
ಚಿತ್ರ: ರೈಡ್-2
ಒಟಿಟಿ: ನೆಟ್ ಫ್ಲಿಕ್ಸ್
ನಿರ್ದೇಶನ: ರಾಜಕುಮಾರ್ ಗುಪ್ತ
ತಾರಾಗಣ: ಅಜಯ್ ದೇವಗನ್, ರಿತೇಶ್ ದೇಶ್ ಮುಖ್, ವಾಣಿ ಕಪೂರ್, ಅಮಿತ್ ಸಿಯಲ್, ಸೌರಬ್ ಶುಕ್ಲ, ಸುಪ್ರಿಯಾ ಪಾಠಕ್, ಶ್ರುತಿ ಪಾಂಡೆ.
ಅಮಯ್ ಪಟ್ನಾಯಕ್ ನಿಷ್ಠಾವಂತ Indian Revenue Officer. ಇವನ ಸರ್ವಿಸಿನಲ್ಲಿ 42 ಕೋಟಿ ರೂಗಳನ್ನು ತನ್ನ ದಾಳಿಯ ಮುಖಾಂತರ ಸೀಝ್ ಮಾಡಿಸಿರುತ್ತಾನೆ. ಹಾಗೆಯೇ ತನ್ನ ಪ್ರಾಮಾಣಿಕತೆಯ ಕೆಲಸದಿಂದಾಗಿ 24 ಬಾರಿ ವರ್ಗಾವಣೆ ಸಹ ಆಗಿರುತ್ತಾನೆ. ಈಗ 75ನೇ ವರ್ಗಾವಣೆಯಿಂದ ಮಧ್ಯಪ್ರದೇಶದ (Madhya Pradesh) ಭೋಜ್ ಎಂಬ ಪ್ರದೇಶಕ್ಕೆ ನಿಯೋಜಿತನಾಗಿದ್ದಾನೆ. ಈ ಊರಿನಲ್ಲಿ ನಡೆದಾಡುವ ದೇವರೆಂದೇ ಹೆಸರಾದ ದಾದಾ ಮನೋಹರ್ ಧನಕರ್ ಎಂಬ ರಾಜಕಾರಣಿಯ ಮೇಲೆ ಅಮಯ್ ನ ಕಣ್ಣು. ದಾದಾ ಮನೋಹರ್ ಒಬ್ಬ ಪ್ರಭಾವಿ ರಾಜಕಾರಣಿ. ಇಡೀ ಮಧ್ಯಪ್ರದೇಶದ ಸರಕಾರ ಇವನ ಬಿಗಿಮುಷ್ಟಿಯಲ್ಲಿ ಇರುತ್ತದೆ. ಆದರೆ ದಾದಾ ಜನಾನುರಾಗಿ. ಜನರು ಮನೋಹರ್ನನ್ನು ಪ್ರೀತಿ ಮತ್ತು ಭಕ್ತಿಯಿಂದ (Love and Devotion) ಪೂಜಿಸುತ್ತಿರುತ್ತಾರೆ. ಅವನು ಹೇಳಿದ ಮಾತೆಂದರೆ ಅಷ್ಟು ವಿಶ್ವಾಸ. ಜನರ ಪಾಲಿಗೆ ಮನೋಹರ್ ನಡೆದಾಡುವ ದೇವರು. ತ್ಯಾಗಿ. ಜನರ ಅಹವಾಲುಗಳನ್ನು ಕೇಳಿ ಸಹಾಯ ಮಾಡುವ ಸಂತ. ಹಾಗಾಗಿ ಅವು ಮನೋಹರ್ ನನ್ನು ದಾದಾ ಎಂದು ಕರೆಯುತ್ತಿರುತ್ತಾರೆ.
ಈ ದಾದಾ ಮನೋಹರ್ ಜನರು ನೋಡುವಷ್ಟು ತಿಳಿದಷ್ಟು ಸಂಭಾವಿತನಲ್ಲ, ಸದಾ ಬಿಳಿ ವಸ್ತ್ರ ಧರಿಸಿದವನ ಅಂತರಂಗ ಬಹಳ ಕೊಳಕಾಗಿರುತ್ತದೆ. ತಾಯಿಯನ್ನು ಪ್ರತ್ಯಕ್ಷ ದೇವರೆಂದು ಪೂಜಿಸುವ ಅವನು ಇತರೆ ಹೆಣ್ಣುಮಕ್ಕಳನ್ನು ಬಹಳ ಕೀಳಾಗಿ ತನ್ನ ಭೋಗಕ್ಕಾಗಿ ಉಪಯೋಗಿಸಿಕೊಳ್ಳುತ್ತಾನೆ. ಲೆಕ್ಕವಿಲ್ಲದಷ್ಟು ಕಪ್ಪು ಹಣ ಬಂಗಾರ (Gold) ಆಸ್ತಿ ಅವನ ಹೆಸರಿನಲ್ಲಿ ಇದೆ. ಅವನ ಚಾರಿಟಿ ಟ್ರಸ್ಟ್ ಗಳು ಅವನ ದಾನಧರ್ಮದ ಸಂಘ ಸಂಸ್ಥೆಗಳು ಎಲ್ಲವೂ ಢೋಂಗಿ ಅಲ್ಲಿ ಬೇಕಾದಷ್ಟು ಅವ್ಯವಹಾರ ನಡೆಯುತ್ತದೆ. ಅಮಯ್ ನ ೭೫ ನೇ ದಾಳಿ ದಾದಾನ ಮೇಲೆ ನಡೆಯಬೇಕು. ಅದಕ್ಕಾಗಿ ಅಮಯ್ ಬಹಳ ತಯಾರಿ ಮಾಡಿಕೊಂಡಿರುತ್ತಾನೆ. ಸರ್ಕಾರವನ್ನೇ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ದಾದಾನನ್ನು ಅಲುಗಾಡಿಸುವುದು ಅಷ್ಟು ಸುಲಭವಲ್ಲ ಎಂದು ಅಮಯ್ ನಿಗೂ ಗೊತ್ತು.
ಭೋಜ್ ಗೆ ಬಂದು ಕೆಲಸಕ್ಕೆ ಹಾಜರಾಗುವ ಅಮಯ್ ತನ್ನ ಟೀಮನ್ನು ದಾದಾನ ಮೇಲೆ ರೈಡ್ ಗೆ ತಯಾರಿ ಮಾಡಿಸುತ್ತಾನೆ. ರೈಡ್ ನಡೆಯುತ್ತದೆ. ಆದರೆ ದಾದಾಗೆ ಸಂಬಂಧಿಸಿದ ಯಾವುದೇ ಜಾಗದಲ್ಲಿ ಯಾವುದೇ ಹಣವಾಗಲಿ, ಚಿನ್ನವಾಗಲಿ ದಾಖಲೆ ಪತ್ರಗಳಾಗಲಿ ದೊರೆಯದೆ ಅಮಯ್ ನಿರಾಶನಾಗುತ್ತಾನೆ. ಒಬ್ಬ ಜನಾನುರಾಗಿ ನಾಯಕನ ಮೇಲೆ ದಾಳಿ ಮಾಡಿದ್ದಕ್ಕಾಗಿ ಅಮಯ್ ನೌಕರಿಯಿಂದ ಅಮಾನತ್ತಾಗುತ್ತಾನೆ. ಅಮಾನತ್ತಾದರೂ ಅಮಯ್ ಇದೇ ವಿಷಯದ ಬಗ್ಗೆ ಸದಾ ಚಿಂತಿಸುತ್ತ ಇರುತ್ತಾನೆ. ಅವನಿಗೆ ದಾದಾನ ಅವ್ಯವಹಾರದ ಬಗ್ಗೆ ಖಚಿತ ಮಾಹಿತಿ ಇರುತ್ತದೆ. ಆದರೆ ದಾಳಿಯಾದಾಗ ಏನೂ ಸಿಕ್ಕಿರುವುದಿಲ್ಲ. ಅಷ್ಟು ಬೃಹತ್ ಸಂಪತ್ತನ್ನು ಎಲ್ಲಿ ಸಾಗಿಸಿದ? ದಾದಾನ ನೆಟ್ ವರ್ಕ್ ಏನು? ದಾದಾನಿಗೆ ಸಹಾಯ ಮಾಡುವವರು ಯಾರು? ಇದೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳುವ ಅಮಯ್ ಗೆ ಒಂದು ಸಣ್ಣ ಕ್ಲೂ ಸಿಗುತ್ತದೆ. ಅಮಯ್ ದಾಳಿ ಮಾಡಿ ಏನೂ ಸಿಗದೆ ನಿರಾಶನಾಗಿ ಹೊರಬರುವಾಗ ಅಲ್ಲಿ ನೆರೆದ ಗುಂಪಿನಲ್ಲಿ ಒಬ್ಬ ವೃದ್ಧ ಒಂದು ಸಣ್ಣ ಚೀಟಿಯನ್ನು ಅಮಯ್ ನಿಗೆ ಕೊಟ್ಟು ಮಾಯವಾಗುತ್ತಾನೆ. ಆ ಚೀಟಿಯಲ್ಲಿ ನೀವು ಊಹಿಸಿರುವುದು ಎಲ್ಲವೂ ನಿಜ ಎಂದು ಬರೆದಿರುತ್ತದೆ. ಇದನ್ನೇ ಒಂದು ಕ್ಲೂ ಆಗಿ ತೆಗೆದುಕೊಳ್ಳುವ ಅಮಯ್ ತನ್ನ ಜಾಗಕ್ಕೆ ತನಗೆ ಗೊತ್ತಿರುವ ಮತ್ತೊಬ್ಬ ನಿಷ್ಠಾವಂತ ಆಫಿಸರನನ್ನು ಕರೆಸಿಕೊಳ್ಳುತ್ತಾನೆ. ಅವನ ಮೂಲಕ ದಾದಾನ ಎಲ್ಲ ಚರಿತ್ರೆಯನ್ನೂ ಶೋಧಿಸುತ್ತಾನೆ. ಮತ್ತೊಬ್ಬ ಆದಾಯ ತೆರಿಗೆ ಮಹಿಳಾ ಅಧಿಕಾರಿ ಅಮಯ್ ಗೆ ಸಹಾಯ ಮಾಡುತ್ತಾಳೆ. ಅಮಯ್ ನ ಹೆಂಡತಿ ಮಾಲಿನಿ ಸಹ ಗಂಡನ ಕೆಲಸದಲ್ಲಿ ಕೈ ಜೋಡಿಸುತ್ತಾಳೆ. ದಾದಾನಿಂದ ಅತ್ಯಾಚಾರಕ್ಕೆ ಒಳಗಾದ ಹೆಣ್ಣುಗಳನ್ನು ಭೇಟಿ ಮಾಡಿ ಅವರ ಮನವೊಲಿಸಿ ದಾದಾ ವಿರುದ್ಧ ಸಾಕ್ಷಿ ಹೇಳಲು ತಯಾರು ಮಾಡುತ್ತಾಳೆ. ಇಷ್ಟರಲ್ಲಿ ಅಮಯ್ ನ ಅಮಾನತ್ತು ತೆರವಾಗಿ ಅವನು ತನ್ನ ಡ್ಯೂಟಿಗೆ ಹಾಜರಾಗುತ್ತಾನೆ. ದಾದಾ ಮೇಲಿನ ದಾಳಿಯ ಯೋಜನೆಗಳು ಇನ್ನಷ್ಟು ಪಕ್ಕಾ ಆಗಿ ರೂಪುಗೊಳ್ಳುತ್ತದೆ.
ಭೂಮಿಯಲ್ಲಿ ಹೂತಿಟ್ಟ ಹಣದ ಪೆಟ್ಟಿಗೆಗಳು ಮಹಿಳಾ ಅಧಿಕಾರಿ ಕೊಟ್ಟ ಸುಳುವಿನಿಂದ ಭೋಜ್ ನ ಪಕ್ಕದ ಊರಿನ ದಾದಾನ ಆಪ್ತನ ಮನೆಯಲ್ಲಿ ಸಿಗುತ್ತದೆ. ಅಮಯ್ ನಿಯೋಜಿಸಿದ್ದ ವರಮಾನ ತೆರಿಗೆ ಅಧಿಕಾರಿ (Income Tax Officer) ತನ್ನ ಟೀಂನೊಂದಿಗೆ ಹೋಗಿ ದಾಳಿ ಮಾಡಿದಾಗ ರೆಫ್ರಿಜಿರೇಟರ್ ತುಂಬಾ ನೋಟಿನ ಕಂತೆಗಳು ಸಿಗುತ್ತದೆ. ಹಳ್ಳಿಗಳ ಜನರನ್ನು ಬೆದರಿಸಿ ಅವರಿಂದ ಕಡಿಮೆ ಬೆಲೆಯಲ್ಲಿ ಖರೀದಿಸಿದ ಭೂಮಿಯ ದಾಖಲೆ ಪತ್ರಗಳೂ ಸಿಗುತ್ತದೆ. ದಾದಾ ತಾನು ಹೊಸದಾಗಿ ಕೊಂಡ ಒಂದು 5 ಸ್ಟಾರ್ ಹೋಟೆಲಿನಲ್ಲಿ ತನ್ನ ಎಲ್ಲ ಸಂಪತ್ತನ್ನೂ ಬಚ್ಚಿಟ್ಟಿರುತ್ತಾನೆ. ಇದನ್ನೂ ಬೇಹುಗಾರರ ಮೂಲಕ ತಿಳಿದು ಅಲ್ಲಿಯೂ ರೈಡ್ ನಡೆಯುತ್ತದೆ. ಒಂದು ದೊಡ್ಡ ಭಾಗದಲ್ಲಿ ಯಾರೂ ಹೋಗದಂತೆ ಗೋಡೆ ಕಟ್ಟಿರುತ್ತಾರೆ. ಅದನ್ನು ಒಡೆದು ಒಳಗೆ ಹೋದಾಗ ಒಂದು ದೊಡ್ಡ ಹಾಲ್ ನಂತ ಜಾಗದಲ್ಲಿ ಎಲ್ಲಿ ನೋಡಿದರೂ ಬಂಗಾರ ವಡವೆ ಹಣದ ಕಟ್ಟುಗಳು ಸಿಗುತ್ತದೆ. ದಾಖಲೆ ಪತ್ರಗಳ ರಾಶಿಯೇ ಇರುತ್ತದೆ.
ಹೋಟೆಲ್ ಮುಂದೆ ದಾದಾ ನ ಬೆಂಬಲಿಗರು ದಾದಾ ಪರ ಘೋಷಣೆ ಕೂಗುತ್ತ ಅಲ್ಲಿ ಆಯುಧಗಳನ್ನು ಹಿಡಿದು ದಾಳಿ ಮಾಡುತ್ತಾರೆ. ಸಾಗರದೋಪಾದಿಯಲ್ಲಿ ಪ್ರತಿಭಟಿಸುತ್ತಿರುವ ಜನರನ್ನು ನಿಯಂತ್ರಿಸುವುದು ಹೇಗೆ? ಅವರು ಆದಾಯ ತೆರಿಗೆ ಅಧಿಕಾರಿಗಳನ್ನು ಕೊಚ್ಚಿಹಾಕಲು ಮಾರಕಾಸ್ತ್ರಗಳೊಂದಿಗೆ ಬಂದಿರುತ್ತಾರೆ. ಅವರನ್ನು ದಾಟಿಯೇ ವಶಪಡಿಸಿಕೊಂಡ ಸೊತ್ತುಗಳನ್ನು ಸಾಗಿಸಬೇಕು. ಇವರೂ ಹೊರಹೋಗಬೇಕು. ಹೇಗೆ ? ಅಮಯ್ ಒಂದು ಉಪಾಯ ಮಾಡುತ್ತಾನೆ. ಹೇಗೂ ದಾದಾ ಜನರನ್ನು ಶೋಷಿಸಿಯೇ ಹಣ ಸಂಪಾದನೆ ಮಾಡಿದ್ದಾನೆ. ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಜನಗಳ ಹಣವನ್ನು ಜನರಿಗೇ ಕೊಡೋಣ ಎಂದು ಹೇಳಿ ಹೋಟೆಲಿನ ಮೇಲಿನ ಅಂತಸ್ತಿನ ಕಿಟಕಿ ಒಡೆದು ನೋಟುಗಳನ್ನು ಕಂತೆ ಕಂತೆ ಕಿಟಕಿಯಿಂದ ಒಗೆಯುತ್ತಾರೆ. ಧನವರ್ಷ ಸುರಿಯುತ್ತದೆ. ಜನಗಳು ಮೊದಲು ಕಕ್ಕಾಬಿಕ್ಕಿ ಆಗಿ ನಂತರ ಎಚ್ಚೆತ್ತುಕೊಂಡು ನೋಟುಗಳನ್ನು ಬಾಚಿಕೊಳ್ಳಲು ಓಡಿಬರುತ್ತಾರೆ. ಸಿಕ್ಕಷ್ಟು ಬಾಚಿಕೊಳ್ಳುತ್ತಾರೆ. ಈ ಸುಸಮಯದಲ್ಲಿ ಅಧಿಕಾರಿಗಳು ಅಮಯ್ ರೈಡ್ ಮಾಡಿದ್ದ ದಾಖಲೆಗಳು, ಹಣ ಬಂಗಾರ ಎಲ್ಲವನ್ನೂ ತಮ್ಮ ವಾಹನಗಳಿಗೆ ತುಂಬಿ ಸೀಝ್ ಮಾಡಿ ಕಳಿಸಿಬಿಡುತ್ತಾರೆ. ಹೊಟೆಲಿನ ಮೇಲಿ ದಾಳಿ ತಿಳಿದು ದಾದಾ ಕೂಡಾ ಅವಸರದಿಂದ ಅಲ್ಲಿಗೆ ಧಾವಿಸುತ್ತಾನೆ. ದಾದಾನನ್ನು ನೋಡಿದ ಜನರು ಐಟಿ ಅಧಿಕಾರಿಗಳ ಮೇಲೆ ಮತ್ತೆ ರೊಚ್ಚಿಗೇಳುತ್ತಾರೆ. ಅಷ್ಟರಲ್ಲಿ ಎಲ್ಲ ವಿಷಯ ಅಮಯ್ ಹೆಂಡತಿಯಿಂದ ತಿಳಿದ ದಾದಾನ ತಾಯಿ ಅಲ್ಲಿಗೆ ಬರುತ್ತಾಳೆ. ಮಗನ ಗೋಮುಖವ್ಯಾಘ್ರತನ ತಿಳಿದು ಅವಳಿಗೆ ಷಾಕ್ ಆಗಿರುತ್ತದೆ. ದಾದಾನಿಂದ ಶೊಷಣೆಗೊಂಡ ಹೆಣ್ಣಮಕ್ಕಳನ್ನು ಮಾಲಿನಿ ಅಲ್ಲಿಗೆ ಕರೆತಂದಿರುತ್ತಾಳೆ. ಅವರನ್ನು ನೋಡಿದ ಕೂಡಲೇ ದಾದಾನ ಕಾಲುಗಳು ಭೀತಿಯಿಂದ ತಡೆಯುತ್ತದೆ. ಅಷ್ಟರಲ್ಲಿ ಅಲ್ಲಿಗೆ ಬಂದ ದಾದಾನ ಅಮ್ಮಅವನಿಗೆ ಹೀನಾಯವಾಗಿ ಬೈದು ಕಪಾಳಕ್ಕೆ ಒಂದು ಹೊಡೆದು ಅಳುತ್ತ ಇಂಥ ಮಗನನ್ನು ಹೆತ್ತಿದ್ದಕ್ಕೆ ನನ್ನನ್ನು ಕ್ಷಮಿಸಿ ಎಂದು ನೆರೆದ ಜನಕ್ಕೆ ಹೇಳಿ ಕಾರು ಹತ್ತಿ ಹೊರಟುಬಿಡುತ್ತಾಳೆ. ದಾದಾ ಸಂಪೂರ್ಣ ಕುಸಿಯುತ್ತಾನೆ. ತಾಯಿ ತನ್ನನ್ನು ಭರ್ತ್ಸನೆ ಮಾಡಿದ್ದು ಅವನಿಗೆ ಸಹಿಸಲು ಆಗುವುದಿಲ್ಲ. ಅಮ್ಮಾ ನನ್ನನ್ನು ಕ್ಷಮಿಸು ಎಂದು ಧರಾಶಾಯಿಯಾಗುತ್ತಾನೆ. ಪೊಲೀಸರು ದಾದಾನನ್ನು ಬಂಧಿಸುತ್ತಾರೆ.
ಇಡೀ ಚಿತ್ರದಲ್ಲಿ ನಮ್ಮ ಮನಸ್ಸನ್ನು ಸೆರೆ ಹಿಡಿಯುವುದು ಅಮಯ್ ಪಾತ್ರದ ಅಜಯ್ ದೇವಗನ್ ಹಾಗೂ ದಾದಾನ ಪಾತ್ರ ರಿತೇಶ್ ದೇಶಮುಖ್. ರಿತೇಶ್ ಸಾಮಾನ್ಯವಾಗಿ ಮೃದು ಪಾತ್ರಗಳನ್ನು ಮಾಡಿದವನು. ಈ ಚಿತ್ರದಲ್ಲಿ ಸಮಾಜಘಾತಕ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾನೆ. ಯಾವುದೇ ಪಾತ್ರಕ್ಕೂ ತಾನು ನ್ಯಾಯ ಒದಗಿಸಬಲ್ಲೆ ಎಂದು ನಿರೂಪಿಸಿದ್ದಾನೆ. ಇನ್ನು ಅಜಯ್ ನಟನೆ ಬಗ್ಗೆ ಎರಡು ಮಾತಿಲ್ಲ. ಅಜಯ ಕಣ್ಣಿನಲ್ಲೆ ಎಲ್ಲ ಭಾವಗಳನ್ನೂ ಹೊರಸೂಸುವ ಚತುರ. ಸಹಜ ನಟ. ನೋವಾಗಲೀ ಕ್ರೋಧವಾಗಲೀ ಅಸಹಾಯಕತೆಯಾಗಿ ಅಜಯ್ ಕಣ್ಣುಗಳಲ್ಲಿನ ಭಾವಾಭಿವ್ಯಕ್ತಿ ಬಹಳ ಪರಿಣಾಮಕಾರಿ. ಅಜಯ್ ನ ಡೈಲಾಗ್ಸ್ ಸಹ ಬಹಳ ಖಡಕ್. ಮಾಲಿನಿಯಾಗಿ ವಾಣಿ ಕಪೂರ್ ಹಿತಮಿತ ಅಭಿನಯ. ಅಜೆಯ್ನ ನಿಷ್ಠಾವಂತ ಸಹಾಯಕನಾಗಿ ಅಮಿತ್ ಸಿಯಲ್ ಅಭಿನಯ ಬಹಳ ಚೆನ್ನಾಗಿದೆ. ಮಹಿಳಾ ಐಟಿ ಅಧಿಕಾರಿಯಾಗಿ ಶ್ರುತಿ ಪಾಂಡೆ ಯವರದು ಚುರುಕಿನ ಅಭಿನಯ. ಸೀಟಿನ ತುದಿಯಲ್ಲಿ ಕುಳಿತು ತವಕದಿಂದ ನೋಡುವ ಚಿತ್ರ ರೈಡ್ 2.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.