Vijayanand Film Review: ಸಾಧನೆಯ ವಿಜಯ, ಗೆಲುವಿನ ಆನಂದ

By Govindaraj SFirst Published Dec 10, 2022, 6:24 AM IST
Highlights

ಇದೊಂದು ಬಯೋಪಿಕ್‌ ಸಿನಿಮಾ ಎನಿಸಿಕೊಳ್ಳುವುದಕ್ಕಿಂತ ಸಾಧಕನೊಬ್ಬನ ಜೀವನ ಪಯಣದ ಪ್ರಮುಖ ಘಟನೆ, ಸನ್ನಿವೇಶಗಳ ವಿಡಿಯೋ ಫೂಟೇಜ್‌ನಂತೆ ಕಾಣುತ್ತದೆ. ಉದ್ಯಮಿ, ರಾಜಕಾರಣಿ ಆಗಿರುವ ಡಾ ವಿಜಯ ಸಂಕೇಶ್ವರ ಅವರ ಜೀವನ ಚರಿತ್ರೆಯ ಪುಟಗಳು ತೆರೆ ಮೇಲೆ ತೆರೆದುಕೊಳ್ಳುವುದು ಅವರ ಮಗನ ಪಾತ್ರಧಾರಿಯ ನೆನಪುಗಳಿಂದ.

ಆರ್‌ ಕೇಶವಮೂರ್ತಿ

ಜೀವನಕ್ಕೆ ಸ್ಫೂರ್ತಿ ನೀಡುವ ಕತೆ, ಕಾದಂಬರಿ ಹಾಗೂ ವ್ಯಕ್ತಿಗಳ ಜೀವನದ ಬಗ್ಗೆ ಕೇಳುವುದು ಮತ್ತು ಓದುವುದೇ ಒಂದು ರೋಚಕ. ಉದ್ಯಮಿ ಹಾಗೂ ರಾಜಕಾರಣಿ ವಿಜಯ ಸಂಕೇಶ್ವರ ಅವರ ಜೀವನದ ಏಳು- ಬೀಳುಗಳು ಕೂಡ ಇಂಥದ್ದೇ ರೋಚಕತೆಯಿಂದ ಕೂಡಿದ್ದು, ಅದನ್ನು ನಿರ್ದೇಶಕಿ ರಿಷಿಕಾ ಶರ್ಮಾ ‘ವಿಜಯಾನಂದ’ ಹೆಸರಿನಲ್ಲಿ ಪ್ರೇಕ್ಷಕರ ಮುಂದೆ ತಂದಿಟ್ಟಿದ್ದಾರೆ. ಕನ್ನಡದ ಸಾಧಕನ ಕುರಿತು, ಕನ್ನಡದ ಮೊದಲ ಬಯೋಪಿಕ್‌ ಎನ್ನುವ ಹೆಗ್ಗಳಿಕೆಯಲ್ಲಿ ಬಂದ ‘ವಿಜಯಾನಂದ’ ಸಿನಿಮಾ ಲಕ್ಷಣಗಳನ್ನು ಸಾಧ್ಯವಾದಷ್ಟುದೂರ ಇಟ್ಟಿದೆ. 

ಹೀಗಾಗಿ ಇದೊಂದು ಬಯೋಪಿಕ್‌ ಸಿನಿಮಾ ಎನಿಸಿಕೊಳ್ಳುವುದಕ್ಕಿಂತ ಸಾಧಕನೊಬ್ಬನ ಜೀವನ ಪಯಣದ ಪ್ರಮುಖ ಘಟನೆ, ಸನ್ನಿವೇಶಗಳ ವಿಡಿಯೋ ಫೂಟೇಜ್‌ನಂತೆ ಕಾಣುತ್ತದೆ. ಉದ್ಯಮಿ, ರಾಜಕಾರಣಿ ಆಗಿರುವ ಡಾ ವಿಜಯ ಸಂಕೇಶ್ವರ ಅವರ ಜೀವನ ಚರಿತ್ರೆಯ ಪುಟಗಳು ತೆರೆ ಮೇಲೆ ತೆರೆದುಕೊಳ್ಳುವುದು ಅವರ ಮಗನ ಪಾತ್ರಧಾರಿಯ ನೆನಪುಗಳಿಂದ. ತಮ್ಮ ತಂದೆಯ ಪ್ರಿಂಟಿಂಗ್‌ ಪ್ರೆಸ್‌ ನೋಡಿಕೊಳ್ಳುತ್ತ, ಪುಸ್ತಕ ಮಾರಾಟ, ಅಲ್ಲಿಂದ ಸಾರಿಗೆ ವ್ಯವಹಾರ, ಮುಂದೆ ಪತ್ರಿಕೋದ್ಯಮ, ಇದರ ನಡುವೆ ರಾಜಕೀಯಕ್ಕೆ ಇಳಿದು ಸಂಸದರಾಗಿದ್ದು... 

ಚಿತ್ರ: ವಿಜಯಾನಂದ

ತಾರಾಗಣ: ನಿಹಾಲ್‌, ಅನಂತ್‌ ನಾಗ್‌, ಸಿರಿ ಪ್ರಹ್ಲಾದ್‌, ರವಿಚಂದ್ರನ್‌, ರಮೇಶ್‌ ಭಟ್‌, ಪ್ರಕಾಶ್‌ ಬೆಳವಾಡಿ, ಭರತ್‌ ಬೋಪಣ್ಣ, ಶೈನ್‌ ಶೆಟ್ಟಿ, ವಿನಯಾ ಪ್ರಸಾದ್‌, ದಯಾಳ್‌ ಪದ್ಮನಾಭನ್‌, ರಾಜೇಶ್‌ ನಟರಂಗ್‌, ಶೈನ್‌ ಶೆಟ್ಟಿ, ಶರಣ್ಯ.

ನಿರ್ದೇಶನ: ರಿಷಿಕಾ ಶರ್ಮಾ

ರೇಟಿಂಗ್‌: 3

ಹೀಗೆ ವಿಜಯ ಸಂಕೇಶ್ವರ ಅವರ ಜೀವನದ ಪ್ರಮುಖ ಘಟನೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ಅವುಗಳನ್ನು ಸಾಧ್ಯವಾದಷ್ಟುಮೆಚ್ಚುಗೆಯ ನೆಲೆಯಲ್ಲಿ ನಿರ್ದೇಶಕಿ ರಿಷಿಕಾ ಶರ್ಮಾ ಸಿನಿಮಾ ಮಾಡಿದ್ದಾರೆ. ಪತ್ರಿಕೋದ್ಯಮದ ಭೀಷ್ಮ ಶಾಮರಾಯರ ಪಾತ್ರ ರಾಮ್‌ ರಾವ್‌ ರೂಪದಲ್ಲಿ ಬರುತ್ತದೆ. ಪತ್ರಿಕಾ ಸಂಪಾದಕ ವಿಶ್ವೇಶ್ವರ ಭಟ್‌ ಅವರ ಪಾತ್ರವೂ ಸೇರಿಕೊಂಡಿದೆ. ಹೀಗೆ ಒಬ್ಬ ವ್ಯಕ್ತಿಯ ಸುತ್ತ ಘಟನೆ, ಸನ್ನಿವೇಶಗಳ ಕೊಲಾಜ್‌ನಂತೆ ಸಾಗುವ ಈ ಚಿತ್ರದಲ್ಲಿ ಯಾವುದನ್ನು ಫೋಕಸ್‌ ಮಾಡಬೇಕು ಎಂಬುದರ ಸ್ಪಷ್ಟತೆ ಇಲ್ಲ.

Prajwal Devaraj Abbara Film Review: ವಿಭಿನ್ನ ತಿರುವುಗಳ ಕುತೂಹಲಕರ ಅಬ್ಬರ

ತಾಂತ್ರಿಕವಾಗಿ ಮೊದಲಾರ್ಧ ಚೆನ್ನಾಗಿದೆ. ಅಲ್ಲಲ್ಲಿ ಬರುವ ಸಂಭಾಷಣೆಗಳು ಕತೆಗೆ ಜೀವ ತುಂಬುವ ಪ್ರಯತ್ನ ಮಾಡಿದೆ. ನಟನೆ ವಿಚಾರಕ್ಕೆ ಬಂದರೆ ಅನಂತ್‌ನಾಗ್‌, ರವಿಚಂದ್ರನ್‌, ಸಿರಿ ಪ್ರಹ್ಲಾದ್‌ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ. ಇಡೀ ಸಿನಿಮಾ ನಿಹಾಲ್‌ ಹೆಗಲ ಮೇಲೆಯೇ ಸಾಗುತ್ತದೆ. ಪ್ರಕಾಶ್‌ ಬೆಳವಾಡಿ ಅವರು ರಾಮ್‌ ರಾವ್‌ ಪಾತ್ರದಲ್ಲಿ ಪತ್ರಿಕಾರಂಗದ ದಿಗ್ಗಜ ಶ್ಯಾಮರಾಯರು ಅವರಿಗೆ ಮರಳಿ ಜೀವ ನೀಡಿದ್ದಾರೆ. ಕತೆಗೆ ಪೂರಕವಾಗಿ ಆ ದಿನಗಳನ್ನು ಮರುಸೃಷ್ಟಿಸಲು ಸಾಕಷ್ಟುಪ್ರಯತ್ನ ಮಾಡಿದ್ದಾರೆ.

click me!