) ಭಯೋತ್ಪಾದಕ ಗುಂಪಿನ ಭಾಗವಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ಭಯೋತ್ಪಾದಕ ಗುಂಪು ಜಮ್ಮುವಿನ ಕಿಶ್ತ್ವಾರ್ ನಿಂದ ದಾಟಿ ದಕ್ಷಿಣ ಕಾಶ್ಮೀರದ ಕೊಕರ್ನಾಗ್ ಮೂಲಕ ಬೈಸರನ್ ತಲುಪಿರುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಹಲ್ಗಾಮ್ನಲ್ಲಿ 25 ಪ್ರವಾಸಿಗರ ನರಮೇಧ, ದಾಳಿಯ ಹೊಣೆ ಹೊತ್ತುಕೊಂಡ The Resistance Front
ಸೌದಿ ಅರೇಬಿಯಾ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದಾಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಮತ್ತು ಎಲ್ಲಾ ಸಂಸ್ಥೆಗಳೊಂದಿಗೆ ತುರ್ತು ಭದ್ರತಾ ಪರಿಶೀಲನಾ ಸಭೆ ನಡೆಸಲು ಶೀನಗರಕ್ಕೆ ತೆರಳಿದ್ದಾರೆ.
ಬೈಸರನ್ ಕಣಿವೆಯಲ್ಲಿ ರಕ್ತದೋಕುಳಿ, ಉಗ್ರರು ಪಹಲ್ಗಾಮ್ ಟಾರ್ಗೆಟ್ ಮಾಡಿದ್ಯಾಕೆ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.