
ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ, 4-15 ಕ್ಕೆ ರಾಮಾಯಣ ಟ್ರೇಲರ್ ಬಿಡುಗಡೆ
ಜಾಗತಿಕವಾಗಿ ಭಾರೀ ನಿರೀಕ್ಷೆ ಸೃಷ್ಟಿಸಿದ್ದ 'ರಾಮಾಯಣ' ಚಿತ್ರದ ಟ್ರೈಲರ್ (Ramayana Trailer) ಚಿತ್ರತಂಡ ಘೋಷಿಸಿದಂತೆ ಇಂದು ಬೆಳಿಗ್ಗೆ ರಿಲೀಸ್ ಆಗಿದೆ. ರಣಬೀರ್ ಕಪೂರ್ 'ರಾಮ', ಯಶ್ 'ರಾವಣ', ಹಾಗೂ ಸಾಯಿ ಪಲ್ಲವಿ 'ಸೀತೆ'ಯಾಗಿ ಮುಂಬರುವ ಈ ರಾಮಾಯಣ ಸಿನಿಮಾದಲ್ಲಿ ಕಾಣಿಸಿಕೊಂಡಿರುವುದು ಬಹುತೇಕರಿಗೆ ಗೊತ್ತೇ ಇದೆ. ಬಹುನಿರೀಕ್ಷಿತ ರಾಮಾಯಣ ಟ್ರೇಲರ್ ಬಿಡುಗಡೆ ಬೆನ್ನಲ್ಲೇ, ರಾಮಾಯಣದ ಟ್ರೇಲರ್ ಹಾಗೂ ಪಾತ್ರಧಾರಿಗಳ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ.
ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೆಳಗಿನ ಜಾವ, ಬ್ರಹ್ಮ ಮುಹೂರ್ತದಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಇಂದು ಬೆಳಗ್ಗೆ 4.15ಕ್ಕೆ ರಿಲೀಸ್ ಆಗಿರುವ ರಾಮಾಯಣ ಚಿತ್ರದ ಟ್ರೈಲರ್ ಬಗ್ಗೆ ಇದೀಗ ಮನೆಮನೆಗಳಲ್ಲೂ ಟಾಕ್ ಶುರುವಾಗಿದೆ. ಯೂಟ್ಯೂಬ್ ನೋಡಿ ಜನರು ರಾಮಾಯಣದ ತುಣುಕನ್ನು ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ. 4 ಸಾವಿರ ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿರುವ ರಾಮಾಯಣ ಚಿತ್ರದ ಬಗ್ಗೆಯೇ ವಿಶ್ವದಲ್ಲಿ ಈಗ ಎಲ್ಲಾ ಕಡೆ ಚರ್ಚೆ ಶುರುವಾಗಿದೆ. ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಚಿತ್ರಕ್ಕೆ ನಮಿತ್ ಮಲ್ಹೋತ್ರಾ ಜೊತೆಗೆ ಯಶ್ ಕೂಡ ಬಂಡವಾಳ ಹೂಡಿದ್ದಾರೆ.
ಹೌದು, ರಾಮಾಯಣ ಚಿತ್ರದ ಬಗ್ಗೆ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಹಲವು. ರಾಮಾಯಣ ಚಿತ್ರ ಬರುತ್ತೆ ಅಂದಾಗ, ಅದರಲ್ಲಿ ರಾಮನ ಪಾತ್ರವನ್ನು ರಣಬೀರ್ ಕಪೂರ್, ರಾವಣನಾಗಿ ಯಶ್ ಹಾಗೂ ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ, ಹಲವರು ರಾಮನಾಗಿ ರಣಬೀರ್ ಕಪೂರ್ ನ್ಯಾಯ ಒದಗಿಸುವ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು. ಸೀತೆಯಾಗಿ ಸಾಯಿ ಪಲ್ಲವಿ ಆಯ್ಕೆಯನ್ನು ಹಲವರು ಪ್ರಶ್ನೆ ಮಾಡಿದ್ದರು. ರಾವಣನ ಆಯ್ಕೆಯನ್ನು ಕೂಡ ಕೆಲವರು ಟೀಕಿಸಿದ್ದರು. ಇಂದು ಟ್ರೇಲರ್ ಬಡುಗಡೆ ಆಗುವವರೆಗೂ ಬೂದಿ ಮುಚ್ಚಿದ ಕೆಂಡದಂತೆ ಹೊಗೆಯಾಡುತ್ತಲೇ ಇತ್ತು. ಆದರೆ, ಈಗ ಇಂಟರ್ನೆಟ್ ಜಗತ್ತು ಏನು ಹೇಳ್ತಿದೆ ಗೊತ್ತಾ? ಮುಂದೆ ನೋಡಿ..
ರಾವಣನಾಗಿ ಯಶ್ ಆರ್ಭಟ
ರಾಮಾಯಣ ಚಿತ್ರದ ಟ್ರೇಲರ್ ಶುರುವಿನಲ್ಲೇ ರಾವಣ ಪಾತ್ರಧಾರಿ ಯಶ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ನಟ ಯಶ್ ರಾವಣನಾಗಿ ಅಕ್ಷರಶಃ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. ರಾವಣನ ಎಂಟ್ರಿ, ಡೈಲಾಗ್, ರಾಮಾಯಣದ ಸೆಟ್ ಕಟ್ಟಿಕೊಟ್ಟಿರುವ ರೀತಿ ಅನನ್ಯ ಹಾಗೂ ಅಮೋಘ ಎಂಬಂತೆ ಮೂಡಿಬಂದಿದೆ. ರಾವಣನ ಪಾತ್ರಕ್ಕೆ ಯಶ್ ಸೂಕ್ತ ಆಯ್ಕೆ ಎಂಬ ಮಾತು ಬಹುತೇಕರಿಂದ ಕೇಳಿಬರುತ್ತಿದೆ. ಕನ್ನಡದ ಹೆಮ್ಮೆಯ ನಟ ಯಶ್ ಅವರು ರಾವಣ ಪಾತ್ರದ ಜೊತೆಗೆ ಮುಂಬರುವ ರಾಮಾಯಣ ಚಿತ್ರದ ನಿರ್ಮಾಣದಲ್ಲಿ ಕೂಡ ಭಾಗಿಯಾಗಿರುವುದು ವಿಶೇಷ.
ಇಂದು ಬಿಡುಗಡೆ ಆಗಿರುವ ರಾಮಾಯಣ ಟ್ರೇಲರ್ನಲ್ಲಿ, ಬಾಲವುಡ್ ನಟ ರಣಬೀರ್ ಕಪೂರ್ ಅವರು ಅಮೋಘವಾಗಿ ಮಿಂಚಿದ್ದಾರೆ. ರಾಮನ ಪಾತ್ರದಲ್ಲಿ ನಟ ರಣಬೀರ್ ಕಪೂರ್ ಲುಕ್ ಹಾಗೂ ಪಾತ್ರಪೋಷಣೆ ಅತ್ಯದ್ಭುತ ಎಂಬಂತೆ ಮೂಡಿಬಂದಿದೆ. ಬಿಡುಗಡೆ ಆಗಿರುವ ಟ್ರೇಲರ್ನಲ್ಲಿ ಸನ್ನಿವೇಶಕ್ಕೆ ತಕ್ಕಂತೆ, ಸೌಮ್ಯ ಸ್ವಭಾವದ ರಾಮನಾಗಿ ನಟ ರಣಬೀರ್ ಕಪೂರ್ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಸೀತೆಯಾಗಿ ಸಾಯಿ ಪಲ್ಲವಿ!
ಈ ಮೊದಲು ಸೀತೆಯಾಗಿ ಸಾಯಿ ಪಲ್ಲವಿ ಆಯ್ಕೆಯನ್ನು ಟೀಕೆ ಮಾಡಿದ್ದವರಿಗೆ ಉತ್ತರ ಎಂಬಂತೆ ನಟಿ ಸಾಯಿ ಪಲ್ಲವಿಯವರು ಟ್ರೇಲರ್ನಲ್ಲಿ ಮಿಂಚು ಹರಿಸಿದ್ದಾರೆ. ಮುಗ್ಧ ನೋಟ, ದೈವಿಕ ಕಳೆಯ ಮೂಲಕ ನಟಿ ಸಾಯಿ ಪಲ್ಲವಿ ಮೊದಲ ನೋಟದಲ್ಲೇ ಇಷ್ಟವಾಗುತ್ತಾರೆ. ಟ್ರೇಲರ್ನ ಕೆಲವೇ ಕೆಲವು ಸೆಕೆಂಡ್ಗಳ ಝಲಕ್ನಲ್ಲಿ ಕೂಡ ಸಾಯಿ ಪಲ್ಲವಿಯವರು ತಮ್ಮ ಅತ್ಯಮೋಘ ನಟನೆಯಿಂದ ಮನಸೂರೆಗೊಂಡಿದ್ದಾರೆ. ರಾಣಿಯ ಲುಕ್ನಲ್ಲಿ ಸಾಯಿ ಪಲ್ಲವಿ ಅಕ್ಷರಶಃ ಮಿಂಚಿದ್ದಾರೆ. ಹೊಸ ಸೀತೆಯಾಗಿ ನಟಿ ಸಾಯಿ ಪಲ್ಲವಿಯನ್ನು ಜಗತ್ತು ಒಪ್ಪಿಕೊಳ್ಳುವುದರಲ್ಲಿ ಸಂದೇಹವೆ ಇಲ್ಲ ಎಂಬಂತೆ ಸಾಯಿ ಪಲ್ಲವಿ ಪಾತ್ರಪೋಷಣೆ ಹಾಗೂ ನಟನೆ ಹೈಲೈಟ್ಸ್ ಆಗಿದೆ.
ಅಂದಹಾಗೆ, ನಿತೇಶ್ ತಿವಾರಿ ನಿರ್ದೇಶನದ ಈ ರಾಮಾಯಣ ಸಿನಿಮಾ ಇದೇ ವರ್ಷ, ದೀಪಾವಳಿಗೆ ಹಬ್ಬದ ಉಡುಗೊರೆಯಾಗಿ ತೆರೆಗೆ ಬರಲಿದೆ. ಜಗತ್ತಿನಾದ್ಯಂತ ಈ ಮೊದಲೇ ಸೃಷ್ಟಿಯಾಗಿದ್ದ ಭಾರೀ ನಿರೀಕ್ಷೆಯನ್ನು ಇಂದು ಬಡುಗಡೆ ಆಗಿರುವ ಟ್ರೇಲರ್ ಸಾವಿ ಪಟ್ಟು ಜಾಸ್ತಿ ಮಾಡಿದೆ. ಸದ್ಯ ಇಡೀ ವಿಶ್ವದಲ್ಲಿ ಭಾರತದ ರಾಮಾಯಣ ಟ್ರೇಲರ್ ಬಗ್ಗೆ ಮಾತುಕತೆ, ಚರ್ಚೆ ಜೋರಾಗಿ ನಡೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.