Bhairadevi Film Review: ಮರೆಯಾಗಿರುವ ಅಘೋರಿಗಳ ಜಗತ್ತು: ದೈವತ್ವ ಮೃಗತ್ವದ ಮುಖಾಮುಖಿ ಭೈರಾದೇವಿ

By Kannadaprabha NewsFirst Published Oct 4, 2024, 11:20 AM IST
Highlights

ಆರಂಭದಿಂದ ಕೊನೆಯವರೆಗೂ ಸಿನಿಮಾ ಕುತೂಹಲ ಉಳಿಸಿಕೊಂಡೇ ಸಾಗುತ್ತದೆ. ಮಧ್ಯದಲ್ಲಿ ಬರುವ ಹಾಡುಗಳು ಪ್ರೇಕ್ಷಕರನ್ನು ಅಘೋರ ಜಗತ್ತಿನತ್ತ ಸೆಳೆಯುವ ತೀವ್ರ ಪ್ರಯತ್ನವಾದರೂ ತುಸು ಹೆಚ್ಚೇ ದೀರ್ಘವಾಗಿರುವ ಕಾರಣ ಪ್ರೇಕ್ಷಕ ಕುಳಿತಲ್ಲೇ ಚಡಪಡಿಸುತ್ತಾನೆ. 
 

ಪ್ರಿಯಾ ಕೆರ್ವಾಶೆ

ಮೇಲ್ನೋಟಕ್ಕೆ ಇದು ಅತಿಮಾನುಷ ಶಕ್ತಿ ಮತ್ತು ದೈವ ಶಕ್ತಿಯ ಕುರಿತಾದ ಸಿನಿಮಾ. ಈ ನಿಗೂಢ ಜಗತ್ತಿನ ಅನಾವರಣಕ್ಕೆ ಕಾರಣವಾಗಿ ಬರುವುದು ಫ್ಯಾಮಿಲಿ ಸ್ಟೋರಿ. ಇದರಲ್ಲೂ ಕ್ರೈಮ್‌ ಥ್ರಿಲ್ಲರ್‌ನ ಅಂಶ ಅಡಗಿರುವುದು ವಿಶೇಷ. ದೆವ್ವ ಗಿವ್ವ ನಂಬದ ಡಿಸಿಪಿ ಅರವಿಂದ್‌ಗೆ ನಿಜಕ್ಕೂ ದೆವ್ವ ಕಾಟ ಶುರುವಾದಾಗ ಆತ ತನ್ನ ಸಹಾಯಕನ ಸಲಹೆಯಂತೆ ಪರಿಹಾರಕ್ಕಾಗಿ ಅಘೋರಿಗಳ ಮೊರೆ ಹೋಗುತ್ತಾನೆ. ಸಾಮಾನ್ಯ ಜಗತ್ತಿನ ಕಣ್ಣಿಂದ ಮರೆಯಾಗಿರುವ ಅಘೋರಿಗಳ ಜಗತ್ತು ಈ ಮೂಲಕ ತೆರೆದುಕೊಳ್ಳುತ್ತದೆ. ಅವರ ರೀತಿ, ನೀತಿ, ನಂಬಿಕೆ, ಆಚರಣೆಗಳ ಬಗೆಗೆಲ್ಲ ಮಾಹಿತಿ ನೀಡುತ್ತದೆ. 

Latest Videos

ಇಷ್ಟೆಲ್ಲ ತೋರಿಸಿದ ಮೇಲೆ ಇಡೀ ಸಿನಿಮಾ ಅಘೋರಿಗಳ ಕಥೆಯ ಮೇಲೆ ನಿಲ್ಲುತ್ತಾ ಅಂದರೆ ಖಂಡಿತಾ ಇಲ್ಲ. ಇದು ಹೊರಾವರಣವಷ್ಟೇ. ಒಳಾವರಣದಲ್ಲಿರುವುದು ಕ್ರೈಮ್‌ ಥ್ರಿಲ್ಲರ್‌. ಇದನ್ನು ನೋಡಲು ಮಧ್ಯಂತರದವರೆಗೆ ಕಾಯಬೇಕು. ಆರಂಭದಿಂದ ಕೊನೆಯವರೆಗೂ ಸಿನಿಮಾ ಕುತೂಹಲ ಉಳಿಸಿಕೊಂಡೇ ಸಾಗುತ್ತದೆ. ಮಧ್ಯದಲ್ಲಿ ಬರುವ ಹಾಡುಗಳು ಪ್ರೇಕ್ಷಕರನ್ನು ಅಘೋರ ಜಗತ್ತಿನತ್ತ ಸೆಳೆಯುವ ತೀವ್ರ ಪ್ರಯತ್ನವಾದರೂ ತುಸು ಹೆಚ್ಚೇ ದೀರ್ಘವಾಗಿರುವ ಕಾರಣ ಪ್ರೇಕ್ಷಕ ಕುಳಿತಲ್ಲೇ ಚಡಪಡಿಸುತ್ತಾನೆ. ಹತ್ತಾರು ವಿಚಾರಗಳನ್ನು ಹೇಳ ಹೊರಟು ಕೆಲವೊಂದು ಕಡೆ ಫೋಕಸ್‌ ಆಚೀಚೆ ಆಗಿದೆ. 

ಚಿತ್ರ: ಭೈರಾದೇವಿ
ತಾರಾಗಣ: ರಾಧಿಕಾ ಕುಮಾರಸ್ವಾಮಿ, ರಮೇಶ್‌ ಅರವಿಂದ್‌, ಅನು ಪ್ರಭಾಕರ್‌, ರಂಗಾಯಣ ರಘು
ನಿರ್ದೇಶನ: ಶ್ರೀ ಜೈ
ರೇಟಿಂಗ್‌ : 3

ಅದರ ಹೊರತಾಗಿ ಶ್ರೀಜೈ ಒಂದೊಳ್ಳೆ ಪ್ರಯತ್ನ ಮಾಡಿರೋದರ ಬಗ್ಗೆ ಅನುಮಾನ ಬೇಡ. ರಾಧಿಕಾ ಅದ್ಭುತ ಎನರ್ಜಿಯಲ್ಲಿ ಅಭಿನಯಿಸಿದ್ದಾರೆ. ಇವರ ಅಘೋರಿ ಪಾತ್ರಕ್ಕೆ ಡಬ್ಬಿಂಗ್‌ ಮಾಡಿರುವ ಕಲಾವಿದೆಯ ಸ್ಫುಟ ಉಚ್ಚರಣೆ, ಧ್ವನಿಯ ಏರಿಳಿತ ಪಾತ್ರವನ್ನು ಮೇಲೆತ್ತಿದೆ. ರಮೇಶ್‌ ಅರವಿಂದ್‌ ಪರ್ಫಾಮೆನ್ಸ್‌ಗೆ ಸಲಾಂ ಹೊಡೆಯಲೇ ಬೇಕು. ಸೆಂಥಿಲ್‌ ಪ್ರಶಾಂತ್‌ ಸಂಗೀತ ಕಥೆಗೆ ಬೇಕಾದ ಮೂಡ್‌ ಕ್ರಿಯೇಟ್‌ ಮಾಡುತ್ತದೆ. ಕೆಲವು ಕಡೆ 90ರ ದಶಕದ ಸಿನಿಮಾಗಳ ಛಾಯೆ ಕಂಡುಬಂದರೂ ಮನರಂಜನೆ ನೀಡುವುದರಲ್ಲಿ ಸಿನಿಮಾ ಸೋಲುವುದಿಲ್ಲ.

click me!