90 Bidi Manege Nadi Review: ಕುಡಿತವೇ ಮಾರಕ, ಸಿನಿಮಾ ಸಂದೇಶಾತ್ಮಕ

By Kannadaprabha NewsFirst Published Jul 1, 2023, 8:47 AM IST
Highlights

ವೈಜನಾಥ ಬಿರಾದಾರ್, ಪ್ರೀತು ಪೂಜಾ‌, ಕರಿಸುಬ್ಬು, ಅಭಯ್, ನೀತಾ, ವಿವೇಕ್ ಹೊಸಕೋಟೆ, ಆರ್.ಡಿ ಬಾಬು, ಮುರುಳಿ, ಧರ್ಮ, ಪ್ರಶಾಂತ್ ಸಿದ್ದಿ ನಟಿಸಿರುವ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾ ಹೇಗಿದೆ? 

ರಾಜೇಶ್ ಶೆಟ್ಟಿ

ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು ಎಂಬ ಗಾದೆಯಂತೆ ಕುಡಿತವನ್ನು ಕುಡಿತದ ಕತೆಯಿಂದಲೇ ಬಿಡಿಸಬೇಕು ಎಂಬ ಉದ್ದೇಶದಿಂದ ರೂಪುಗೊಂಡ ಸಿನಿಮಾ ಇದು. ಸಂದೇಶವುಳ್ಳ ಕತೆಯೊಂದಿಗೆ ಥ್ರಿಲ್ಲರ್ ಅಂಶವೂ ಸೇರಿಕೊಂಡಿದ್ದರಿಂದ ಇದೊಂದು ಸಂದೇಶ ಭರಿತ ಮನರಂಜನಾತ್ಮಕ ಥ್ರಿಲ್ಲರ್ ಸಿನಿಮಾ.

ಕಥಾನಾಯಕ ಬಿರಾದಾರ್ ಪಾತ್ರದ್ದು ಊರೂರು ಸುತ್ತಿ ಅಗರಬತ್ತಿ ಮಾರುವ ಕಾಯಕ. ಕೆಲಸ ಮಾಡುವಾಗ ಕುಡಿಯಬಾರದು, ಕುಡಿದಾಗ ಕೆಲಸ ಮಾಡಬಾರದು ಎಂಬ ಸಿದ್ಧಾಂತವನ್ನು ಬದುಕಿಗೆ ಅಂಟಿಸಿಕೊಂಡಿರುವ ಅವರು ರಾತ್ರಿ ತೂಗಾಡುತ್ತಲೇ ಇರುವ ಗಂಟೆಯಂತೆ ಸೈಕಲ್ ಬ್ಯಾಲೆನ್ಸ್ ಮಾಡಿಕೊಂಡೇ ಮನೆಗೆ ಹೋಗುವ ಅನಿವಾರ್ಯತೆ ಸೃಷ್ಟಿಕೊಂಡಿರುತ್ತಾರೆ. ದೇವರಂಥ ಮನುಷ್ಯ ಸಂಜೆ ಮೇಲೆ ಸಿಗಬೇಡಿ ಎಂಬಂಥ ಘನತೆವೆತ್ತ ವ್ಯಕ್ತಿಯು ಆಕಸ್ಮಿಕವಾಗಿ ಚಕ್ರವ್ಯೂಹಕ್ಕೆ ಸಿಕ್ಕಿಕೊಳ್ಳುವ ಪರಿಸ್ಥಿತಿ ಬಂದಾಗ ಕತೆ ಮತ್ತೊಂದು ಹಂತಕ್ಕೆ ಏರುತ್ತದೆ.

Bera Film Review: ಕರುಣೆಯ ದೀಪ, ಪ್ರೀತಿಯ ಪಿಸುಮಾತು ಧರಿಸಿರುವ ಬೇರ

ನಿರ್ದೇಶನ: ನಾಗರಾಜ್ ಅರೆಹೊಳೆ, ಉಮೇಶ್ ಬಾದರದಿನ್ನಿ

ತಾರಾಗಣ: ವೈಜನಾಥ ಬಿರಾದಾರ್, ಪ್ರೀತು ಪೂಜಾ‌, ಕರಿಸುಬ್ಬು, ಅಭಯ್, ನೀತಾ, ವಿವೇಕ್ ಹೊಸಕೋಟೆ, ಆರ್.ಡಿ ಬಾಬು, ಮುರುಳಿ, ಧರ್ಮ, ಪ್ರಶಾಂತ್ ಸಿದ್ದಿ

ರೇಟಿಂಗ್: 3

ಇಲ್ಲಿ ನಾಲ್ಕೈದು ಮಂದಿಯ ಕತೆಯನ್ನು ಒಟ್ಟಿಗೆ ಸೇರಿಸಿದ್ದಾರೆ. ಅದಕ್ಕೆ ಸೂತ್ರಧಾರ ಬಿರಾದಾರ್ ಪಾತ್ರ. ಬುದ್ದಿ ಹೇಳುವ, ತಿದ್ದಿ ತೀಡುವ ಪಾತ್ರ. ಅವರು ಹೇಳುವ ಬುದ್ಧಿಯಿಂದ, ಪರಿಸ್ಥಿತಿ ಕೊಡುವ ಏಟುಗ‍ಳಿಂದ ಕಟ್ಟಕಡೆಗೆ ಗಾಂಧೀಜಿ ಪ್ರತಿಮೆ ಮುಂದೆ ಕುಳಿತು ಬದಲಾಗುವ ಪಾತ್ರಗಳು ಕುಡಿತ ಬಿಡಿ ಎಂಬ ಸಂದೇಶವನ್ನು ಒಕ್ಕೊರಲಿನಿಂದ ಹೇಳುತ್ತವೆ. ಈ ಮಧ್ಯೆ ಬಿದ್ದು ನಗಿಸುವ ದೃಶ್ಯಗಳು, ಕರುಳು ಚುರುಕ್ಕೆನಿಸುವ ಚಿತ್ರಗಳು, ಪೊಲೀಸ್ ಸೈರನ್ನುಗಳು ಕಾಣಿಸಿಕೊಳ್ಳುತ್ತಿರುತ್ತವೆ. ಕೊನೆಗೆ ಎಲ್ಲಕ್ಕೂ ಒಂದು ಒಳ್ಳೆಯ ಅಂತ್ಯ ಸಿಕ್ಕಿ ಫೀಲ್ ಗುಡ್ ಸಿನಿಮಾ ಆಗುತ್ತದೆ.

Agrasena Review: ಮೋಸ, ವಂಚನೆ, ದ್ವೇಷ ಬೆರೆತಿರುವ ಭಾವುಕ ಕಥನ

ಕುಡಿದು ನಡೆಯುವ ದೃಶ್ಯಗಳಲ್ಲಿ ಬಿರಾದಾರ್ ಅವರನ್ನು ಮೀರಿಸುವುದಕ್ಕೆ ಸಾಧ್ಯವೇ ಇಲ್ಲ ಅನ್ನುವಂತೆ ಅವರ ನಟನೆ ಇದೆ. ತಿದ್ದಿ ಬುದ್ಧಿ ಹೇಳುವಲ್ಲೂ ಅವರು ಮುಂದೆ. ಅದಕ್ಕೆ ತಕ್ಕಂತೆ ಅ‍ವರ ಸುತ್ತಮುತ್ತ ಇರುವ ಎಲ್ಲಾ ಪಾತ್ರಗಳ ಕಲಾವಿದರೂ ಉತ್ತಮ ನಟನೆ ಮೂಲಕ ಆ ಪಾತ್ರಗಳಿಗೆ ಘನತೆ ಕೊಟ್ಟಿದ್ದಾರೆ.

ಸದುದ್ದೇಶವನ್ನಿಟ್ಟುಕೊಂಡು ಮನರಂಜನೆ ಜೊತೆ ಥ್ರಿಲ್ಲರ್ ಅಂಶವನ್ನು ಜೋಡಿಸಿ ರೂಪಿಸಿದ ಚಿತ್ರಕತೆ ಮೆಚ್ಚುಗೆಗೆ ಅರ್ಹ. ಅದಕ್ಕೆ ತಕ್ಕಂತೆ ನಟನೆ ತೆಗೆಸಿದ ನಿರ್ದೇಶಕ ಜೋಡಿಯ ಕೆಲಸವೂ ಶ್ಲಾಘನೀಯ. ಇದೊಂದು ಉತ್ತಮ ಉದ್ದೇಶ ಹೊಂದಿರುವ, ಅಲ್ಲಲ್ಲಿ ಸುಧಾರಿಸಿಕೊಂಡು ಯೋಚಿಸುತ್ತಾ ಸಾಗಬೇಕಾಗಿರುವ ದೂರ ತೀರ ಯಾನ.

click me!