
ರಾಜೇಶ್ ಶೆಟ್ಟಿ
ಬುದ್ಧಿವಂತಿಕೆ ಮತ್ತು ಭಾವನಾತ್ಮಕತೆಯನ್ನು ಬಳಸಿಕೊಂಡು ಹೆಣೆದಿರುವ ಒಂದು ಕೋರ್ಟ್ ರೂಮ್ ಡ್ರಾಮಾ. ಆರಂಭದಲ್ಲಿ ಒಬ್ಬ ಜಾಣ ಮಹತ್ವಾಕಾಂಕ್ಷಿ ಲಾಯರ್ನ ಕತೆ ಎಂಬಂತೆ ಶುರುವಾಗುತ್ತದೆ. ಸುಮಾರು ಹೊತ್ತು ಅವನ ಹಾರಾಟ, ಹೋರಾಟ, ತಾಕಲಾಟ. ಆಮೇಲೊಂಚೂರು ಪ್ರೇಮ ಪರಿಣಯ. ನಂತರ ನಿಜವಾದ ಕತೆ ಆರಂಭ. ಹೆಣ್ಣು ಮಗುವಿನ ಮೇಲಿನ ಬಲಾತ್ಕಾರದಂತಹ ಸೂಕ್ಷ್ಮ ವಿಷಯವನ್ನು ಹೊಂದಿರುವ ಸಿನಿಮಾ ಇದು. ಬಲಾತ್ಕಾರ ಪ್ರಸಂಗ ಬಂದಾಗ ಸೂಕ್ಷ್ಮ ಮನಸ್ಸುಗಳಿಗೆ ಸ್ವಲ್ಪ ಹಿಂಸೆ ಅನ್ನಿಸಬಹುದು. ಆಮೇಲೆ ಈ ಕತೆ ಮಗಳಿಗಾಗಿ ಹೋರಾಡುವ ಒಬ್ಬ ತಾಯಿಯ ಕತೆಯಾಗಿ ಬದಲಾಗುತ್ತದೆ.
ದ್ವಿತೀಯಾರ್ಧ ಸಂಪೂರ್ಣ ಕೋರ್ಟ್ನಲ್ಲಿ ಹಾವು ಏಣಿಯಾಟ. ನಿರ್ದೇಶಕರು ನಾವು ಎಲ್ಲಿಗೆ ತಲುಪಲಿದ್ದೇವೆ ಎಂಬುದನ್ನು ಮೊದಲೇ ಹೇಳಿಬಿಡುತ್ತಾರೆ. ಅಷ್ಟರ ಮಟ್ಟಿಗೆ ಪ್ರಿಡಿಕ್ಟೆಬಲ್. ಆದರೆ ಪ್ರಯಾಣವನ್ನು ಹೇಳಲು ಕುತೂಹಲಕರ ಚಿತ್ರಕತೆ ರೂಪಿಸಿದ್ದಾರೆ. ಕೆಲವುಕಡೆ ಅನುಕೂಲ ಸಿಂಧು ಅನ್ನಿಸಿದರೂ ಅಂತಿಮವಾಗಿ ವ್ಯವಸ್ಥೆ ಕುರಿತು ಸೂಕ್ಷ್ಮ ಪ್ರಶ್ನೆಯನ್ನು ಎತ್ತಿ ಗಮನ ಸೆಳೆಯುತ್ತಾರೆ. ಚೊಚ್ಛಲ ಸಿನಿಮಾದಲ್ಲಿಯೇ ಇಂಥದ್ದೊಂದು ಪ್ರಯತ್ನ ಮಾಡಿರುವ ನಿರ್ದೇಶಕ ಪವನ್ ಭಟ್ ಶ್ಲಾಘನೀಯರು.
ಚಿತ್ರ: ಯುದ್ಧಕಾಂಡ
ನಿರ್ದೇಶನ: ಪವನ್ ಭಟ್
ತಾರಾಗಣ: ಅಜಯ್ ರಾವ್, ಪ್ರಕಾಶ್ ಬೆಳವಾಡಿ, ಅರ್ಚನಾ ಜೋಯಿಸ್, ರಾದ್ನಾ, ನಾಗಾಭರಣ
ರೇಟಿಂಗ್: 3
ಸೋಲಬಾರದು ಅಂತ ಹೆದರಿಕೊಂಡು ಯುದ್ಧಕಾಂಡ ಸಿನಿಮಾ ಮಾಡಿದ್ದೇನೆ: ಅಜಯ್ ರಾವ್
ಅಂತ್ಯದಲ್ಲಿ ಸ್ವಲ್ಪ ಮೆಲೋಡ್ರಾಮಾಟಿಕ್ ಅನ್ನುವುದು ಬಿಟ್ಟರೆ ಕೋರ್ಟ್ ಕಲಾಪ ಕುತೂಹಲಕಾರಿಯಾಗಿದೆ. ಅಜಯ್ ರಾವ್ ಉತ್ತಮವಾಗಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ಬೆಳವಾಡಿ ಅಂತೂ ಅವರನ್ನು ಯಾಕೆ ಕನ್ನಡದಲ್ಲಿ ಜಾಸ್ತಿ ಬಳಸಿಕೊಳ್ಳುತ್ತಿಲ್ಲವೋ ಎಂಬ ಪ್ರಶ್ನೆ ಹುಟ್ಟಿಸುವಷ್ಟು ಅದ್ಭುತವಾಗಿ ನಟಿಸಿದ್ದಾರೆ. ಅರ್ಚನಾ ಜೋಯಿಸ್, ರಾದ್ನಾ ಪ್ರೇಕ್ಷಕನ ಹೃದಯ ಕಲಕುವಂತೆ ಅಭಿನಯಿಸಿದ್ದಾರೆ. ಕೆಲವು ಅನವಶ್ಯ ಅಂಶಗಳನ್ನು ಮತ್ತು ಕೊಂಚ ಮೆಲೋಡ್ರಾಮಾಟಿಕ್ ಅಂಶಗಳನ್ನು ಹೊರತುಪಡಿಸಿದರೆ ಇದೊಂದು ಉತ್ತಮ ಕೋರ್ಟ್ ರೂಮ್ ಡ್ರಾಮಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.