ಫಾರೂಕ್ ಅಳಿಯ, ಸೇನಾಧಿಕಾರಿ, ಕಿರಿಯ ಎಂಪಿ ಪೈಲಟ್ ಜೀವನಗಾಥೆಯಿದು!

By Web DeskFirst Published Dec 17, 2018, 2:12 PM IST
Highlights

ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಪ್ರಮುಖ ಪಾತ್ರ ವಹಿಸಿದ ಹಾಗೂ ರಾಜಸ್ಥಾನದ ನೂತನ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಸಚಿನ್ ಪೈಲಟ್ ರಾಜಕೀಯ ಕ್ಷೇತ್ರದಲ್ಲಿ ಸುದ್ದಿಯಲ್ಲಿರುವ ನಾಯಕ. ಅತ್ಯಂತ ಕಿರಿಯ ವಯಸ್ಸಿನಲ್ಲೇ ಕೇಂದ್ರ ಸಚಿವರಾಗಿ ಮಿಂಚಿದ್ದಲ್ಲದೇ, ಭಾರತೀಯ ಸೇನೆಗೂ ಸೇವೆ ಸಲ್ಲಿಸಿದ ಈ ಯುವ ನಾಯಕನ ರಾಜಕೀಯದಾಚೆಗಿನ ಬದುಕು ಕೂಡಾ ಬಹಳಷ್ಟು ಕುತೂಹಲಭರಿತವಾಗಿದೆ. ಮುಖ್ಯಮಂತ್ರಿಯ ಮಗಳನ್ನೇ ಪ್ರೀತಿಸಿದ ಪೈಲಟ್, ಮದುವೆಗೆ ವಿರೋಧ ವ್ಯಕ್ತವಾದಾಗ ಹೆದರದೆ, ಎಲ್ಲರನ್ನೂ ಎದುರಿಸಿ ಮದುವೆಯಾದ ಆ ಕಥೆಯೇ ಬಹಳ ರೋಚಕವಾಗಿದೆ. ಸಿನಿಮೀಯ ಶೈಲಿಯಂತೆಯೇ ನಡೆದ ಅವರ ಇಂಟರೆಸ್ಟಿಂಗ್ ಪ್ರೇಮ್ ಕಹಾನಿ ಇಲ್ಲಿದೆ ನೋಡಿ

ಜೈಪುರ[ಡಿ.17]: ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದ್ದ ಪ್ರಮುಖ ನಾಯಕರಾದ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವೆ ಸಿಎಂ ಗದ್ದುಗೆ ಏರಲು ತೀವ್ರ ಪೈಪೋಟಿ ಏರ್ಪಟ್ಟಿತ್ತು. ಕೊನೆಗೂ ಇಬ್ಬರು ನಾಯಕರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ಹೈಕಮಾಂಡ್ ಗೆಹ್ಲೋಟ್‌ರನ್ನು ರಾಜಸ್ಥಾನದ ಸಿಎಂ ಹಾಗೂ ಸಚಿನ್ ಪೈಲಟ್‌ರನ್ನು ಡಿಸಿಎಂ ಆಗಿ ನೇಮಕ ಮಾಡಿದ್ದಾರೆ. ಈ ಮೂಲಕ ಇಬ್ಬರೂ ನಾಯಕರು ಹಾಗೂ ಅವರ ಬೆಂಬಲಿಗರನ್ನು ತೃಪ್ತಿಪಡಿಸಿದ್ದಾರೆ. ಹೀಗಿರುವಾಗ ಯುವ ನಾಯಕ ಹಾಗೂ ರಾಜಸ್ಥಾನ ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿರುವ ಸಚಿನ್ ಪೈಲಟ್‌ರವರ ರಾಜಕೀಯದಾಚೆಗಿನ ಬದುಕಿನ ವಿಚಾರಗಳು ನಿಜಕ್ಕೂ ಆಸಕ್ತಿದಾಯಕವಾಗಿವೆ. ಸಿನಿಮಾದಲ್ಲಿರುವ ಕಥೆಯಂತೆ ಮುಸ್ಲಿಂ ಪ್ರಭಾವಿ ರಾಜಕಾರಣಿಯ ಮಗಳನ್ನೇ ಪ್ರೀತಿಸಿ ಮದುವೆಯಾಗುವ ಅವರ ಲವ್ ಸ್ಟೋರಿ ಹಾಗೂ ಭಾರತೀಯ ಸೇನೆಗೆ ಅವರ ಸೇವೆ ನಿಜಕ್ಕೂ ಪ್ರೇರಣೆ ನೀಡುವಂತಹುದ್ದು.

ಹೌದು ಸಚಿನ್ ಪೈಲಟ್ ಮದುವೆಯಾಗಿದ್ದು, ಜಮ್ಮು ಕಾಶ್ಮೀರದ ಮುಸ್ಲಿಂ ಪ್ರಭಾವೀ ರಾಜಕಾರಣಿ ಹಾಗೂ ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲಾ ಮಗಳು ಹಾಗೂ ಒಮರ್ ಅಬ್ದುಲ್ಲಾರ ತಂಗಿ ಸಾರಾ ಅಬ್ದುಲ್ಲಾರನ್ನು. ಹೌದು ಇದು ಅಚ್ಚರಿ ಮೂಡಿಸಿದರೂ ನಂಬಲೇಬೇಕಾದ ವಿಚಾರ. ಇನ್ನು ಫರೂಕ್ ಅಬ್ದುಲ್ಲಾ ತಮ್ಮ ನಡುವಿನ ಪ್ರೀತಿಯನ್ನು ವಿರೋಧಿಸುತ್ತಾರೆಂದು ತಿಳಿದಾಗ, ಸಾರಾಳ ತಂದೆ, ಓರ್ವ ಮುಖ್ಯಮಂತ್ರಿಯನ್ನೇ ಎದುರಾಕಿಕೊಂಡು ಪ್ರೀತಿಸಿದ ಹುಡುಗಿಯನ್ನು ಕರೆದೊಯ್ದು ಮದುವೆಯಾಗಿದ್ದರು. 

ಮೋದಿ ಫೋಟೋಗೆ ಮಸಿ ಬಳಿದ್ರಾ ಸಚಿನ್ ಪೈಲಟ್?

ಹೇಗೆ ಆರಂಭವಾಯ್ತು ಇವರ ಪ್ರೇಮ್ ಕಹಾನಿ?

ಸಚಿನ್ ಪೈಲಟ್ ಮತ್ತು ಸಾರಾ ಅಬ್ದುಲ್ಲಾ ಮೊದಲ ಬಾರಿಗೆ ಭೇಟಿಯಾಗಿದ್ದು ಲಂಡನ್​ನಲ್ಲಿ. ಉನ್ನತ ಶಿಕ್ಷಣಕ್ಕೆಂದು ಇಬ್ಬರೂ ಲಂಡನ್ ಗೆ ತೆರಳಿದ್ದರು. ಅಲ್ಲಿ ಪರಿಚಯವಾದ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ ಶಿಕ್ಷಣ ಮುಗಿಸಿ ಭಾರತಕ್ಕೆ ಮರಳಿದ ಬಳಿಕ ಸಚಿನ್​ ಪೈಲಟ್​ ಸಾರಾಳನ್ನು ತುಂಬಾ ಮಿಸ್ ಮಾಡಿಕೊಳ್ಳಲಾರಂಭಿಸಿದ್ದರು. ಬಳಿಕವೇ ಅವರಿಗೆ ತಾನು ಸಾರಾಳನ್ನು ಪ್ರೀತಿಸುತ್ತಿದ್ದೇನೆಂದು ಅರಿವಾಗಿದ್ದು. ಆ ಕೂಡಲೇ ಸಾರಾಳ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದು, ಇದಕ್ಕೆ ಸಾರಾ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಾಗ ಅವರನ್ನೇ ಮದುವೆಯಾಗುವುದಾಗಿ ನಿರ್ಧರಿಸಿದ್ದಾರೆ. ಮನೆಯಲ್ಲಿ ವಿಚಾರ ತಿಳಿಸಿದಾಗ ಆರಂಭದಲ್ಲಿ ವಿರೋಧ ವ್ಯಕ್ತವಾಯಿತಾದರೂ, ಬಳಿಕ ಒಬ್ಬನೇ ಮಗನೆಂಬ ಕಾರಣಕ್ಕಾಗಿ ಒಪ್ಪಿಗೆ ನೀಡಿದ್ದಾರೆ.

ಪತ್ನಿ, ಅರಮನೆ, ಶ್ರೀಮಂತಿಕೆ: ಜ್ಯೋತಿರಾದಿತ್ಯ ಸಿಂಧಿಯಾ ಲೈಫ್ ಸ್ಟೈಲ್!

ಆದರೆ ಇತ್ತ ಸಾರಾ ಮನೆಯಲ್ಲಿ ಮಾತ್ರ ಪರಿಸ್ಥಿತಿ ಭಿನ್ನವಾಗಿತ್ತು. ಹೇಳಿ ಕೇಳಿ ಫರೂಕ್ ಅಬ್ದುಲ್ಲಾ ಮುಖ್ಯಮಂತ್ರಿಗಳು, ಅದೂ ಅಲ್ಲದೇ ಜಮ್ಮು ಕಾಶ್ಮೀರದ ಪ್ರಭಾವೀ ಮುಸ್ಲಿಂ ಕುಟುಂಬ ಹೀಗಾಗಿ ತಮ್ಮ ಮಗಳು ಹಿಂದೂ ಹುಡುಗನನ್ನು ಮದುವೆಯಾದರೆ ತಮ್ಮ ವರ್ಚಸ್ಸು ಕಡಿಮೆಯಾಗುತ್ತೆ ಹಾಗೂ ರಾಜಕೀಯವಾಗಿಯೂ ಹಿನ್ನಡೆಯಾಗುತ್ತೆ ಎಂದು ಮಗಳ ಪ್ರೀತಿಯನ್ನು ತಂದೆ ತೀವ್ರವಾಗಿ ವಿರೋಧಿಸಿದರು.

ರಾಜಸ್ಥಾನಕ್ಕೆ ಅಶೋಕ್ ಸಿಎಂ: ಸಚಿನ್ ಆದರು ಡಿಸಿಎಂ!

ಆದರೆ ಪೈಲಟ್ ಮಾತ್ರ ಏನೇ ಆದರೂ ಮನಸ್ಸು ಕೊಟ್ಟ ಹುಡುಗಿನ್ನು ಬಿಡಲು ಸಿದ್ಧರಾಗಿರಲಿಲ್ಲ. ಹೀಗಾಗಿ ಬೇರೇನನ್ನೂ ಯೋಚಿಸದೆ ಮುಖ್ಯಮಂತ್ರಿ ಕುಟುಂಬವನ್ನೇ ಎದುರಾಕಿಕೊಂಡು 2004ರಲ್ಲಿ ಸಾರಾಳನ್ನು ಮದುವೆಯಾದರು. ಈ ಮದುವೆಗೆ ಸಚಿನ್ ಕುಟುಂಬವಿಡೀ ಉಪಸ್ಥಿತರಿದ್ದರಾದರೂ, ಸಾರಾ ಮನೆಯಿಂದ ಯಾರೊಬ್ಬರೂ ಆಗಮಿಸಿರಲಿಲ್ಲ. 

ಹೀಗೆ ರಾಜಕಾರಣಿಯೊಬ್ಬರನ್ನು ವಿರೋಧಿಸಿ ಮದುವೆಯಾದ ಈ ಜೋಡಿಗೆ ಆರಂಭದಲ್ಲಿ ಸಂಕಷ್ಟ ಎದುರಾಗಿತ್ತಾದರೂ, ಚುನಾವಣೆಯೊಂದರಲ್ಲಿ ಸಚಿನ್ ಭರ್ಜರಿಯಾಗಿ ಗೆಲುವು ಸಾಧಿಸಿದಾಗ ಸಾರಾ ಕುಟುಂಬದವರ ಕೋಪ ತಣ್ಣಗಾಗಿತ್ತು. ಸಚಿನ್ ಮುಂದೊಂದು ದಿನ ಬಹುದೊಡ್ಡ ರಾಜಕಾರಣಿಯಾಗುತ್ತಾರೆ ಎಂದು ಅರಿತ ಫರೂಕ್ ಅಬ್ದುಲ್ಲಾ ಕುಟುಂಬ ಕೊನೆಗೂ ಮಗಳು ಹಾಗೂ ಅಳಿಯನ್ನು ಒಪ್ಪಿಕೊಳ್ಳುತ್ತಾರೆ. ಆರಂಭದಲ್ಲಿ ಯಾರನ್ನು ಫರೂಕ್ ಅಬ್ದುಲ್ಲಾ ವಿರೋಧಿಸಿದ್ದರೋ, ಅದೇ ಸಚಿನ್ ಪೈಲಟ್ ರನ್ನು ಬಾಯ್ತುಂಬ ಹಾಡಿ ಹೊಗಳಲಾರಂಭಿಸಿದ್ದರು. ಇದಾದ ಕೆಲ ವರ್ಷಗಳಲ್ಲೇ ಸಚಿನ್ ಪೈಲಟ್ ಮನಮೋಹನ್ ಸಿಂಗ್ ಸಚಿವ ಸಂಪುಟದಲ್ಲಿ ಕೇಂದ್ರ ಸಚಿವರಾದರು. ಈ ಮೂಲಕ ಕೇಂದ್ರ ಸಚಿವರಾದ ಅತ್ಯಂತ ಯುವ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾದರು. 

ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆದ್ದಿದ್ದರ ಗುಟ್ಟೇನು?

ಸೈನಿಕರಾಗಿ ಸೇವೆ ಸಲ್ಲಿಸಿದ್ದಾರೆ ಸಚಿನ್ ಪೈಲಟ್
 
ಗುಜ್ಜರ್​​ ಕುಟುಂಬದ ಸಚಿನ್​ ಪೈಲಟ್​ ತಂದೆ ರಾಜೇಶ್​ ಪೈಲಟ್​ ಭಾರತೀಯ ವಾಯು ಸೇನೆಯಲ್ಲಿ ಪೈಲಟ್ ಆಗಿದ್ದವರು, ಅವರ ಅಜ್ಜ ಕೂಡಾ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ತನ್ನ ಮಗ ಕೂಡಾ ಸೇನೆಗೆ ಭರ್ತಿಯಾಗಬೇಕೆಂಬುವುದು ಸಚಿನ್ ತಂದೆಯ ಕನಸಾಗಿತ್ತು. ತಂದೆಯ ಆಸೆಯಂತೆ ಮಗ ಸಚಿನ್​ ಪೈಲಟ್​ ಕೂಡ 2012ರಲ್ಲಿ ಕೇಂದ್ರ ಸಚಿವರಾಗಿದ್ದಾಗಲೇ  ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಟೆರಿಟೋರಲ್​ ಆರ್ಮಿ ವಿಭಾಗದಲ್ಲಿ ಸೇನಾ ಯೂನಿಫಾರಂ ತೊಟ್ಟೇ ಕೆಲಸ ಮಾಡಿದ್ದರು ಎಬುವುದು ಉಲ್ಲೇಖನೀಯ.

ಪೈಲೆಟ್ ಎದುರು ಸೋಲುಂಡ ಬಿಜೆಪಿ ಏಕೈಕ ಮುಸ್ಲಿಂ ಅಭ್ಯರ್ಥಿ!

ಸದ್ಯ ರಾಜಕೀಯ ಕ್ಷೇತ್ರದಲ್ಲಿ ಮಿಂಚುತ್ತಿರುವ ಸಚಿನ್ ಪೈಲಟ್ ಇಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಕಾಂಗ್ರೆಸ್ ಗೆ ಜಯ ತಂದುಕೊಟ್ಟ ಯುವ ನಾಯಕರೆಂದೇ ಪ್ರಸಿದ್ಧರಾಗುತ್ತಿದ್ದಾರೆ. ಅಲ್ಲದೇ ಚಿಕ್ಕ ವಯಸ್ಸಿನಲ್ಲೇ ಡಿಸಿಎಂ ಹುದ್ದೆ ಪಡೆದಿದ್ದಾರೆ ಹಾಗೂ ಮುಂದೆ ಸಿಎಂ ಆಗುವ ಕನಸನ್ನೂ ಹೊಂದಿದ್ದಾರೆ. ಇಂದು ಕಾಂಗ್ರೆಸ್ ನಾಯಕರು ಹಾಗೂ ರಾಜ್ಯದ ಜನತೆಯ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಅಧಿಕೇತವಾಗಿ ರಾಜಸ್ಥಾನದ ಡಿಸಿಎಂ ಆಗಿದ್ದಾರೆ.

click me!