
Yash Toxic Pre-release Event-Toxic Event Mishap-Police Case against Event Manager: ಟಾಕ್ಸಿಕ್ ಹವಾ ನಡುವೆ ಸಂಭವಿಸಿದ 'ಅನಿರೀಕ್ಷಿತ ಆಘಾತ': ಯಶ್ ಕಾರ್ಯಕ್ರಮದಲ್ಲಿ ಅಭಿಮಾನದ ಅತಿರೇಕಕ್ಕೆ ಸಿಕ್ಕ ಸಾಕ್ಷಿ ಇದು!
ಸ್ಯಾಂಡಲ್ವುಡ್ನಿಂದ ಶುರುವಾಗಿ ಗ್ಲೋಬಲ್ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಹೆಸರು 'ರಾಕಿಂಗ್ ಸ್ಟಾರ್' ಯಶ್. ಸದ್ಯ ಇಡೀ ಭಾರತೀಯ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ ಸಿನಿಮಾ ಎಂದರೆ ಅದು 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್'. ಈ ಚಿತ್ರದ ಪ್ರಚಾರದ ಕಿಚ್ಚು ಹೈದರಾಬಾದ್ನಲ್ಲೂ ಜೋರಾಗಿಯೇ ಇತ್ತು. ಆದರೆ, ಕಳೆದ ಶನಿವಾರ ತೆಲಂಗಾಣದ ಮೇಡ್ಚಲ್ನಲ್ಲಿ ನಡೆದ ಪ್ರೀ-ರಿಲೀಸ್ ಈವೆಂಟ್ ಮಾತ್ರ ಸಂಭ್ರಮದ ನಡುವೆ ಒಂದು ಕರಾಳ ನೆನಪಾಗಿ ಉಳಿದುಬಿಟ್ಟಿದೆ.
ಮೇಡ್ಚಲ್ನ ಮಲ್ಲಾರೆಡ್ಡಿ ವಿಶ್ವವಿದ್ಯಾಲಯದ ಮೈಸಮ್ಮಗುಡ ಕ್ಯಾಂಪಸ್ನಲ್ಲಿ ಅಂದು ಜನಸಾಗರವೇ ಹರಿದುಬಂದಿತ್ತು. ಯಶ್ ಅವರ ಒಂದು ಝಲಕ್ ನೋಡಲು ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ಮುಗಿಬಿದ್ದಿದ್ದರು. ಗ್ಯಾಂಗ್ಸ್ಟರ್ 'ರಾಯ'ನ ಅವತಾರದಲ್ಲಿ ಯಶ್ ವೇದಿಕೆ ಏರುತ್ತಿದ್ದಂತೆ ಅಭಿಮಾನಿಗಳ ಆರ್ಭಟ ಮುಗಿಲು ಮುಟ್ಟಿತ್ತು. ಆದರೆ ಈ ಅತಿಯಾದ ಉತ್ಸಾಹವೇ ಅಚಾತುರ್ಯಕ್ಕೆ ನಾಂದಿ ಹಾಡಿತು. ಯಶ್ ಅವರನ್ನು ಹತ್ತಿರದಿಂದ ಕಾಣಲು ನೂರಾರು ಯುವಕರು ಲೈಟಿಂಗ್ ಕಂಬಗಳು ಮತ್ತು ಬೃಹತ್ ಸೌಂಡ್ ಬಾಕ್ಸ್ಗಳನ್ನು ನಿಲ್ಲಿಸಿದ್ದ ಸ್ಕ್ಯಾಫೋಲ್ಡಿಂಗ್ ಸ್ಟ್ರಕ್ಚರ್ ಮೇಲೆಯೇ ಏರಿ ಕುಳಿತರು.
ಆದರೆ, ಆ ಕಬ್ಬಿಣದ ಚೌಕಟ್ಟು ಅಷ್ಟು ಜನರ ತೂಕವನ್ನು ತಾಳಲಾರದೆ ಏಕಾಏಕಿ ಧಬಾಬನೆ ನೆಲಕ್ಕುರುಳಿದೆ. ಈ ಭೀಕರ ಅವಘಡದಲ್ಲಿ ಓರ್ವ ವಿದ್ಯಾರ್ಥಿಯ ಕಾಲಿನ ಮೂಳೆ ಮುರಿದಿದ್ದರೆ, ಇನ್ನೂ ಮೂವರು ರಕ್ತಸಿಕ್ತ ಗಾಯಗಳೊಂದಿಗೆ ಆಸ್ಪತ್ರೆ ಪಾಲಾಗಿದ್ದಾರೆ. ಅಷ್ಟೇ ಅಲ್ಲದೆ, ಈ ಭೀಕರ ದೃಶ್ಯ ಕಂಡು ಭಯದಿಂದ ಅಲ್ಲಿದ್ದ ವಿದ್ಯಾರ್ಥಿನಿಯೊಬ್ಬಳು ಪ್ರಜ್ಞೆ ತಪ್ಪಿ ಬಿದ್ದ ಪ್ರಸಂಗವೂ ನಡೆಯಿತು.
ಇವೆಂಟ್ನಲ್ಲಿ ಅಬ್ಬರಿಸಬೇಕಿದ್ದ ಯಶ್, ಈ ಅವಘಡ ಕಣ್ಣಮುಂದೆ ನಡೆಯುತ್ತಿದ್ದಂತೆ ತಕ್ಷಣವೇ ಮೈಕ್ ಹಿಡಿದು ಭಾಷಣ ನಿಲ್ಲಿಸಿದರು. "ಅಲ್ಲಿ ಏನಾಯಿತು? ದಯವಿಟ್ಟು ಎಲ್ಲರೂ ಸೇಫ್ ಆಗಿದ್ದೀರಾ? ಮೊದಲು ಅಲ್ಲಿಂದ ಕೆಳಗೆ ಇಳಿಯಿರಿ" ಎಂದು ಪದೇಪದೇ ಕೈಮುಗಿದು ಅಭಿಮಾನಿಗಳಲ್ಲಿ ವಿನಂತಿಸಿದರು. ಸ್ಟಾರ್ ಪಟ್ಟವನ್ನೂ ಮರೆತು, ಅಭಿಮಾನಿಗಳ ಸುರಕ್ಷತೆಗಾಗಿ ಅವರು ತೋರಿದ ಕಾಳಜಿ ಎಲ್ಲರ ಗಮನ ಸೆಳೆಯಿತು. ಪರಿಸ್ಥಿತಿ ಸ್ವಲ್ಪ ಹತೋಟಿಗೆ ಬಂದ ಮೇಲಷ್ಟೇ ಅವರು ಮಾತು ಮುಂದುವರಿಸಿದರು.
ಕಾನೂನಿನ ಸುಳಿಯಲ್ಲಿ ಆಯೋಜಕರು!
ಈ ದುರಂತಕ್ಕೆ ಸಂಘಟಕರ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಿಸಲಾಗಿದೆ. ಸರಿಯಾದ ಭದ್ರತೆ ಮತ್ತು ಜನಸಂದಣಿ ನಿಯಂತ್ರಣ ಮಾಡದ ಕಾರಣ, ಮೇಡ್ಚಲ್ ಪೊಲೀಸರು ಈಗ ಈವೆಂಟ್ ಮ್ಯಾನೇಜರ್ಗಳು ಮತ್ತು ಮಲ್ಲಾರೆಡ್ಡಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಟಾಕ್ಸಿಕ್ ಕ್ರೇಜ್: ಆಗಸ್ಟ್ 26ಕ್ಕೆ ರಾಯನ ದರ್ಬಾರ್!
ಇಷ್ಟೆಲ್ಲಾ ಸವಾಲುಗಳ ನಡುವೆಯೂ 'ಟಾಕ್ಸಿಕ್' ಮೇಲಿನ ನಿರೀಕ್ಷೆ ಕಿಂಚಿತ್ತೂ ಕಡಿಮೆಯಾಗಿಲ್ಲ. ಗೀತು ಮೋಹನ್ದಾಸ್ ನಿರ್ದೇಶನದ ಈ ಚಿತ್ರದಲ್ಲಿ 1940-70ರ ದಶಕದ ಗೋವಾ ಗ್ಯಾಂಗ್ಸ್ಟರ್ ಕಥೆಯಿದೆ. ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ನಯನತಾರಾ ಅವರಂತಹ ಘಟಾನುಘಟಿ ಕಲಾವಿದರ ದಂಡೇ ಇದೆ. ಆಗಸ್ಟ್ 26ರಂದು ಬೆಳ್ಳಿತೆರೆಯ ಮೇಲೆ 'ರಾಯ'ನ ಅಬ್ಬರ ಹೇಗಿರಲಿದೆ ಎಂದು ನೋಡಲು ಇಡೀ ಜಗತ್ತೇ ಕಾಯುತ್ತಿದೆ. ಆದರೆ, ಸಿನಿಮಾ ಹಬ್ಬದ ನಡುವೆ ಇಂತಹ ಅವಘಡಗಳು ನಡೆಯದಿರಲಿ ಎನ್ನುವುದೇ ಚಿತ್ರಪ್ರೇಮಿಗಳ ಆಶಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.