Nyaay: The Justice: ನಟ ಸುಶಾಂತ್​ ಸಿಂಗ್​ ಕುರಿತ ಸಿನಿಮಾಗೆ ತಡೆ ಕೋರಿದ್ದ ಅರ್ಜಿ ವಜಾ!

Published : Jul 12, 2023, 05:13 PM IST
Nyaay: The Justice: ನಟ ಸುಶಾಂತ್​ ಸಿಂಗ್​ ಕುರಿತ ಸಿನಿಮಾಗೆ ತಡೆ ಕೋರಿದ್ದ ಅರ್ಜಿ ವಜಾ!

ಸಾರಾಂಶ

ನಟ ಸುಶಾಂತ್​ ಸಿಂಗ್​ ಕುರಿತ 'ನ್ಯಾಯ್: ದಿ ಜಸ್ಟೀಸ್' ಸಿನಿಮಾಗೆ ತಡೆ ಕೋರಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್​ ವಜಾಗೊಳಿಸಿದೆ  

ಬಾಲಿವುಡ್  ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರು ಎಲ್ಲರನ್ನೂ ಅಗಲಿ ಮೂರು ವರ್ಷಗಳೇ ಕಳೆದವು. ಇವರದ್ದು ಸಹಜ ಸಾವಲ್ಲ, ಕೊಲೆ ಎಂದು ಹೇಳುತ್ತಿರುವವರೇ ಬಹುತೇಕ ಮಂದಿ. ಆದರೆ ಅವರ ಸಾವಿನ ರಹಸ್ಯ ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.   2020 ಜೂನ್ 14ರಂದು ನಿಧನರಾದ  ಸುಶಾಂತ್ ಸಿಂಗ್ ರಜಪೂತ್  ಅವರ ಸಾವಿನ  ಪ್ರಕರಣ ಸದ್ಯ ಸಿಬಿಐ ಅಂಗಳದಲ್ಲಿದೆ. ಆದರೆ ಇನ್ನೂ ಕಾರಣ ಬಹಿರಂಗವಾಗಿಲ್ಲ. ತನಿಖೆಯ ಪ್ರಗತಿಯ ಬಗ್ಗೆಯೂ ಸಿಬಿಐ ತುಟಿ ಬಿಚ್ಚುತ್ತಿಲ್ಲ.  ಆದರೆ ಸುಶಾಂತ್ ಸಾವು ತೀವ್ರ ಚರ್ಚೆ ಹುಟ್ಟುಹಾಕುತ್ತಲೇ ಇದೆ. ಈ ಸಾವು ಕೆಲವು ಬಾಲಿವುಡ್ ಸ್ಟಾರ್ಸ್​ಗೆ ಸಂಕಷ್ಟ ತಂದಿತ್ತು  ಎನ್ನುವಷ್ಟರಲ್ಲಿ ಪ್ರಕರಣ ತನಿಖೆಯ ಪ್ರಗತಿ ನಿಧಾವಾಯಿತು ಎಂದು ಆರೋಪಿಸಲಾಗುತ್ತಿದೆ. ನಟನ  ಸಾವಿನ ಸುತ್ತ ಅನುಮಾನದ ಹುತ್ತ ಬೆಳೆಯುತ್ತಲೇ ಸಾಗಿದೆ.  ಸುಶಾಂತ್ ಸಿಂಗ್ ರಜಪೂತ್ ಅವರದ್ದು ಕೊಲೆ ಎಂದು ಅವರ ಮರಣೋತ್ತರ ಪರೀಕ್ಷೆ ಮಾಡಿದ್ದ ಕೂಪರ್​ ಆಸ್ಪತ್ರೆ ಸಿಬ್ಬಂದಿ ಸ್ಫೋಟಕ ಹೇಳಿಕೆ ನೀಡಿದ್ದರು. ಈ ಆಯಾಮದಲ್ಲೂ ಸಹ ಈಗಾಗಲೇ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಈ ಮಧ್ಯೆ, ನಟ ಸುಶಾಂತ್ ಸಿಂಗ್ ರಜಪೂತ್ ಅವರ ಜೀವನಾಧಾರಿತ 'ನ್ಯಾಯ್: ದಿ ಜಸ್ಟೀಸ್' ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಸುಶಾಂತ್​ ಅವರ ತಂದೆ ಕೃಷ್ಣ ಕಿಶೋರ್ ಸಿಂಗ್ ಅವರು ದೆಹಲಿ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದೆ.   ಚಲನಚಿತ್ರ ನಿರ್ಮಾಪಕರು ವಾಣಿಜ್ಯ ಲಾಭಕ್ಕಾಗಿ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ  ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಆಗುತ್ತಿದೆ.  ಆದ್ದರಿಂದ ತಮ್ಮ ಮಗನ ಹೆಸರು ಅಥವಾ ಆತನ ಜೀವನದ ಹೋಲಿಕೆಯನ್ನು  ಚಲನಚಿತ್ರಗಳಲ್ಲಿ ಬಳಸದಂತೆ ತಡೆಯುವಂತೆ ಅವರು ಕೋರಿದ್ದರು. ಆದರೆ ಹೈಕೋರ್ಟ್​ ನ್ಯಾಯಮೂರ್ತಿ ಸಿ.ಹರಿ ಶಂಕರ್​ (Justice C.Hari Shankar) ಅವರು ಈ ಅರ್ಜಿಯನ್ನು ವಜಾಗೊಳಿಸಿದರು.   ಸುಶಾಂತ್ ಸಿಂಗ್ ರಜಪೂತ್ ಅವರ ಕುರಿತಾದ ವಿಚಾರವು ಅವರ ಖಾಸಗಿತನದ ಹಕ್ಕಾಗಿ ಉಳಿದಿಲ್ಲ. ಇವು ಅವರ ಸಾವಿನೊಂದಿಗೆ  ಕೊನೆಗೊಂಡಿವೆ ಎಂದು ಕೋರ್ಟ್​ ಹೇಳಿದೆ.   

ಸುಶಾಂತ್ ಸಿಂಗ್ ಸಾವಿಗೆ 'ಮಹಾ' ಟ್ವಿಸ್ಟ್​: ಮಹತ್ವದ ಸುಳಿವು ಸಿಕ್ಕಿದೆಯೆಂದ ಡಿಸಿಎಂ
 
ಈ ಹಿಂದೆ ಕೂಡ ಸುಶಾಂತ್‌ ವೈಯಕ್ತಿಕ ಜೀವನ, ಹೆಸರು, ಚಿತ್ರಗಳು, ವ್ಯಂಗ್ಯ ಭಾವಚಿತ್ರ (ಕ್ಯಾರಿಕೇಚರ್‌), ಜೀವನಶೈಲಿ, ಅಥವಾ ಅವರನ್ನು ಹೋಲುವ ಜೀವನಾಧಾರಿತ ಚಿತ್ರ ಅಥವಾ ಕತೆಯನ್ನು ಹೆಣೆಯಬಾರದು ಎಂದು ಆದೇಶಿಸುವಂತೆ ಕೋರಿ  ಸುಶಾಂತ್‌ ತಂದೆ ಕೃಷ್ಣ ಕಿಶೋರ್‌ ಸಿಂಗ್‌ 2021ರಲ್ಲಿ ಅರ್ಜಿ ಸಲ್ಲಿಸಿದ್ದರು. ಆಗಲೂ ದೆಹಲಿ ಹೈಕೋರ್ಟ್​ ಅರ್ಜಿಯನ್ನು ವಜಾಗೊಳಿಸಿತ್ತು. ಈ ಸುಶಾಂತ್​ ಅವರ ಜೀವನಾಧಾರಿತ ಚಿತ್ರ ಎನ್ನಲಾದ 'ನ್ಯಾಯ್: ದಿ ಜಸ್ಟೀಸ್' ಗೆ ತಡೆ ನೀಡುವಂತೆ ಕೋರಿದ್ದ ಅವರ ಅರ್ಜಿಯನ್ನು ಹೈಕೋರ್ಟ್​ ಪುನಃ ವಜಾಗೊಳಿಸಿದೆ. 

ಈ ನಡುವೆಯೇ, ಸುಶಾಂತ್​ ಅವರ  ಸಾವಿನ ಮೂರು ವರ್ಷಗಳ ಬಳಿಕ ಅವರ ಸಾವಿಗೆ ಟ್ವಿಸ್ಟ್​ ಸಿಕ್ಕಿದೆ.  ನಟನ  ಸಾವಿನ  ಮೂರು ವರ್ಷಗಳ ಬಳಿಕ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಗಳು ಪತ್ತೆಯಾಗಿವೆ ಎಂದಿದ್ದಾರೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಂಡ್ನವೀಸ್​.  ತನಿಖೆಯನ್ನು ಮುಂಬೈ ಪೊಲೀಸರು (Mumbai Police) ಹಾಗೂ ಸಿಬಿಐ ತನಿಖೆ ನಡೆಸುತ್ತಲೇ ಇರುವ ನಡುವೆಯೇ ಈಗ ಡಿಸಿಎಂ ಮಹತ್ವದ ಸುಳುವು ನೀಡಿದ್ದಾರೆ. ಮಾಧ್ಯಮವೊಂದರ ಸಂದರ್ಶನದಲ್ಲಿ ದೇವೇಂದ್ರ ಫಡ್ನವೀಸ್​ ಅವರು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.  ದಿಶಾ ಸಾಲಿಯಾನ್ ಹಾಗೂ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ. ಆದರೆ ಆ ಸಾಕ್ಷ್ಯಗಳು ನಿಖರವೇ, ನಂಬಲರ್ಹವೇ, ಸತ್ಯವಾದುವೇ ಎಂಬ ಪರಿಶೀಲನೆ ನಡೆಯುತ್ತಿವೆ. ಕೆಲವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ, ಕೆಲವರ ಹೇಳಿಕೆ ದಾಖಲಿಸಿಕೊಳ್ಳುವುದು ಹಾಗೂ ಸಾಕ್ಷ್ಯಗಳ ಪರಿಶೀಲನೆ ಬಾಕಿ ಇದೆ ಎಂದಿದ್ದಾರೆ. ಇದರಿಂದ ಪ್ರಕರಣದ ತನಿಖೆಗೆ ತಿರುವು ಸಿಗುವ ಸಾಧ್ಯತೆ ಇದೆ.  ಪ್ರಕರಣ ಕುರಿತು ಸಾಕಷ್ಟು ಪುರಾವೆಗಳು ಸರ್ಕಾರದ ಬಳಿ ಇವೆ. ಕೆಲವು ಸಾಕ್ಷಗಳನ್ನು ಪೊಲೀಸರಿಗೂ ನೀಡುವಂತೆ ತಿಳಿಸಲಾಗಿದೆ. ಈ ಕುರಿತು ಕೆಲವರಿಂದ ಮಾಹಿತಿ ಸಹ ಅಧಿಕಾರಿಗಳು ಸಂಗ್ರಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.  

ಸುಶಾಂತ್ ಸಿಂಗ್ ನಿಧನದ ನಂತರ ಹೆಚ್ಚಾಯ್ತಾ ಬಾಲಿವುಡ್​ನಲ್ಲಿ ಬೈಕಾಟ್​ ಟ್ರೆಂಡ್?

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನನಗೆ ಈಗಾಗಲೇ 120ಕ್ಕೂ ಹೆಚ್ಚು ಬಾರಿ ಮದುವೆಯಾಗಿದೆ; ನಟ ಸಿಂಬು ಉತ್ತರಕ್ಕೆ ಆಂಕರ್ ಏನಂದ್ರು?
ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?